ನವೀಕೃತ ಶೀಘ್ರ ಸಂಪರ್ಕ ಯೋಜನೆಯಡಿ ರೈತರಿಗೆ ಪಂಪ್‍ಸೆಟ್‍ ಸಕ್ರಮ: ಕೆ. ಜೆ. ಜಾರ್ಜ್

ಬೆಂಗಳೂರು: ರಾಜ್ಯ ಸರಕಾರವು ಅಕ್ರಮ ಕೃಷಿ ಪಂಪ್‍ಸೆಟ್‍ಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೆ ತಂದಿದ್ದು, ರೈತರು ಸ್ವಯಂ ಮೂಲಸೌಕರ್ಯ ಕಲ್ಪಿಸಿಕೊಂಡರೆ ಎಸ್ಕಾಂ ವತಿಯಿಂದ ಟ್ರಾನ್ಸ್‌ ಫಾರ್ಮರ್ ಒದಗಿಸಿ ಪಂಪ್‍ಸೆಟ್‍ಗಳನ್ನು ಸಕ್ರಮಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಮೇ 27 ಮಂಗಳವಾರದಂದು ಹೇಳಿದ್ದಾರೆ.

ನಗರದ ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ‘2023ರ ಸೆ.22ರ ಬಳಿಕ ಸ್ಥಾಪಿಸಿರುವ ಅಕ್ರಮ ಕೃಷಿ ಪಂಪ್‍ಸೆಟ್‍ಗಳಿಗೆ ರೈತರು ಸ್ವಂತ ವೆಚ್ಚದಲ್ಲಿ ಲೈನ್ ಸೇರಿದಂತೆ ಮೂಲಸೌಕರ್ಯ ಕಲ್ಪಿಸಿಕೊಂಡರೆ ಎರಡು ಅಥವಾ ಅದಕ್ಕಿಂತ ಹೆಚ್ಚು ಪಂಪ್‍ಸೆಟ್‍ಗಳಿಗೆ ಎಸ್ಕಾಂಗಳ ವತಿಯಿಂದಲೇ ಟ್ರಾನ್ಸ್‌ ಫಾರ್ಮರ್ ಒದಗಿಸಿ ಪಂಪ್‍ಸೆಟ್‍ಗಳನ್ನು ಸಕ್ರಮಗೊಳಿಸಲಾಗುವುದು ಎಂದರು.

ರಾಜ್ಯದಲ್ಲಿ 2004ರಲ್ಲಿ ಕೃಷಿ ಪಂಪ್‍ಸೆಟ್‍ಗಳ ಅಕ್ರಮ-ಸಕ್ರಮ ಯೋಜನೆ ಜಾರಿಗೆ ಬಂದಿತ್ತಾದರೂ 2023ರಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ 4.5ಲಕ್ಷ ಅಕ್ರಮ ಕೃಷಿ ಪಂಪ್‍ಸೆಟ್‍ಗಳು ಇದ್ದವು. ಈ ಹಿನ್ನೆಲೆಯಲ್ಲಿ ಸರಕಾರ 2023ರ ಸೆ.22ಕ್ಕೆ ಮುನ್ನ ಸಂಪರ್ಕ ಪಡೆದಿದ್ದ ಅಕ್ರಮ ಪಂಪ್‍ಸೆಟ್‍ಗಳನ್ನು ಸಕ್ರಮಗೊಳಿಸಲು ನಿರ್ಧರಿಸಿ ಈವರೆಗೆ 2.5ಲಕ್ಷ ಪಂಪ್‍ಸೆಟ್‍ಗಳನ್ನು ಸಕ್ರಮಗೊಳಿಸಿದೆ. ಉಳಿದವುಗಳನ್ನು ಇನ್ನು ವರ್ಷದೊಳಗೆ ಸಕ್ರಮಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಕರಾವಳಿಯ ಸರಣಿ ಹತ್ಯೆಗಳು | ಕಾಡ್ಗಿಚ್ಚಿನಂತೆ ಹಬ್ಬದಂತೆ ಎಚ್ಚೆತ್ತುಕೊಳ್ಳಬೇಕು

ಆದರೆ, 2023ರ ಸೆ.22ರ ಬಳಿಕ ಸ್ಥಾಪಿಸಲಾದ ಅಕ್ರಮ ಪಂಪ್‍ಸೆಟ್‍ಗಳನ್ನು ಸಕ್ರಮಗೊಳಿಸಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಈ ಹಿನ್ನೆಲೆಯಲ್ಲಿ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಅಕ್ರಮ ಪಂಪ್‍ಸೆಟ್ ಹೊಂದಿರುವ ರೈತರು ಎಸ್ಕಾಂಗಳಿಗೆ ನಿಗದಿತ ಠೇವಣಿ ಪಾವತಿಸಿ ಅವರ ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಅದಾದ ಬಳಿಕ 2 ಅಥವಾ ಅದಕ್ಕಿಂತ ಹೆಚ್ಚಿನ ಪಂಪ್‍ಸೆಟ್‍ಗಳಿಗೆ ಅವುಗಳ ಸಾಮರ್ಥ್ಯ ಆಧರಿಸಿ ಎಸ್ಕಾಂಗಳ ವತಿಯಿಂದ ಟ್ರಾನ್ಸ್‌ ಫಾರ್ಮರ್ ಒದಗಿಸಿ ಸಂಪರ್ಕ ಸಕ್ರಮಗೊಳಿಸಲಾಗುವುದು ಎಂದು ಹೇಳಿದರು.

ನವೀಕೃತ ಶೀಘ್ರ ಸಂಪರ್ಕ ಯೋಜನೆಯು ವಿದ್ಯುತ್ ಜಾಲದಿಂದ 500 ಮೀಟರ್ ಒಳಗಿರುವ ಎಲ್ಲ ಕೃಷಿ ಪಂಪ್‍ಸೆಟ್‍ಗಳಿಗೆ ಅನ್ವಯವಾಗುತ್ತದೆ. ವಿದ್ಯುತ್ ಜಾಲದಿಂದ 500 ಮೀ.ಗಿಂತ ದೂರ ಇರುವ ಪಂಪ್‍ಸೆಟ್‍ಗಳಿಗೆ ಸೋಲಾರ್ ಪಂಪ್‍ಸೆಟ್‍ಗಳನ್ನು ಕಡ್ಡಾಯವಾಗಿ ಅಳವಡಿಸಬೇಕಾಗುತ್ತದೆ. ಸೋಲಾರ್ ಪಂಪ್‍ಸೆಟ್‍ಗಳಿಗೆ ಕುಸುಮ್- ಬಿ ಯೋಜನೆಯಡಿ ಕೇಂದ್ರದಿಂದ ಶೇ.30, ರಾಜ್ಯ ಸರಕಾರದಿಂದ ಶೇ. 50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಶೇ.20ರಷ್ಟು ಮೊತ್ತವನ್ನು ಮಾತ್ರ ರೈತರು ಪಾವತಿಸಬೇಕು ಎಂದು ತಿಳಿಸಿದರು.

ಸಂಪುಟದಲ್ಲಿ ನಿರ್ಣಯ

ಸ್ವಾಧೀನಾನುಭವ ಪತ್ರ (ಒಸಿ) ಹೊಂದಿಲ್ಲದ ಯಾವುದೇ ವಾಣಿಜ್ಯ, ವಸತಿ ಕಟ್ಟಡಗಳಿಗೂ ವಿದ್ಯುತ್ ಸಂಪರ್ಕ ನೀಡಬಾರದು ಎಂಬ ಇಲಾಖೆ ನಿಯಮದಿಂದ ಸಮಸ್ಯೆಗಳಾಗುತ್ತಿರುವ ಬಗ್ಗೆ ಸಭೆಯಲ್ಲಿ ಶಾಸಕರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವ ಕೆ.ಜೆ.ಜಾರ್ಜ್, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಲಾಖೆ ಈ ನೀತಿ ಜಾರಿಗೆ ತಂದಿದೆ. ಇದರಿಂದ ಸಮಸ್ಯೆಗಳಾಗುತ್ತಿರುವುದು ಸರಕಾರದ ಗಮನದಲ್ಲಿದ್ದು, ಸಂಪುಟ ಸಭೆಯಲ್ಲೂ ಚರ್ಚಿಸಿ ಇದಕ್ಕೆ ಪರಿಹಾರ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಲೈನ್‍ಮೆನ್ ನೇಮಕ

ರಾಜ್ಯದಲ್ಲಿ 3ಸಾವಿರ ಲೈನ್‍ಮೆನ್‍ಗಳ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ದೈಹಿಕ ತರಬೇತಿ ನಡೆಯುತ್ತಿದೆ. ಜೂನ್ ಅಂತ್ಯದೊಳಗೆ ಎಲ್ಲರಿಗೂ ಸ್ಥಳ ನಿಯುಕ್ತಿ ಮಾಡಿ ನೇಮಕಾತಿ ಆದೇಶ ಹೊರಡಿಸಲಾಗುವುದು ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಶಾಸಕರಾದ ಎಚ್.ಎ.ಇಕ್ಬಾಲ್ ಹುಸೇನ್, ಎಚ್.ಸಿ.ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್, ಪರಿಷತ್ ಸದಸ್ಯ ಎಸ್.ರವಿ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ಸಭೆಯಲ್ಲಿದ್ದರು.

ಇದನ್ನೂ ನೋಡಿ: ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *