ಶಾಲಾ ಮಕ್ಕಳ ವಾಹನ ಚಾಲಕರಿಗೆ ಜಾಗೃತಿ ಶಿಬಿರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘ(ರಿ) ಆಶ್ರಯದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ, ಮಂಗಳೂರು ನಗರ ಸಂಚಾರಿ ಪೋಲಿಸ್ ಇವರ ಸಹಯೋಗದಲ್ಲಿ ಶಾಲಾ ಮಕ್ಕಳ ವಾಹನ ಚಾಲಕರಿಗೆ ಜಾಗೃತಿ ಶಿಬಿರ ಕಾರ್ಯಕ್ರಮವನ್ನು ಅತ್ತಾವರ ಉಮಾಮಹೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಶಿಬಿರವನ್ನು ಉದ್ದೇಶಿಸಿ ಮಂಗಳೂರು ನಗರ ಸಹಾಯಕ ಪೋಲಿಸ್ ಅಯುಕ್ತರಾದ ಗೀತಾ.ಟಿ.ಕುಲಕರ್ಣಿ ಮಾತನಾಡುತ್ತಾ, ಸಮಾಜದಲ್ಲಿ ಚಾಲಕರ ಪಾತ್ರ ಭಾರೀ ಮಹತ್ವದ್ದಾಗಿದ್ದು, ವಾಹನ ಚಲಾಯಿಸುವ ಸಂದರ್ಭದಲ್ಲಿ ಸಾರಿಗೆ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತಹದ್ದು ಕೂಡ ಮಹತ್ವಪೂರ್ಣವಾಗಿದೆ ಎಂದರು.

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ವಿಶ್ವನಾಥ ನಾಯ್ಕ್ ಚಾಲಕ ವರ್ಗದ ಜವಾಬ್ದಾರಿಯನ್ನು ವಿಶ್ಲೇಷಿಸುತ್ತಾ ತನ್ನ ಹಾಗೂ ಇತರರ ಪ್ರಾಣಗಳನ್ನು ಉಳಿಸುವಲ್ಲಿ ಚಾಲಕರು ಕಟ್ಟುನಿಟ್ಟಿನ ಶಿಸ್ತನ್ನು ಪಾಲಿಸುವ ಅಗತ್ಯವಿದೆ. ಶಾಲಾ ಮಕ್ಕಳನ್ನು ಪ್ರಯಾಣಿಸಲು ಟೂರಿಸ್ಟ್ ವಾಹನಗಳನ್ನು ಬಳಸಬೇಕೇ ಹೊರತು ಖಾಸಗೀ ವಾಹನಗಳನ್ನು ಬಳಸಬಾರದು. ಒಂದು ವೇಳೆ ಅನಾಹುತಗಳು ಸಂಭವಿಸಿದರೆ ಭಾರೀ ಪರಿಣಾಮವನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆ ನೀಡಿದರು.

ಪ್ರಾಸ್ತಾವಿಕ ಮಾತನಾಗಳನ್ನಾಡಿ ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಕಳೆದ 7 ವರ್ಷಗಳಲ್ಲಿ ಬೆಳೆದು ಬಂದ ಶಾಲಾ ಮಕ್ಕಳ ವಾಹನ ಚಾಲಕರ ಸಂಘವು ನಿರಂತರವಾಗಿ ಚಾಲಕರಲ್ಲಿ ಕಾನೂನುಗಳ ಬಗ್ಗೆ ಅರಿವನ್ನು ಮೂಡಿಸುವಲ್ಲಿ ಅವಿರತವಾಗಿ ಶ್ರಮವಹಿಸಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಮಂಗಳೂರು ನಗರ ಪೂರ್ವ ಸಂಚಾರಿ ಪೋಲೀಸ್ ಠಾಣಾ ನಿರೀಕ್ಷಕ ಗೋಪಾಲ್ ಕೃಷ್ಣ ಭಟ್, ಸಂಘದ ಮುಖಂಡರಾದ ರೆಹಮಾನ್ ಖಾನ್ ಕುಂಜತ್ತಬೈಲ್, ಸ್ಟೇನಿ ಮಿನೇಜಸ್, ಗಂಗಾಧರ ರೈ, ಕಿರಣ್ ಲೇಡಿಹಿಲ್ ಮುಂತಾದವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಮೋಹನ್ ಕುಮಾರ್ ಅತ್ತಾವರರವರ ಅಧ್ಯಕ್ಷತೆ ವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *