ಎಸ್‌ಎಫ್‌ಐ ಅಖಿಲ ಭಾರತ ಜಾಥಾ ಆಗಸ್ಟ್‌ 10ರಂದು ರಾಯಚೂರಿಗೆ ಆಗಮನ

ರಾಯಚೂರು: ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಮತ್ತು ಆರೋಗ್ಯದ ಹಿತ ದೃಷ್ಟಿಯಿಂದ ಈ ಭಾಗಕ್ಕೆ ಏಮ್ಸ್ ನ ಆಗತ್ಯವಿದೆ. ಈಗಾಗಲೇ ಸರ್ಕಾರ ಕಡೆಗಣಿಸಿ ಐಐಟಿಯನ್ನು ಕಿತ್ತುಕೊಂಡಿದೆ ಈಗ ಏಮ್ಸ್ ಗೂ ಕೈ ಹಾಕಿದೆ. ರಾಯಚೂರಿನಲ್ಲಿ ಏಮ್ಸ್ ಗಾಗಿ ನಡೆಯುತ್ತಿರುವ ಹೋರಾಟಕ್ಕೆ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್ಎಫ್ಐ) ತನ್ನ ಸಂಪೂರ್ಣ ಬೆಂಬಲ ನೀಡಿದೆ.

ಇಂದು(ಆಗಸ್ಟ್‌ 05) ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ʻದೇಶದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗವು ರಾಷ್ಟ್ರವ್ಯಾಪಿ ಶಿಕ್ಷಣವನ್ನು ಹಿನ್ನಡೆಗೊಳಿಸಿದೆ, ಡಿಜಿಟಲ್ ವಿಭಜನೆ ಮತ್ತು ಆನ್‌ಲೈನ್ ಶಿಕ್ಷಣದ ಪರಿಣಾಮ ಅಸಂಖ್ಯಾತ ವಿದ್ಯಾರ್ಥಿಗಳು ಒಂದು ಹಂತದ ಶಿಕ್ಷಣದಿಂದ ದೂರ ಉಳಿದರು. ಇನ್ನೂ ಈ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಶಿಕ್ಷಣ ವಿರೋಧಿ ನೀತಿ, ನಿರ್ಲಕ್ಷ್ಯದಿಂದ ಸಾಕಷ್ಟು ತೊಂದರೆ ಆಗುತ್ತಿದೆ. ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಸಾರ್ವಜನಿಕ ನಿಧಿಯ ಕಡಿತ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಲವಂತದ ಅನುಷ್ಠಾನ ಮತ್ತು ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಮತ್ತು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಂತಹ ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳನ್ನು ನಡೆಸುವ ತಾರತಮ್ಯದ ಮಾರ್ಗವು ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆʼ ಎಂದು ಆರೋಪಿಸಿದರು.

ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ, ವ್ಯಾಪಾರೀಕರಣಗೊಳಿಸುವ ಮತ್ತು ಕೋಮುವಾದಗೊಳಿಸುವ ಮೂಲಕ ಸಾಂವಿಧಾನಿಕ ಹಕ್ಕುಗಳನ್ನು ದುರ್ಬಲಗೊಳಿಸುವ ಸರ್ಕಾರದ ಈ ಪ್ರಯತ್ನವನ್ನು ವಿರೋಧಿಸಲು ನಮ್ಮ ವಿದ್ಯಾರ್ಥಿ ಸಮೂಹ ಒಟ್ಟಾಗಿ ಹೋರಾಟ ನಡೆಸಬೇಕಿದೆ. ಈ ಸಂದರ್ಭದಲ್ಲಿ ಎಸ್‌ಎಫ್‌ಐ ಭಾರತದಲ್ಲಿ ಲಕ್ಷಾಂತರ ಯುವಕರ ಶಿಕ್ಷಣ ಮತ್ತು ಭವಿಷ್ಯವನ್ನು ಉಳಿಸಲು ರಾಷ್ಟ್ರವ್ಯಾಪಿ ದೊಡ್ಡ ಆಂದೋಲನವನ್ನು ನಿರ್ಮಿಸುತ್ತಿದೆ. ಅದರ ಭಾಗವಾಗಿ ಎಸ್‌ಎಫ್‌ಐ ಕೇಂದ್ರ ಕಾರ್ಯಕಾರಿ ಸಮಿತಿಯು ‘ಮಾರ್ಚ್ ಫಾರ್ ಎಜುಕೇಶನ್’ ಹೆಸರಿನ ಭಾರತ ಜಾಥಾವನ್ನು ಆಯೋಜಿಸಿದ್ದು ಈಗಾಗಲೇ ಆಗಸ್ಟ್ 01, 2022ರಂದು ಏಕಕಾಲಕ್ಕೆ ಕಾಶ್ಮೀರದ ಶ್ರೀನಗರ ಮತ್ತು ಕನ್ಯಾಕುಮಾರಿಯಲ್ಲಿ ಉದ್ಘಾಟನೆಗೊಂಡು ಆಗಸ್ಟ್ 01 ರಿಂದ ಸೆಪ್ಟೆಂಬರ್ 25, 2022 ರವರೆಗೆ ದೇಶದ ಐದು ವಿವಿಧ ಮೂಲೆಗಳಿಂದ ‘ಶಿಕ್ಷಣ ಉಳಿಸಿ, ಸಂವಿಧಾನ ಉಳಿಸಿ, ಭಾರತ ಉಳಿಸಿ’ ಎಂಬ ಘೋಷಣೆಯೊಂದಿಗೆ ದೇಶದ ಶಿಕ್ಷಣದ ಹಕ್ಕನ್ನು ರಕ್ಷಿಸಲು ಮತ್ತು ವಿದ್ಯಾರ್ಥಿಗಳ ಏಕತೆಗಾಗಿ ಮನವಿ ಜಾಥಾವನ್ನು ಹಮ್ಮಿಕೊಂಡಿದೆ. ಈ ಮೂಲಕ ಶಿಕ್ಷಣದ ಉಳಿವಿನ ಚಳುವಳಿಯನ್ನು ಬೆಂಬಲಿಸಲು ದೇಶಾದ್ಯಂತ ವಿದ್ಯಾರ್ಥಿ ಮತ್ತು ಯುವಜನರಿಗೆ ಕರೆ ನೀಡುತ್ತಿದ್ದೇವೆ. ಕನ್ಯಾಕುಮಾರಿಯಿಂದ ಹೊರಟ ಜಾಥವು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದ ಮೂಲಕ ಆಗಸ್ಟ್ 10ರಂದು ರಾಯಚೂರಿಗೆ ಬರಲಿದೆ‌‌ ಎಂದು ತಿಳಿಸಿದರು.

ಎಸ್‌ಎಫ್‌ಐ ರಾಜ್ಯ ಜಂಟಿ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಾಳ ಮಾತನಾಡಿ, ರಾಜ್ಯ ಸರಕಾರ ಸರಕಾರಿ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸುವುದನ್ನು ಬಿಟ್ಟು ವಿದ್ಯಾರ್ಥಿಗಳ ಕೊರತೆ ನೆಪ ಮಾಡಿಕೊಂಡು ವಿಲೀನದ ಹೆಸರಿನಲ್ಲಿ ಸುಮಾರು 13,800 ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್‌ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ನಮ್ಮ ರಾಜ್ಯದಲ್ಲಿ ಬಹುತೇಕ ಬಡ, ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತ್ತು ನಗರದ ಸ್ಲಂ ನಿವಾಸಿಗಳ ಮಕ್ಕಳು ತಮ್ಮ ಶಿಕ್ಷಣವನ್ನು ಸರ್ಕಾರಿ ಶಾಲೆಗಳ ಮೇಲೆ ಅವಲಂಬನೆ ಆಗಿದ್ದಾರೆ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ಮುಚ್ಚಲು ಹೊರಟಿರುವುದು ರಾಜ್ಯ ಸರ್ಕಾರದ ಶಿಕ್ಷಣ ವಿರೋಧಿ ನೀತಿಯಾಗಿದೆ ಇದನ್ನು ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ‌ ಮಾತನಾಡಿ, 2011ರಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರು ಪ್ರೊ, ಗೋವಿಂದ ಅವರ ವರದಿ ಆಧರಿಸಿ ಅಂದಿನ ರಾಜ್ಯ ಸರಕಾರ 12,000ಕ್ಕೂ ಹೆಚ್ಚು ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವುದನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಮಾಡಿತು. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ  72ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯದ ವಿವಿಧ ಜಿಲ್ಲೆಯಿಂದ ಆಗಮಿಸಿದ ಎಸ್‌ಎಫ್‌ಐ ಕಾರ್ಯಕರ್ತರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೇ ಪ್ರತಿಭಟನೆ ಮಾಡುವುದರ ಮೂಲಕ  ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿತ್ತು. ಈ ಪ್ರತಿಭಟನೆಯಲ್ಲಿ ಅಂದಿನ ಸರ್ಕಾರ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡಿ ಸುಮಾರು 20 ವಿದ್ಯಾರ್ಥಿಗಳನ್ನು ಬಂಧಿಸಿ ಜೈಲಿಗೆ ಹಾಕಿತ್ತು. ನಂತರ ನ್ಯಾಯಾಲಯವು ಎಲ್ಲರನ್ನೂ ಬಿಡುಗಡೆಗೊಳಿಸಿತ್ತು. ಕರ್ನಾಟಕದ ಸರ್ಕಾರಿ ಶಾಲೆಗಳ ಉಳಿವಿಗಾಗಿ ಎಸ್ಎಫ್ಐ ಸಂಘಟನೆಯ ಕಾರ್ಯಕರ್ತರು ಯಾವುದೇ ತ್ಯಾಗಕ್ಕೆ ಬೇಕಾದರೂ ಸಿದ್ದರಿದ್ದಾರೆ ಎಂದು ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ಜಾಥಾದ ಮೂಲಕ ಎಚ್ಚರಿಕೆ ನೀಡುತ್ತೇವೆʼ ಎಂದು ಹೇಳಿದರು.

ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಚಿದಾನಂದ ಕರಿಗೂಳಿ ಮಾತನಾಡಿ, ಈ ಹಿಂದೆ ಅನೇಕ ಹೋರಾಟಗಳನ್ನು ಮಾಡುವುದರ ಮೂಲಕ ಏಮ್ಸ್ ಮಂಜೂರಾತಿಗಾಗಿ ಆಗ್ರಹಿಸಲಾಯಿತು, ಮುಂದೆಯೂ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಅಖಿಲ ಭಾರತ ಜಾಥದೊಂದಿಗೆ ಸ್ಥಳೀಯ ಬೇಡಿಕೆಯು ಏಮ್ಸ್ ವಿಷಯವೂ ಆಗಿದೆ. ಆಗಸ್ಟ್ 3ನೇ ವಾರದಲ್ಲಿ ಏಮ್ಸ್ ಗಾಗಿ ಮತ್ತು ಈ ಹೋರಾಟವನ್ನು ಬೆಂಬಲಿಸಿ ಎಸ್ಎಫ್ಐ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಹೋರಾಟ ನಡೆಯಲಿದೆ. ಎಂದು ಹೇಳಿದರು.

ಅಖಿಲ ಭಾರತ ಜಾಥಾ ಮತ್ತು ಏಮ್ಸ್ ನ ಹೋರಾಟಕ್ಕೆ ವಿದ್ಯಾರ್ಥಿ ಯುವಜನರು, ಶಿಕ್ಷಣದ ಪರ ಇರುವ ಎಲ್ಲಾ ಮನಸ್ಸುಗಳು ಮತ್ತು ಪ್ರಗತಿಪರ ಸಂಘಟನೆಗಳು ಕೈಜೊಡಿಸಬೇಕೆಂದು ಎಸ್‌ಎಫ್‌ಐ ವಿನಂತಿಸಿಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷರು ಬಸವರಾಜ ದೀನಸಮುದ್ರ ಮತ್ತು ಜಿಲ್ಲಾ ಮುಖಂಡರು ಮೌನೇಶ ಬುಳ್ಳಾಪುರ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *