ರೈತರ ಹೋರಾಟವನ್ನು ಹಳ್ಳಿಗೆ ಕೊಂಡೊಯ್ಯುತ್ತಿರುವ ಯುವಕರು

ಕೇಂದ್ರ ಸರಕಾರದ ಕೃಷಿ ಮಸೂದೆ ವಿರುದ್ಧ ಸೈಕಲ್ ಜಾಥಾ

ಬೆಂಗಳುರು ಜ. 04 : ದೇಶಕ್ಕೆ ಅನ್ನ ಕೊಡುವ ರೈತರು ಇಂದು ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದಾರೆ. ದೆಹಲಿಯ ಕೊರೆಯುವ ಚಳಿಯಲ್ಲಿ ಸತತ 40 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅನ್ನದಾತರು ಸಂಕಷ್ಟದಲ್ಲಿರುವಾಗ ಅವರ ಬೆಂಬಲಕ್ಕೆ ನಿಲ್ಲುವುದು ನಮ್ಮ ಕರ್ತವ್ಯ ಎಂದು ಘೋಷಿಸಿರುವ ಯುವಜನರು ರೈತರ ಸಂಕಷ್ಟಗಳು ಅರಿತು ರೈತರಿಂದ ಕಲಿಯಲು ಮತ್ತು ಕೃಷಿ ಕಾಯ್ದೆಗಳ ಅಪಾಯಗಳ ಬಗ್ಗೆ ಜನರಿಗೆ ತಿಳಿಸಲು ಹಳ್ಳಿಗಳಿಗೆ ಹೊರಟಿದ್ದಾರೆ.

ರಾಜ್ಯದಲ್ಲಿ ದೇಶಪ್ರೇಮಿ ಯುವಾಂದೋಲನ ಹೆಸರಿನಲ್ಲಿ ಸೈಕಲ್ ಜಾಥದ ಮೂಲಕ ಒಂದು ವಾರಗಳ ಕಾಲ ಹಲವು ಹಳ್ಳಿಗಳನ್ನು ತಲುಪಲು ವಿದ್ಯಾರ್ಥಿ – ಯುವಜನರು ನಿರ್ಧರಿಸದ್ದಾರೆ. ರಾಮನಗರ, ಚಿತ್ರದುರ್ಗ ಮತ್ತು ಗಂಗಾವತಿಯಲ್ಲಿ  ಸೈಕಲ್ ಜಾಥ ಉದ್ಘಾಟನೆಯಾಗಿದ್ದು ಹತ್ತಾರು ಯುವಕರು ಮೂರು ತಂಡಗಳಲ್ಲಿ ವಿವಿಧ ತಾಲ್ಲೂಕುಗಳಲ್ಲಿನ ಹಳ್ಳಿಗಳಲ್ಲಿ ಪ್ರಚಾರಾಂದೋಲನ ಆರಂಭಿಸಿದ್ದಾರೆ.

ದೇಶಕ್ಕೆ ಈತನಕ ಅನ್ನ ಕೊಟ್ಟ ಅನ್ನದಾತರಿಂದ ಪ್ರತಿಭಟನೆಗೆ ಇಳಿದು, ದೆಹಲಿಯ ಬೀದಿಗಳಲ್ಲಿ ಪ್ರಾಣ ಕೊಡುತ್ತಿದ್ದಾರೆ. ಅವರು ಬೆವರು ರಕ್ತ ಬಸಿದು ಕೊಟ್ಟ ಅನ್ನ ತಿಂದು ಬೆಳೆದ ನಮ್ಮೆಲ್ಲರ ಮೇಲೂ ಅನ್ನದ ಋಣ ಇದೆ. ಇದರ ನಡುವೆಯೂ ಹೊಸ ವರ್ಷ ಬರುತ್ತಿದೆ. ಪ್ರತಿ ಹೊಸವರ್ಷಕ್ಕೆ ನಾವು ಸಾಧಿಸಬೇಕಾದ ನಿರ್ಣಯಗಳನ್ನು ತೆಗೆದುಕೊಳ್ಳುವುದು ರೂಢಿ. ರೈತರ ಹೋರಾಟದ ನಡುವೆ ಬರುತ್ತಿರುವ 2021ರ ಹೊಸವರ್ಷಕ್ಕೆ ರೈತಪರವಾದ ಹೊಸ ವರ್ಷದ ನಿರ್ಣಯಗಳನ್ನು ಕೈಗೊಳ್ಳೋಣ ಬನ್ನಿ ಎಂದು ಯುವಜನರು ಕರೆ ನೀಡಿದ್ದಾರೆ.

ದೇಶಪ್ರೇಮಿ ಯುವಾಂದೋಲನದ “ಹಳ್ಳಿಗಳಿಗೆ ವಿದ್ಯಾರ್ಥಿ-ಯುವಜನರ ಸೈಕಲ್ ಜಾಥಾ” ಗೆ ರಾಮನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮಲ್ಲಯ್ಯನವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಲವಾರು ರೈತ ಮುಖಂಡರು, ದೇಶಪ್ರೇಮಿ ಯುವಾಂದೋಲನದ ಸರೋವರ್ ಬೆಂಕಿಕೆರೆ, ಮನೋಜ್, ಪುಷ್ಪಲತಾ, ರವಿ, ರಾಜಶೇಖರ್ ಅಂಗಡಿ, ಬಸವರಾಜ್, ಮಮತ ಇದ್ದರು.

ಜಾಥಾ ಚಾಲನೆ ಹಾಗೂ ಸಭೆಯ ನಂತರ ರಾಮನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ದೇಶಪ್ರೇಮಿ ಯುವಾಂದೋಲನ ತಂಡ ಕರಪತ್ರಗಳನ್ನು ಹಂಚಿ ಪ್ರಚಾರ ನಡೆಸಿತು. ನಂತರ ಚನ್ನಮಾನಹಳ್ಳಿ ಮತ್ತು ಚಿಕ್ಕೇನಹಳ್ಳಿಯಲ್ಲಿ ಮನೆ ಮನೆಗೂ ತೆರಳಿದ ಯುವಜನರು ಜನರಿಗೆ ರೈತ ಹೋರಾಟ ಮಾಹಿತಿ ನೀಡುತ್ತಿದ್ದಾರೆ.

ಇನ್ನೊಂದೆಡೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಸೈಕಲ್ ಜಾಥ ಉದ್ಘಾಟನೆಗೊಂಡು ಕಂಪ್ಲಿ ಕಡೆ ಹೊರಟಿದೆ. ಜಾಥಾಗೆ ಚಿಂತಕರಾದ ಬಿ.ಪೀರ್‌ಭಾಷಾ, ಹೋರಾಟಗಾರರಾದ ಡಿ.ಎಚ್ ಪೂಜಾರ್ ಚಾಲನೆ ನೀಡಿದರು. ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂತೋಷ್ ಎಚ್. ಎಂ, ರಾಜೇಂದ್ರ, ಗುರುಬಸವ, ಮರಿಸ್ವಾಮಿ, ದುರ್ಗೇಶ್, ಶರಣಬಸವ ಮತ್ತಿತರರು ಜಾಥದಲ್ಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *