ರಾಹುಲ್‌ ಗಾಂಧಿ ನೇತೃತ್ವದ ‘ಜೈ ಭಾರತ್’ ಸಮಾವೇಶ 2ನೇ ಬಾರಿ ಮುಂದೂಡಿಕೆ

ಕೋಲಾರ : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಏಪ್ರಿಲ್‌ 9 ರಂದು  ಕೋಲಾರದಲ್ಲಿ  ನಡೆಯಬೇಕಿದ್ದ ‘ಜೈ ಭಾರತ್’ ಸಮಾವೇಶವು 2ನೇ ಬಾರಿಗೆ ಕಾರಣಾಂತರಗಳಿಂದ ಮುಂದೂಡಲಾಗಿದೆ.

‘ಜೈ ಭಾರತ್’ ಸಮಾವೇಶವನ್ನು ಏ. 10ರಂದು ಬೆಳಿಗ್ಗೆ 10 ಗಂಟೆಗೆ  ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ. ಲಕ್ಷ್ಮಿನಾರಾಯಣ ಅವರು ತಿಳಿಸಿದ್ದಾರೆ.

ಈ ಮೊದಲು ಏ. 9ರಂದು ಆಯೋಜಿಸಲು ನಿರ್ಧರಿಸಲಾಗಿತ್ತು. ಅದಕ್ಕೂ ಮೊದಲು ಏ. 5ಕ್ಕೆ ನಿಗದಿಪಡಿಸಲಾಗಿತ್ತು. ಕೋಲಾರ ಹೊರವಲಯದ ಟಮಕದಲ್ಲಿ 11 ಎಕರೆ ಜಾಗದಲ್ಲಿ ವೇದಿಕೆ ಸಿದ್ಧಪಡಿಸಲಾಗುತ್ತಿದ್ದು, ಎರಡು ದಿನಗಳ ಹಿಂದೆ ಸಿದ್ದರಾಮಯ್ಯ ಹಾಗೂ ರಣದೀಪ್‌ ಸಿಂಗ್‌ ಸುರ್ಜೇವಾಲಾ ಭೇಟಿ ನೀಡಿ ವೀಕ್ಷಿಸಿದ್ದರು. 2019ರ ಲೋಕಸಭಾ ಚುನಾವಣೆ ವೇಳೆ ಕೋಲಾರದಲ್ಲಿ ನಡೆದ ಸಭೆಯಲ್ಲಿ ನೀಡಿದ್ದ ಹೇಳಿಕೆಯಿಂದ ರಾಹುಲ್‌ ಈಗ ಎರಡು ವರ್ಷ ಶಿಕ್ಷೆಗೆ ಗುರಿಯಾಗಿದ್ದು, ಸಂಸತ್‌ ಸದಸ್ಯ ಸ್ಥಾನದಿಂದ ಅನರ್ಹರಾಗಿದ್ದಾರೆ. ಹೀಗಾಗಿ, ಇಲ್ಲಿಂದಲೇ ಸಂವಿಧಾನ ರಕ್ಷಣೆ ಹೋರಾಟ ಆರಂಭಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ.

ಇದನ್ನೂ ಓದಿ : ಕಾಂಗ್ರೆಸ್‌ನಿಂದ ಯುವಕ್ರಾಂತಿ ಸಮಾವೇಶ; ನಾಳೆ ಬೆಳಗಾವಿಗೆ ರಾಹುಲ್ ಗಾಂಧಿ ಭೇಟಿ

‘ಸತ್ಯಮೇವ ಜಯತೇ’ ಹೆಸರಿನಲ್ಲಿ ಆಯೋಜಿಸ ಬೇಕಿದ್ದ ಸಮಾವೇಶವನ್ನು ಸಂಘಟಕರು ಈಗಾಗಲೇ ‌’ಜೈ ಭಾರತ್‌’ ಪ್ರತಿಭಟನಾ ಸಮಾವೇಶ ಎಂದು ಮರುನಾಮಕರಣ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *