ಚೆನ್ನೈ: ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಹಿರಿಯ ನಾಯಕ ಆರ್. ನಲ್ಲಕಣ್ಣು ದೀರ್ಘಕಾಲದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದೂ, ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಫೆಬ್ರವರಿ 25ರಂದು ನಿಧನರಾಗಿದ್ದಾರೆ. ಅವರಿಗೆ 101 ವರ್ಷ ವಯಸ್ಸಾಗಿತ್ತು. ಸಿಪಿಐ
ಇಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಫೆಬ್ರವರಿ 1 ರಂದು ನಲ್ಲಕಣ್ಣು ಅವರನ್ನು ತೀವ್ರ ನಿಗಾ ಘಟಕಕ್ಕೆ(ಐಸಿಯು) ದಾಖಲಿಸಲಾಗಿತ್ತು ಎಂದು ಆಸ್ಪತ್ರೆ ತಿಳಿಸಿದೆ. ವಿಶೇಷ ಆರೈಕೆಯ ಹೊರತಾಗಿಯೂ, ಅವರು ಚಿಕಿತ್ಸೆಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿಲ್ಲ ಮತ್ತು ಅವರ ಸ್ಥಿತಿ ಗಂಭೀರವಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ನಲ್ಲಕಣ್ಣು ಅವರು ಫೆಬ್ರವರಿ 25 ರಂದು ಮಧ್ಯಾಹ್ನ 1.55 ಕ್ಕೆ ನಿಧನರಾದರು ಎಂದು ನಾವು ತೀವ್ರ ದುಃಖದಿಂದ ನಿಮಗೆ ತಿಳಿಸುತ್ತಿದ್ದೇವೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ನೀಡಿ: ಹೊಸೂರು ಕುಮಾರ್
2023 ರಲ್ಲಿ ಸಿಪಿಎಂ ಹಿರಿಯ ನಾಯಕ ಎನ್. ಶಂಕರಯ್ಯ ಅವರ ನಿಧನದ ನಂತರ, ನಲ್ಲಕಣ್ಣು ತಮಿಳುನಾಡಿನ ಕೊನೆಯ ಶತಾಯುಷಿ ಕಮ್ಯುನಿಸ್ಟ್ ನಾಯಕರಾಗಿದ್ದರು.
ನಲ್ಲಕಣ್ಣು ಅವರನ್ನು ಕಾಮ್ರೇಡ್ ಆರ್.ಎನ್.ಕೆ ಎಂದು ಜನ ಪ್ರೀತಿಯಿಂದ ಕರೆಯುತ್ತಿದ್ದರು. ಡಿಸೆಂಬರ್ 26, 1925 ರಂದು ತಮಿಳುನಾಡಿನ ತೂತುಕುಡಿ ಬಳಿಯ ಶ್ರೀವೈಕುಂಠಂನಲ್ಲಿ ರಾಮಸಾಮಿ ಮತ್ತು ಕರುಪ್ಪಾಯಿ ಅಮ್ಮಾಳ್ ದಂಪತಿಗೆ ಜನಿಸಿದ ನಲ್ಲಕಣ್ಣು ಅವರು, ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಬೆಳೆದರು.
ಭಾರತದ ಸ್ವಾತಂತ್ರ್ಯ ಚಳವಳಿಯು ವೇಗವನ್ನು ಪಡೆಯುತ್ತಿದ್ದಾಗ ಶ್ರೀವೈಕುಂಠಂನ ಕಾರ್ನೇಷನ್ ಶಾಲೆಯಲ್ಲಿ ಅವರು ವಿದ್ಯಾಭ್ಯಾಸ ಮಾಡುವಾಗಲೇ ಹೋರಾಟಕ್ಕೆ ಧುಮುಕಿದ್ದರು. ವಿದ್ಯಾರ್ಥಿಯಾಗಿ ಅವರು ಹತ್ತಿರದ ಪ್ರದೇಶಗಳಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. ಅಲ್ಲದೆ ಈ ಹೋರಾಟದಲ್ಲಿ ಭಾಗವಹಿಸಿದ್ದ ಕಾರಣಕ್ಕಾಗಿ ಅವರು ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.
ಇದನ್ನೂ ನೋಡಿ: ಪಿಚ್ಚರ್ ಪಯಣ 167 |ಪಿಚ್ಚರ್ ಪಯಣ 167 | “Dry Leaf : ಆಟದ ಮಾಟ ಬದುಕಿನ ಪಾಠ”| Janashakthi Media
