ಸರ್ಕಾರದ ಜನವಿರೋಧಿ ನೀತಿಗಳಿಂದ ನಿರುದ್ಯೋಗ ಸೃಷ್ಟಿ: ಪ್ರೊ. ಚಂದ್ರ ಪೂಜಾರಿ

ಮಂಗಳೂರು: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುತ್ತಿರುವ ನಡುವೆ ಉದ್ಯೋಗ ಇರುವವರಿಗೆ ಗುಣಮಟ್ಟದ ಉದ್ಯೋಗ ಇಲ್ಲ. ಸರ್ಕಾರ ಉದ್ಯೋಗ ಸೃಷ್ಟಿ ಮಾಡುವ ಬಗ್ಗೆ ಗಮನಹರಿಸಲ್ಲ. ಬರೀ ಕೈಗಾರಿಕೆ ಮೇಲೆ ಗಮನ ಹರಿಸುತ್ತಿದೆ  ಎಂದು ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಚಂದ್ರ ಪೂಜಾರಿ ಹೇಳಿದರು.

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) 23ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೆಳನದ ಭಾಗವಾಗಿ ಪಕ್ಷದ ಮಂಗಳೂರು ನಗರ ಉತ್ತರ ಮತ್ತು ದಕ್ಷಿಣ ಸಮಿತಿಗಳು ಆಯೋಜಿಸಿದ “ಉದ್ಯೋಗದ ಹಕ್ಕು, ಸರಕಾರದ ನೀತಿಗಳು” ಎಂಬ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ ಫ್ರೊಫೆಸರ್ ಚಂದ್ರ ಪೂಜಾರಿ ವಿಷಯ ಮಂಡನೆ ಮಾಡಿದರು.

ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡಬೇಕಾದ ಸರ್ಕಾರಗಳೇ ದಿವ್ಯ ಮೌನವಹಿಸಿದೆ. ಸರ್ಕಾರದ ನೀತಿಯಿಂದ ಆರ್ಥಿಕ ಕುಸಿತ ಉಂಟಾಗಿದೆ. 2016ರಲ್ಲಿ ನೋಟು ಅಮಾನ್ಯೀಕರಣದಿಂದಾಗಿ ಆರ್ಥಿಕತೆ ಹಠಾತ್ ಕುಸಿತವಾಗಿದೆ. ಬಳಿಕ ಜಿಎಸ್‌ಟಿಯಿಂದಾಗಿ ಆರ್ಥಿಕತೆ ಮತ್ತಷ್ಟು ಕುಸಿಯಿತು. ಜನರು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ ಬೇಸತ್ತು ಈಗ ಅರ್ಜಿ ಸಲ್ಲಿಸುವುದನ್ನೇ  ಬಿಟ್ಟಿದ್ದಾರೆ. ಲಾಕ್‌ಡೌನ್ ಬಳಿಕ ಇನ್ನಷ್ಟು ಸಂಕಷ್ಟ ಉಂಟಾಗಿದೆ. ಹಲವಾರು ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಆದರೂ ಸರ್ಕಾರ ಉದ್ಯೋಗ ಸೃಷ್ಟಿಗಾಗಿ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಉದ್ಯೋಗ ಇರುವವರಿಗೆ ಯಾವುದೇ ಭದ್ರತೆ ಇಲ್ಲವಾಗಿದೆ. ಅಸಂಘಟಿತ ವಲಯ ಅಧಿಕವಾಗಿದೆ. ಕನಿಷ್ಠ ಸಂಬಳವೂ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರಿಗೆ ಪರಿಸ್ಥಿತಿಯ ಬಗ್ಗೆ ತಿಳಿಯುವುದಿಲ್ಲ. ಮೇಲ್ನೋಟಕ್ಕೆ ಜನರು ತೊಂದರೆಯಲ್ಲಿ ಇಲ್ಲದಂತೆ ಕಾಣುತ್ತದೆ. ಜನರಿಗೆ ಇರುವ ಕಷ್ಟದ ಬಗ್ಗೆ ಅವರಿಗೆಯೇ ಅರಿವು ಇಲ್ಲ. ನಿರುದ್ಯೋಗ ಯಾಕೆ ಇದೆ ಎಂಬುವುದರ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆ ನಡೆಯಬೇಕಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.

ಜಿಲ್ಲೆಯಲ್ಲಿ ಬರೀ ಜಾತಿ, ಧರ್ಮದ ರಾಜಕೀಯ ನಡೆಯುತ್ತಿದೆ. ಜನರ ಸಮಸ್ಯೆ, ನಿರುದ್ಯೋಗದ ಬಗ್ಗೆ ಮಾತನಾಡುವವರು ಇಲ್ಲ. ಉದ್ಯೋಗಕ್ಕಿಂತ ಮಂದಿರ ನಿರ್ಮಾಣವೇ ದೊಡ್ಡ ವಿಷಯವಾಗಿದೆ. ಈ ನಡುವೆ ಪ್ರಮುಖ ಪಾತ್ರ ವಹಿಸಬೇಕಾದ ಮಾಧ್ಯಮ ಬೇಜವಾಬ್ದಾರಿಯ ವರ್ತನೆ ತೋರುತ್ತಿದೆ. ಪ್ರಸ್ತುತ ಸರ್ಕಾರ ಶಿಕ್ಷಣ, ಆರೋಗ್ಯ, ಉದ್ಯೋಗದ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಮುನೀರ್ ಕಾಟಿಪಳ್ಳ, ನಮ್ಮ ಜಿಲ್ಲೆ ಮೇಲ್ನೋಟಕ್ಕೆ ಅಭಿವೃದ್ಧಿ ಹೊಂದಿದಂತೆ ಕಾಣುತ್ತದೆ. ಆದರೆ ಆಂತರಿಕವಾಗಿ ಪರಿಸ್ಥಿತಿ ಗಂಭೀರವಾಗಿದೆ. ಜಿಲ್ಲೆಯಲ್ಲಿ ಕಳ್ಳತನ, ಸುಲಿಗೆ ಪ್ರಕರಣ ಹೆಚ್ಚುತ್ತಿದೆ. ನಿರುದ್ಯೋಗ ಸಮಸ್ಯೆಯೇ ಈ ಕಳ್ಳತನ, ಸುಲಿಗೆ, ಆತ್ಮಹತ್ಯೆ ಪ್ರಕರಣಗಳಿಗೆ ಕಾರಣ. ಜಿಲ್ಲೆಯ ಪ್ರತಿ ಮನೆಯಲ್ಲಿ ಒಬ್ಬರಿಗೆ ನಿರುದ್ಯೋಗ ಸಮಸ್ಯೆ ಇದೆ. ಆದರೆ ಯುವಕರು ಈ ವಿಚಾರದ ಕುರಿತು ಮಾತಾನಾಡುವುದಿಲ್ಲ. ಯುವ ಜನರು ಮತೀಯ ಅಜೆಂಡಾಕ್ಕೆ ಬಲಿಯಾಗಿದ್ದಾರೆ ಎಂದರು.

ಈ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ವಹಿಸಿದರು. ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಸ್ವಾಗತಿಸಿದರೆ, ಉತ್ತರ ಕಾರ್ಯದರ್ಶಿ ಅಹಮದ್ ಬಶೀರ್ ಧನ್ಯವಾದ ಸಲ್ಲಿಸಿದರು.

Donate Janashakthi Media

Leave a Reply

Your email address will not be published. Required fields are marked *