ವಿದ್ಯಾರ್ಥಿ ವಿರೋಧಿ, ಸಂವಿಧಾನ ವಿರೋಧಿ ಬಿಜೆಪಿ ಪಕ್ಷವನ್ನು ಸೋಲಿಸಲು – ಎಸ್ಎಫ್ಐ ಕರೆ

ಬೆಂಗಳೂರು : ಕರ್ನಾಟಕ ವಿಧಾನಸಭೆ 2023 ಮೇ 10 ರಂದು ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಕರ್ನಾಟಕ ಜನತೆಯ ನೆಮ್ಮದಿ ಭವಿಷ್ಯ ಅಡಕವಾಗಿರುವ ಮಹತ್ವದ ಚುನಾವಣೆ ಇದಾಗಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ತಿಳಿಸಿದೆ.

ಈ ಕುರಿತು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ್‌ ಕಡಗದ್‌, ರಾಜ್ಯ ಕಾರ್ಯದರ್ಶಿ ಭೀಮನಗೌಡ ಪತ್ರಿಕಾ ಹೇಳಿಕೆ ನೀಡಿದ್ದು,  ಕರ್ನಾಟಕವು ಕುವೆಂಪು ಸಾರಿದ ಸರ್ವ ಜನಾಂಗದ ಶಾಂತಿಯ ತೋಟವಾಗಿರಬೇಕು ವಿನಹಃ ಕೋಮುವಾದಿಗಳ ತರಬೇತಿ ಶಾಲೆ ಆಗಬಾರದು. ಸುಂದರ ಶಾಂತಿಯ ಸೌರ್ಹಾದ ನಾಡಿನ ಉಳಿವಿಗಾಗಿ ಮಹತ್ವದ ಚುನಾವಣೆ ಇದಾಗಿರುವದರಿಂದ ವಿದ್ಯಾರ್ಥಿ- ಯುವಜನರು ಬಹಳ ಎಚ್ಚರಿಕೆಯ ಜಾಗೃತಿಯಿಂದ ಮತದಾನ ಮಾಡುವ ಮೂಲಕ ಕೋಮುವಾದಿಗಳ ಹಾಗೂ ವಿದ್ಯಾರ್ಥಿ ವಿರೋಧಿ ಬಿಜೆಪಿ ಪಕ್ಷವನ್ನು ಸೋಲಿಸಲು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕರ್ನಾಟಕ ರಾಜ್ಯ ಸಮಿತಿ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡುತ್ತಿದೆ ಎಂದು ತಿಳಿಸಿದ್ದಾರೆ.

ಈಗಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಂದೇ ಧರ್ಮ, ಒಂದೇ ಭಾಷೆ ಎನ್ನುತ್ತಿವೆ ಹಾಗೂ ಜಾತಿ ಧರ್ಮಗಳ ಮಧ್ಯೆ ಕಲಹ ಮೂಡಿಸಿ ಕೋಮುವಾದಿ ಅಜೆಂಡಾಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಆಕ್ರಮಣಕಾರಿಯಾಗಿ ಜಾರಿಗೊಳಿಸುತ್ತಿವೆ. ವಿದ್ಯಾರ್ಥಿಗಳಿಗೆ ನೀಡಬೇಕಾದ ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ಫೆಲೋಶಿಪ್ ಗಳನ್ನು ಈವರೆಗೆ ಸಮರ್ಪಕವಾಗಿ ಬಿಡುಗಡೆ ಮಾಡಲಿಲ್ಲ. ಕಳೆದ 4 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ, ಶ್ಯೂ , ಸೈಕಲ್, ಲ್ಯಾಪ್‌ಟಾಪ್ ಯಾವುದನ್ನು ಸಮರ್ಪಕವಾಗಿ ಕೊಟ್ಟಿಲ್ಲ. ಹಾಸ್ಟೆಲ್ ವಿದ್ಯಾರ್ಥಿಗಳ ಬದುಕು ಇನ್ನೂ ಕಷ್ಟಕರ ಆಗಿದೆ. ಪಠ್ಯ ಪುಸ್ತಕದಲ್ಲಿ ಭಗತ್‌‌ ಸಿಂಗ್‌‌, ಕುವೆಂಪು, ಅಂಬೇಡ್ಕರ್, ನಾರಾಯಣ ಗುರು ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಗಣ್ಯರ ಜೀವನ ಚರಿತ್ರೆಯನ್ನು ಕೈ ಬಿಟ್ಟು ವರ್ಷವಿಡೀ ಪಠ್ಯ ಗೊಂದಲ ಎಬ್ಬಿಸಿ ವಿದ್ಯಾರ್ಥಿಗಳ ಕಲಿಕೆಗೆ ಪೆಟ್ಟು ನೀಡಿದೆ. ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳಿಂದ ಪ್ರತಿ ತಿಂಗಳು 100 ರೂ. ಡೊನೇಶನ್ ನೆಪದಲ್ಲಿ ಹಣ ವಸೂಲಿ ಮಾಡಲು ಮುಂದಾಗಿದ್ದ ವಿದ್ಯಾರ್ಥಿ ವಿರೋಧಿ ಸರ್ಕಾರ ಇದಾಗಿದೆ ಎಂದು ಆರೋಪಿಸಿದ್ದಾರೆ.

