ಪ್ರಧಾನಿಯವರೇ ಸಂಭ್ರಮಾಚರಣೆ ಆಮೇಲೆ, ಮೊದಲು ಎಲ್ಲರಿಗೂ 2 ಡೋಸ್ ಲಸಿಕೆ ಕೊಡಿ: ಸಿದ್ದರಾಮಯ್ಯ

ಬೆಂಗಳೂರು: ದೇಶದ ಅರ್ಧಭಾಗದಷ್ಟು ಜನರಿಗೆ ಲಸಿಕೆ ನೀಡುವುದು ಬಾಕಿ ಇದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಲಸಿಕೆ ಅಭಿಯಾನದ ಯಶಸ್ವಿ ಸಾಧನೆ ಎಂದು ಸಂಭ್ರಮಾಚರಣೆ ಮಾಡುತ್ತಿರುವುದು ಯಾವ ಪುರಷಾರ್ಥಕ್ಕೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ಹಾನಗಲ್‌ ಕ್ಷೇತ್ರಕ್ಕೆ ತೆರಳಲು ಹುಬ್ಬಳ್ಳಿಯ ವಿಮಾನ ನಿಲ್ದಾಣ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು  ಔಷಧ, ಬೆಡ್ ನೀಡದ ಕಾರಣ ಕೋವಿಡ್ ನಿಂದ ದೇಶದಲ್ಲಿ 52 ಲಕ್ಷ ಹಾಗೂ ರಾಜ್ಯದಲ್ಲಿ 5 ಲಕ್ಷ‌ ಜನ ಮೃತರಾಗಿದ್ದಾರೆ. ಆದರೂ, ಬಿಜೆಪಿ‌ ಅವರು 100 ಕೋಟಿ ಲಸಿಕೆ ನೀಡಲಾಗಿದೆ ಎಂದು ಸಂಭ್ರಮದಲ್ಲಿದ್ದಾರೆ.

ಇಲ್ಲಿಯವರೆಗೆ 29 ಕೋಟಿ ಜನರಿಗೆ ಎರಡು ಲಸಿಕೆ ಮತ್ತು 42 ಕೋಟಿ ಜನರಿಗೆ ಒಂದು ಮೊದಲ ಲಸಿಕೆ ಮಾತ್ರ ನೀಡಲಾಗಿದೆ. ಇನ್ನೂ ಆರ್ಧ ಭಾರತದಷ್ಟು ಜನರಿಗೆ ಒಂದು ಡೋಸ್ ಲಸಿಕೆ ಕೂಡಾ ನೀಡಿಲ್ಲ. ಯಾವ ಸಾಧನೆಗೆ ಈ ಸಂಭ್ರಮಾಚರಣೆ? ಎಂದು ಪ್ರಶ್ನಿಸಿದರು.

ಇದನ್ನು ಓದಿ: ದೇಶದಲ್ಲಿ ಕೋವಿಡ್ ಲಸಿಕೆ ದಾಖಲೆ: 100 ಕೋಟಿಗೂ ಅಧಿಕ ಲಸಿಕೆ ನೀಡಿಕೆ

ಘೋಷಿತ ಗುರಿಯಂತೆ ದೇಶದ 103 ಕೋಟಿ ವಯಸ್ಕರಿಗೆ ಡಿಸೆಂಬರ್ 31ರೊಳಗೆ 2 ಡೋಸ್ ನೀಡಲು 206 ಕೋಟಿ ಲಸಿಕೆ ಬೇಕಾಗಿದೆ. ಕೊಟ್ಟಿರುವುದು 100 ಕೋಟಿ ಮಾತ್ರ. ಗುರಿ ತಲುಪಲು ಪ್ರತಿದಿನ 1.51 ಕೋಟಿ ಲಸಿಕೆ ನೀಡಬೇಕಾಗಿದೆ ಇದಕ್ಕಾಗಿ ಬೇಕಾಗಿರುವುದು ಸಿದ್ದತೆ, ಖಾಲಿ ತಟ್ಟೆಯ ಪ್ರಚಾರ ಅಲ್ಲ.

ಅಮೆರಿಕದಲ್ಲಿ ಶೇಕಡಾ 56 ಮತ್ತು ಚೀನಾದಲ್ಲಿ ಶೇಕಡಾ 70 ಜನಸಂಖ್ಯೆಗೆ ಎರಡು ಡೋಸ್ ಕೊರೊನಾ ಲಸಿಕೆ ನೀಡಿ ಬೂಸ್ಟರ್ ಲಸಿಕೆ ನೀಡುವ ಸಿದ್ದತೆಯಲ್ಲಿದೆ. ಭಾರತದಲ್ಲಿಯೂ ಕೋವಿಡ್ ಲಸಿಕೆಯ ನಂತರ ಸೋಂಕಿಗೆ ಬೂಸ್ಟರ್ ಡೋಸ್ ನ ಅಗತ್ಯ ಕೂಡ ಬರಬಹುದು, ಆದರೆ ಇನ್ನೂ ಬಹುತೇಕ ಮಂದಿಗೆ ಮೊದಲ ಮತ್ತು ಎರಡನೇ ಡೋಸ್ ಲಸಿಕೆಯೇ ಬಾಕಿ ಇರುವಾಗ ಇನ್ನು ಬೂಸ್ಟರ್ ಡೋಸ್ ನ ಬಗ್ಗೆ ಯೋಚನೆ ಮಾಡಲು ಸಾಧ್ಯವೇ ಎಂದು ಸಿದ್ದರಾಮಯ್ಯ ಎಂದು ಪ್ರಶ್ನಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *