ಸಾರಿಗೆ ಇಲಾಖೆ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಸಿದ್ಧ: ಸಚಿವ ಶ್ರೀರಾಮುಲು

ಬೆಂಗಳೂರು: ಸಾರಿಗೆ ಇಲಾಖೆಯಲ್ಲಿನ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಬದ್ಧವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ), ವಾಯವ್ಯ ಕರ್ನಾಟಕ ಸಾರಿಗೆ ನಿಗಮ, ಈಶಾನ್ಯ ಕರ್ನಾಟಕ ಸಾರಿಗೆ ನಿಗಮ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ನಿಗಮಗಳ ನಾಲ್ವರು ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಈ ಸಂಬಂಧ ಸಮಿತಿ ರಚಿಸಲಾಗಿದೆ. ಸಮಿತಿಯ ವರದಿಯು ಸಲ್ಲಿಕೆಯಾದ ನಂತರ ಸರ್ಕಾರವು ಅಗತ್ಯ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಬಿ.ಎಸ್.ಅರುಣ್ ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮುಲು, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು. ಕಳೆದ ನಾಲ್ಕು ವರ್ಷಗಳಿಂದ ಸಾರಿಗೆ ನಿಗಮದ ಸಿಬ್ಬಂದಿಯ ವೇತನ ಪರಿಷ್ಕರಣೆಯಾಗಿಲ್ಲ. ವೇತನ ಪರಿಷ್ಕರಣೆಗೆ ಸರ್ಕಾರ ಸಿದ್ಧವಿದೆ ಎಂದರು.

ಸಾರಿಗೆ ನೌಕರರ ವೇತನ ಪರಿಷ್ಕರಣೆ ನಾಲ್ಕು ವರ್ಷಕ್ಕೊಮ್ಮೆ ಆಗಬೇಕು. ಆದರೆ 2016 ರ ನಂತರ ಪರಿಷ್ಕರಣೆ ಆಗಿಲ್ಲ. 2020-21 ರಲ್ಲಿ ಬೇಸತ್ತ ನೌಕರರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರಕ್ಕೆ ಹೋದಾಗ ವೇತನ ಪರಿಷ್ಕರಣೆ ಮಾಡಬೇಕೆಂದು ಆಗ್ರಹಿಸಿದ್ದರು. ಮಾತುಕತೆ ಮೂಲಕ ಅಂದು ಸಮಸ್ಯೆ ಪರಿಹರಿಸಲಾಗಿತ್ತು ಎಂದು ಹೇಳಿದರು.

ಸಾರಿಗೆ ಇಲಾಖೆಯಲ್ಲಿ ಮತ್ತು ನಿಗಮಗಳಲ್ಲಿ ಹಲವು ಸಮಸ್ಯೆಗಳಿವೆ. ಬಸ್​​ ದರಗಳನ್ನು ಹೆಚ್ಚಿಸಲು ನಮಗೆ ಇನ್ನೂ ಸಾಧ್ಯವಾಗಿಲ್ಲ. ಕೆಎಸ್​ಆರ್​ಟಿಸಿ ಮತ್ತು ಇತರ ನಿಗಮಗಳ ಹಲವು ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಸರ್ಕಾರವೇ ಪರಿಹಾರ ಒದಗಿಸಬೇಕು. ಸಾರಿಗೆ ಇಲಾಖೆಯ ಬಸ್ಸುಗಳಿಗೆ ಖಾಸಗಿ ಬಂಕ್​ಗಳಿಂದ ಡೀಸೆಲ್ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಇದು ಬೇಸರದ ಸಂಗತಿ. ಸರ್ಕಾರದಿಂದ ನಿಗಮಗಳಿಗೆ ಈವರೆಗೆ ₹ 16 ಸಾವಿರ ಕೋಟಿ ಸಹಾಯಧನ ಲಭ್ಯವಾಗಿದೆ ಎಂದರು.

ಐಷಾರಾಮಿ ಕಾರುಗಳ ತೆರಿಗೆ ವಂಚನೆ ಕುರಿತು ಸದಸ್ಯ ಸಿ.ಎಸ್.ಮಂಜೇಗೌಡ ಸದನದಲ್ಲಿ ಪ್ರಶ್ನೆ ಕೇಳಿದರು. ‘ಐಷಾರಾಮಿ ಕಾರುಗಳು ಜೀವಿತಾವಧಿ ತೆರಿಗೆ ಪಾವತಿಸಿಕೊಳ್ಳುವ ವಿಚಾರದಲ್ಲಿ ಆರ್​ಟಿಒ ಕಚೇರಿಗಳು ಅಕ್ರಮ ಎಸಗುತ್ತಿವೆ. ನೂರಾರು ಕೋಟಿ ವಂಚನೆ ಬಗ್ಗೆ ಸರ್ಕಾರ ಸೂಕ್ತ ತನಿಖೆಗೆ ಆದೇಶಿಸಿಲ್ಲ’ ಎಂದು ಆಕ್ಷೇಪಿಸಿದರು.

ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮಲು, ತೆರಿಗೆ ವಂಚನೆ ವಿಚಾರವು ಸರ್ಕಾರದ ಗಮನಕ್ಕೆ ಬಂದಿದೆ. ಈವರೆಗೆ 227 ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದರು.

ಮರು ಪ್ರಶ್ನೆ ಮಾಡಿದ ಮಂಜೇಗೌಡ, ನಾನು ಕಳೆದ ಬಾರಿಯೂ ಈ ಬಗ್ಗೆ ಪ್ರಶ್ನೆ ಕೇಳಿದ್ದೆ. ಅದರೆ ಸರ್ಕಾರವು ಯಾವುದೇ ರೀತಿ ಕ್ರಮಕೈಗೊಂಡಿಲ್ಲ. ದಾಖಲೆ ಕೊಟ್ಟರೂ ಯಾವುದೇ ಕ್ರಮ ಆಗಿಲ್ಲ. ಶೇ 40ರ ಕಮಿಷನ್ ಬಗ್ಗೆ ಮಾತನಾಡಿದಾಗಲೂ ದಾಖಲೆ ಕೇಳಿದ್ದೀರಿ’ ಎಂದು ದೂರಿದರು. ‘ಆಡಿಟ್ ಮಾಡದೆ ತನಿಖೆಗೆ ವಹಿಸಲು ಆಗುವುದಿಲ್ಲ. ಕೂಡಲೇ ಆಡಿಟ್ ಮಾಡಿಸಿ ಸಿಒಡಿ ತನಿಖೆಗೆ ಆದೇಶ ಮಾಡುತ್ತೇವೆ. ಯಾರನ್ನೂ ಉಳಿಸುವುದಿಲ್ಲ’ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ವೈ.ಎಂ ಸತೀಶ್ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವರು, ಹೈ ಬೀಮ್ ಲೈಟ್‌ನಿಂದ ಅಪಘಾತವಾಗಿರುವ ಬಗ್ಗೆ ಇದುವರೆಗೂ ಯಾವುದೂ ಪ್ರಕರಣ ನಮ್ಮ ಗಮನಕ್ಕೆ ಬಂದಿಲ್ಲ. ಆದರೂ ನಾವು ಹೈ ಬೀಮ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. 295 ಕೋಟಿ ರೂ. ಹಣ ರಸ್ತೆ ಸುರಕ್ಷತೆಗೆ ಇರಿಸಲಾಗಿದೆ. ಹೈ ಬೀಮ್ ಲೈಟ್ ಹಾಕಿಕೊಂಡು ಬರುವ ಟ್ರಕ್, ಬೈಕ್ ಸವಾರರಿಗೆ 500 ರೂ.ದಂಡ ಹಾಕುವ ಕೆಲಸ ಮಾಡಲಾಗಿದೆ ಎಂದರು.

ಹೈ ಬೀಮ್ ಲೈಟ್‌ ಹಾಕಿಕೊಂಡಿರುವ ಸವಾರರಿಗೆ ದಂಡದ ಜೊತೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಕಳೆದ 3-4 ವರ್ಷಗಳಲ್ಲಿ 8 ಸಾವಿರ ಕೇಸ್ ಇತ್ತು. ಈಗ ಕೇವಲ 703 ಕೇಸ್ ಇದೆ. ಜಾಗೃತಿಯಿಂದ ಕೇಸ್ ಕಡಿಮೆ ಆಗಿದೆ ಅಂತ ಮಾಹಿತಿ ನೀಡಿದರು.

Donate Janashakthi Media

Leave a Reply

Your email address will not be published. Required fields are marked *