ವಿದ್ಯಾರ್ಥಿ ವಿರೋಧಿ ಹೊಸ ಶಿಕ್ಷಣ ನೀತಿ (NEP) 2020 ರ ಕುರಿತು ಸೂಕ್ತ ಚರ್ಚೆ ಮಾಡದೆ ಏಕಪಕ್ಷೀಯವಾಗಿ, ಸಂವಿಧಾನ ಬಾಹಿರವಾಗಿ ಜಾರಿ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರ ಮಾಡಿ ವಿದ್ಯಾರ್ಥಿಗಳ ಜೀವನವನ್ನು ಹಾಳು ಮಾಡಲು ಮುಂದಾಗಿದೆ. ಕೊಠಾರಿ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರ ಶಿಕ್ಷಣಕ್ಕೆ 30% ಹಣವನ್ನು ತನ್ನ ಬಜೆಟ್ ನಲ್ಲಿ ಮೀಸಲಿಡಬೇಕೆಂದು ಹೇಳಿದೆ ಆದರೆ ಈವರೆಗೆ ಅದನ್ನು ಜಾರಿ ಮಾಡಲು ಆಗುತ್ತಿಲ್ಲ ಅದರ ಅರ್ಧದಷ್ಟನ್ನು ಕೂಡಾ ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹಣ ಮಿಸಲಿಡುತ್ತಿಲ್ಲಾ ಕಳೆದ ಬಜೆಟ್ ನಲ್ಲಿ 12% ಮಾತ್ರವೇ ಶಿಕ್ಷಣಕ್ಕೆ ನೀಡಲಾಗಿದೆ ಆದರಿಂದ ಇಷ್ಟೆಲ್ಲಾ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಏಕಪಕ್ಷೀಯವಾಗಿ ಜಾರಿ ಮಾಡುವ ಮೂಲಕ ತನ್ನ ಸರ್ವಾಧಿಕಾರಿ ಧೋರಣೆಯ ತೋರಿಸಿದ ಮತ್ತು ಉನ್ನತ ಶಿಕ್ಷಣವನ್ನು ಕಸಿದುಕೊಳ್ಳುತ್ತಿರುವ ಹಾಗೂ PSI ಹಗರಣ, ಮೊಟ್ಟೆ ಹಗರಣ ಸೇರಿ ಬಹುತೇಕ ಸರ್ಕಾರಿ ನೇಮಕಾತಿ ಸೇರಿದಂತೆ ಎಲ್ಲದರಲ್ಲೂ ಭ್ರಷ್ಟಾಚಾರ ಎಸಗಿದ, ಶಿಕ್ಷಣ, ಆರೋಗ್ಯ ಮತ್ತು ಔದ್ಯೋಗಿಕ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾದ ಭ್ರಷ್ಟ, ಕೋಮುವಾದಿ, ಪ್ರಜಾಪ್ರಭುತ್ವ ವಿರೋಧಿ, ವಿದ್ಯಾರ್ಥಿ ಯುವಜನರ ವಿರೋಧಿ ಪಕ್ಷವನ್ನು ನಿರ್ಣಾಯಕವಾಗಿ ಸೋಲಿಸಲು ವಿದ್ಯಾರ್ಥಿ-ಯುವಜನ ಮತದಾರರಿಗೆ ಕರೆ ನೀಡಿದ್ದಾರೆ.

ಈಗಾಗಲೇ 2023ರ ವಿಧಾನ ಸಭಾ ಮತ ಕ್ಷೇತ್ರದ ವಿದ್ಯಾರ್ಥಿ – ಯುವಜನ ಮತದಾರರು ಈ ವಿದ್ಯಾರ್ಥಿ- ಯುವಜನರ, ದಲಿತರ, ಹಿಂದುಳಿದ ವರ್ಗಗಳ, ಕಾರ್ಮಿಕರ, ರೈತರ, ಅಲ್ಪಸಂಖ್ಯಾತರ, ಜನ ವಿರೋಧಿ ಶಕ್ತಿಗಳನ್ನು ಸೋಲಿಸಲು ಮುಂದಾಗಬೇಕೆಂದು ಈಗಾಗಲೇ ಪ್ರಚಾರಾಂದೋಲನ ನಡೆಸಿದ್ದೇವೆಂದು ಅವರು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *