ಮುಂಡರಗಿ : ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಮತ್ತು ಶರಣ ಸಾಹಿತ್ಯ ಪರಿಷತ್ತುಗಳ ಆಶ್ರಯದಲ್ಲಿ ಇಲ್ಲಿ ನಡೆದ ‘ಇಳೆ-ಮಳೆ’ ಕುರಿತ ಕವಿಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ಆರ್.ಎಲ್ ಪೊಲೀಸ್ ಪಾಟೀಲರು, ಪ್ರಾಸವು ಕವಿತೆಯ ಅಂದವನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಮುಂಡರಗಿ
ಸ್ಥಳೀಯ ಕ. ರಾ. ಬೆಲ್ಲದ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕವಿತೆಯಲ್ಲಿ ಬರುವ ಲಯಬದ್ಧ ಪ್ರಾಸ ಮತ್ತು ಗೇಯತೆ ಓದುಗ ಅಥವಾ ಕೇಳುಗನ ಮನಸ್ಸನ್ನು ಬೇಗ ತಲುಪುತ್ತದೆ. ಯಾವುದೇ ಸಾಹಿತ್ಯದ ಸತ್ವವನ್ನು ಹೆಚ್ಚಿಸುವಲ್ಲಿ ಈ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಇದನ್ನೂ ಓದಿ : ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ
“ಶ್ರೇಷ್ಠ ಸಾಹಿತ್ಯವು ಜನಪದರ ಅಂಗಳದಲ್ಲಿ, ಸಹಜ ಬದುಕಿನ ನೆಲೆಯಲ್ಲಿ ಹುಟ್ಟುತ್ತದೆ. ಬರಿಗಣ್ಣಿನಿಂದ ಕಂಡ ವಿಷಯಗಳನ್ನು ಒಳಗಣ್ಣಿನಿಂದ ಆಸ್ವಾದಿಸಿ ಅದನ್ನು ಅಕ್ಷರ ರೂಪಕ್ಕೆ ಇಳಿಸುವುದು ಸವಾಲಿನ ಕೆಲಸ. ಶ್ರೇಷ್ಠ ಕವಿಗಳು ಮಾತ್ರ ಇದನ್ನು ಸಾಧಿಸಬಲ್ಲರು” ಎಂದು ಪೊಲೀಸ್ ಪಾಟೀಲರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಜಿ. ಗಚ್ಚಣ್ಣವರ ಅವರು ಮಾತನಾಡಿ, ಸ್ಥಳೀಯ ಸಾಹಿತ್ಯಾಸಕ್ತರ ಸಹಕಾರದಿಂದ ಇಡೀ ವರ್ಷ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಸಂತೋಷ ಹಿರೇಮಠ ಅವರು ಮಾತನಾಡಿ, ಓದು-ಬರಹ ಬಲ್ಲವರೆಲ್ಲರೂ ಬರೆದದ್ದು ಕವಿತೆಗಳಾಗಲಾರವು. ಭಾವನೆಗಳ ಲಯಬದ್ಧ ಅಭಿವ್ಯಕ್ತಿಯೇ ನಿಜವಾದ ಕವಿತೆ ಎಂದರು.
ಇಳೆ ಮತ್ತು ಮಳೆಯ ಸೌಂದರ್ಯವನ್ನು ಕವಿತೆಗಳ ಮೂಲಕ ಕಟ್ಟಿಕೊಡುವ ಈ ಕವಿಗೋಷ್ಠಿಯಲ್ಲಿ 16ಕ್ಕೂ ಹೆಚ್ಚು ಕವಿಗಳು ಪಾಲ್ಗೊಂಡು ತಮ್ಮ ರಚನೆಗಳನ್ನು ಪ್ರಸ್ತುತಪಡಿಸಿದರು.
ಇದನ್ನೂ ನೋಡಿ : ಧರ್ಮಸ್ಥಳ | ‘ಒಂದೇ ದಿನ 72 ಶವಗಳ ದಫನ್ ʼ – ಪಂಚಾಯತ್ ದಾಖಲೆಗಳಿಂದ ಬಹಿರಂಗ Janashakthi Media #Dharmasthala
