ಉತ್ತರ ಕನ್ನಡ: ಜಿಲ್ಲೆಗೆ ಒಂದು ಸರಿಯಾದ ಹೆರಿಗೆ ಆಸ್ಪತ್ರೆ ಮತ್ತು ಅದರ ಸಾರ್ವಜನಿಕ ಬಳಕೆಗೆ ಲಭ್ಯವಾಗುವಂತೆ ಹಿರಿಯ ಪತ್ರಕರ್ತೆಯ ಪ್ರಶ್ನೆಗೆ ಉತ್ತರಿಸುವಾಗ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ರವರು ಅತ್ಯಂತ ಅಸೂಕ್ಷ್ಮ, ಅಸಹಜ ಹಾಗೂ ಅನಾಗರಿಕವಾದ ರೀತಿಯಲ್ಲಿ ಉತ್ತರಿಸಿರುವುದು ಅತ್ಯಂತ ಖಂಡನೀಯ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್ ಹೇಳಿದ್ದಾರೆ.
ಇದು ಅತ್ಯಂತ ಕೀಳು ಮಟ್ಟದ ಯೋಚನೆಯನ್ನು ಬಿಂಬಿಸಿದೆ. ಇಡೀ ಮಹಿಳಾ ಸಮೂಹವನ್ನು ಅಪಮಾನಿಸಿರುವ ಪುರುಷ ಅಹಂಕಾರದಿಂದ ಕೂಡಿದೆ. ಸಂಪೂರ್ಣ ಅನುಚಿತವಾದ, ಉದ್ಧಟತನದ ಇಂತಹ ಮಾತುಗಳು ಹಿರಿಯ ರಾಜಕಾರಣಿಗೆ ಶೋಭೆ ತರುವಂತಹದ್ದಲ್ಲ. ಇದಕ್ಕಾಗಿ ಅವರು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ ಎಂದರು. ದೇಶಪಾಂಡೆ
“ನಿನ್ನ ಹೆರಿಗೆ ಆಗುವಾಗ ಆಸ್ಪತ್ರೆ ಉದ್ಘಾಟಿಸಲಾಗುವುದು” ಎಂಬ ಆರ್.ವಿ. ದೇಶಪಾಂಡೆ ರವರ ಈ ಅನುಚಿತ ಹೇಳಿಕೆಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿ ಕೂಡಲೇ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಳ್ಳಬೇಕು.
ಇದನ್ನೂ ಓದಿ: ಪ್ರಜ್ಞೆ ಸತ್ತ ಸಮಾಜದಲ್ಲಿ ದೌರ್ಜನ್ಯ ಅಪರಾಧ ಧರ್ಮ – ಭಾಗ 2
ಲಿಂಗ ತಾರತಮ್ಯದಿಂದ ಕೂಡಿದ ಹಾಗೂ ಮಹಿಳೆಯರ ನಾಗರಿಕ ಹಕ್ಕುಗಳನ್ನು ದಮನಿಸುವ, ಸ್ವಾಭಿಮಾನ ಹಾಗೂ ಘನತೆಯ ಬದುಕಿಗೆ ವಿರುದ್ದವಾದ ಇಂತಹ ಮಾತುಗಳನ್ನು ಇಡೀ ಸಮಾಜದಿಂದಲೇ ನಿರ್ಮೂಲನೆ ಮಾಡಬೇಕಾದ ಮೂಲಭೂತ ಕರ್ತವ್ಯವನ್ನು ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ವಿಧಿಸಿದೆ.
ಅಂತಹವುದರಲ್ಲಿ ಹಿರಿಯ ರಾಜಕಾರಣಿ, ಮಾಜಿ ಸಚಿವರೂ ಆಗಿರುವ ಜವಾಬ್ದಾರಿ ಜನಪ್ರತಿನಿಧಿ ಯ ಅವಹೇಳನಕಾರಿ ಮಾತುಗಳನ್ನು ಅತ್ಯಂತ ಗಂಭೀರವಾಗಿ ಪರಿಣಗಣಿಸಬೇಕು ಎಂದು ಹೇಳಿದರು.
ಹೆಚ್ಚೆಚ್ಚು ಮಹಿಳೆಯರು ಮಾಧ್ಯಮ ರಂಗ ಸೇರಿದಂತೆ ಸಮಾಜದ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿರುವ ಹೊತ್ತಿನಲ್ಲಿ ಅವರ ಆಕಾಂಕ್ಷೆಗಳನ್ನು ತುಚ್ಚೀಕರಿಸುವ ಇಂತಹ ಮಾತುಗಳು ಸಮಾಜದ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಬೀರುತ್ತದೆ ಎಂದರು.
ಅವರ ತವರು ಜಿಲ್ಲೆ ಉತ್ತರಕನ್ನಡದಲ್ಲಿ ಇಂದಿಗೂ ಒಂದು ಸುಸಜ್ಜಿತವಾದ ಆಸ್ಪತ್ರೆ ಇಲ್ಲ, ಪ್ರತಿವರ್ಷ ಕ್ಯಾಸನೂರು ಕಾಡಿನ ಖಾಯಿಲೆ/ ಮಂಗನ ಖಾಯಿಲೆಗೆ ಜನ ಸಾಯುತ್ತಿದ್ದಾರೆ. ಅದರ ಪರಿಹಾರಕ್ಕೆ ಸೂಕ್ತ ಔಷಧೋಪಚಾರಗಳೇ ಇದುವರೆಗೂ ಲಭ್ಯವಿಲ್ಲ. ಇಡೀ ಜಿಲ್ಲೆಯಲ್ಲಿ ಇತರ ಖಾಯಿಲೆಗಳಿಗೂ ಸುಸಜ್ಜಿತ ಆಸ್ಪತ್ರೆ ಗಳಿಲ್ಲ ಎಂಬುದನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮಕ್ಕೆ ಮುಂದಾಗುವ ಬದಲು ಇಂತಹ ಸ್ತ್ರೀ ವಿರೋಧಿ, ಮಾತಗಳನ್ನಾಡಿರುವುದು ಒಪ್ಪಲಾಗದು. ಆದ್ದರಿಂದ ಸೂಕ್ತ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರವನ್ನು ಮಾರ್ಕ್ಸ್ವಾದೀ ಕಮ್ಯುನಿಸ್ಟ್ ಪಕ್ಷವು ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ.
ಇದನ್ನೂ ನೋಡಿ: ವಚನಾನುಭವ 33 | ಉದಕ ಮಜ್ಜನವಲ್ಲ ಪತ್ರೆ ಪೂಜೆಯಲ್ಲ Janashakthi Media
