ಧಾರ್ಮಿಕ ನಿಂದನೆ : ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಡಿಸಿಗೆ ದೂರು

ಶಿವಮೊಗ್ಗ : ಶಾಸಕ ಕೆ.ಎಸ್‌.ಈಶ್ವರಪ್ಪ ಅವರು ತಮ್ಮ ಭಾಷಣದಲ್ಲಿ ಮುಸ್ಲಿಂ ಸಮುದಾಯಕ್ಕೆ ವಿರುದ್ದವಾಗಿ ಧಾರ್ಮಿಕವಾಗಿ ನಿಂದನೆ ಮಾಡಿದ್ದಾರೆ ಅವರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕೆಂದು ಪೀಸ್ ಆರ್ಗನೈಜೇಷನ್ ಮುಖಂಡ ರಿಯಾಜ್ ಅಹಮದ್ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಮಂಗಳೂರಿನ ಕಾವೂರಿನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಭಾಷಣದ ವೇಳೆ ಈಶ್ವರಪ್ಪನವರು  ‘ಅಜಾನ್ ಕೂಗಿದರೆ ಮಾತ್ರ ಅಲ್ಲಾಹನಿಗೆ ಕೇಳುವುದೇ? ಅಲ್ಲಾಹನು ಕಿವುಡನೇ. ಇನ್ನು ಸ್ವಲ್ಪ ದಿನಗಳು ತಡೆದುಕೊಳ್ಳಿ ಜಿನ್ನಾ ಸಂತತಿಯೇ ಭಾರತದಲ್ಲಿ ಇರುವುದಿಲ್ಲ’ ಎಂದು ಅಜಾನ್ ಮತ್ತು ಅಲ್ಲಾಹನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಒಂದು ಸಮುದಾಯವನ್ನು ಎತ್ತಿ ಕಟ್ಟುವ ಕೆಲಸ ಮಾಡಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕೆಡಿಸುವ ಪ್ರಯತ್ನ ಮಾಡಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿ ವರ್ಧಕ ಬಳಸಬಾರದು ಎಂಬ ಸುಪ್ರೀಂ ಕೋರ್ಟ್‌ನ ಆದೇಶವನ್ನು ತಪ್ಪಾಗಿ ಉಲ್ಲೇಖಿಸಿ ಈಶ್ವರಪ್ಪ ಸುಳ್ಳು ಹೇಳಿದ್ದಾರೆ’ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ದೂರಲಾಗಿದೆ.

ಇದನ್ನೂ ಓದಿ : ಬಿಜೆಪಿಯ ಯಾವ ಶಾಸಕರೂ ಸತ್ತು ಹೋಗಿರುವ ಕಾಂಗ್ರೆಸ್‌ಗೆ ಹೋಗಲ್ಲ : ಕೆ.ಎಸ್.ಈಶ್ವರಪ್ಪ

‘ಮುಸ್ಲಿಮರು ಆಜಾನ್ ಕೂಗುವುದು ಅಲ್ಲಾಹನಿಗೆ ಕೇಳಲಿ ಎಂದಲ್ಲ; ಏಕದೈವ ಆರಾಧಕರು ಸೃಷ್ಟಿಕರ್ತನಿಗೆ ತಲೆಬಾಗಿ ತಮ್ಮ ಜೀವನವನ್ನು ಸೃಷ್ಟಿಕರ್ತನ ಆಜ್ಞೆಯಂತೆ ಪಾಲಿಸಲು ಕೂಗುವಂತಹ ಕರೆ ಹಾಗೂ ಪ್ರಾರ್ಥನೆ. ಆದರೆ, ಈಶ್ವರಪ್ಪ ಅವರು ನೀಡಿರುವ ಹೇಳಿಕೆಯಿಂದ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗೆ ತೀವ್ರ ಧಕ್ಕೆಯಾಗಿದೆ. ಹೀಗಾಗಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *