ಹೊಸೂರ : ವಿಮಾನ ನಿಲ್ದಾಣಕ್ಕೆ ಅನುಮತಿ ಕೋರಿ ಬೆನ್ನಲ್ಲೇ ಟೆಂಡರ್‌ ಗೆ ಆಹ್ವಾನ

ಚೆನ್ನೈ: ತಮಿಳುನಾಡು ಸರ್ಕಾರ ಗುರುವಾರ ವಿಸ್ತೃತ ತಾಂತ್ರಿಕ–ಆರ್ಥಿಕ ವರದಿ (ಡಿಟೈಲಡ್ ಟೆಕ್ನೋ–ಎಕನಾಮಿಕ್ ರಿಪೋರ್ಟ್‌) ಸಿದ್ಧಪಡಿಸುವ ಸಲಹಾ ಸಂಸ್ಥೆ  ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಹತ್ವಾಕಾಂಕ್ಷೆಯ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕೆ ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಿದ್ದ ಬೆನ್ನಲ್ಲೇ ಟೆಂಡರ್‌ ಗೆ ಆಹ್ವಾನಿಸಿದೆ.

 ಹೊಸೂರು, ಬೈರಿಗೆ, ಬಾಗಲೂರು ಮತ್ತು ಶೂಲಗಿರಿ ನಡುವೆ ವಿಮಾನ ನಿಲ್ದಾಣಕ್ಕಾಗಿ 2,300 ಎಕರೆ ಭೂಮಿ ಗುರುತಿಸಿದ್ದ ತಮಿಳುನಾಡು ಸರ್ಕಾರ, ಇದೇ ತಿಂಗಳು ಕೇಂದ್ರ ವಿಮಾನಯಾನ ಇಲಾಖೆಗೆ ಯೋಜನೆ ಮಂಜೂರಾತಿಗಾಗಿ ಪ್ರಸ್ತಾವ ಸಲ್ಲಿಸಿತ್ತು.

ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯು(ಟಿಐಡಿಸಿಒ) ಸಲಹೆಗಾರ ಸಂಸ್ಥೆಯನ್ನು ಆಯ್ಕೆ ಮಾಡಲಿದೆ. ಸರ್ವೆ (ಸಮೀಕ್ಷೆ), ಮಾಸ್ಟರ್‌ ಪ್ಲಾನ್ (ಕಾರ್ಯಯೋಜನೆ), ಆರ್ಥಿಕ ಅಂದಾಜು, ಅಗತ್ಯ ಅನುಮತಿ ಪಡೆಯುವುದು ಮತ್ತು ಉದ್ದೇಶಿತ ಯೋಜನೆಯ ಟೆಂಡರ್‌ ಪ್ರಕ್ರಿಯೆಗಳ ನಿರ್ವಹಣೆ ಕುರಿತಂತೆ ಸಲಹಾ ಸಂಸ್ಥೆ ಡಿಟಿಇಆರ್ ಸಲ್ಲಿಸಬೇಕಿದೆ.

ಇದನ್ನೂ ಓದಿ : ವಿಶ್ವಕಪ್ ಗೆದ್ದ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಿಗೆ ಸರ್ಕಾರಿ ಉದ್ಯೋಗ!

‘ಯೋಜನೆ ಅನುಷ್ಠಾನ ಕಾರ್ಯಕ್ಕೆ ಚುರುಕು ನೀಡಿದ್ದೇವೆ. ಸರ್ಕಾರಿ ಆದೇಶ ಹೊರಬಿದ್ದ ಕೂಡಲೇ ಭೂಸ್ವಾದೀನ ಮಾಡುತ್ತೇವೆ. ಯಾವುದೇ ವಿಳಂಬ ಮಾಡುವುದಿಲ್ಲ’ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರ ಎರಡನೇ ವಿಮಾನ ನಿಲ್ದಾಣಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಜಾಗ ಗುರುತಿಸಲು ಮುಂದಾಗುತ್ತಿದ್ದಂತೆ ತಮಿಳುನಾಡು ಸರ್ಕಾರವು ಹೊಸೂರು ಯೋಜನೆಗೆ ವೇಗ ನೀಡಿದೆ. ಹೊಸೂರು ವಿಮಾನ ನಿಲ್ದಾಣ ಬೆಂಗಳೂರಿನ ದಕ್ಷಿಣ ಭಾಗದ ಜನರಿಗೂ ಅನುಕೂಲವಾಗಲಿದೆ.

ಉದ್ದೇಶಿತ ಜಾಗ ಬೆಂಗಳೂರಿನ ಎಸ್‌ಟಿಆರ್‌ಆರ್‌ಗೆ (ಉಪನಗರ ವರ್ತುಲ ರಸ್ತೆ) ಸಮೀಪದಲ್ಲಿದೆ. ವರ್ಷಕ್ಕೆ ಮೂರು ಕೋಟಿ ಪ್ರಯಾಣಿಕರ ಸಾಮರ್ಥ್ಯ ನಿಭಾಯಿಸಬಲ್ಲ, ಒಂದೇ ರನ್‌ವೇ ಇರುವ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. 500ಕ್ಕೂ ಹೆಚ್ಚು ಕೈಗಾರಿಕೆ, 3000ಕ್ಕೂ ಹೆಚ್ಚು ಎಂಎಸ್‌ಎಂಇ ಘಟಕ ಹೊಂದಿರುವ ಹೊಸೂರಿನ ಸರಕು ಸಾಗಣೆಗೆ ವಿಮಾನ ನಿಲ್ದಾಣ ಸಹಕಾರಿಯಾಗಲಿದೆ.

ಅಗತ್ಯ ಅನುಮತಿ ಪಡೆದು ವಿಮಾನ ನಿಲ್ದಾಣ ತಲೆ ಎತ್ತಲು ಕನಿಷ್ಠ 7 ವರ್ಷ ಬೇಕು. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಹಾಗೂ  ಉದ್ದೇಶಿತ ಎರಡನೇ ವಿಮಾನ ನಿಲ್ದಾಣದ ಮೇಲಾಗುವ ಪರಿಣಾಮಗಳ ಬಗ್ಗೆಯೂ ಸಲಹಾ ಸಮಿತಿ ವರದಿ ಮಾಡಲಿದೆ.

ಕೇಂದ್ರದ ಜೊತೆ ಆಗಿರುವ ಒಪ್ಪಂದ ಪ್ರಕಾರ 2033ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 150 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ವಿಮಾನ ನಿಲ್ದಾಣವನ್ನು ನಿರ್ಮಿಸುವಂತಿಲ್ಲ. ಹೀಗಾಗಿ ವಿನಾಯಿತಿ ಪಡೆಯುವ ಅಥವಾ ಒಪ್ಪಂದ ಅವಧಿ ಮುಗಿದ ನಂತರ ಕಾರ್ಯಾಚರಿಸುವ ಬಗ್ಗೆಯೂ ತಮಿಳುನಾಡು ಸರ್ಕಾರ ಆಲೋಚಿಸುತ್ತಿದೆ.

ವಾಯುಮಾರ್ಗ ಸೌಲಭ್ಯ, ಭೂಪ್ರದೇಶದ ಸೌಲಭ್ಯ, ವಾಣಿಜ್ಯ ವ್ಯವಸ್ಥೆಗೆ ನೀಡಬೇಕಿರುವ ಸೌಕರ್ಯ, ಪರಿಸರದ ಮೇಲಿನ ಪರಿಣಾಮ, ಪರಿಸರ ನಿರ್ವಹಣಾ ಯೋಜನೆ, ಪ್ರಯಾಣಿಕರ ಮತ್ತು ಸರಕು ವಿಮಾನಗಳ ಸಾರಿಗೆ ಪ್ರಮಾಣದ ಬಗ್ಗೆಯೂ ತಾಂತ್ರಿಕ ಅಧ್ಯಯನ ನಡೆಸಿ ವರದಿ ನೀಡಬೇಕಿದೆ.

ಬೈರಗಿ–ಬಾಗಲೂರು ಭಾಗವು ವಿರಳ ಜನಸಂಖ್ಯೆ ಮತ್ತು ವಸತಿ ಪ್ರದೇಶವಾಗಿದೆ. ಹೀಗಾಗಿ ಪ್ರತಿರೋಧ ಕಡಿಮೆ ಎನ್ನಲಾಗುತ್ತಿದೆ. ಯೋಜನಾ ಪ್ರದೇಶಕ್ಕೆ ಅನುಮತಿ ಪಡೆದರೂ ಕೇಂದ್ರದ ಜೊತೆಗಿನ ಒಪ್ಪಂದ ಪ್ರಕಾರ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನಿಂದ (ಬಿಐಎಎಲ್) ತಮಿಳುನಾಡು ನಿರಾಕ್ಷೇಪಣಾ ಪತ್ರ( ಎನ್‌ಒಸಿ) ಪಡೆಯಬೇಕು.

ಕೃಷ್ಣಗಿರಿಯ ವಾಯುನೆಲೆಯು ಬೆಂಗಳೂರಿನ ಹಿಂದೂಸ್ತಾನ್‌ ಏರೊನಾಟಿಕ್ಸ್ ಲಿಮಿಟೆಡ್‌(ಎಚ್‌ಎಎಲ್‌) ನಿಯಂತ್ರಣದಲ್ಲಿದೆ. ವಾಣಿಜ್ಯ ಕಾರ್ಯಾಚರಣೆಗೆ ವಿನಾಯಿತಿ ನೀಡುವಂತೆ ಈಗಾಗಲೇ ತಮಿಳುನಾಡು ಸರ್ಕಾರ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದೆ.

ಬಿಐಎಎಲ್‌ನಲ್ಲಿ ಹೆಚ್ಚು ಷೇರು ಹೊಂದಿರುವ ಫೇರ್‌ಫಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಸಂಸ್ಥೆ ಹೊಸೂರು ಮತ್ತು ಚೆನ್ನೈ ವಿಮಾನ ನಿಲ್ದಾಣಗಳ ಬಗ್ಗೆ ಆಸಕ್ತಿ ತೋರಿದೆ. ಕಳೆದ ಏಪ್ರಿಲ್‌ನಲ್ಲಿ ಕಂಪನಿಯ ಸಿಇಒ ಪ್ರೇಮ್‌ ವಾತ್ಸಾ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರೊಂದಿಗೆ ಚರ್ಚೆ ನಡೆಸಿದ್ದರು.

ಇದನ್ನೂ ನೋಡಿ : ಕರ್ನಾಟಕದ 17 ಭಾಷೆಗಳಲ್ಲಿ ಸಂವಿಧಾನ ಪೀಠಿಕೆ

 

Donate Janashakthi Media

Leave a Reply

Your email address will not be published. Required fields are marked *