ಬೆಂಗಳೂರು: ಶಾಲಾ ತರಗತಿಗಳಿಗಾಗಿ ಕೊಠಡಿಗಳು ಬೇಡಿಕೆ ಇಟ್ಟಿದ್ದಕ್ಕೆ ಶಿಕ್ಷಣಾಧಿಕಾರಿಯ ಅಮಾನತು ಆದೇಶವನ್ನು ರದ್ದಿಗೊಳಿಸುವಂತೆ ಜಾಗೃತ ನಾಗರಿಕರು ಕರ್ನಾಟಕ, ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರ ಬರೆದಿದ್ದಾರೆ.
ಬೆಳಗಾವಿ ಜಿಲ್ಲೆಯ, ರಾಯಭಾಗ ತಾಲ್ಲೂಕಿನ , ನಿಡಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳ ಅವರು ತಮ್ಮ ಶಾಲೆಯ ಬಗೆಗೆ ಇರಿಸಿಕೊಂಡಿರುವ ಪ್ರೀತಿ ಅನನ್ಯ ವಾದುದು. ಕಳೆದ ಹತ್ತು ವರ್ಷಗಳಿಂದಲೂ ತಮ್ಮ ಶಾಲೆಯ ಅಭಿವೃದ್ಧಿ ಗಾಗಿ ನಿರಂತರ ಶ್ರಮಿಸುತ್ತಾ ಬಂದಿರುವುದರಿಂದಾಗಿ ಈ ಶಾಲೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶಾಲಾ ತರಗತಿಗಳಿಗಾಗಿ ನಾಲ್ಕು ಕೊಠಡಿಗಳು ಅಗತ್ಯ ಇದೆ, ಕಟ್ಟಿಸಿಕೊಡಿ ಎಂದು ಕೇಳಿದ ಅವರ ಬೇಡಿಕೆಯನ್ನು ಮಹಾಪರಾಧವೆಂದು ಭಾವಿಸಿದ ಶಿಕ್ಷಣಾಧಿಕಾರಿ ವೀರಣ್ಣ ಮಡಿವಾಳರನ್ನು ಅಮಾನತಿನಲ್ಲಿರಿಸಿ ಆದೇಶ ಹೊರಡಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಇದನ್ನು ಓದಿ :-ನೀಟ್-ಪಿಜಿ 2025: ಪರೀಕ್ಷೆ ಒಂದೇ ಪಾಳಿಯಲ್ಲಿ ನಡೆಸಬೇಕು – ಸುಪ್ರೀಂ ಕೋರ್ಟ್ ಆದೇಶ
ಕೆಲವು ವರ್ಷಗಳ ಹಿಂದೆ ಮಕ್ಕಳ ಸಂಖ್ಯೆ 70 ಇದ್ದಾಗಲೂ ಎರಡು ಕೊಠಡಿಗಳಿದ್ದವು. ಈಗ 140-170ಕ್ಕೆ ಹೆಚ್ಚಳವಾದಾಗಲೂ ಅಷ್ಟೇ ಸಂಖ್ಯೆಯ ಕೊಠಡಿಗಳಿವೆ. ಇದರಿಂದ ಪಾಠ ಮಾಡುವುದು ಹೇಗೆ? ಕೊಠಡಿ ಸಂಖ್ಯೆ ಹೆಚ್ಚಿಸದಿದ್ದರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ವೀರಣ್ಣ ಅವರು ಕಳಕಳಿಯಿಂದ ಕೇಳುತ್ತಿದ್ದಾರೆ.
ಶಾಲಾ ಅಭಿವೃದ್ಧಿಯ ಬಗ್ಗೆ ಇಂತಹ ಕಾಳಜಿಯನ್ನು ಹೊಂದಿರುವ ಮುಖ್ಯ ಶಿಕ್ಷಕರ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗೌರವ ತೋರಿಸುವ ಸೌಜನ್ಯ ತೋರಿಸುವುದನ್ನು ಬಿಟ್ಟು ಅವರನ್ನು ಅಮಾನತ್ತಿನಲ್ಲಿರಿಸುವುದು ಸರ್ವಥಾ ನ್ಯಾಯವಲ್ಲ.ಅವರು ತೋರಿದ ಸಾತ್ವಿಕ ಪ್ರತಿಭಟನೆ ಅಪರಾಧ ಎಂದು ಭಾವಿಸಿ ಅಮಾನತು ಆದೇಶ ಹೊರಡಿಸಿದ್ದಾರೆ,
ಅವರ ನಡವಳಿಕೆಗೆ ವಿವರಣೆ ಕೇಳಿ ಪತ್ರ ಕೊಟ್ಟು 24 ಘಂಟೆಯ ಒಳಗೆ ಅವರನ್ನು ಅಮಾನತು ಮಾಡಿದ ನಡೆ ತೀವ್ರ ಆಕ್ಷೇಪಾರ್ಹವಾದ ಕ್ರಮವಾಗಿದೆ. ಅಧಿಕಾರಿಯ ಈ ನಡೆ, ಅವರ ಸರ್ವಾಧಿಕಾರಿ ಧೋರಣೆಯ ಪ್ರತೀಕ ಎಂದು ನಾವು ಭಾವಿಸುತ್ತೇವೆ. ಇಂತಹ ಅಧಿಕಾರಿಗಳಿಂದ ನಿಮಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಸಂಭವವಿದೆ ಎಂದಿದ್ದಾರೆ.
