ರಜನಿಯ “ಆಧ್ಯಾತ್ಮಿಕರಾಜಕೀಯ” ಭ್ರಮಾರಾಜಕೀಯ ಮಾತ್ರ

ಹಿಂದಿನ ಮುಖ್ಯಮಂತ್ರಿ ಮತ್ತು ಜನಪ್ರಿಯ ನಟರಾದ ಎಂ.ಜಿ.ಆರ್ ಪ್ರತಿಪಾದಿಸುತ್ತಿದ್ದ `ಅಣ್ಣಾಇಸಂ’ಗೆ ಅರ್ಥ ಕೇಳಿದಾಗ, ಅದು `ಬಂಡವಾಳವಾದ’‘ಸಮಾಜವಾದ’ ಮತ್ತು `ಘಾಸಿವಾದ’ಗಳ ಮಿಶ್ರಣ ಎಂದೇ ಹೇಳುತ್ತಿದ್ದರು! ರಜನಿ ಅವರ “ಆಧ್ಯಾತ್ಮಿಕರಾಜಕೀಯ”ಅದಕ್ಕಿಂತಲೂ ಹೆಚ್ಚು ಗೊಂದಲಮಯವಾಗಿದೆ!! ಆಧ್ಯಾತ್ಮಿಕ ರಾಜಕೀಯದ ಹೆಸರಿನಲ್ಲಿ ಜನರನ್ನುಗೊಂದಲಕ್ಕೆ ಸಿಲುಕಿಸಿದರೆ ಜಾತ್ಯತೀತತೆಯ ಕಲ್ಪನೆಯನ್ನು ಹಾಳುಗೆಡವಿ, ರಾಜಕೀಯ ಮತ್ತು ಆಡಳಿತದಲ್ಲಿ ಧಾರ್ಮಿಕ ಮೂಲಭೂತವಾದಿಗಳ ರಾಜಕೀಯಕಾರ್ಯ ಸೂಚಿಯನ್ನು ಬಲಪಡಿಸಿದಂತಾಗುತ್ತದೆ. ರಾಜಕೀಯವು, ನಿವೃತ್ತಿ ಹೊಂದುತ್ತಿರುವವರ ಕೊನೆಯ ಆಯ್ಕೆ ಅಲ್ಲ ಬದಲಿಗೆ ಹೋರಾಟಗಳ ಯುದ್ಧಭೂಮಿ. ಈಗ ದಿಢೀರನೆ ಪ್ರತ್ಯಕ್ಷವಾಗಿರುವಈ ಭ್ರಷ್ಟಾಚಾರ-ವಿರೋಧಿಗಳು ಈ ವ್ಯವಸ್ಥೆಯ ಭಾಗವಾಗಿರುವ ಸಾಂಸ್ಥಿಕ ಭ್ರಷ್ಟಾಚಾರದ ಬಗೆಗೆ ಮಾತನಾಡುವುದಿಲ್ಲ.

ಟಿ.ಕೆ. ರಂಗರಾಜನ್(ಅನು: ಎಂ.ಜಿ. ವೆಂಕಟೇಶ್)

ನವ ಉದಾರೀಕರಣದ ನೀತಿಗಳ ಫಲವಾಗಿ 1990 ರ ನಂತರ ಭಾರತದ ರಾಜಕೀಯ, ಆರ್ಥಿಕ ಮಹತ್ತರ ತಿರುವು ಪಡೆದು, ದಶಕಗಳ ನಂತರವೂ ಅದರ ನಕಾರಾತ್ಮಕ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ. ಸ್ವಾತಂತ್ರ ಸಂಗ್ರಾಮದಲ್ಲಿ ಮೂಡಿಬಂದಿದ್ದ ರಾಷ್ಟ್ರೀಯ ಸಾರ್ವಭೌಮತ್ವ, ಸ್ವಾಯುತ್ತತೆ, ಒಕ್ಕೂಟತತ್ವ, ಜಾತ್ಯಾತೀತತೆಯ ಮೌಲ್ಯಗಳನ್ನು ಪ್ರಶ್ನಿಸಲಾಗುತ್ತಿದೆ.

ನೀತಿಗಳ ಬದಲಾವಣೆ ಮತ್ತು ಅದರ ಫಲವಾದ ಪ್ರಾಯೋಗಿಕ ಬದಲಾವಣೆಗಳು ಸಮಾಜದ ಕೃಷಿ, ಕೈಗಾರಿಕೆ, ಸೇವೆಗಳು, ಶಿಕ್ಷಣ, ಆರೋಗ – ಇತ್ಯಾದಿ ಎಲ್ಲರಂಗಗಳಿಗೂ ಆವರಿಸಿ, ಸಾಮಾನ್ಯ ಜನರ ಅದರಲ್ಲೂ ಪರಿಶಿಷ್ಟ ಜನಾಂಗ, ಹಿಂದುಳಿದ ಹಾಗೂ ಜನಸಂಖ್ಯೆಯ ಅರ್ಧ ಭಾಗವಾಗಿರುವ ಮಹಿಳೆಯರ ಜೀವನದ ಮೇಲೆ ಭೀಕರ ಪರಿಣಾಮ ಬೀರಿವೆ. ರಾಜ್ಯಗಳ ಹಕ್ಕು, ಎಲ್ಲ ಭಾಷೆಗಳಿಗೆ ಸಿಗಬೇಕಿರುವ ಸಮಾನಗೌರವ, ಸಾಮಾಜಿಕ ವೈವಿಧ್ಯತೆಗಳ ಒಳಗೊಳ್ಳುವಿಕೆ, ಜಾತ್ಯತೀತತೆ – ಸಂವಿಧಾನದದಲ್ಲಿ ಪವಿತ್ರ ಎಂದು ಪರಿಗಣಿತವಾಗಿರುವಎಲ್ಲ ಮೌಲ್ಯಗಳನ್ನೂಇಂದು ವಿಕೃತಗೊಳಿಸಲಾಗುತ್ತಿದೆ. ಧರ್ಮ, ಭಾಷೆ, ಜಾತಿ, ಕುಲಗಳ ಆಧಾರದಲ್ಲಿ ದ್ವೇಷ ಬಿತ್ತಲಾಗುತ್ತಿದೆ. ಈ ದ್ವೇಷ ಪೂರಕ ಪ್ರಚಾರಕ್ಕೆ ಸಾಂಪ್ರದಾಯಿಕವಾದ ತಪ್ಪಾದ ವಿವರಣೆಗಳನ್ನು ಕೊಡಲಾಗುತ್ತಿದೆ. ಪ್ರಾಚೀನ ಉಜ್ವಲ ಪರಂಪರೆ ಮತ್ತು ಸ್ವಾತಂತ್ರ್ಯ ಚಳುವಳಿಯ ತ್ಯಾಗ ಬಲಿದಾನಗಳನ್ನು ಕ್ಷುಲ್ಲಕಗೊಳಿಸಲಾಗುತ್ತಿದೆ.  ಸಾಂವಿದಾನಿಕ ಮೌಲ್ಯಗಳ ಜಾಗದಲ್ಲಿಅಪ್ರಯೋಜಕ, ಕೊಳೆತ ಮನುಸೃತಿಯನ್ನು ಸ್ಥಾಪಿಸಲಾಗುತ್ತಿದೆ. ಟಿವಿ, ಮುದ್ರಣ, ಸಾಮಾಜಿಕ ಮಾಧ್ಯಮಗಳ ಪ್ರಚಾರಗಳ ಮೂಲಕ ಯುವಜನತೆಯನ್ನು ಹಿಂದುತ್ವದ ತತ್ವಗಳಿಗೆ ಅಡಿಯಾಳಾಗುವಂತೆ ನೋಡಿಕೊಳ್ಳಲಾಗುತ್ತಿದೆ.

ದಾರಿತಪ್ಪಿಸುವ ಕ್ರಮಗಳು:

ಹಲವು ಕ್ಷೇತ್ರಗಳಲ್ಲಿ ಆರ್ಥಿಕ ಸಂಕಷ್ಟಗಳ ವಿರುದ್ಧ ದುಡಿಯುವ ವರ್ಗದ   ಹೋರಾಟಗಳು ರಾಷ್ಟ್ರೀಯ ವ್ಯಾಪಿಯನ್ನು ಹೊಂದುತ್ತಿರುವಾಗ, ಜೀವನೋಪಾಯ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಿರುವ ಅವರನ್ನು ವಿಭಜಿಸಲು ಆಳುವ ವರ್ಗ ಹುನ್ನಾರ ನಡೆಸಿದೆ. “ಆಧ್ಯಾತಿಕರಾಜಕೀಯ” ಮುಂತಾದ ಪದಗಳಿಂದ ಜನರನ್ನು ದೈನಂದಿನ ಸಮಸ್ಯೆಗಳಿಂದ ವಿಮುಖರನ್ನಾಗಿಸಲು ಮಾಧ್ಯಮಗಳು ತೊಡಗಿವೆ. ಇಂತಹ ಸನ್ನಿವೇಶದಲ್ಲಿ ನಿವೃತ ನ್ಯಾಯಧೀಶರು, ಐಎಎಸ್, ಐಪಿಎಸ್ ಮಿಲಿಟರಿ ಅಧಿಕಾರಿಗಳು ಮತ್ತು ‘ನಿವೃತ್ತಿಯಅಂಚಿನಲ್ಲಿರುವ’ ಚಲನಚಿತ್ರ ನಟರುರಾಜಕೀಯಕ್ಕೆ ಪ್ರವೇಶ ಪಡೆಯಲು ಸಿದ್ಧರಾಗುತ್ತಿದ್ದಾರೆ. ಇಂದಿನ ಸಾಂಸ್ಕೃತಿಕ ಅವನತಿ ಮತ್ತು ಭೀಕರದು ಸ್ಥಿತಿಗೆ ಅವರೂ ಕಾರಣವೆಂಬುದನ್ನು ಮರೆತು, ಹಾಳಾದ ವ್ಯವಸ್ಥೆಯನ್ನು ಸರಿಪಡಿಸಲು ಬಂದಿರುವ ಅವತಾರ ಪುರುಷರಂತೆ ಆಡುತ್ತಿದ್ದಾರೆ. ಮಾಧ್ಯಮಗಳಿಂದ ಇವರಿಗೆ ಸಿಗುವ ಅಗಾಧ ಪ್ರಚಾರ ಮತ್ತು ಸಾಮಾಜಿಕ ಬದಲಾವಣೆ ಬಯಸುವ ತರುಣರು ಈ ದುರುದ್ದೇಶದ ಆಟಕ್ಕೆ ಬಲಿಯಾಗುತ್ತಿರುವುದು ದುರದೃಷ್ಟಕರ. ಆರ್‌ಎಸ್‌ಎಸ್ ನ ರಾಜಕೀಯ ಅಂಗವಾದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಳ್ವಿಕೆಯಲ್ಲಿ ಸ್ವಾತಂತ್ರ ಚಳುವಳಿಯ ತಿರುಚುವಿಕೆ, ಪ್ರಜಾಪ್ರಭುತ್ವ ತತ್ವಗಳ ಅಪಮೌಲ್ಯ, ಐಕ್ಯತೆ, ಸಾಂವಿಧಾನಿಕ ಮೌಲ್ಯಗಳ ಕಡೆಗಣನೆ, ರಾಜ್ಯಗಳ ಹಕ್ಕು ಕಸಿಯುವಿಕೆ ವ್ಯಾಪಕವಾಗಿ ನಡೆದಿದೆ.

ದೇಶದ ಹಿತಾಸಕ್ತಿಗಳನ್ನುಕಾರ್ಪೋರೇಟ್ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಒತ್ತೆಯಿಡುವುದು ಅವ್ಯಾಹತವಾಗಿ ಮುಂದುವರೆದಿದೆ. ಜನರ ಆಸ್ತಿಗಳಾದ ಸಾರ್ವಜನಿಕ ಉದ್ದಿಮೆಗಳನ್ನು ಮಾರಲಾಗುತ್ತಿದೆ. ಕೃಷಿ ಕಾನೂನು ಮೇಲ್ಮನೆಯಲ್ಲಿ ಮೋಸದಿಂದ ಅಂಗೀಕಾರಗೊಂಡಿದೆ. ಬ್ಯಾಂಕ್, ವಿಮಾ, ರೈಲ್ವೇ ಮತ್ತು ಸೇವಾ ಕ್ಷೇತ್ರಗಳನ್ನು ಹೆಚ್ಚೆಚ್ಚಾಗಿ ವೇಗವಾಗಿ ಖಾಸಗಿ ಕ್ಷೇತ್ರಕ್ಕೆ ಮತ್ತು ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್‌ಗಳಿಗೆ ವಹಿಸಿ ಕೊಡಲಾಗುತ್ತಿದೆ.

ದ್ರಾವಿಡ ಪಕ್ಷಗಳು ತಮಿಳುನಾಡಿನಲ್ಲಿ 1967 ರಿಂದ ಆಡಳಿತ ನಡೆಸುತ್ತಿದ್ದು ಅವುಗಳ ಆಡಳಿತದ ಬಗ್ಗೆ ಟೀಕೆ ಇದ್ದರೂ ಈ ರಾಜ್ಯ ಅನೇಕ ವಿಷಯಗಳಲ್ಲಿ ಗುಜರಾತ್, ಉತ್ತರಪ್ರದೇಶ, ಬಿಹಾರ್ ರಾಜ್ಯಗಳಿಗಿಂತ ಮುಂದಿದೆ. ಆದರೆ ಈಗಿನ ಎಐಡಿಎಂಕೆ ಸರ್ಕಾರ ಘೋಷಿತ ದ್ರಾವಿಡ ನೀತಿಗಳಿಂದ ದೂರ ಸರಿಯುತ್ತಾ ಬಿಜೆಪಿ ಕೃಪಾಕಟಾಕ್ಷದಲ್ಲಿ ಬದುಕಲು ಹೊರಟಿದ್ದು, ತಮಿಳುನಾಡಿನ ಹಿತಾಸಕಿಗಳನ್ನು ಬಲಿಕೊಡುತ್ತಿದೆ. ಇದು ಬಿಜೆಪಿಗೆ ರಾಜ್ಯದಲ್ಲಿ ಕಾಲೂರಲು ಅವಕಾಶ ಮಾಡಿಕೊಡುತ್ತಿದೆ.

