‘ರೋಜ್‌ಗಾರ್ ಮೇಲಾ’ಗಳೂ, ಎಲ್‌ಪಿಜಿ ದರ ಕಡಿತವೂ

ಜತೆಗೆ ಭಾರತದ ಅರ್ಥವ್ಯವಸ್ಥೆ ಮೂರನೇ ಸ್ಥಾನದಲ್ಲಿರುತ್ತದೆ ಎಂಬ ತಮ್ಮ ಇತ್ತೀಚಿನ ‘ಭವಿಷ್ಟವಾಣಿ’ಯನ್ನು ಪುನರುಚ್ಚರಿಸಿದರು. ಇದನ್ನು ತಾನು ಪೂರ್ಣ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ ಎಂದೂ ಹೇಳಿದರು. ಆದರೆ ಇದಕ್ಕೆ ಅಂತಹ ಜವಾಬ್ದಾರಿಕೆಯ ಅಗತ್ಯವೇನೂ ಇಲ್ಲ, ನೋಟುರದ್ಧತಿ, ಜಿಎಸ್‌ಟಿಯಂತಹ ಪ್ರಮಾದಗಳನ್ನು ಮಾಡಿರದಿದ್ದರೆ ಈಗಾಗಲೇ ತಂತಾನೇ ಭಾರತ ಆ ಸ್ಥಾನವನ್ನು ಪಡೆಯುತ್ತಿತ್ತು ಎಂದು ಈಗಾಗಲೇ ಹಲವು ಅರ್ಥಶಾಸ್ತ್ರಜ್ಞರು ಹೇಳಿರುವದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆದರೂ ಯಾವುದೇ ಮುಲಾಜಿಲ್ಲದೆ ಇರ ಪುನರಾವರ್ತನೆ ಆಗುತ್ತಲೇ ಇದೆ, ಬಹುಶಃ ಮುಂದಿನ ಸಾರ್ವತ್ರಿಕ ಚುನಾವಣೆಗಳ ವರೆಗೆ ಆಗುತ್ತಲೇ ಇರುತ್ತದೆ. ರೋಜ್‌ಗಾರ್

ಆಗಸ್ಟ್ 28. ಮತ್ತೊಂದು ‘ರೋಜ್‌ಗಾರ್ ಮೇಲಾ’ ಅಂದರೆ ಉದ್ಯೋಗ ಮೇಳ- ಇದು ಅಕ್ಟೋಬರ್ 2022ರಿಂದ ಆರಂಭವಾದ ‘ಮೇಲಾದ 8ನೇ ಆವೃತ್ತಿ. ವರ್ಷಕ್ಕೆ 2 ಕೋಟಿ ಉದ್ಯೋಗಾವಕಾಶಗಳ ಆಶ್ವಾಸನೆ ಮತ್ತೊಂದು ‘ಜುಮ್ಲಾ’ ಆಗಿ ದೇಶ ಹಿಂದೆಂದೂ ಕಾಣದ ನಿರುದ್ಯೋಗ ದರವನ್ನು ದಾಖಲಿಸಿದಾಗ,
ಕರ್ನಾಟಕವೂ ಸೇರಿದಂತೆ ಮಹತ್ವದ ವಿಧಾನಸಭಾ ಚುನಾವಣೆಗಳು ಮತ್ತು 2024ರ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ಈ‘ಮೇಳ’ ಆರಂಭವಾಯಿತು. ಆಶ್ವಾಸನೆ ನೀಡಿದ 10 ಕೋಟಿಯಲ್ಲದಿದ್ದರೂ, ಕೇಂದ್ರ ಸರಕಾರದಲ್ಲಿಯೇ ವರ್ಷಗಳಿಂದ ಭರ್ತಿ ಮಾಡದೆ ಖಾಲಿ ಇರುವ 10 ಲಕ್ಷ ಹುದ್ದೆಗಳನ್ನಾದರೂ ಉಳಿದಿರುವ ಒಂದೂವರೆ ವರ್ಷಗಳಲ್ಲಿ ಎಪ್ರಿಲ್ 2024 ರ ವೇಳೆಗೆ ತುರ್ತಾಗಿ ಭರ್ತಿ ಮಾಡುವ ಯೋಜನೆ ಇದು.

ಅಕ್ಟೋಬರ್‌ 2022ರಲ್ಲಿ 75000 ನೇಮಕಾತಿ ಪತ್ರಗಳನ್ನು ಸ್ವತಃ ಪ್ರಧಾನಿಗಳ ಭಾಷಣದೊಂದಿಗೆ ಭಾರೀ ಪ್ರಚಾರದ ನಡುವೆ, ವಿತರಿಸಲಾಯಿತು. ನಂತರ
ನವಂಬರ್ 22, ಜನವರಿ 19, ಎಪ್ರಿಲ್ 13, ಮೇ 16 ರಂದು ತಲಾ 71000, ಜೂನ್ 13 ಮತ್ತು ಜುಲೈ 22ರಂದು ತಲಾ 70000 ನೇಮಕಾತಿ ಪತ್ರಗಳನ್ನು
ಪ್ರತಿ ಬಾರಿ ಅಂತಹುದೇ ಅಬ್ಬರದ ಪ್ರಚಾರಗಳ ನಡುವೆ ವಿತರಿಸಲಾಗಿದೆ. ಆಗಸ್ಟ್‌ನಲ್ಲಿ ಅದು 51000ಕ್ಕೆ ಇಳಿದಿದೆ. ಅಂದರೆ ಇದುವರೆಗೆ 5.5 ಲಕ್ಷ ನೇಮಕಾತಿ
ಪತ್ರಗಳನ್ನು ಹಂಚಲಾಗಿದೆ. ಬಹುಶ: ಇನ್ನು ಮುಂದೆ ಸಾರ್ವತ್ರಿಕ ಚುನಾವಣಾ ಘೋಷಣೆಯಾಗುವ ವರೆಗೆ ಇದು ಪ್ರತಿ ತಿಂಗಳು ನಡೆಯಲಿದೆ.

ಆಗಸ್ಟ್ 28ರಂದು ಈಗ ತಪ್ಪು ಕಾರಣಗಳಿಗಾಗಿ ಬಹಳಷ್ಟು ಸುದ್ದಿಯಲ್ಲಿರುವ ದಿಲ್ಲಿ ಪೋಲೀಸ್ ಸೇರಿದಂತೆ ಕೇಂದ್ರ ಸರಕಾರದ ಅಡಿಯಲ್ಲಿರುವ ಅರೆಸೇನಾ
ಪಡೆಗಳಲ್ಲಿ 51000 ಹುದ್ದೆಗಳಿಗೆ ನೇಮಕಾತಿ ಪತ್ರಗಳನ್ನು ದೇಶದಾದ್ಯಂತ 45 ಕೇಂದ್ರಗಳಲ್ಲಿ ಹಂಚಲಾಯಿತು. ಈ ಕಾರ್ಯಕ್ರಮಕ್ಕೆ ವಿಧಿಸಿರುವ ವಿಧಾನದಂತೆ ಈ ಎಲ್ಲ ಕೇಂದ್ರಗಳಲ್ಲಿ ಬೃಹತ್ ಪರದೆಗಳ ಮೇಲೆ ಆಹ್ವಾನಿತ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡುತ್ತ ಪ್ರಧಾನಿಗಳು ಯೋಗದ ಆವಶ್ಯಕತೆಯನ್ನು ಒತ್ತಿ ಹೇಳಿದರಂತೆ.

ಜತೆಗೆ ಭಾರತದ ಅರ್ಥವ್ಯವಸ್ಥೆ ಮೂರನೇ ಸ್ಥಾನದಲ್ಲಿರುತ್ತದೆ ಎಂಬ ತಮ್ಮ ಇತ್ತೀಚಿನ ‘ಭವಿಷ್ಟವಾಣಿ’ಯನ್ನು ಪುನರುಚ್ಚರಿಸಿದರು. ಇದನ್ನು ತಾನು ಪೂರ್ಣ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ ಎಂದೂ ಹೇಳಿದರು. ಆದರೆ ಇದಕ್ಕೆ ಅಂತಹ ಜವಾಬ್ದಾರಿಕೆಯ ಅಗತ್ಯವೇನೂ ಇಲ್ಲ, ನೋಟುರದ್ಧತಿ, ಜಿಎಸ್‌ಟಿಯಂತಹ ಪ್ರಮಾದಗಳನ್ನು ಮಾಡಿರದಿದ್ದರೆ,ಈಗಾಗಲೇ ತಂತಾನೇ ಭಾರತ ಆ ಸ್ಥಾನವನ್ನು ಪಡೆಯುತ್ತಿತ್ತು ಎಂದು ಈಗಾಗಲೇ ಹಲವು ಅರ್ಥಶಾಸ್ತ್ರಜ್ಞರು ಹೇಳಿರುವದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆದರೂ ಯಾವುದೇ ಮುಲಾಜಿಲ್ಲದೆ ಇರ ಪುನರಾವರ್ತನೆ ಆಗುತ್ತಲೇ ಇದೆ, ಬಹುಶಃ ಮುಂದಿನ ಸಾರ್ವತ್ರಿಕ ಚುನಾವಣೆಗಳ ವರೆಗೆ ಆಗುತ್ತಲೇ ಇರುತ್ತದೆ. ನಿಜ, ಉದ್ಯೋಗಾವಕಾಶಗಳ ನಿರ್ಮಾಣದ ಆಶ್ವಾಸನೆಯನ್ನು ಮಾತ್ರ ಪೂರ್ಣ ಜವಾಬ್ದಾರಿಯಿಂದ ಕೊಡಬೇಕು ಎಂದು ದೇಶದ ಯುವಜನರು ನಿರೀಕ್ಷಿಸುತ್ತಾರೆ. ಆಳುವ ಮಂದಿಗೆ ಅದರ ಅರಿವೇ ಈ ‘ಮೇಳ’ ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ.

ಇದನ್ನೂ ಓದಿ:ಸಿಎಜಿ ವರದಿಗಳು : ಇವುಯಾರು“ತಿಂದ”ಕತೆಗಳೋ

ಪ್ರಚಾರದ ಅಬ್ಬರ…..

ಈ ‘ಮೇಳ’ಗಳ ಪ್ರಚಾರಕ್ಕೆ ಒಬ್ಬ ರಾಜ್ಯ ದರ್ಜೆಯ ಮಂತ್ರಿಯ ನೆರವಿನೊಂದಿಗೆ ಪ್ರಧಾನ ಮಂತ್ರಿಗಳೇ ಉಸ್ತುವಾರಿ ವಹಿಸಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ವಿವರವಾದ ‘ಪ್ರೊಟೊಕಾಲ್’(ವಿಧಿ-ವಿಧಾನ)ವನ್ನು ತಯಾರಿಸಿದೆ ಎಂಬುದು (ದಿ ಟೆಲಿಗ್ರಾಫ್, ಆಗಸ್ಟ್ 23), ಇದೀಗ ಸರಕಾರಕ್ಕೆ ಎಷ್ಟು ಮುಖ್ಯವಾಗಿದೆ ಎಂಬುದನ್ನು ತೋರಿಸುತ್ತದೆ.

  •  ಬೆಳಿಗ್ಯೆ 10.30ಕ್ಕೆ ಪ್ರಧಾನ ಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಮೇಳವನ್ನುದ್ದೇಶಿಸಿ ಮಾತನಾಡುತ್ತಾರೆ. ಎಲ್ಲ 44-45 ಕೇಂದ್ರಗಳಲ್ಲಿ
    ನೇಮಕಾತಿ ಪಡೆದ ಅಭ್ಯರ್ಥಿಗಳು ಸೇರಿದಂತೆ ಎಲ್ಲ ಆಹ್ವಾನಿತರು 90 ನಿಮಿಷದ ಮೊದಲು ಹಾಜರಿರಬೇಕು.
  • ಪ್ರಧಾನ ಮಂತ್ರಿಗಳ ಭಾಷಣದ ನೇರ ಪ್ರಸಾರವನ್ನು ಸ್ಥಳೀಯ ಕೇಂದ್ರದಲ್ಲಿ ಸಿಗುವ ಸ್ಥಳಾವಕಾಶಕ್ಕೆ ಅನುಗುಣವಾದ ಬೃಹತ್ ಪರದೆಗಳ ಮೇಲೆ
    ನಡೆಯಬೇಕು.
  • ಈ ಇವೆಂಟಿನ ನಂತರದ ಪ್ರಚಾರಕ್ಕೆ ಸ್ಥಳೀಯ ಆಕಾಶವಾಣಿ, ದೂರದರ್ಶನ ಮತ್ತು ಪಿಐಬಿ ಕೇಂದ್ರ ಗಳೊಂದಿಗೆ ಸಂಯೋಜನೆ ರೂಪಿಸಬೇಕು.
  • ಮೇಳದ ಸ್ಥಳಗಳಲ್ಲಿ ಕಾರ್ಯಕ್ರಮ 9-45ಕ್ಕೆ ಆರಂಭವಾಗಬಹುದು. ನೇಮಕಾತಿ ಪತ್ರಗಳನ್ನು ವಿತರಿಸಲೆಂದು ಆಹ್ವಾನಿಸಿದ ಪ್ರತಿಷ್ಠಿತರನ್ನು ಸ್ವಾಗತಿಸುವುದರೊಂದಿಗೆ, ಪ್ರಧಾನ ಮಂತ್ರಿಗಳು ವೀಡಿಯೋ ಮೂಲಕ ಸೇರಿಕೊಳ್ಳುವ ವರೆಗೆ ಪರದೆಗಳ ಮೇಲೆ ಪ್ರಧಾನ ಮಂತ್ರಿಗಳ ಹೆಸರಿರುವ
    ವಿವಿಧ ‘ಯೋಜನಾ’ಗಳ ಫಿಲ್ಲರುಗಳನ್ನು ಹಾಕುತ್ತಿರಬೇಕು.
  • ಕನಿಷ್ಟ 25 ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ನೇಮಕಾತಿ ಪತ್ರಗಳನ್ನು ಕೊಡಬೇಕು. ಪತ್ರಗಳನ್ನು ನೀಡುವ ಪ್ರತಿಷ್ಠಿತರೊಂದಿಗೆ ಅಭ್ಯರ್ಥಿಗಳ ಫೋಟೋ ತೆಗೆಯಲು ಮತ್ತು ನೇಮಕಾತಿ ಪತ್ರ ಪಡೆದವರಿಂದ ‘ಸೌಂಡ್ ಬೈಟ್’ಗಳನ್ನು ತೆಗೆದುಕೊಳ್ಳುವ ವ್ಯವಸ್ಥೆ ಮಾಡಬೇಕು. ಅಭ್ಯರ್ಥಿಗಳ ಹೆಸರು, ಹುದ್ದೆ ಮತ್ತು ಅವರ ನಿರೀಕ್ಷಿತ ಪಾತ್ರದ ಬಗ್ಗೆ ‘ಸಂದೇಶ’ವನ್ನು ಪಡೆಯಬೇಕು. ಇವನ್ನೆಲ್ಲ ಹೈ ರೆಸೆಲ್ಯೂಷನ್‌ನಲ್ಲಿ ಪಡೆಯಬೇಕು. ‘ಸೆಲ್ಫಿ ಪಾಯಿಂಟು’ಗಳನ್ನು ರಚಿಸಿ ಅಭ್ಯರ್ಥಿಗಳು ಸೆಲ್ಫಿಗಳನ್ನು ಅವರ ಹೆಸರು ಮತ್ತು ಹುದ್ದೆಗಳೊಂದಿಗೆ ದಾಖಲಿಸಬೇಕು ನೇಮಕಾತಿ ಪತ್ರಗಳನ್ನು ವಿತರಿಸಿದ ನಂತರ ಎಲ್ಲರ ಗುಂಪು ಫೋಟೋ ತೆಗೆಯಬೇಕು.
  • ಈ ಎಲ್ಲವನ್ನೂ ಕ್ರೋಡೀಕರಿಸಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಒಂದು ಹಾರ್ಡ್ ಡಿಸ್ಕಿನಲ್ಲಿ ಮತ್ತು ಗೂಗಲ್ ಡ್ರೈವ್ ಮೂಲಕ ತಲುಪಿಸಬೇಕು ಎಂದು ಈ ಪ್ರೊಟೊಕಾಲ್ ವಿಧಿಸಿದೆ ಎಂದು ಪತ್ರಿಕೆ ಹೇಳಿದೆ.

….ಮತ್ತು ಒಂದು ‘ಅಸತ್ಯ’?

ಈವಿಷಯದಲ್ಲಿ ಬಯಲಾಗಿರುವ ಇನ್ನೊಂದು ಸಂಗತಿಯೆಂದರೆ, ಈ ಮೇಳಗಳ ನಂತರ ನೀಡುವ ಪತ್ರಿಕಾ ಹೇಳಿಕೆಗಳಲ್ಲಿ ಇವು ಹೊಸ ನೇಮಕಾತಿಗಳು ಎಂದು
ಹೇಳುತ್ತಿದ್ದರೂ, ಇಲ್ಲಿ ನಡೆಯುವ ಎಲ್ಲವೂ ಹೊಸ ನೇಮಕಾತಿಗಳಲ್ಲ, ಅವುಗಳಲ್ಲಿ ಬಡ್ತಿಗಳ ಪತ್ರಗಳೂ ಸೇರಿವೆ ಎಂದು ತಿಳಿದು ಬಂದಿದೆಯಂತೆ! ಈ ಬಡ್ತಿ ಪತ್ರ ಪಡೆದವರು ಆಗಲೇ ಕೆಲಸದಲ್ಲಿ ಇರುವುದರಿಂದ ಅವರನ್ನು ಹೊಸ ನೇಮಕಾತಿಗಳ ಸಂಖ್ಯೆಯಲ್ಲಿ ಸೇರಿಸುವುದು ಆ ಸಂಖ್ಯೆಯನ್ನು ಹಿಗ್ಗಿಸುವ ಪ್ರಯತ್ನ ಎಂದು ಬೇರೆ ಹೇಳಬೇಕಾಗಿಲ್ಲ.

‘ದಿ ಟೆಲಿಗ್ರಾಫ್’ ಪತ್ರಿಕೆ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಪಡೆದ ಮಾಹಿತಿಯ ಪ್ರಕಾರ ಇಲ್ಲಿ ಮೇಲಿನ ಹುದ್ದೆಗಳಿಗೆ ಬಡ್ತಿಯ ಮೂಲಕ
ನೇಮಕಗಳನ್ನೂ ಹೊಸ ನೇಮಕಾತಿಗಳ ಲೆಕ್ಕದಲ್ಲಿ ಇವೆ.

ಉದಾ: ಎಪ್ರಿಲ್13 ರ’ಮೇಳ’ದಲ್ಲಿ ಮೊಹಾಲಿಯ ಐಐಎಸ್‌ಇಆರ್ ಸಂಸ್ಥೆ ನೀಡಿದ ನೇಮಕಾತಿ ಪತ್ರಗಳಲ್ಲಿ 15 ಮಾತ್ರ ಹೊಸದು, ಉಳಿದ 21 ಬಡ್ತಿ ಪತ್ರಗಳು. ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯ ನೀಡಿದ 38 ನೇಮಕಾತಿ ಪತ್ರಗಳಲ್ಲಿ 18 ಬಡ್ತಿಪತ್ರಗಳು.

ಪತ್ರಿಕೆ ಈ ಕುರಿತು ಕೇಂದ್ರೀಯ ಉನ್ನತ ಶಿಕ್ಷಣ ಕಾರ್ಯದರ್ಶಿಯಿಂದ ಬಡ್ತಿಗಳನ್ನು ಈ ಮೇಳಗಳಲ್ಲಿ ಸೇರಿಸುವುದರ ತರ್ಕದ ಬಗ್ಗೆ ಕೇಳಿದೆ. ಆದರೆ ಈ ವರದಿ
ಪ್ರಕಟವಾಗುವ ವರೆಗೂ ಅವರಿಂದ ಉತ್ತರ ಬಂದಿಲ್ಲವಂತೆ.!

2024ರಲ್ಲಿ ಅಧಿಕಾರಕ್ಕೆ ಮತ್ತೆ ಮರಳುವ ವಿಶ್ವಾಸವನ್ನು, ಭಾರತದ ಅರ್ಥವ್ಯವಸ್ಥೆ 3ನೇ ಸ್ಥಾನಕ್ಕೆ ಏರುವ ವಿಶ್ವಾಸದೊಂದಿಗೆ ಇತ್ತೀಚಿನ ದಿನಗಳಲ್ಲಿ ಬಾರಿಬಾರಿಗೂ ಪುನರುಚ್ಚರಿಸುತ್ತಿರುವ ಪ್ರಧಾನಿಗಳಿಗೆ ಉದ್ಯೋಗ ನಿರ್ಮಾಣ ಒಂದು ನಿರ್ಣಾಯಕ ಪ್ರಶ್ನೆ ಎಂದು ರಾಜಕೀಯ ವೀಕ್ಷಕರು ಹೇಳುತ್ತಿದ್ದಾರೆ.
ಉದ್ಯೋಗಾವಕಾಶಹೀನತೆ ಮತ್ತು ಕಡಿಮೆ ಸಂಬಳ ಯುವಕರಲ್ಲಿ ಅಸಂತುಷ್ಟಿಯನ್ನು ಹರಡುತ್ತಿದೆ. ಸಿಎಂಐಇ ಬಿಡುಗಡೆ ಮಾಡಿರುವ ಮಾಹಿತಿಗಳ ಪ್ರಕಾರ
ಜುಲೈ ತಿಂಗಳಲ್ಲಿ ನಿರುದ್ಯೋಗ ದರ ತುಸು ಇಳಿದರೂ, ಈಗಲೂ ಅದು 7.95% ಇದೆ.

ಅದೇ ರೀತಿಯಲ್ಲಿ ಹಣದುಬ್ಬರ, ಬೆಲೆಯೇರಿಕೆ ಜನಗಳನ್ನು ಕಂಗೆಡಿಸುತ್ತಿದೆ ಎಂಬ ‘ಜ್ಞಾನೋದಯ’ವನ್ನೂ ಚುನಾವಣೆಗಳು ಮಾಡಿಸಿರುವಂತೆ ಕಾಣುತ್ತದೆ.

ಅದಾಗಲೇ ಕಾಂಗ್ರೆಸ್ ಮಧ್ಯಪ್ರದೇಶದ ಚುನಾವಣೆಗಳಲ್ಲಿ ಎಲ್‌ಪಿಜಿ ಬೆಲೆಯನ್ನು 500ರೂ.ಗೆ ಇಳಿಸುವ ಆಶ್ವಾಸನೆ ನೀಡಿದೆಯಂತೆ. ಈ ಹಿನ್ನೆಲೆಯಲ್ಲಿ ‘ರಕ್ಷಾ
ಬಂಧನ್’ ಮತ್ತು ‘ಓಣಂ’ ಸಂದರ್ಭದಲ್ಲಿ ಭಾರತದ ಮಹಿಳೆಯರಿಗೆ ಪ್ರಧಾನಿಗಳ ಉಡುಗೊರೆಯೆಂದು ಎಲ್‌ಪಿಜಿ ಬೆಲೆಗಳಲ್ಲಿ 200ರೂ. ಕಡಿತವನ್ನು ಪ್ರಕಟಿಸಲಾಗಿದೆ.ಇದರಿಂದ ತೈಲ ಮಾರಾಟ ಕಂಪನಿಗಳಿಗೆ 7500 ಕೋಟಿ ರೂ. ನಷ್ಟವಾಗುತ್ತದೆ, ಇದರ ವೆಚ್ಚವನ್ನು ಸರಕಾರವೇ ಭರಿಸುತ್ತದೆ ಎಂದು ಆಗಸ್ಟ್ 30ರಂದು ಪೆಟ್ರೋಲಿಯಂ ಮಂತ್ರಿಗಳು ಹೇಳಿದರೂ, ಸರಕಾರ ತಮಗೆ ಈ ಬಗ್ಗೆ ಸ್ಪಷ್ಟಪಡಿಸಿಲ್ಲ, ಈ ಹೊರೆಯನ್ನು ಸದ್ಯಕ್ಕಂತೂ ತಾವೇ ಹೊರಬೇಕಾದೀತು ಎಂದು ತೈಲ ಮಾರಾಟ ಕಂಪನಿಗಳು ಭಾವಿಸಿರುವುದಾಗಿ ಮರುದಿನದ ಇಂಡಿಯನ್ ಎಕ್ಸ್ಪೆಸ್‌ನಲ್ಲಿನ ಒಂದು ವರದಿ ಹೇಳುತ್ತಿದೆ.

ಕೃಪೆ: ಪಿ.ಮಹಮ್ಮದ್, ಫೇಸ್‍ಬುಕ್

ವಾಸ್ತವವಾಗಿ, ಕೇಂದ್ರ ಸರಕಾರ ಹಾಕುತ್ತಿರುವ ಸೆಸ್/ಸರ್ಚಾರ್ಜ್ ಗಳನ್ನು ಹಿಂತೆಗೆದುಕೊಂಡರೆ, ಯಾವುದೇ ಸಬ್ಸಿಡಿಯಿಲ್ಲದೆ ಇದೇ ಬೆಲೆಯಲ್ಲಿ ಎಲ್‌ಪಿಜಿಯನ್ನು ಕೊಡಬಹುದು ಎಂದು ಹೇಳಲಾಗಿದೆ.

ಈ ನಡುವೆ ಪ್ರಧಾನಿಗಳ ಈ ‘ಉಡುಗೊರೆ’ಯಿಂದಾಗಿ ‘ಭಾರತ್ ಪೆಟ್ರೋಲಿಯಂ’ನ ಶೇರುಗಳ ಬೆಲೆಯಲ್ಲಿ 1%ದಿಂದ 2.5%ದಷ್ಟು ಗಮನಾರ್ಹ ಕುಸಿತವಾಗಿದೆಯಂತೆ!

Donate Janashakthi Media

Leave a Reply

Your email address will not be published. Required fields are marked *