ಆದುದರಿಂದ ದಯಮಾಡಿ ಮಧ್ಯ ಪ್ರವೇಶಿಸಿ ವೀರಣ್ಣ ಮಡಿವಾಳರ ಅವರನ್ನು ಅಮಾನತ್ತಿನಲ್ಲಿರಿಸಿರುವ ಆದೇಶವನ್ನು ಈ ಕೂಡಲೇ ರದ್ದುಗೊಳಿಸಿ ತಮ್ಮ ಇಲಾಖೆಗೆ ಬಂದಿರುವ ಕಳಂಕವನ್ನು ನಿವಾರಿಸಿಕೊಳ್ಳಬೇಕಾಗಿ ವಿನಂತಿ ಸಿಕೊಳ್ಳುತ್ತೇವೆ.
ತನ್ನ ಕರ್ತವ್ಯ ನಿರ್ವಹಿಸಿದ ಪ್ರಾಮಾಣಿಕ ಶಿಕ್ಷಕನನ್ನು ಅಮಾನತ್ತಿನಲ್ಲಿರಿಸಿ ಅಪಮಾನಿಸಿದ ಅಧಿಕಾರಿಯ ನಡೆ ತೀವ್ರ ಆಕ್ಷೇಪಾರ್ಹವಾಗಿರುವುದರಿಂದ ಅದನ್ನು ತನಿಖೆ ಮಾಡಲು ಆದೇಶ ಹೊರಡಿಸಬೇಕಾಗಿ ಒತ್ತಾಯ ಪೂರ್ವಕ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರದ ನೀತಿ ನಿಯಮಗಳನ್ನು ಜಾರಿಗೆ ತರಲು ಇರುವ ಒಣ ಉತ್ಸಾಹಕ್ಕಿಂತ ,ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಇರುವುದನ್ನು ಗುರುತಿಸಬಲ್ಲ ಕಳಕಳಿ ಅಧಿಕಾರಿಗಳು ಇರಬೇಕೆಂಬುದನ್ನು ತಾವು ಗಮನಿಸಬೇಕಾಗಿದೆ ಎಂದಿದ್ದಾರೆ.
ಇದನ್ನು ಓದಿ :-ಕನ್ನಡ ತಮಿಳಿಂದ ಅಥವಾ ಸಂಸ್ಕೃತದಿಂದ ಹುಟ್ಟಿದ್ದಲ್ಲ; ದ್ರಾವಿಡಿಯನ್ ಭಾಷೆಗಳೆಲ್ಲವೂ ಒಂದೇ ಮೂಲಭಾಷೆಯಿಂದ ಕವಲೊಡೆದಿವೆ.
ಹಿರಿಯ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವಿಮಲಾ.ಕೆ.ಎಸ್, ಡಾ.ಮೀನಾಕ್ಷಿ ಬಾಳಿ, ಡಾ.ವಸುಂಧರಾ ಭೂಪತಿ, ಬಿ. ಶ್ರೀಪಾದ ಭಟ್, ಡಾ.ಬಂಜಗೆರೆ ಜಯಪ್ರಕಾಶ್, ಮಾವಳ್ಳಿ ಶಂಕರ್, ಟಿ.ಸುರೇಂದ್ರ ರಾವ್, ಡಾ.ಎನ್.ಗಾಯತ್ರಿ, ಡಾ.ವಿ.ಪಿ.ನಿರಂಜನಾರಾಧ್ಯ, ಜಾಣಗೆರೆ ವೆಂಕಟರಾಮಯ್ಯ, ಎನ್.ಕೆ.ವಸಂತ ರಾಜ್, ವಾಸುದೇವ ಉಚ್ಚಿಲ, ಕೆ.ನೀಲಾ, ಡಾ.ಬಿ.ಆರ್.ಮಂಜುನಾಥ್, ಡಾ.ಎಚ್.ಜಿ.ಜಯಲಕ್ಷ್ಮಿ ಸೇರಿದಂತೆ ಅನೇಕರು ಸಹಿ ಮಾಡಿದ್ದಾರೆ.