ಆಸಿಡ್‌ ದಾಳಿಗೆ ಒಳಗಾಗಿದ್ದ ಯುವತಿಗೆ  ಉದ್ಯೋಗ ನೀಡಿದ ಸಿಎಂ

ಬೆಂಗಳೂರು: ಆಸಿಡ್‌ ದಾಳಿಗೆ ಒಳಗಾಗಿದ್ದ ಸಂತ್ರಸ್ತ ಮಹಿಳೆಗೆ ತಮ್ಮ ಸಚಿವಾಲಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉದ್ಯೋಗ ನೀಡುವ ಮೂಲಕ ಮಾನವೀಯತೆ ಮರೆದಿದ್ದಾರೆ. ಆಸಿಡ್‌ ದಾಳಿಗೆ ಒಳಗಾಗಿದ್ದ ಸ್ನಾತಕೋತ್ತರ ಪದವೀಧರೆಗೆ ಉದ್ಯೋಗ ನೀಡಿದ ಸಿಎಂ ನಡೆಗೆ ಮೆಚ್ಚುಗೆಗೆ ಪಾತ್ರವಾಗಿದೆ.

ಸಿಎಂ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಆಸಿಡ್‌ ದಾಳಿಗೆ ಒಳಗಾಗಿ ಸಂಕಷ್ಟಕ್ಕೆ ತುತ್ತಾಗಿದ್ದ ಸ್ನಾತಕೋತ್ತರ ಪದವೀಧರೆ ಕೂಡ ಬಂದಿದ್ದರು. ಈ ವೇಳೆ ಅವರ ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಅಂತ್ರಸ್ತೆಯ ಅಹವಾಲನ್ನು ಕೇಳಿ ಸ್ಥಳದಲ್ಲೇ ಉದ್ಯೋಗ ನೀಡುವ ಭರವಸೆ ನೀಡಿದರು. ಬಳಿಕ ಮುಖ್ಯಮಂತ್ರಿ ಸಚಿವಾಲಯದಲ್ಲಿಯೇ ಉದ್ಯೋಗ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ:ಯುವತಿ ಮೇಲೆ ಆಸಿಡ್ ಎರಚಿ ತಲೆಮರೆಸಿಕೊಂಡಿದ್ದ ನಾಗೇಶ್ ಸ್ವಾಮೀಜಿ ವೇಷದಲ್ಲಿ ಪತ್ತೆ

2022 ರ ಏಪ್ರಿಲ್‌ 28 ರಂದು ಆಸಿಡ್‌ ದಾಳಿಗೆ ತುತ್ತಾಗಿದ್ದ ಎಂ.ಕಾಂ. ಪದವೀಧರೆ ಯುವತಿ, ತಂದೆ ಮತ್ತು ತಾಯಿಯ ಜೊತೆಗೆ ಜನತಾ ದರ್ಶನಕ್ಕೆ ಬಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಈ ವೇಳೆ ಹಿಂದಿನ ಸರ್ಕಾರದಲ್ಲಿ ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲೂ ಉದ್ಯೋಗ ನೀಡುವಂತೆ ಮನವಿ ಮಾಡಿದ್ದೇವು. ಅವರು ಭರವಸೆ ನೀಡಿದ್ದರು. ಆದರೆ ಉದ್ಯೋಗ ಮಾತ್ರ ಕೊಡಲಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಆಗ ಅವರ ಅಹವಾಲು ಸ್ವೀಕರಿಸಿದ ಸಿಎಂ ತಮ್ಮ ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭಕ್ತರ ವೇಷ ಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು: 2022ರ ಏಪ್ರಿಲ್‌ 28 ರಂದು ನಡೆದ ಆಸಿಡ್‌ ದಾಳಿ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ತನಿಖೆಗೆ ಇಳಿದ ಪೊಲೀಸರು ಆರೋಪಿ ಸ್ವಾಮಿಯ ವೇಷದಲ್ಲಿ ತಿರುವಣ್ಣಾಮಲೈ ಆಶ್ರಮದಲ್ಲಿ ತಲೆ ಮರೆಸಿಕೊಂಡಿರುವುದನ್ನು ಪತ್ತೆ ಹಚ್ಚಲಾಗಿತ್ತು. ನಂತರ ಭಕ್ತರ ವೇಷ ಧರಿಸಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದರು. ಸದ್ಯ ಆರೋಪಿ ಬೆಂಗಳೂರು ಜೈಲಿನಲ್ಲಿದ್ದಾನೆ. ಆಸಿಡ್ ದಾಳಿಗೆ ಒಳಗಾದ ಸಂತ್ರಸ್ಥೆ ಚಿಕಿತ್ಸೆ ಪಡೆಯುತ್ತಾ ಚೇತರಿಸಿಕೊಳ್ಳುತ್ತಿದ್ದಾರೆ. ಆಕೆಯ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ನೆರವು ನೀಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *