ಸಿಗದ ನ್ಯಾಯ : ಸಾಲು ಮರದ ವೀರಾಚಾರಿ ನೇಣು ಬಿಗಿದುಕೊಂಡು ಸಾವು

ದಾವಣಗೆರೆ: ಪರಿಸರ ಪ್ರೇಮಿ, ಸಾಲು ಮರದ ವೀರಾಚಾರಿ ಎಂದೇ ಖ್ಯಾತಿ ಪಡೆದಿದ್ದ ರಾಜ್ಯ ಪ್ರಶಸ್ತಿ ವಿಜೇತ ಮಿಟ್ಲಕಟ್ಟೆ ವೀರಾಚಾರಿ ಅವರು ಕಳೆದ ಮಧ್ಯರಾತ್ರಿ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ದಾವಣಗೆರೆ ತಾಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ.

ಸುಮಾರು 3000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದ ವೀರಾಚಾರಿ ದಾವಣಗೆರೆ ಜಿಲ್ಲೆಯಲ್ಲಿ ಚಿರಪರಿಚಿತರಾಗಿದ್ದರು. ಸಾಲುಮರಗಳನ್ನು ಬೆಳೆಸಿದ್ದ ಈ ಪರಿಸರಪ್ರೇಮಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು. ಅವರು ಇತ್ತೀಚೆಗೆ ಮಿಟ್ಲಕಟ್ಟೆ ಗ್ರಾಮದಲ್ಲಿ ನಡೆಯುತ್ತಿದ್ದ ನ್ಯಾಯಬೆಲೆ ಅಂಗಡಿ ಅಕ್ರಮದ ವಿರುದ್ಧ ಹೋರಾಟ ಮಾಡುತ್ತಿದ್ದರು. ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗೆ ಸೂಕ್ತವಾಗಿ ಅಕ್ಕಿ ವಿತರಣೆಯಾಗುತ್ತಿಲ್ಲ ಎಂದು ಅಕ್ರಮದ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದ್ದರು.

ನಿನ್ನೆ( ಸೋಮವಾರ) ಇದೇ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನ್ಯಾಯಬೆಲೆ ಅಂಗಡಿ ರದ್ದು ಮಾಡಬೇಕೇ, ಬೇಡವೇ ಎಂಬ ಬಗ್ಗೆ ಚರ್ಚೆ ನಡೆದಿತ್ತು. ನ್ಯಾಯಾಲಯದಲ್ಲಿ ನ್ಯಾಯ ಸಿಗದಿದ್ದರೆ, ಜನರಲ್ಲಿ ನ್ಯಾಯ ಸಿಗದಿದ್ದರೆ, ದೇವರಲ್ಲಿ ನ್ಯಾಯ ಸಿಗದಿದ್ದರೆ ನೇಣಿಗೆ ಶರಣಾಗುತ್ತೇನೆ ಎಂದು ಅವರು ಹೇಳಿದ್ದರು. ತಮ್ಮ ಮಾತಿನಂತೆಯೇ ನಿನ್ನೆ ರಾತ್ರಿ 2 ಗಂಟೆಗೆ ಅವರು ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ಇದೀಗ ಮಿಟ್ಲಕಟ್ಟೆ ಗ್ರಾಮದ ಮಂದಿ ಯಾರು ಕೂಡ ಊರಿಗೆ ಬರದಂತೆ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಜಿಲ್ಲಾಧಿಕಾರಿ ಆಹಾರ ಇಲಾಖೆ ಅಧಿಕಾರಿಗಳು ಬರುವರೆಗೂ ಶವವನ್ನು ಕುಣಿಕೆಯಿಂದ ಕೆಳಗಿಸುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲೀಕ ಸಿದ್ದರಾಮಪ್ಪ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದೀಗ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಗ್ರಾಮದಲ್ಲಿ ಬಿಗಿ ಬಂದೋಬಸ್ತ್‌ಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಾಲು ಮರಗಳನ್ನು ಬೆಳೆಸಿ ಪೋಷಿಸಿದ್ದ ಪರಿಸರ ಪ್ರೇಮಿಗೆ ಈ ಹಿಂದೆ ರಾಜ್ಯ ಸರ್ಕಾರ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಸಾಮಾಜಿಕವಾಗಿ ಕಾಳಜಿ ಹೊಂದಿದ್ದ ವೀರಾಚಾರಿಯವರಿಗೆ ನ್ಯಾಯವನ್ನು ಒದಗಿಸಲು ಜಿಲ್ಲಾಡಳಿತ ವಿಫಲವಾಗಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

Donate Janashakthi Media

2 thoughts on “ಸಿಗದ ನ್ಯಾಯ : ಸಾಲು ಮರದ ವೀರಾಚಾರಿ ನೇಣು ಬಿಗಿದುಕೊಂಡು ಸಾವು

  1. ವೀರಾಚಾರಿ ಅವರನ್ನ ನಾವು ಎರಡು ಮೂರು ಸಲ ಮಾತಾಡಿಸಿದ್ದೇವೆ ಅವರ ಜೊತೆ ಸಸಿಗಳನ್ನು ಹಚ್ಚಿ ಗಂಗಾವತಿಯಲ್ಲಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ ಸನ್ಮಾನಿಸಿದ್ದೇವೆ.. ಅವರು ನಿಜಕ್ಕೂ ಕೂಡ ಪರಿಸರ ಎಷ್ಟೊಂದು ಅರ್ಥಮಾಡಿಕೊಂಡಿದ್ದಾರೆ ಎಂದರೆ ನಮಗೆ ನಂಬಲಾಗುತ್ತಿಲ್ಲ ಈ ಸಾವು ದೊಡ್ಡ ದುರಂತ… ಈ ಸಾವಿಗೆ ನ್ಯಾಯ ಸಿಗಲೇಬೇಕು

  2. Corruption corruption
    People of India suffering from this one.
    When we ll get good governance.
    When these type of innocence will live freely here.

Leave a Reply

Your email address will not be published. Required fields are marked *