ಬೆಂಗಳೂರು: ನಗರದಲ್ಲಿ ಸೈಬರ್ ವಂಚನೆ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದ್ದು, ಕಳೆದ 45 ತಿಂಗಳಲ್ಲಿ ಮಾತ್ರ 4,341 ಕೋಟಿ ರೂ. ಗಳಷ್ಟು ಹಣ ವಂಚಕರ ಕೈಗೆ ಸೇರಿರುವುದಾಗಿ ತಿಳಿದುಬಂದಿದೆ. ಕಳೆದ ಮೂರು ವರ್ಷ ಒಂಬತ್ತು ತಿಂಗಳ ಅವಧಿಯಲ್ಲಿ 53,252 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಸೈಬರ್ ವಂಚನೆಗಳ ಗುರಿಯಾಗುತ್ತಿರುವವರಲ್ಲಿ ಉದ್ಯಮಿಗಳು, ಸಾಫ್ಟ್ವೇರ್ ಇಂಜಿನಿಯರ್ಗಳು, ಸರ್ಕಾರಿ ನೌಕರರು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಇವರು ಆನ್ಲೈನ್ ಹಣಕಾಸು ವ್ಯವಹಾರ ಹಾಗೂ ಡಿಜಿಟಲ್ ಚಟುವಟಿಕೆಗಳಲ್ಲಿ ತೊಡಗಿರುವ ಕಾರಣ, ವಂಚಕರಿಗೆ ಈ ವರ್ಗವೇ ಮುಖ್ಯ ಗುರಿಯಾಗಿದೆ.
ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 8 ಸೈಬರ್ ಠಾಣೆಗಳಿಗೆ ಪ್ರತಿದಿನ ಸರಾಸರಿ 10ಕ್ಕೂ ಹೆಚ್ಚು ಹೊಸ ದೂರುಗಳು ದಾಖಲಾಗುತ್ತಿವೆ. ವಂಚನೆಗಳ ಸ್ವರೂಪವು ಕೂಡ ವಿವಿಧ ರೀತಿಯಲ್ಲಿ ಇದೆ. ಆನ್ಲೈನ್ ಹೂಡಿಕೆ ಮೋಸ, ಹೆಚ್ಚು ಲಾಭ ನೀಡುವುದಾಗಿ ಹೇಳಿ ಬಲೆಗೆ ಬೀಳಿಸುವುದು. ನಕಲಿ ಟ್ರೇಡಿಂಗ್ ಪ್ಲಾಟ್ಫಾರ್ಮ್ಗಳು, OTP, KYC ಮತ್ತು UPI ವಂಚನೆಗಳು, ಇಂತಹ ತಂತ್ರಗಳನ್ನು ಬಳಸಿಕೊಂಡು ಮತ್ತಷ್ಟು ಜನರನ್ನು ಬಲೆಗೆ ಬೀಳಿಸುವ ಘಟನೆಗಳು ಹೆಚ್ಚಾಗುತ್ತಿವೆ.
ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳ ಚುನಾವಣೆ ನಡುವೆಯೇ ಕೇರಳದಲ್ಲಿ ಎಸ್ಐಆರ್: ಏಕಿಷ್ಟು ತರಾತುರಿ?
ಪ್ರಕರಣದಲ್ಲಿ ದಾಖಲಾದ 4,341 ಕೋಟಿ ರೂ. ನಷ್ಟದಲ್ಲಿ ಪೊಲೀಸರು ತನಿಖೆ ಮೂಲಕ ಮಾತ್ರ 360 ಕೋಟಿ ರೂ. ವಾಪಸು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿಯೂ 334 ಕೋಟಿ ರೂ. ದೂರುದಾರರಿಗೆ ಹಸ್ತಾಂತರ ಆಗಿದೆ. ರಿಕವರಿ ಪ್ರಮಾಣ ಶೇಕಡಾ 10ಕ್ಕಿಂತ ಕಡಿಮೆ ಇರುವುದೇ ಸೈಬರ್ ಅಪರಾಧಗಳ ಸವಾಲು ಎಷ್ಟು ಗಂಭೀರವೆಂಬುದನ್ನು ತೋರಿಸುತ್ತದೆ.
ಸೈಬರ್ ಅಪರಾಧಿಗಳನ್ನು ಪತ್ತೆ ಹಚ್ಚುವುದು ಬಹಳ ಕಠಿಣ ಪೊಲೀಸರ ತನಿಖೆಯಲ್ಲಿ ಸಾಮಾನ್ಯವಾಗಿ ಸಿಗುವ ಪ್ರಮುಖ ತೊಂದರೆಗಳೆಂದರೆ.
- ವಂಚಕರ ಕಾರ್ಯಾಚರಣೆ ವಿದೇಶಗಳಿಂದ ನಡೀತಿರೋದು
- ನಕಲಿ IP ವಿಳಾಸಗಳು
- ಬೇರೆಯವರ ದಸ್ತಾವೇಜುಗಳನ್ನು ದುರುಪಯೋಗಪಡಿಸಿಕೊಂಡು ಖಾತೆ ತೆರೆಯುವುದು
- ಹಣವನ್ನು ತಕ್ಷಣವೇ ಹಲವು ಖಾತೆಗಳ ಮೂಲಕ ವರ್ಗಾವಣೆ ಮಾಡುವುದು
ಈ ಕಾರಣಗಳಿಂದ ಆರೋಪಿಗಳನ್ನು ಪತ್ತೆಮಾಡುವುದು ಮತ್ತು ಹಣವನ್ನು ವಾಪಸು ಪಡೆಯುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇದನ್ನೂ ನೋಡಿ: ವೇತನ ಹೆಚ್ಚಳಕ್ಕಾಗಿ ಬಿಸಿಯೂಟ ನೌಕರರ ಅನಿರ್ಧಿಷ್ಟ ಧರಣಿ | ಡಿಸೆಂಬರ್ 01-2025 Janashakthi Media
