ತುಮಕೂರು : ದೇಶದ ಆರ್ಥಿಕ ಕ್ಷೇತ್ರದಲ್ಲಿ ಖಾಸಗೀಕರಣಕ್ಕೆ ಉತ್ತೇಜನ ನೀಡಲು ಪ್ರಾರಂಭವಾದಾಗಿನಿಂದ ಸಾರ್ವಜನಿಕ ಉದ್ದಿಮೆಗಳು ಹಾಗೂ ಸಾರ್ವಜನಿಕ ಆಸ್ತಿಗಳ ಮೇಲೆ ಆಡಳಿತ ನಡೆಸಿದ ಎಲ್ಲ ಪಕ್ಷಗಳವರೂ ಮೊಳೆಗಳನ್ನು ಹೊಡೆಯಲು ಪ್ರಾರಂಭಿಸಿದರು. 1983ರಲ್ಲಿ ಮಾಡಿಕೊಳ್ಳಲಾದ ಗ್ಯಾಟ್ ಒಪ್ಪಂದ ನಂತರದ ಡೆಂಕಲ್ ಒಪ್ಪಂದಕ್ಕೆ ಭಾರತ ಸಹಿ ಹಾಕಿದಾಗಿನಿಂದ, ಆರಂಭವಾದ ಖಾಸಗೀಕರಣ, ಜಾಗತೀಕರಣ, ಉದಾರೀಕರಣದಂತಹ ಅತಂಕರಣಗಳಿಲ್ಲದ ಕರಣ-ಕರಣಗಳು ಬಲಗೊಂಡ ಕಾರಣ ಉದ್ಯೋಗ, ಸಾಮಾಜಿಕ ಭದ್ರತೆಯಂತಹ ಅವಕಾಶಗಳನ್ನು ಜನರಿಂದ ಕಿತ್ತುಕೊಳ್ಳುವ ಹುನ್ನಾರಗಳು ನಡೆಯುತ್ತಿವೆ. ಸಾಮಾಜಿಕ ಭದ್ರತೆಗೆ ತೊಡಕುಂಟು ಮಾಡಿರುವ ಈ ನೀತಿಗಳ ವಿರುದ್ದ ಕಾರ್ಮಿಕ ಸಂಘಗಳು ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿವೆ. ನಡೆಸುತ್ತಲೇ ಇವೆ ಎಂದು ಬರಹಗಾರ, ರಂಗಕರ್ಮಿ, ಚಲನಚಿತ್ರ ನಟ ಹಾಗೂ ನಿರ್ದೇಶಕ-ನಿರ್ಮಾಪಕ ಮತ್ತು ಸಾಮಾಜಿಕ ಚಿಂತಕ ಬಿ. ಸುರೇಶ್ ಅಭಿಪ್ರಾಯಪಟ್ಟರು. ಅಂತಃಕರಣ
ಇದನ್ನು ಓದಿ :-ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳು ಮತ್ತೊಂದು ಮೇ ಹೋರಾಟಕ್ಕೆ ನಾಂದಿಯಾಗಲಿ ಅಂತಃಕರಣ
ಅವರು ವಿಶ್ವಕಾರ್ಮಿಕರ ದಿನಾಚರಣೆಯ (ಮೇ 1) ಅಂಗವಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ತುಮಕೂರು, ಗುರುವಾರ ಬೆಳಗ್ಗೆ ನಗರದ ಟೌನ್ಹಾಲ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕಾಲದಲ್ಲಿ ಕಾರ್ಮಿಕರನ್ನು ನಿಶ್ಶಸ್ತ್ರಗೊಳಿಸುತ್ತಿರುವುದರ ವಿರುದ್ಧ ಬಿ ಸುರೇಶ್ ನಿಷ್ಟುರವಾಗಿ ಮಾತನಾಡುತ್ತಾ, ದಿನಕ್ಕೆ 16 ರಿಂದ 18 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದ ಬಂಡವಾಳಗಾರರ ವ್ಯವಸ್ಥೆಯ ವಿರುದ್ದ ದಿನಕ್ಕೆ 8 ಗಂಟೆಯ ಕೆಲಸಕ್ಕೆ ಆಗ್ರಹಿಸಿ ನಡೆಸಿದ ಹೋರಾಟಕ್ಕೆ ಸುಮಾರು 250 ವರ್ಷಗಳ ಇತಿಹಾಸವಿದೆ. ತಮಗೆ ದಕ್ಕಬೇಕಾದ ಪ್ರಸ್ತುತ ಸವಲತ್ತುಗಳ ಬಗ್ಗೆ ಕಾರ್ಮಿಕರು ಮಾತನಾಡದ ರೀತಿಯಲ್ಲಿ ಹಲವು ರೀತಿಯ ಬಾಯಿ-ಬೀಗಗಳನ್ನು ಹಾಕಲಾಗುತ್ತಿದೆ. ಕಾನೂನಿನ ಬೀಗ, ಭಯದ ಬೀಗ, ಸಬಂಳದ ಬೀಗ, ವಜಾಗೊಳಿಸುವ ಭೀತಿಯ ಬೀಗಗಳನ್ನು ಹಾಕುತ್ತಿರುವ ಈ ಸಂದರ್ಭದಲ್ಲಿ, ಕಾರ್ಮಿಕರ ಹಕ್ಕುಗಳ ಬಗ್ಗೆ ಧ್ವನಿ ಎತ್ತಬಲ್ಲ ಕಾರ್ಮಿಕ ದಿನಾಚರಣೆಗಳ ಮೂಲಕ ಜಾಗೃತಗೊಳಿಸುವ ಕೆಲಸಗಳನ್ನು ತುಮಕೂರಿನ ಕಾರ್ಮಿಕ ಸಂಘಟನೆಗಳು ಇಂದು ಮಾಡುತ್ತಿವೆ ಎಂದರು.
ಇದೇ ತುಮಕೂರು ನಗರದಲ್ಲಿ ಸುಮಾರು 15 ರಿಂದ 20 ಸಾವಿರ ಮಂದಿಗೆ ಉದ್ಯೋಗ ನೀಡಿದ್ದ ಹೆಚ್.ಎಂ.ಟಿ. ಕೈ-ಗಡಿಯಾರ ಕಾರ್ಖಾನೆ ಇಂದು ಖಾಸಗೀಕರಣದ ಉತ್ತೇಜನದಿಂದಾಗಿ ನಾಶವಾಗಿದೆ. ಇದರಿಂದ ಸಾವಿರಾರು ಮಂದಿಗೆ ಸಾಮಾಜಿಕ ಭದ್ರತೆ, ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಕನಿಷ್ಠ ವೇತನವಿಲ್ಲದೆ ದುಡಿಯುತ್ತಿದ್ದ ಪೌರಕಾರ್ಮಿಕರಿಗೆ ಕನಿಷ್ಠ ಕೂಲಿ ಜಾರಿಗೆ ಆಗ್ರಹಿಸಿ ಕಾರ್ಮಿಕ-ಸಂಘಟನೆಗಳ ಎರಡು-ಮೂರು ದಶಕಗಳ ನಿರಂತರ ಹೋರಾಟದ ಫಲವಾಗಿ ಪೌರಕಾರ್ಮಿಕರಿಗೆ 18 ಸಾವಿರ ಕನಿಷ್ಠ ಕೂಲಿ ಜಾರಿಗೆ ಕೋರ್ಟ್ ಆದೇಶ ನೀಡಿದೆ. ಆದರೆ, ಆಡಳಿತ ವ್ಯವಸ್ಥೆ ಗುತ್ತಿಗೆ ಆಧಾರದಲ್ಲಿ ಅವರನ್ನು ದುಡಿಸಿಕೊಳ್ಳುವ ಅತಂತ್ರ-ವ್ಯವಸ್ಥೆಗೆ ದೂಡುತ್ತಿದೆ. ಜಿಡಿಪಿಯಲ್ಲಿ ಸಾಮಾಜಿಕ ಕಲ್ಯಾಣಕ್ಕಾಗಿ ಮೀಸಲಿಡುತ್ತಿದ್ದ ಶೇ. 8 ರಷ್ಟು ಹಣ ಈಗ ಕೇವಲ ಶೇ.2 ಕ್ಕೆ ಬಂದುನಿಂತಿದೆ. ಇದರಿಂದ ಶಿಕ್ಷಣ, ಆರೋಗ್ಯ, ಸೇರಿದಂತೆ ಹಲವು ವಿಭಾಗಗಳು ಸಾಮಾನ್ಯ ಜನರ ಕೈಗೆ ಸಿಗದಂತಾಗಿದೆ ಎಂದರು.
ಇದನ್ನು ಓದಿ :-ಏಪ್ರಿಲ್ 2025ರಲ್ಲಿ ಜಿಎಸ್ಟಿ ಸಂಗ್ರಹದಲ್ಲಿ ದಾಖಲೆ : ₹2.37 ಲಕ್ಷ ಕೋಟಿ ಸಂಗ್ರಹ ಅಂತಃಕರಣ
ಇಂದು ಪ್ರತಿಯೊಂದು ಕೆಲಸಕ್ಕೂ, ಪ್ರತಿಯೊಂದು ಯೋಜನೆಗೂ ಸ್ಮಾರ್ಟ್ ಪೋನ್ ಅಗತ್ಯವಾಗಿ ಬೇಕಾಗಿದೆ. ಆದರೆ ಇದೇ ಸ್ಮಾರ್ಟ್ ಪೋನ್ ಹೊಂದಿದ್ದರೆ ಬಡವನ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ. ಒಂದು ಕಾಲದಲ್ಲಿ ಹಲವು ಜನರಿಗೆ ಉದ್ಯೋಗ ನೀಡಿದ್ದ ಬಿಪಿಎಲ್ ಟಿವಿ ಇಂದು ಹೇಳಲು ಹೆಸರಿಲ್ಲದಂತಾಗಿದೆ. ಬೇರೆ ದೇಶದ ವಸ್ತುಗಳಿಗೆ ಭಾರತದ ಲೇಬಲ್ ಹಾಕಲಾಗುತ್ತಿದೆ. ಸಂವಿಧಾನ ನೀಡಿರುವ ಬದುಕುವ ಹಕ್ಕಿನ ಉಳಿವಿಗಾಗಿ ಇಂದು ಹೋರಾಟ ಅನಿವಾರ್ಯವಾಗಿದೆ ಎಂದು ಕಾರ್ಮಿಕರಿಗೆ ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ಮುಜೀಬ್, ಜನರನ್ನು ಭಾವನಾತ್ಮಕವಗಿ ವಿಭಜಿಸುವ ಮೂಲಕ ದ್ವೇಷ ಬೆಳೆಸಿ, ಜನರಲ್ಲಿ ಮೂಲಭೂತವಾದ ಬೆಳೆಸುತ್ತಾ ಉದ್ಯೋಗ, ಬಡತನ, ಅಪೌಷ್ಠಿಕತೆ, ವಸತಿ, ಮಹಿಳೆಯರ ಮತ್ತು ದಲಿತರ ಮೇಲಿನ ದೌರ್ಜನ್ಯ, ಬೆಲೆ ಏರಿಕೆ ಸೇರಿದಂತೆ ಮುಂತಾದ ಅನೇಕ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ. ಶ್ರಮ ಶಕ್ತಿಯನ್ನು ನಿರಂತರವಾಗಿ ಅಪಮಾನಿಸಲಾಗುತ್ತಿದ್ದು, ದುಡಿಯುವ ಜನರು ಇದರ ವಿರುದ್ಧ ಸಂಘಟಿತರಾಗಬೇಕಾಗಿದೆ. ಮೇ 20’ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರವನ್ನು ಕಾರ್ಮಿಕರೆಲ್ಲ ಒಗ್ಗಟ್ಟಿನಿಂದ ಯಶಸ್ವಿಗೊಳಿಸಲು ಅವರು ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜಿ.ಕಮಲ, ಎ. ಲೋಕೇಶ್, ಹೆಚ್.ಡಿ.ನಾಗೇಶ್, ಬಿ.ಉಮೇಶ್, ಗುಲ್ಜಾರ್ ಬಾನು, ನಾಗರಾಜು, ಅನಸೂಯ ಮಹಿಳಾ ಸಂಘಟನೆಯ ಮುಖಂಡರಾದ ಕಲ್ಪನ, ಶಿವಕುಮಾರಸ್ವಾಮಿ, ಕೊಳಗೇರಿ ಸಂಘಟನೆಯ ಎ. ನರಸಿಂಹಮೂರ್ತಿ, ಸ್ಟ್ಯಾನ್ಲಿ ಸುಕುಮಾರ್, ಮಧುಸೂದನ್, ವಸೀಂ ಅಕ್ರಂ, ಇಂತು, ಗಣಪತಿ, ಮಂಜುನಾಥ್, ಶ್ರೀನಿವಾಸ್, ಖಲೀಲ್, ಸುಬ್ರಹ್ಮಣ್ಯ, ರಾಘವೇಂದ್ರ, ಮಹೇಶ್, ಗಂಗಮ್ಮ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿಐಟಿಯು’ನ ಪುಷ್ಪ ಮತ್ತು ಸಂಗಡಿಗರು ಕ್ರಾಂತಿಗೀತೆಗಳನ್ನು ಹಾಡಿದರು. ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರಾದ ಕಾರ್ಮಿಕ-ಕ್ರೀಡಾಳುಗಳಿಗೆ ಬಹುಮಾನ ವಿತರಿಸಲಾಯಿತು.
ಇದನ್ನೂ ನೋಡಿ : ಮೇ ದಿನ | ಸ್ವದೇಶಿ ಎನ್ನುವ ಸರ್ಕಾರ ವಿದೇಶಿ ಬಂಡವಾಳಿಗರಿಗೆ ರತ್ನಗಂಬಳಿ ಹಾಸುತ್ತಿರುವುದೇಕೆ? – ಡಾ. ಕೆ.ಪ್ರಕಾಶ್