ದಿಢೀರ್ ರಾಜಕಾರಣಿಗಳು

ಈ ಹಿನ್ನೆಲೆಯಲ್ಲಿಸಿನಿಮಾ ನಟರಾದರ ಜನಿಕಾಂತ್ ಕಮಲ್ ಹಾಸನ್ ಬಂದು ತಮಿಳುನಾಡು ರಾಜಕೀಯವನ್ನುಅಡಿಮೇಲು ಮಾಡುತ್ತಾರೆ ಎನ್ನಲಾಗಿದೆ.  ಕಮಲ್ ಪಕ್ಷ“ಮಕ್ಕಳ ನೀಧಿಮೈಯಂ” (ಮೈಯ್ಯಂ ಅಂದರೆ ತಮಿಳಿನಲ್ಲಿ ಕೇಂದ್ರ) ಈಗಘೋಷಿತವಾಗಿದೆ. ಡಿಸೆಂಬರ್ 31 ಕ್ಕೆ ರಜನಿ ಪಕ್ಷದ ಘೋಷಣೆ ಆಗಬೇಕಿತ್ತು. ಆದರೆ, ಯಾವತ್ತೂ ರಾಜಕೀಯ ಪ್ರವೇಶಿಸಲು ಹಿಂಜರಿಯುತ್ತಿದ್ದ ರಜನೀಕಾಂತ್, ಆರೋಗ್ಯದ ಕಾರಣಕೊಟ್ಟು ಪ್ರಾರಂಭವಾಗುವ ಮೊದಲೇ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಅವರು ತಮ್ಮದು“ಆಧ್ಯಾತ್ಮಿಕರಾಜಕೀಯ”ಎಂದು ಹೇಳಿಕೊಂಡಿದ್ದರು. ಪ್ರಜಾತಂತ್ರದಲ್ಲಿಎಲ್ಲರಿಗೂ, ರಾಜಕೀಯ ಕ್ಷೇತ್ರ ಪ್ರವೇಶಿಸಲು ಅವಕಾಶವಿದೆ, ರಜನೀಕಾಂತ್‌ ಅವರೂ ಪ್ರವೇಶಿಸಬಹುದು. ಆದರೆ ಮಾಧ್ಯಮಗಳಲ್ಲಿ “ರಜನಿ ರಾಜಕೀಯ ಪ್ರವೇಶ”ಎಂಬುದು ಏಕಮಾತ್ರ ಸುದ್ದಿಯೇನೋ ಎಂಬಂತೆ ಪ್ರಚಾರ ಪಡೆದು, ಕೆಲಕಾಲ ನಂತರ ಈಗ ಠುಸ್‌ ಆಗಿದೆ. ಎಷ್ಟೇ ಗೊಂದಲಗಳಿದ್ದರೂ ಕಮಲ್‌ಹಾಸನ್ ಹಿಂದುತ್ವ ರಾಜಕೀಯದಿಂದ ಸ್ಪಷ್ಟ ಅಂತರ ಕಾಪಾಡಿಕೊಂಡಿದ್ದಾರೆ.

ಅವರ ಸಿನಿಮಾ ಅಭಿಮಾನಿಗಳಿಗೆ ಒಬ್ಬ “ವಿಶ್ವನಾಯಕ” (ವಿಶ್ವಗುರುಅಲ್ಲ) ಮತ್ತು ಇನ್ನೊಬ್ಬ“ಸೂಪರ್‌ಸ್ಟಾರ್”ಆಗಿರುವವರು ಭ್ರಷ್ಟಾಚಾರ ತೊಡೆದು ಹಾಕಲು ಬಂದ ಅವತಾರಗಳಂತೆ ಆಡುತ್ತಿದ್ದಾರೆ. `ಎಲ್ಲವನ್ನು ಬದಲಾಯಿಸುತ್ತೇವೆ ’ ಎಂದು ಅವರು ಪದೇಪದೇ ಹೇಳುತ್ತಿರುವುದು ಸಿನಿಮಾ ಡೈಲಾಗ್‌ರೀತಿಯಲ್ಲಿದೆ. ರಾಜಕೀಯ ಮತ್ತುಆಧ್ಯಾತ್ಮಿಕತೆ ಪ್ರತ್ಯೇಕ ಕ್ಷೇತ್ರಗಳಾಗಿದ್ದರೂ ರಜನಿ ಇವುಗಳನ್ನು ಸೇರಿಸುತ್ತಿರುವುದರಿಂದ ಗೊಂದಲವುಂಟಾಗುತ್ತಿದೆ. ಈ ಕುರಿತು ಜನರ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತಿಲ್ಲ. ಹಿಂದಿನ ಮುಖ್ಯಮಂತ್ರಿ ಜನಪ್ರಿಯ ನಟರಾದ ಎಂ.ಜಿ.ಆರ್ ಪ್ರತಿಪಾದಿಸುತ್ತಿದ್ದ `ಅಣ್ಣಾಇಸಂ’ಗೆ ಅರ್ಥ ಕೇಳಿದಾಗ, ಅದು `ಬಂಡವಾಳವಾದ’‘ಸಮಾಜವಾದ’ ಮತ್ತು `ಘಾಸಿವಾದ’ಗಳ ಮಿಶ್ರಣ ಎಂದೇ ಹೇಳುತ್ತಿದ್ದರು! ರಜನಿ ಅವರ“ಆಧ್ಯಾತ್ಮಿಕರಾಜಕೀಯ” ಅದಕ್ಕಿಂತಲೂ ಹೆಚ್ಚು ಗೊಂದಲ ಮಯವಾಗಿದೆ!!

ಆಧ್ಯಾತ್ಮಿಕತೆ ಅಂದರೇನು?

ಆಧ್ಯಾತ್ಮಿಕತೆ ವೈಯಕ್ತಿಕ ಶಾಂತಿ ಮತ್ತು ನೆಮ್ಮದಿಯ ಹುಡುಕಾಟ. ಪ್ರಪಂಚದ ಎಲ್ಲ ಕಡೆಗಳಲ್ಲೂ ಎಲ್ಲ ಧರ್ಮಗಳಲ್ಲೂ ಆಧ್ಯಾತ್ಮಿಕತೆಯ ಧಾರೆ ಕಾಣಸಿಗುತ್ತದೆ. ಆಧ್ಯಾತ್ಮಿಕತೆ ಮತ್ತು ಧರ್ಮಗಳು ಒಂದೇ ಅಲ್ಲ. ಅವುಗಳ ನಡುವೆ ಸಾಮ್ಯವೂ ಇದೆ, ಭಿನ್ನತೆಗಳೂ ಇವೆ. ಆಧ್ಯಾತ್ಮಿಕತೆಯ ಪ್ರಮುಖ ಕಾಳಜಿ, ಹುಟ್ಟಿನ ಮೊದಲು ಮನುಷ್ಯರು ಏನಾಗಿದ್ದರು ಮತ್ತು ಸಾವಿನ ನಂತರ ಮನುಷ್ಯರು ಏನಾಗುತ್ತಾರೆ ಎಂಬುದರ ಕುರಿತು ಇರುತ್ತದೆ. ಆದರೆ ಆಧ್ಯಾತ್ಮಿಕತೆ ಮತ್ತುರಾಜಕೀಯ ಎರಡೂ ಪೂರ್ಣವಾಗಿ ಭಿನ್ನವಾದವುಗಳು.

ಧಾರ್ಮಿಕ ನಂಬಿಕೆಯುಳ್ಳ ಸ್ವಾಮಿ ವಿವೇಕನಂದರು, ನಾರಾಯಣಗುರು, ರಾಮಲಿಂಗ ಅಡಿಗಳರ್, ವೈಗುಂಡ ಸಾಮಿ ಮುಂತಾದವರು ಸಮಾಜ ಸುಧಾರಕರೂ ಆಗಿದ್ದರು. ಅವರು ಧಾರ್ಮಿಕ ಚೌಕಟ್ಟಿನೊಳಗೆ ಸಮಾಜ ಸುಧಾರಣೆಗೆ ಗಟ್ಟಿದನಿ ಎತ್ತಿದ್ದರು. ಅವರು ಧರ್ಮಗಳ ಸಾಂಸ್ಥೀಕರಣದ, ಮೌಢ್ಯಗಳ, ಜಾತಿ ತಾರತಮ್ಯದ ವಿರುದ್ಧವಿದ್ದರು. ಮಹಿಳೆಯರ ಹಕ್ಕಿನ ಪ್ರತಿಪಾದಕರಾಗಿದ್ದರು. ರಜನೀಕಾಂತ್ ಸ್ಟೈಲಿನ “ಆಧ್ಯಾತ್ಮಿಕರಾಜಕೀಯ”ಇದಕ್ಕೆ ತದ್ವಿರುದ್ದವಾಗಿದ್ದು, ವಿರೋಧಾಭಾಸಗಳಿಂದ ಕೂಡಿದ್ದು, ಬಿಜೆಪಿ ತತ್ವಗಳನ್ನು ಹೋಲುತ್ತಾ ಪ್ರತಿಗಾಮಿ ತತ್ವಗಳನ್ನು ಛಂದಕಾಣಿಸುವ ಪ್ರಯತ್ನ ಮಾಡುತ್ತದೆ.

ಆಧ್ಯಾತ್ಮಿಕತೆಯನ್ನು ಅಮೇರಿಕಾ ಸೇರಿದಂತೆ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಬೋಧಿಸಿದರೂ ಅದು ಧರ್ಮ ಸಂಬಂಧಿಯಾಗಿರದೆ ಯೋಗ, ಉಸಿರಾಟದ ವ್ಯಾಯಾಮದ ಪಠ್ಯಕ್ರಮದಂತಿರುತ್ತದೆ. ಶಂಕರಾಚಾರ್ಯರ ಪ್ರಕಾರ ಪ್ರಪಂಚ ಕೇವಲ ಮಾಯೆ. ಬ್ರಹ್ಮ (ಪರಮಾತ್ಮ)ಮಾತ್ರ ಸತ್ಯ.  ಆತ್ಮವು ಬ್ರಹ್ಮನ ಮಾಯಾ ರೂಪ ಮಾತ್ರ. ಆತ್ಮ, ಪರಮಾತ್ಮ ಎಲ್ಲಾ ಒಂದೇ ತತ್ವ ಎನ್ನುವ ಅದ್ವೈತ, ಮಧ್ವಾಚಾರ್ಯರ ದ್ವೈತ, ರಾಮಾನುಚಾರ್ಯರ ವಿಶಿಷ್ಟಾದ್ವೈತ –ಇವುಗಳ ಮಧ್ಯೆತಾತ್ವಿಕ  ಭಿನ್ನಾಭಿಪ್ರಾಯಗಳಿವೆ. ಆತ್ಮ, ಪರಮಾತ್ಮ, ಪ್ರಕೃತಿ ಒಂದೆನೇ ಬೇರೆಯೇ? ಅವುಗಳ ನಡುವಿನ ಸಂಬಂಧಗಳೇನು ಎಂಬುದರ ಕುರಿತು ಈಗಲೂ ತಾತ್ವಿಕ ವಾಗ್ವಾದಗಳು ಮುಂದುವರೆದಿವೆ. ಸುಬ್ರಮಣ್ಯ ಭಾರತಿಯವರ ಹಾಡಿನಲ್ಲಿ : ನಿಂತಿರುವ, ಹಾರುವ, ನಡೆಯುವ ಎಲ್ಲಾ ವಿದ್ಯಮಾನಗಳು ಕನಸೇ; ಎಲ್ಲಾ ಕಲ್ಪನೆ, ಕಲಿಕೆಗಳಿಗೆ ಅರ್ಥವಿಲ್ಲವೇ – ಹೀಗೆ ಪ್ರಶ್ನಿಸುತ್ತಾ ನಾವು ಕಾಣುತ್ತಿರುವುದಕ್ಕೆ ಅರ್ಥವಿದೆಯೇ ಹೊರತು ಕಾಣದ್ದನ್ನು ನಂಬುವುದಿಲ್ಲ ಎನ್ನುತ್ತಾರೆ. ಅವರು ದೇವರನ್ನು ನಂಬಿದರೂ ಮಾಯಾವಾದವನ್ನು ನಿರಾಕರಿಸಿರುತ್ತಾರೆ.

ಮಾರ್ಕ್ಸ್ವಾದ ಜನರ ನಂಬಿಕೆಗಳ ಹಿನ್ನೆಲೆ, ಕಾರಣಗಳನ್ನು ಅರ್ಥ ಮಾಡಿಕೊಳ್ಳುತ್ತದೆ. ಆರ್ಥಿಕ-ರಾಜಕೀಯ ಸ್ಥಿತಿಗಳ ಬದಲಾವಣೆಗಳ ಮುಖಾಂತರ ಮಾತ್ರವೇ, ಜಗತ್ತಿನ ಎಲ್ಲ ಜನರಿಗೆ ಭ್ರಾಮಕವಲ್ಲದ ನಿಜವಾದ, ಎಲ್ಲ ಬಗೆಯ ನೆಮ್ಮದಿಯ ಬದುಕುತರಲು ಸಾಧ್ಯ ಎಂಬುದು ಮಾರ್ಕ್ಸ್ವಾದದ ತಿಳುವಳಿಕೆ.  ಆಧ್ಯಾತ್ಮಿಕ ರಾಜಕೀಯದ ಹೆಸರಿನಲ್ಲಿ ಜನರನ್ನು ಗೊಂದಲಕ್ಕೆ ಸಿಲುಕಿಸಿದರೆ, ಜಾತ್ಯತೀತತೆಯ ಕಲ್ಪನೆಯನ್ನು ಹಾಳುಗೆಡವಿ, ರಾಜಕೀಯ ಮತ್ತು ಆಡಳಿತದಲ್ಲಿ ಧಾರ್ಮಿಕ ಮೂಲಭೂತವಾದಿಗಳ ರಾಜಕೀಯಕಾರ್ಯ ಸೂಚಿಯನ್ನು ಬಲಪಡಿಸಿದಂತಾಗುತ್ತದೆ. ಇದರ ಮೂಲಕ ಹಿಂದುತ್ವ ಶಕ್ತಿಗಳು ಕಾರ್ಪೋರೇಟ್ ಶಕ್ತಿಗಳಿಗೆ ಕೊಡುತ್ತಿರುವ ಬೆಂಬಲವನ್ನು ಜನರಿಂದ ಮರೆ ಮಾಚಲಾಗುತ್ತದೆ.

ರಜನೀಕಾಂತ್, ಕಮಲಹಾಸನ್‌ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ. ಆದರೆ ಭ್ರಷ್ಟಾಚಾರವು ಒಂದು ಸ್ವತಂತ್ರ ವಿದ್ಯಮಾನವಲ್ಲ, ಬಂಡವಾಳಶಾಹಿ ವ್ಯವಸ್ಥೆಯ ಅನಿವಾರ್ಯ ಪರಿಣಾಮ. ಕಮ್ಯೂನಿಸ್ಟರು ಹೋರಾಡುವುದು ಭ್ರಷ್ಟಾಚಾರದ ವಿರುದ್ಧ ಮಾತ್ರವಲ್ಲ, ಅದರ ಮೂಲ ಕಾರಣವಾಗಿರುವ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಸಹ. ಭ್ರಷ್ಟಾಚಾರಕ್ಕೆ ಮೂಲ ಕಾರಣವಾಗಿರುವ ಅಂಶಗಳನ್ನು ನಿರ್ಮೂಲನ ಮಾಡದೆ ಭ್ರಷ್ಟಾಚಾರವನ್ನು ನಿರ್ಮೂಲನ ಮಾಡಲು ಸಾಧ್ಯವಿಲ್ಲ.

ಭ್ರಷ್ಟಾಚಾರದ ಮೂಲ:

ಲೋಕಪಾಲ ಮಸೂದೆಗಾಗಿ ಅಣ್ಣಾಹಜಾರೆ ನಡೆಸಿದ ಚಳುವಳಿಗೆ ಮಾಧ್ಯಮಗಳಿಂಧ ದೊಡ್ಡ ಪ್ರಚಾರ ಸಿಕ್ಕಿತ್ತು. ಅದರ ಹಿಂದೆ ಆರ್.ಎಸ್.ಎಸ್. ಸೇರಿದಂತೆ ಅನೇಕ ಸಂಘಟನೆಗಳು ಇದ್ದವು. ಈಗ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರವು ಸರ್ವವ್ಯಾಪಿಯಾಗಿ ಬೃಹದಾಕಾರವಾಗಿ ಬೆಳೆದಿದ್ದರೂ, ಅಣ್ಣಾ ಹಜಾರೆ ದಿವ್ಯ ಮೌನ ತಳೆದಿದ್ದಾರೆ. ಇದು ರಾತ್ರೋರಾತ್ರಿ ಓಡಿ ಹೋಗುವ ಚಳವಳಿಗಳ ಪೊಳ್ಳುತನದ ಲಕ್ಷಣ. ಲೋಕಪಾಲ ಮಸೂದೆ ಚರ್ಚೆಯಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮಸೂದೆಯಲ್ಲಿ ಲಂಚ ತೆಗೆದುಕೊಳ್ಳುವವರಿಗೆ ಶಿಕ್ಷೆಯಿದ್ದು ಕೊಡುವವರಿಗೆ ಇಲ್ಲದಿರುವ ಬಗ್ಗೆ ಗಮನ ಸೆಳೆದರು. ಲಂಚ ಕೆಳಮಟ್ಟದಲ್ಲಿ ಅಲ್ಲದೇ ಮೇಲ್ಮಟ್ಟದಲ್ಲಿ ನಡೆಯುವುದರ ವಿರುದ್ಧ ಯಾವ ಕ್ರಮಗಳು ಇಲ್ಲದಿರುವುದನ್ನು ತಿಳಿಸಿದರು. ಮಿಲಿಟರಿ ಉಪಕರಣಗಳ/ಕೊಳ್ಳುವಿಕೆಯಲ್ಲಿ ಕಾರ್ಪೋರೇಟ್‌ಕೈವಾಡವಿರುತ್ತದೆ. ಕಾರ್ಪೋರೇಟ್‌ಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳು ದೊಡ್ಡದೊಡ್ಡ ಮೊತ್ತದ ಲಂಚ ನೀಡಿ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ. ಆದರಿಂದ ಅವುಗಳನ್ನು ಶಿಕ್ಷಿಸಲು ಸೂಕ್ತ ಬದಲಾವಣೆ ಮಾಡಬೇಕೆಂಬ ಸಲಹೆಯನ್ನು ಸರ್ಕಾರ ತಿರಸ್ಕರಿಸಿತು.

ಭ್ರಷ್ಟಾಚಾರವನ್ನು ಬಿಜೆಪಿ ಆಡಳಿತದಲ್ಲಿ ಈಗ `ಕಾನೂನು ಸಮ್ಮತ’ವಾಗಿಸಲಾಗಿದೆ. ಚುನಾವಣಾ ಬಾಂಡ್ ಹೆಸರಿನಲ್ಲಿ ರಾಜಕೀಯ ಪಕ್ಷಗಳು ಕಾರ್ಪೋರೇಟ್‌ಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳಿಂದ ಎಷ್ಟು ಬೇಕಾದರೂ ವಂತಿಗೆ ಸ್ವೀಕರಿಸಲು ಸಾಧ್ಯವಿದ್ದು ಅದರಲ್ಲಿ ಬಿಜೆಪಿ ಹೆಚ್ಚಿನ ಪಾಲು ಪಡೆದಿರುತ್ತದೆ. 2019 ರಲ್ಲಿ ದತ್ತಿ ಟ್ರಸ್ಟ್ಗಳಿಗೆ ತೆರಿಗೆ ವಿನಾಯಿತಿ ನೀಡಿದ್ದರಿಂದ ಕಾರ್ಪೋರೇಟ್ ಸಂಸ್ಥೆಗಳು ದೇವಮಾನವರ ಟ್ರಸ್ಟ್ಗಳ ಹೆಸರಿನಲ್ಲಿ ತೆರಿಗೆ ವಂಚನೆ ಮಾಡುತ್ತಿದ್ದಾರೆ.

ಈಗ ದಿಢೀರನೆ ಪ್ರತ್ಯಕ್ಷವಾಗಿರುವ ಈ ಭ್ರಷ್ಟಾಚಾರ-ವಿರೋಧಿಗಳು ಈ ವ್ಯವಸ್ಥೆಯ ಭಾಗವಾಗಿರುವ ಸಾಂಸ್ಥಿಕ ಭ್ರಷ್ಟಾಚಾರದ ಬಗೆಗೆ ಮಾತನಾಡುವುದಿಲ್ಲ. ತಮಿಳುನಾಡಿನಲ್ಲಿ ಭ್ರಷ್ಟಾಚಾರವನ್ನು ಅಳಿಸಿ ಹಾಕುತ್ತೇವೆನ್ನುವ ರಜನಿ, ಕಮಲ್‌ ಇದರ ಕುರಿತು ಮಾತನಾಡಿದ್ದಾರಾ? ಇಲ್ಲವಾದ್ದರಿಂದ, ಈ ವಿಷಯದಲ್ಲಿ ಅವರ ಮಾತುಗಳು ಕಾಳಜಿಗಳು ಪ್ರಾಮಾಣಿಕ ಎನಿಸುವುದಿಲ್ಲ. ರಾಜಕೀಯವು ನಿವೃತ್ತಿ ಹೊಂದುತ್ತಿರುವವರ ಕೊನೆಯ ಆಯ್ಕೆಅಲ್ಲ ಬದಲಿಗೆ ಹೋರಾಟಗಳ ಯುದ್ಧಭೂಮಿ. ರಾಜಕಿಯ-ಆರ್ಥಿಕ ವ್ಯವಸ್ಥೆಯಲ್ಲಿಅಮೂಲಾಗ್ರ ರಚನಾತ್ಮಕ ಬದಲಾವಣೆಯ ಮಾತನ್ನೇ ಆಡದೇ, ಆಧ್ಯಾತ್ಮಿಕ ರಾಜಕೀಯದಂತಹ ಘೋಷಣೆಗಳು, ಜನರನ್ನು ದಾರಿತಪ್ಪಿಸುವ ರಾಜಕೀಯದೊಳಗೆ ಧರ್ಮ ಬೆರೆಸುವ ಶಕ್ತಿಗಳಿಗೆ ಸಹಾಯವಾಗುತ್ತದೆ ಅಷ್ಟೇ.

ರಾಜಕೀಯ ಮತ್ತುಧರ್ಮ/ಆಧ್ಯಾತ್ಮ ಪ್ರತ್ಯೇಕವಾಗಿರಬೇಕು. ಎರಡರ ನಡುವೆ ಗೊಂದಲ ಎಬ್ಬಿಸುವವರು ಅವರು ಹೇಳುತ್ತಿರುವ ಉದ್ದೇಶಕ್ಕೆ ನ್ಯಾಯವನ್ನಂತೂ ಒದಗಿಸುವುದಿಲ್ಲ. ಸಮಾಜವಾದಿ ಸಮಾಜ ನಿಮಾರ್ಣದಿಂದ ಮಾತ್ರ ಜನತೆಗೆ ನಿಜವಾದ ವಿಮೋಚನೆ ಸಿಗುವುದು ಸಾಧ್ಯ. ಮಾರ್ಕ್ಸ್ವಾದವು, ಸಮಾಜವಾದಿ ಸಮಾಜ ಎಂಬ ‘ಸ್ವರ್ಗ’ವನ್ನು ಇಲ್ಲೇ ಈ ಜಗತ್ತಿನಲ್ಲೇ(ಬೇರೆಲ್ಲೋಅಲ್ಲ) ಹೇಗೆ ಸೃಷ್ಟಿಸಬಹುದು ಎಂಬುದರ ಕುರಿತು ಮನುಕುಲಕ್ಕೆ ಹಾದಿ ತೋರಿಸುತ್ತದೆ. ಇದೇ ಭ್ರಷ್ಟಾಚಾರ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಪರಿಹಾರ.

ಕಾರ್ಟೂನು ಹೇಳಿಕೆ ಅನುವಾದ

ತಮಿಳ: “ರಕ್ಷಿಸಿ!  ರಕ್ಷಿಸಿ!!” ರಜನಿ:  “ನಾನಿದ್ದೇನೆ”;

ರಜನಿ:“ಈ ದೊಡ್ಡ ಮನುಷ್ಯನಿಗೆ ತೊಂದರೆ ಕೊಡಬೇಡಪ್ಪ!”

Donate Janashakthi Media

Leave a Reply

Your email address will not be published. Required fields are marked *