ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರ ಕಡೆಗಣನೆ-ಪರ್ಯಾಯ ಸಮ್ಮೇಳನಕ್ಕೆ ಚಿಂತನೆ

ಹಾವೇರಿ: ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥ್ಯದಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳು, ಲೇಖಕರು, ಬರಹಗಾರರಗಿಂತ ಪದಾಧಿಕಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇನ್ನು, ಮುಸ್ಲಿಂ ಲೇಖಕರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಕನ್ನಡದ ಹೆಸರಾಂತ ಸಾಹಿತಿಗಳು, ಲೇಖಕರು ಗಂಭೀರವಾಗಿ ಆರೋಪಿಸಿದ್ದಾರೆ. ಇದೇ ವೇಳೆ, ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ, ಬೇರೊಂದು ಕಾರ್ಯಕ್ರಮ ಹಮ್ಮಿಕೊಳ್ಳಲು ಇವರು ನಿರ್ಧರಿಸಿದ್ದಾರೆ.

ಇದನ್ನು ಓದಿ: ಬದಲಾದ ನೋಂದಣಿ ನೀತಿ: ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆ ಸಿಗುವುದೆ?

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಲಾಪಗಳ ಆಹ್ವಾನ ಪತ್ರಿಕೆ ಬಿಡುಗಡೆಯಾಗಿದ್ದು, 2023ರ ಜನವರಿ 6 ರಿಂದ 8 ರವರೆಗೂ ಮೂರು ದಿನಗಳ ಕಾಲ ಹಾವೇರಿಯಲ್ಲಿ ನಡೆಯಲಿದೆ. ಕನ್ನಡದ ಹೆಸರಾಂತ ಲೇಖಕ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಸಮ್ಮೇಳನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮ ಮತ್ತು ಆಹ್ವಾನಿತರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪರ್ಯಾಯವಾಗಿ ಸಮಾನಾಂತರ ಕಾರ್ಯಕ್ರಮ ಆಯೋಜಿಸುವುದಾಗಿ ಬರೆದುಕೊಂಡಿದ್ದಾರೆ; “ಯಾವುದೇ ಅಧಿವೇಶನದಲ್ಲಿ ಮುಸ್ಲಿಂ ಬರಹಗಾರರು ಇಲ್ಲದ ಕಾರಣ ಸಮಾನಾಂತರ ಸಮ್ಮೇಳನವು ಪ್ರಸ್ತುತ ಅವಶ್ಯಕತೆಯಾಗಿದೆ. ಕನ್ನಡ ಸಾಹಿತ್ಯದಲ್ಲಿ 600 ಕ್ಕೂ ಹೆಚ್ಚು ಬರಹಗಾರರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕಾರಣ ಕನ್ನಡ ಸಾಹಿತ್ಯ ಪರಿಷತ್ತು(ಕ.ಸಾ.ಪ.) ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ರಹಮತ್ ತರೀಕೆರೆ ಸೇರಿದಂತೆ, ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದರೂ ಕನ್ನಡದ ಈ ಪ್ರಮುಖ ಸಾಹಿತಿಗಳನ್ನು ಕ.ಸಾ.ಪ. ಕಡೆಗಣಿಸಿದೆ ಎಂದು ಬರೆದಿದ್ದಾರೆ.

ಇದನ್ನು ಓದಿ: ಚರಿತ್ರೆಯಲ್ಲಿ ಮರೆತವರ ಮರೆಯದ ಸಹಾಯಾನದ ಒಡನಾಡಿ ಶಾಂತಾರಾಮ ಮಾಸ್ತರ್

ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ರಾಜೇಂದ್ರ ಚೆನ್ನಿ, ಅರುಣಕುಮಾರ ಜೋಳದ ಕೂಡ್ಲಿಗಿ, ಬಿ.ಎಂ. ಹನೀಫ್ ಅವರನ್ನು ಒಳಗೊಂಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ಕಾರ್ಯಕ್ರಮವನ್ನು ಆಯೋಜಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಇಂಥಹ ನಿರ್ಧಾರಕ್ಕೆ ರಾಜ್ಯದ ತುಂಬಾ ಅನೇಕರು ಬೆಂಬಲ ವ್ಯಪ್ತಪಡಿಸಿದ್ದಾರೆ. ಬಹುತೇಕ ಮಂದಿ  ಕಾರ್ಯಕ್ರಮವನ್ನು ಆಯೋಜಿಸುವ ಸ್ಥಳದ ಬಗ್ಗೆಯೂ ಸಲಹೆಗಳನ್ನು ನೀಡಿದ್ದಾರೆ. ಮತ್ತು ಸಮಾನಾಂತರ ಕಾರ್ಯಕ್ರಮಕ್ಕೆ ಆರ್ಥಿಕ ಸಹಾಯವನ್ನು ನೀಡಲು ಸಹ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಪ್ರೊ. ಪುರುಷೋತ್ತಮ ಬಿಳಿಮಲೆ ಅವರ ಅನೇಕ ಅನುಯಾಯಿಗಳು ಸಹ ಕಸಾಪ ಕಾರ್ಯಕ್ರಮವನ್ನು ಖಂಡಿಸಿದ್ದಾರೆ.

ಬೆಂಗಳೂರಿನ ಗೆಳೆಯರು ಒಂದಷ್ಟು ಮಂದಿ ಪರ್ಯಾಯ ಸಮ್ಮೇಳನಕ್ಕೆ (ತಾತ್ಕಾಲಿಕ ಹೆಸರು) ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದಾರೆ. ನಾಳೆ(ಡಿಸೆಂಬರ್‌ 27)ಯ ಒಳಗೆ ಸ್ಥಳ ಮತ್ತು ದಿನಾಂಕ ನಿಗದಿಯಾದೀತು! ಹಾವೇರಿಗೆ ಹೋಗದ ಕೊರೋನಾ ಬೆಂಗಳೂರಿಗೆ ಬಂದರೂ ಬಂದೀತು ಎಂದು ಪ್ರೊ. ಪುರೊಷೋತ್ತಮ್‌ ಬಿಳಿಮಲೆ ತಿಳಿಸಿದ್ದಾರೆ.

ಕ.ಸಾ.ಪ. ಅಧ್ಯಕ್ಷ ಮಹೇಶ ಜೋಶಿ, 85ನೇ ಸಮ್ಮೇಳನಾಧ್ಯಕ್ಷ ಎಚ್.ಎಸ್.ವೆಂಕಟೇಶ ಮೂರ್ತಿ, ಹಾಲಿ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಅವರನ್ನು ಹೊರತುಪಡಿಸಿದರೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಾಜಕೀಯ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಲಕ್ಷ್ಮಣ ಕೊಡಸೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ವೇದಿಕೆಯಲ್ಲಿ ರಾಜಕೀಯ ನಾಯಕರು ಮತ್ತು ಚುನಾಯಿತ ಪ್ರತಿನಿಧಿಗಳ ದಂಡೇ ಇದೆ. ಮೇಲಾಗಿ ಕಸಾಪ ಕೂಡ ವಿವಿಧ ಸಮಿತಿಗಳಲ್ಲಿ ಕನ್ನಡ ಸಾಹಿತಿಗಳ ಬದಲಿಗೆ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಮಣೆ ಹಾಕಿದೆ. 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ರಾಜಕೀಯ ಮತ್ತು ಅಧಿಕಾರಶಾಹಿ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜನವರಿ 8ರಂದು ಜನಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿರುವ ಅಖಿಲ ಭಾರತ ಕನ್ನಡ ಸಮ್ಮೇಳನದ ಪರ್ಯಾಯವಾಗಿ ಸಮಾನಾಂತರ ಕಾರ್ಯಕ್ರಮವಾಗಿ ಜನಸಾಹಿತ್ಯ ಸಮ್ಮೇಳನ ಜರುಗಲಿದೆ. ಶಿಶುನಾಳ ಶರೀಫ- ಗೋವಿಂದ ಭಟ್ಟರು ನಡೆದಾಡಿದ ಹಾವೇರಿ ನೆಲದಲ್ಲಿ ದ್ವೇಷ ಸಾಹಿತ್ಯ ಸಮ್ಮೇಳನವೇ? ಎಂಬ ಪ್ರಶ್ನೆಗಳನ್ನು ಎತ್ತುವ ಮೂಲಕ ದ್ವೇಷ ರಾಜಕಾರಣ ಮಾಡುವ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿರೋಧವಾಗಿ ಜನಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.

ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2023ರ ಜನವರಿ 6 ರಿಂದ 8ವರೆಗೆ ನಡೆಯಲಿದ್ದು, ಜನವರಿ 08ರಂದು ಬೆಳಿಗ್ಗೆ 10ರಿಂದ ಬೆಂಗಳೂರಿನಲ್ಲಿ ಜನಸಾಹಿತ್ಯ ಸಮ್ಮೇಳನ ಕೆ ಆರ್‌ ವೃತ್ತದಲ್ಲಿರುವ ಅಲುಮ್ನಿ ಹಾಲ್‌ ನಲ್ಲಿ ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *