ತನಿಖೆಯಲ್ಲಿ ಕೆ.ಎಸ್.ಈಶ್ವರಪ್ಪ ಪ್ರಭಾವ: ರಾಜ್ಯಪಾಲರಿಗೆ ಮೃತ ಗುತ್ತಿಗೆದಾರ ಸಂತೋಷ್ ಪತ್ನಿ ಪತ್ರ

ಬೆಳಗಾವಿ: ‘ಉಡುಪಿಯ ಲಾಡ್ಜ್‌‌ವೊಂದರಲ್ಲಿ ಮತಪಟ್ಟ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ  ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಪಾರದರ್ಶಕ ತನಿಖೆ ನಡೆಸಲು ಕ್ರಮ ವಹಿಸಬೇಕು’ ಎಂದು ಕೋರಿ ಸಂತೋಷ ಪತ್ನಿ ರೇಣುಕಾ (ಜಯಶ್ರೀ) ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

‘ಕಳೆದ ಏಪ್ರಿಲ್‌ 12ರಂದು ನನ್ನ ಪತಿ ಸಾವು ಸಂಭವಿಸಿದೆ. ಈ ಸಾವು ಅನುಮಾನಾಸ್ಪ‍ದವಾಗಿದೆ. ಏ‍ಪ್ರಿಲ್‌ 13ರಂದು ಉಡುಪಿ ಪೊಲೀಸರಿಗೆ ಶಾಸಕ ಕೆ.ಎಸ್‌.ಈಶ್ವರಪ್ಪ ವಿರುದ್ಧ ದೂರು ನೀಡಿದ್ದೇನೆ. ಅದಕ್ಕೆ ಮೂಲ ಕಾರಣವೇನು, ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ, ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ನಮ್ಮ ಕುಟುಂಬಕ್ಕೆ ಆತಂಕವಾಗಿದೆ. ಇದರಲ್ಲಿ ಪ್ರಮುಖ ಆರೋಪಿ ಕೆ.ಎಸ್‌.ಈಶ್ವರಪ್ಪ ಬಿಜೆಪಿ ಪಕ್ಷದ ಪ್ರಭಾವಿ ನಾಯಕರಾಗಿದ್ದಾರೆ. ಅವರ ನಿರ್ದೇಶನದಂತೆಯೇ ತನಿಖೆ ನಡೆಯುತ್ತಿದೆ’ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋಟ್ ಅವರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.

‘ಈ ಪ್ರಕರಣದಿಂದ ಕೇವಲ 15 ದಿನಗಳಲ್ಲಿ ಹೊರಗೆ ಬರುತ್ತೇನೆ. ಆರೋಪ ಮುಕ್ತನಾಗುತ್ತೇನೆ ಎಂದು ಕೆ.ಎಸ್‌. ಈಶ್ವರಪ್ಪ ಅವರು ಪದೇಪದೇ ಹೇಳಿಕೆ ನೀಡುತ್ತಿದ್ದಾರೆ. ಪ್ರಕರಣವು ತನಿಖೆ ಹಂತದಲ್ಲಿ ಇದ್ದರೂ ಅವರು ಇಷ್ಟೊಂದು ಆತ್ಮವಿಶ್ವಾಸ ವ್ಯಕ್ತಪಡಿಸುವುದು ಸಂಶಯಾಸ್ಪದವಾಗಿದೆ. ತಮ್ಮ ಹಣದ ಬಲ ಹಾಗೂ ರಾಜಕೀಯ ಬಲ ಪ್ರಯೋಗಿಸಿ, ಪ್ರಕರಣ ಮುಚ್ಚಿಹಾಕುವ ಸಾಧ್ಯತೆ ಇದೆ’ ಎಂದೂ ರೇಣುಕಾ‌ ಆತಂಕ ವ್ಯಕ್ತಪಡಿಸಿದ್ದಾರೆ.

‘ನನ್ನ ಪತಿ ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 108 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು ಎಲ್ಲರಿಗೂ ತಿಳಿದ ವಿಷಯ. ಇದರ ಬಿಲ್‌ ನೀಡಲು ಕೆ.ಎಸ್‌.ಈಶ್ವರಪ್ಪ ಹಾಗೂ ಅವರ ಆಪ್ತರು ಶೇ 40ರಷ್ಟು ಕಮಿಷನ್‌ ಕೇಳಿದ್ದರು ಎಂಬುದು ಮಾಧ್ಯಮಗಳಲ್ಲೂ ಬಹಿರಂಗವಾಗಿದೆ. ಆದರೂ ಈಶ್ವರಪ್ಪ ಆರೋಪ ಮುಕ್ತನಾಗುವುದಾಗಿ ಧೈರ್ಯದಿಂದ ಹೇಳುತ್ತಿದ್ದಾರೆ. ಇದು ನಮಗೆ ಬಹಳ ಆಶ್ಚರ್ಯ ಉಂಟುಮಾಡಿದೆ’ ಎಂದು ತಿಳಿಸಿದ್ದಾರೆ.

‘ಯಾರು, ಎಷ್ಟೇ ‌ಪ್ರಭಾವಿಯಾದರೂ ಕಾನೂನು ಎಲ್ಲರಿಗೂ ಒಂದೇ ಆಗಿದೆ. ಆದ್ದರಿಂದ ಪಾರದರ್ಶಕ ತನಿಖೆ ನಡೆಸಲು ತನಿಖಾಧಿಕಾರಿಗೆ ಸೂಚನೆ ನೀಡಬೇಕು’ ಎಂದೂ ರೇಣುಕಾ ಮನವಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *