ಇಂಡಿ: ಸಮಗ್ರತೆಯೆಡೆಗೆ ಕೊಂಡೊಯ್ಯುವ ಮತ್ತು ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ಒಗ್ಗೂಡಿಸಿದ ಆಶಯವು ಸಂವಿಧಾನ ಹೊಂದಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆ ಬುಧವಾರ ಹಮ್ಮಿಕೊಂಡಿದ್ದ 2025ನೇ ಸಾಲಿನ ದೇಸಿ ಸನ್ಮಾನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸಂವಿಧಾನ ಇದೆ ಎನ್ನುವ ಕಾರಣಕ್ಕೆ ಅತ್ಯಂತ ಹಿಂದುಳಿದ ಜಾತಿಗೆ ಸೇರಿದ ಪ್ರೊ. ಎಚ್. ಟಿ. ಪೋತೆ ಅವರಂತಹ ಲೇಖಕರರು ಅಧಿಕಾರಿಗಳಾಗಿ ಜವಾಬ್ದಾರಿ ಹುದ್ದೆ ಸಿಗಲು ಕಾರಣ. ಇದೆಲ್ಲವೂ ಡಾ.ಅಂಬೇಡ್ಕರ್ ಅವರ ಸಂವಿಧಾನದ ಫಲವಾಗಿದೆ. ಇಂದು ಅವರಿಗೆ ಪ್ರಶಸ್ತಿ ನೀಡಿ ಗೌರವುಸುತ್ತಿರುವುದು ಅಭಿನಂದನಾರ್ಹವಾಗಿದೆ ಎಂದರು.
ಇದನ್ನೂ ಓದಿ : ಕನ್ನಡದಲ್ಲಿ ವಿಮರ್ಶೆ ಸತ್ತೇ ಹೋಗಿದೆಯೇ?
ಕಾವ್ಯ, ಕಥೆ, ಕಾದಂಬರಿ ಅಥವಾ ಜಾನಪದ ಸಾಹಿತ್ಯದ ಚಟುವಟಿಕೆಗಳ ಆಶಯವೇ ಬಹುತ್ವ ಭಾರತದ ನಿರ್ಮಾಣ ಪರಿಕಲ್ಪನೆಗಳಿವೆ. ಹೀಗಾಗಿ ಸಮಾಜದಲ್ಲಿ ಒಡೆದು ಇಬ್ಬಗೆ ನೀತಿ ಸಾರುವ ವಿಚಿದ್ರಕಾರಿ ಶಕ್ತಿಗಳ ಕುರಿತು ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು ಎಂದರು.
ಡಾ.ರಮೇಶ ಎಸ್. ಕತ್ತಿ ಅವರು ರಚಿಸಿದ ಪ್ರೊ.ಎಚ್.ಟಿ.ಪೋತೆ ಬದುಕು ಬರಹ ಕೃತಿಯನ್ನು ಪ್ರಾಚಾರ್ಯ ರಮೇಶ ಆರ್.ಎಚ್. ಬಿಡುಗಡೆ ಮಾಡಿ ಮಾತನಾಡಿದರು. ಕೃತಿ ಲೇಖಕ ಡಾ. ರಮೇಶ ಎಸ್. ಕತ್ತಿ ಮಾತನಾಡಿದರು.
ದೇಸಿ ಸನ್ಮಾನ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಗುಲಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ.ಪೋತೆ, ದೇಸಿ ಸನ್ಮಾನ ಪ್ರಶಸ್ತಿಯು ನನ್ನ ಉತ್ಸಾಹ ಹೆಚ್ಚಿಸಿದೆ. ಇದು ನನ್ನ ತವರು ಮನೆಯ ಗೌರವ. ಇಂಥ ಪ್ರಶಸ್ತಿ ಪಡೆಯಲು ಅಕ್ಷರವೇ ಮೂಲ ಕಾರಣ. ಸಂವಿಧಾನ ಬರದೇ ಇದ್ದರೆ ಅಪ್ಪ, ಅಮ್ಮ, ಓದಿಸದಿದ್ದರೆ ಈ ಮಟ್ಟಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಹಲಸಂಗಿ ಪರಿಸರದಿಂದ ನನ್ನ ವ್ಯಕ್ತಿತ್ವ ರೂಪುಗೊಂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ. ಚನ್ನಪ್ಪ ಕಟ್ಟಿ ಮಾತನಾಡಿ, ಪೋತೆ ಅವರು ಈ ನೆಲದಲ್ಲಿ ಅರಳಿದ ಪ್ರತಿಭೆ. ಅವರ ಅಗಾಧ ಸಾಹಿತ್ಯ ಸೃಷ್ಠಿಗೆ ಅವರು ಅನುಭವಿಸಿದ ಯಾತನೆಗಳು ಕಾರಣ ಎಂದರು.
ಕಾರ್ಯಕ್ರಮದಲ್ಲಿ ತ್ರಿವೇಣಿ ಬನ್ಸೋಡೆ ಪ್ರಾರ್ಥಿಸಿದರು. ದೇವೂ ಮಾಕುಂಡ ಸ್ವಾಗತಿಸಿದರು. ಪ್ರೊ. ರವಿಕುಮಾರ ಅರಳಿ ನಿರೂಪಿಸಿದರು. ಸಿ. ಎಂ. ಬಂಡಗಾರ ವಂದಿಸಿದರು.
