ಮಂಗಳೂರು| ಖಾಸಗಿ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಸಾಗಿಸುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯ

ಮಂಗಳೂರು:  ಖಾಸಗಿ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಸಾಗಿಸುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಒತ್ತಾಯಿಸಿ ದ.ಕ.ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ನೇತ್ರತ್ವದಲ್ಲಿ ನಗರದ ಕ್ಲಾಕ್ ಟವರ್‌ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.

ಪ್ರತಿಭಟನಾ ಪ್ರದರ್ಶನದಲ್ಲಿ ಶಾಲಾ ಮಕ್ಕಳ ವಾಹನ ಚಾಲಕರು ನೂರಾರು ಸಂಖ್ಯೆಯಲ್ಲಿ ಸೇರಿದ್ದು,  ಆಕ್ರೋಶಭರಿತವಾಗಿ ಘೋಷಣೆಗಳನ್ನು ಕೂಗುತ್ತಾ ತಮ್ಮ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, ಬಿಳಿ ಬಣ್ಣದ ಖಾಸಗೀ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಸಾಗಿಸುತ್ತಿರುವ ಘಟನೆಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಪೋಲಿಸ್ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ.ಈ ಬಗ್ಗೆ ಹಲವಾರು ಬಾರಿ ಮನವಿಯನ್ನು ಸಂಬಂಧಪಟ್ಟ ಇಲಾಖೆಗೆ ನೀಡಿದ್ದರೂ ಈವರೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಇರುವುದು ಭಾರೀ ಸಂಶಯಕ್ಕೆಡೆ ಮಾಡಿದೆ. ಒಂದು ವೇಳೆ ಪೋಲಿಸ್ ಇಲಾಖೆ ಖಾಸಗಿ ವಾಹನಗಳ ಬಗ್ಗೆ ಮ್ರದು ಧೋರಣೆ ತಳೆದದ್ದೇ ಆದರೆ ಅದು ಎಳೆಯ ಪ್ರಾಯದ ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟವಾಡಿದಂತೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾ 

ಇದನ್ನು ಓದಿ : ಹಾವೇರಿ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರ – ಬಸವರಾಜ ಬೊಮ್ಮಾಯಿ ಆಗ್ರಹ

ದ.ಕ.ಜಿಲ್ಲಾ ಟ್ಯಾಕ್ಸಿ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಆನಂದರವರು ಮಾತನಾಡುತ್ತಾ ಸಾರಿಗೆ ಇಲಾಖೆಯ ಎಲ್ಲಾ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಪ್ರಾಮಾಣಿಕವಾಗಿ ದುಡಿಯುವ ಟೂರಿಸ್ಟ್ ವಾಹನಗಳ ಬಗ್ಗೆ ಸದಾ ಕೆಂಗಣ್ಣು ಬೀರುವ ಸಾರಿಗೆ ಅಧಿಕಾರಿಗಳು,ವಾಹನ ಸಂಚಾರ ನಿಯಮಗಳನ್ನೇ ಗಾಳಿಗೆ ತೂರಿ ಹಾಡುಹಗಲಲ್ಲೇ ಶಾಲಾ ಮಕ್ಕಳನ್ನು ಬಿಳಿ ಬಣ್ಣದ ಖಾಸಗಿ ವಾಹನಗಳಲ್ಲಿ ಸಾಗಿಸುತ್ತಿರುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ರೆಹಮಾನ್ ಖಾನ್ ಕುಂಜತ್ತಬೈಲ್ ರವರು ಶಾಲಾ ಮಕ್ಕಳ ವಾಹನ ಚಾಲಕರ ಬವಣೆಗಳ ಬಗ್ಗೆ ಬೆಳಕು ಚೆಲ್ಲುತ್ತಾ,ಶಾಲಾ ಮಕ್ಕಳನ್ನು ಸಾಗಿಸುತ್ತಿರುವ ಖಾಸಗಿ ವಾಹನ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಹೋರಾಟವನ್ನು ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯನ್ನುದ್ದೇಶಿಸಿ ಸಂಘದ ಕಾರ್ಯಾಧ್ಯಕ್ಷರಾದ ಲೋಕೇಶ್ ಸುರತ್ಕಲ್ , ಅಧ್ಯಕ್ಷರಾದ ಮೋಹನ್ ಕುಮಾರ್ ಅತ್ತಾವರರವರು ಮಾತನಾಡಿ ಹೋರಾಟದ ಮಹತ್ವವನ್ನು ವಿವರಿಸಿದರು‌. ಪ್ರತಿಭಟನೆಯಲ್ಲಿ ಟ್ಯಾಕ್ಸಿ ಮೆನ್ ಅಸೋಸಿಯೇಷನ್ ನ ಮುಖಂಡರಾದ ಕಮಲಾಕ್ಷ, KTDO ಸಂಘಟನೆಯ ಕಾರ್ಯದರ್ಶಿ ಸೂರಜ್ ರವರು ಭಾಗವಹಿಸಿದ್ದರು.

ಪ್ರತಿಭಟನೆಯ ಬಳಿಕ ಸಂಘದ ಉನ್ನತ ಮಟ್ಟದ ನಿಯೋಗವೊಂದು RTO ಅಧಿಕಾರಿಗಳು,ನಗರ ಪೋಲಿಸ್ ಆಯುಕ್ತರು ಹಾಗೂ ದ.ಕ‌.ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿತು. ಹೋರಾಟದ ನೇತ್ರತ್ವವನ್ನು ಸಂಘದ ಜಿಲ್ಲಾ ಮುಖಂಡರಾದ ಸ್ಟೇನಿ ಮಿನೇಜಸ್, ಕಿರಣ್ ಲೇಡಿಹಿಲ್, ದಿನೇಶ್ ಕುಂಜತ್ತಬೈಲ್, ಶರತ್ ಸುರತ್ಕಲ್,ಶ್ರೀಕಾಂತ್ ಬಿ.ಸಿ.ರೋಡ್,ಬೆಂಜಮಿನ್ ವೇಗಸ್,ಶಂಕರ್ ಶೆಟ್ಟಿ, ಪ್ರವೀಣ್ ಲೇಡಿಹಿಲ್, ರಾಜೇಶ್ ಕುಳಾಯಿ, ಮುನ್ನ ಪದವಿನಂಗಡಿ,ಸತೀಶ್ ಪೂಜಾರಿ,ನರೇಂದ್ರ ಹೊಯಿಗೆಬೈಲ್,ಚಿತ್ತರಂಜನ್ ಸುವರ್ಣ ಮುಂತಾದವರು ವಹಿಸಿದ್ದರು.

ಇದನ್ನು ನೋಡಿ : 100 ರೂಪಾಯಿ ಘನತ್ಯಾಜ್ಯ ಸೇವಾ ಶುಲ್ಕ : ಕಸ ಮಾಫಿಯಾದ ಕೈವಾಡ Janashakthi Media

Donate Janashakthi Media

Leave a Reply

Your email address will not be published. Required fields are marked *