ನವದೆಹಲಿ: ದೆಹಲಿ ಹೈಕೋರ್ಟ್ 2017ರ ಉನ್ನಾವ್ ಅತ್ಯಾಚಾರ ಪ್ರಕರಣದ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್ ಅವರ ಜೀವಾವಧಿ ಶಿಕ್ಷೆ ರದ್ದುಪಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಸೆಂಗಾರ್ಗೆ ನೋಟಿಸ್ ನೀಡಿದೆ. ಡಿಸೆಂಬರ್ 23ರಂದು ಹೈಕೋರ್ಟ್, ವಿಚಾರಣಾ ನ್ಯಾಯಾಲಯವು ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ದೋಷಿ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ರದ್ದುಪಡಿಸಿತ್ತು.
ಇದನ್ನೂ ಓದಿ : ಮನರೇಗಾ ನಿರ್ಮಿಸಿದ ಪರಂಪರೆಯನ್ನು ಧ್ವಂಸ ಮಾಡುವ ವಿಬಿ-ಜಿ ರಾಮ್ ಜಿ: ಅರ್ಥಶಾಸ್ತ್ರಜ್ಞ ಜೀನ್ ಡ್ರೇಜ್
ಡಿಸೆಂಬರ್ 23ರ ದೆಹಲಿ ಹೈಕೋರ್ಟ್ ಆದೇಶದಂತೆ ಸೆಂಗಾರ್ ಅವರನ್ನು ಕಸ್ಟಡಿಯಿಂದ ಬಿಡುಗಡೆ ಮಾಡಬಾರದು. ಸೆಂಗಾರ್ ಅವರ ಮೇಲಿನ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕಾದ ಕಾನೂನಿನ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಸಂತ್ರಸ್ತೆಯ ಮನೆಯ 5 ಕಿ.ಮೀ ವ್ಯಾಪ್ತಿಯಲ್ಲಿ ಓಡಾಡಬಾರದು ಮತ್ತು ಸಂತ್ರಸ್ತೆ ಅಥವಾ ಆಕೆಯ ತಾಯಿಗೆ ಬೆದರಿಕೆ ಹಾಕಬಾರದು ಎಂದೂ ಆದೇಶಿಸಿತ್ತು. ನ್ಯಾಯಮೂರ್ತಿಗಳಾದ ಸುಬ್ರಮಣಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ಪೀಠ ಸೆಂಗಾರ್ಗೆ ಜಾಮೀನು ನೀಡಿ, 15 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಅದೇ ಮೊತ್ತದ ಮೂರು ಶ್ಯೂರಿಟಿಗಳನ್ನು ನೀಡುವಂತೆ ನಿರ್ದೇಶಿಸಿತ್ತು.
ಸಿಬಿಐ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ, ಹೈಕೋರ್ಟ್ ಆದೇಶ “ಕಾನೂನಿಗೆ ವಿರುದ್ಧ” ಹೈಕೋರ್ಟ್ನ ಈ ಆದೇಶವು ಸಂತ್ರಸ್ತೆಯ ಕುಟುಂಬ ಮತ್ತು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು ಎಂದು ಉಲ್ಲೇಖಿಸಿತ್ತು.
“ಸಾಂವಿಧಾನಿಕ ಹುದ್ದೆ ಪಡೆಯುವ ಕಾರಣದಿಂದಾಗಿ ಹಾಲಿ ಶಾಸಕರೊಬ್ಬರು ಮತದಾರರ ಮೇಲೆ ಸಾರ್ವಜನಿಕ ನಂಬಿಕೆ, ಅಧಿಕಾರವನ್ನು ಹೊಂದಿದ್ದಾರೆ ಮತ್ತು ಆ ಸ್ಥಾನವು ರಾಜ್ಯ ಮತ್ತು ಸಮಾಜದ ಒಳಿತಿಗೆ ಮಾಡಬೇಕಾದ ಕರ್ತವ್ಯಗಳಿಂದ ರೂಪುಗೊಂಡ ಹೆಚ್ಚಿನ ಜವಾಬ್ದಾರಿ ಹೊಂದಿದೆ ಎಂದು ಪರಿಗಣಿಸಲು ಹೈಕೋರ್ಟ್ ವಿಫಲವಾಗಿದೆ” ಎಂದು ಹೇಳಿತ್ತು.
ಸೆಕ್ಷನ್ 5(ಸಿ) ಪೋಕ್ಸೋ ಅಪರಾಧಗಳು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದೆ. ಪೋಕ್ಸೋ ಕಾಯ್ದೆಯ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವಲ್ಲಿ ಹೈಕೋರ್ಟ್ ವಿಫಲವಾಗಿದೆ. ಸಂಸದರು, ಶಾಸಕರು ಮಾಡುವ ಭ್ರಷ್ಟಾಚಾರ ಅಪರಾಧಗಳಿಗಿಂತ ಪೋಕ್ಸೋ ಕಾಯ್ದೆಯ ಸೆಕ್ಷನ್ 5(ಸಿ) ಅಡಿಯಲ್ಲಿನ ಅಪರಾಧಗಳು ಹೆಚ್ಚಿನ ಗಂಭೀರತೆ ಹೊಂದಿವೆ. ಇದು ತೀವ್ರ ದೈಹಿಕ, ಮಾನಸಿಕ ಮತ್ತು ನೈತಿಕ ಹಾನಿ ಕುರಿತಾಗಿದೆ ಎಂದು ಸಿಬಿಐ ತಿಳಿಸಿತ್ತು.
ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ 2012, ಅಧಿಕಾರದ ದುರುಪಯೋಗವನ್ನು ನಿಯಂತ್ರಿಸುವ ಮತ್ತು ದಂಡ ವಿಧಿಸುವಲ್ಲಿ ಸಾಮಾನ್ಯ ಶಾಸಕಾಂಗ ಉದ್ದೇಶವನ್ನು ಹೊಂದಿವೆ ಎಂಬುದನ್ನು ಹೈಕೋರ್ಟ್ ಅರ್ಥಮಾಡಿಕೊಳ್ಳಲು ವಿಫಲವಾಗಿದೆ ಎಂದಿತ್ತು.
ಇದನ್ನೂ ನೋಡಿ : ಬೀದಿಯಲ್ಲಿ ಕ್ರಿಸ್ಮಸ್ ವಿರುದ್ಧ ಭಜರಂಗಿಗಳ ಅಟ್ಟಹಾಸಚರ್ಚ್ ನಲ್ಲಿ ಪ್ರಧಾನಿಗಳ ಮಂದಹಾಸ?? Janashakthi Media
