ʻʻʻರಾಜದ್ರೋಹ’ ಕಾನೂನು ಅಮಾನತು: ಸುಪ್ರಿಂ ಕೋರ್ಟಿನ ಉತ್ತಮ ಆದೇಶʼʼ

ನವದೆಹಲಿ : ‘ರಾಜದ್ರೋಹ’ದ ಕಾನೂನು ಈಗ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುವುದರಿಂದಾಗಿ, ಈ ಕಾನೂನಿನ ನಿಬಂಧನೆಯನ್ನು ಮರುಪರಿಶೀಲಿಸುವುದಾಗಿ ಮತ್ತು ಮರುಪರೀಕ್ಷಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಲೇ ಬೇಕಾಗಿ ಬಂದಿದೆ. ಇದನ್ನು ಕುರಿತಾದ ಐಪಿಸಿಯ ಸೆಕ್ಷನ್ 124ಎ ಅನ್ನು ಸದ್ಯಕ್ಕೆ ಅಮಾನತಿನಲ್ಲಿಡುವಂತೆ ಸುಪ್ರಿಂ ಕೋರ್ಟ್ ಆದೇಶಿಸಿರುವುದು ಮತ್ತು ಎಲ್ಲಾ ಬಾಕಿ ಇರುವ ವಿಚಾರಣೆಗಳಿಗೆ ತಡೆ ಹಾಕಿರುವುದು ಹಾಗೂ ರಾಜದ್ರೋಹ ಕಾನೂನಿನಡಿಯಲ್ಲಿ ಹೊಸ ಪ್ರಕರಣಗಳನ್ನು ದಾಖಲಿಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿರುವುದು ಒಳ್ಳೆಯ ಸಂಗತಿ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

ಸುಪ್ರಿಂ ಕೋರ್ಟ್ ಈ ಸೆಕ್ಷನ್‍ ಬಗ್ಗೆ ಸರ್ಕಾರದ ಮರುಪರಿಶೀಲನೆಗೆ ಕಾಯದೆ ಜುಲೈ 2022 ರಲ್ಲಿ ವಿಚಾರಣೆಯನ್ನು ಪುನರಾರಂಭಿಸಿದಾಗ ಭಾರತೀಯ ದಂಡ ಸಂಹಿತೆಯ ಈ ಕಾಲಕ್ಕೆ ತಕ್ಕುದಲ್ಲದ  ಸೆಕ್ಷನ್ 124ಎ ಅನ್ನು ರದ್ದುಗೊಳಿಸಲು ಮುಂದಾಗಬೇಕು ಎಂದು ಅದು ಹೇಳಿದೆ.

ಮತ್ತೊಂದು ಗಂಭೀರ ಬೆಳವಣಿಗೆಯೆಂದರೆ, ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ, 2022 ಭಾರತವನ್ನು 180 ದೇಶಗಳಲ್ಲಿ 150 ನೇ ಸ್ಥಾನದಲ್ಲಿ ಇರಿಸಿದೆ. ಭಾರತ  ಕಳೆದ ವರ್ಷದ 142 ನೇ ಮತ್ತು 2016 ರಲ್ಲಿದ್ದ 133 ಸ್ಥಾನದಿಂದ ಇನ್ನೂ ಕೆಳಕ್ಕೆ  ಕುಸಿದಿದೆ.

ದೇಶದಲ್ಲಿ ಸರ್ವಾಧಿಕಾರಶಾಹಿ ಬೆಳೆಯುತ್ತಿದೆ ಎಂದಿರುವ ಸಿಪಿಐ(ಎಂ) ಪ್ರಧಾನ ಮಂತ್ರಿಗಳು ಮತ್ತು ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಬಂಧಿಸಿದ, ಮತ್ತೆ ಬಂಧಿಸಿದ ರೀತಿಯನ್ನು ತೀವ್ರವಾಗಿ ಖಂಡಿಸಿದೆ.

ಬುಲ್ಡೋಜರ್ ರಾಜಕೀಯ: ಕೋಮು ಧ್ರುವೀಕರಣವನ್ನು
ತೀಕ್ಷ್ಣಗೊಳಿಸುವ ನೀಚ ಪ್ರಯತ್ನದ ಅಭಿನ್ನ ಭಾಗ

ಜಹಾಂಗೀರ್ ಪುರಿ ಮತ್ತು ದೆಹಲಿಯ ಇತರ ಪ್ರದೇಶಗಳಲ್ಲಿ ಗುರಿಯಿಟ್ಟು ಕೆಡವಿ ಹಾಕುವ ಅಭಿಯಾನಗಳು ಉದ್ವಿಗ್ನತೆಯನ್ನು ಸೃಷ್ಟಿಸುವ ಮತ್ತು ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ನೀಚ ಪ್ರಯತ್ನಗಳ ಅಭಿನ್ನ ಭಾಗವಾಗಿವೆ ಎಂದೂ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಅಭಿಪ್ರಾಯ ಪಟ್ಟಿದೆ.

ಬುಲ್ಡೋಜರ್ ರಾಜಕೀಯವು ಬಡ ಜನರು ಮತ್ತು ಕಾರ್ಮಿಕ ವರ್ಗದ ಕುಟುಂಬಗಳ ಸೂರುಗಳನ್ನು ನೆಲಸಮ ಮಾಡಿದೆ. ಅಕ್ರಮ ಕಟ್ಟಡಗಳನ್ನು ಕೆಡವಲು ಮತ್ತು ಅತಿಕ್ರಮಣಗಳನ್ನು ತೆರವು ಮಾಡಲು ಕಾನೂನುಗಳು ಮತ್ತು ವಿಧಿ-ವಿಧಾನಗಳು ಇವೆ. ಇಂತಹ ಬುಲ್ಡೋಜರ್ ರಾಜಕಾರಣ ಇವುಗಳನ್ನು ಭಂಡತನದಿಂದ ಉಲ್ಲಂಘಿಸುತ್ತದೆ. ನ್ಯಾಯಾಂಗದ ಮಧ್ಯಪ್ರವೇಶ ಸದ್ಯಕ್ಕೆ ಜಹಾಂಗೀರ್ ಪುರಿ ಯಲ್ಲಿ ಇದನ್ನು ನಿಲ್ಲಿಸಿದೆ, ಆದರೆ ಅಂತಹ ಕ್ರಮಗಳು ವಿವಿಧ ಸ್ಥಳಗಳಲ್ಲಿ ಮುಂದುವರೆದಿವೆ. ಯಾವುದೇ ಅಕ್ರಮ ಕಟ್ಟಡಗಳನ್ನು ತೆಗೆದುಹಾಕುವ ಕೆಲಸ ಕಾನೂನಿಗೆ ಅನುಸಾರವಾಗಿರಬೇಕು ಮತ್ತು ನಿಗದಿಪಡಿಸಿದ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಬಡಜನರಿಗೆ ಪರ್ಯಾಯ ಜೀವನೋಪಾಯ ಮತ್ತು ಆಶ್ರಯವನ್ನು ಖಾತರಿಪಡಿಸುವ ವರೆಗೆ ಎಲ್ಲಾ ಕೆಡಹುವ ಕೆಲಸಗಳು ನಿಲ್ಲಬೇಕು ಎಂದು ಅದು ಆಗ್ರಹಿಸಿದೆ.

ಸಿಪಿಐ(ಎಂ)ನ  23ನೇ ಮಹಾಧಿವೇಶನದಲ್ಲಿ ಚುನಾಯಿತವಾದ ಪೊಲಿಟ್‍ ಬ್ಯುರೋದ  ಮೊದಲ ಸಭೆ ಮೇ 9 ಮತ್ತು 10ರಂದು ನಡೆಯಿತು. ಈ ಸಭೆಯಲ್ಲಿ ದೇಶದ ಪ್ರಸಕ್ತ ಪರಿಸ್ಥಿತಿಯನ್ನು ವಿಶ್ಲೇಷಿಸಲಾಯಿತು. ಈ ಸಭೆಯ ನಂತರ ಹೊರಡಿಸಿರುವ ಪತ್ರಿಕಾ ಸಂದೇಶಈ ಕುರಿತ ಪಕ್ಷದ ನಿಲುವನ್ನು ಪ್ರಸ್ತುತ ಪಡಿಸಿದೆ.

ಅವ್ಯಾಹತವಾಗಿ ನಾಗಾಲೋಟ ಹೂಡಿರುವ ಬೆಲೆ ಏರಿಕೆಯು ಜನರ ಮೇಲೆ ಹಿಂದೆಂದೂ ಕಾಣದ ಹೊರೆಯನ್ನು ಹೇರುತ್ತಿದೆ. ಕೋಟಿಗಟ್ಟಲೆ ಜನರು ಬಳಲುತ್ತಿದ್ದಾರೆ , ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ, ಅವರ ಹಸಿವಿನ ಸಂಕಟ ಹೆಚ್ಚುತ್ತಿದೆ. ಅಭೂತಪೂರ್ವ ಮಟ್ಟದ ನಿರುದ್ಯೋಗದ ಸಂಕಟದೊಂದಿಗೆ ಇದು ಜನರ ದುಃಖವನ್ನು ಹೆಚ್ಚಿಸುತ್ತಿದೆ ಎಂದಿರುವ ಹೇಳಿಕೆ ಎಡಪಕ್ಷಗಳು ಇಂತಹ  ಬೆಲೆ ಏರಿಕೆ ವಿರುದ್ಧ ಒಂದು ರಾಷ್ಟ್ರವ್ಯಾಪಿ ಐಕ್ಯ ಮತ್ತು ಸಾಮೂಹಿಕ ಹೋರಾಟಕ್ಕೆವನ್ನು ಸಂಯೋಜಿಸುತ್ತವೆ ಎಂದು ಹೇಳಿದೆ.

29 ಕೋಟಿ ಪಾಲಿಸಿದಾರರ ಒಡೆತನದಲ್ಲಿರುವ  ಎಲ್ಐಸಿ ಯ ಐಪಿಒ ಆರಂಭವಾಗಿದೆ. ಇದರಲ್ಲಿ ಇಷ್ಟೊಂದು ಬೃಹತ್‍ ಸಂಖ್ಯೆಯ ಪಾಲಿಸಿದಾರರ ಹಿತಾಸಕ್ತಿಗಳನ್ನು ತುಳಿಯುತ್ತ ಸರ್ಕಾರವು ಅಂತರರಾಷ್ಟ್ರೀಯ ಹೂಡಿಕೆದಾರರನ್ನು ತುಷ್ಟೀಕರಿಸಲು ಮತ್ತು ಪಾಲಿಸಿದಾರರ ವೆಚ್ಚದಲ್ಲಿ ಭಾರಿ ಲಾಭವನ್ನು ಗಳಿಸಲು ಮಾರಾಟವಾಗುತ್ತಿರುವ ಷೇರುಗಳ ಮೌಲ್ಯವನ್ನು ತಗ್ಗಿಸಿ ಲೆಕ್ಕ ಹಾಕಿಸಿದೆ.  ಈ ರೀತಿ ಬೇಕಾಬಿಟ್ಟಿಯಾಗಿ ಎಲ್ಐಸಿ ಯ ಅಪಮೌಲ್ಯಮಾಪನವನ್ನು ನಡೆಸಿರುವುದನ್ನು ಬಲವಾಗಿ ಖಂಡಿಸುತ್ತ  ಷೇರುಗಳ ಭವಿಷ್ಯದ ಕಂತುಗಳ ಈ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಪೊಲಿಟ್ ಬ್ಯೂರೋ ಕರೆ ನೀಡಿದೆ.

ದೇಶದ ಹಲವು ರಾಜ್ಯಗಳ ವಿವಿಧ ಭಾಗಗಳಲ್ಲಿ ಕೋಮು ಹಿಂಸಾಚಾರದ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಪೊಲಿಟ್ ಬ್ಯೂರೋ ಆಳವಾದ ಕಳವಳ ಮತ್ತು ಆತಂಕವನ್ನು ವ್ಯಕ್ತಪಡಿಸಿದೆ. ಈ ಘಟನೆಗಳ ಹಿಂದೆ  ಒಂದು ದುಷ್ಟ ವಿಧಾನವಿದೆ. ದ್ವೇಷ ಭಾಷಣಗಳು ಮತ್ತು ಧರ್ಮಾಂಧತೆಯನ್ನು ಪ್ರತಿಪಾದಿಸುವ ಕ್ರಮಗಳ ವಿರುದ್ಧ ಪ್ರಧಾನಿಯವರ ಮೌನವು ಇಂತಹ ಖಾಸಗಿ ಶಸ್ತ್ರಧಾರೀ  ಗುಂಪುಗಳು ಅಧಿಕೃತ ಕೃಪಾಪೋಷಣೆಯನ್ನು ಅನುಭವಿಸುತ್ತಿವೆ ಎಂಬುದಕ್ಕೆ ಇದು ಜ್ವಲಂತ ಸಾಕ್ಷಿ ಎಂದಿರುವ ಸಿಪಿಐ(ಎಂ) ಶಾಂತಿಯನ್ನು ಕಾಪಾಡಿಕೊಳ್ಳಬೇಕು,  ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸಲು ದ್ವೇಷಭಾಷಣ ಮತ್ತು ಹಿಂಸಾಚಾರವನ್ನು ಹರಡುವವರ ಈ ದುಷ್ಟ ಉದ್ದೇಶಗಳನ್ನು ವಿಫಲಗೊಳಿಸಬೇಕು ಎಂದು  ಎಲ್ಲಾ ಜನವಿಭಾಗಗಳಿಗೆ ಮನವಿ ಮಾಡಿದೆ

ಭಾರತದಲ್ಲಿ ಕೋವಿಡ್ ಸಂಬಂಧಿತ ಸಾವುಗಳ ಸಂಖ್ಯೆ ಅಧಿಕೃತವಾಗಿ ಸರಕಾರ ಪ್ರಟಿಸಿರುವ ಸಂಖ್ಯೆಯ ಸುಮಾರು 10 ಪಟ್ಟು ಇದೆ ಎಂದು ಇತ್ತೀಚೆಗೆ ಬಿಡುಗಡೆಯಾದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‍ಒ) ಅಂದಾಜಿನ ಬಗ್ಗೆ ಪೊಲಿಟ್ ಬ್ಯೂರೋ ತೀವ್ರ ಕಳವಳ ವ್ಯಕ್ತಪಡಿಸಿದೆ.

ಬಿಜೆಪಿ ಆಡಳಿತವಿರುವ ಗುಜರಾತ್‌ನಲ್ಲಿ ಅಧಿಕೃತ ಸಾವಿನ ಸಂಖ್ಯೆಗಿಂತ 10 ಪಟ್ಟು ಪರಿಹಾರ ನೀಡಲಾಗಿದೆ. ಇದು ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಮೋದಿ ಸರ್ಕಾರದ ಕ್ರಿಮಿನಲ್ ಅಪರಾಧಕ್ಕೆ ಮಾತ್ರವಲ್ಲ, ಅದರ ಕುಖ್ಯಾತ ದತ್ತಾಂಶ  ವಂಚನೆಯ ಬಗ್ಗೆಯೂ ಬಂದಿರುವ ದೋಷಾರೋಪಣೆಯಾಗಿದೆ. ಇದು ಬಹು ನಿಂದನೀಯ. ಮೋದಿ ಸರ್ಕಾರ ಸತ್ತವರನ್ನು ಎಣಿಸಲು ನಿರಾಕರಿಸುವ ಮೂಲಕ ಅವರನ್ನು ಅವಮಾನಿಸಬಾರದು ಎಂದು ಅದು ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *