ಕುಷ್ಟಗಿ: ದಲಿತ, ರೈತ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಸಾಗುವಳಿ ರೈತರು, ತಾಲ್ಲೂಕಿನ ನಿಲೋಗಲ್ ಮತ್ತು ಅಚನೂರು ಸೀಮಾಂತರದಲ್ಲಿ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ದಲಿತ ಇತರೆ ಬಡ ಕುಟುಂಬಗಳನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಮತ್ತು ಚನ್ನಮ್ಮ ವಸತಿ ಶಾಲೆ ಹಾಗೂ ಉಣ್ಣೆ ನಿಗಮದ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಕಚೇರಿ ಬಳಿ ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ.
ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೂರು ತಿಂಗಳ ಹಿಂದೆ ಇದೇ ಸಂಘಟನೆಗಳ ಪ್ರತಿನಿಧಿಗಳು ಧರಣಿ ನಡೆಸಿದ್ದರು. ಅದರೆ ಬೇಡಿಕೆಗೆ ಸ್ಪಂದಿಸದೆ ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಗುರುವಾರದಿಂದ ಪುನಃ ಧರಣಿ ಆರಂಭಿಸಿದ್ದಾರೆ. ಆದರೆ ಈ ಧರಣಿ ನಡೆಸುತ್ತಿರುವ ಕುರಿತು ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ‘ಕಳೆದ ನಾಲ್ಕು ದಶಕಗಳಿಂದಲೂ ದೇವದಾಸಿಯರು, ದಲಿತ, ಉಪ್ಪಾರ ಸಮುದಾಯದ ಅನೇಕ ಕುಟುಂಬಗಳು ಸರ್ಕಾರಿ ಗಾಯರಾಣಾ ಭೂಮಿಯಲ್ಲಿ ಸಾಗುವಳಿ ಮಾಡುತ್ತ ಬಂದಿದ್ದಾರೆ. ಅದೇ ರೀತಿ ನಿಲೋಗಲ್, ಅಚನೂರು ಸೀಮಾಂತರದ ಸರ್ಕಾರದ ಜಮೀನಿನಲ್ಲಿಯೇ ಮೇಲ್ವರ್ಗದವರು, ಶ್ರೀಮಂತರು, ನಿವೃತ್ತ ಕೆಬಿಜೆಎನ್ಎಲ್ ಎಂಜಿನಿಯರ್ ಸೇರಿದಂತೆ ಶೇ 80 ರಷ್ಟು ಇತರೆ ಪ್ರಭಾವಿಗಳು, ರಾಜಕೀಯ ವ್ಯಕ್ತಿಗಳೇ ಸರ್ಕಾರಿ ಜಮೀನಿನಲ್ಲಿ ಅಕ್ರಮ ಸಾಗುವಳಿ ಮಾಡುತ್ತಿದ್ದಾರೆ. ಆದರೆ ಪ್ರಭಾವಿಗಳನ್ನು ಹೊರತುಪಡಿಸಿ ಬಡ ಮತ್ತು ದಮನಿತ ಸಮುದಾಯಗಳನ್ನು ಮಾತ್ರ ಅಧಿಕಾರಿಗಳು ಒಕ್ಕಲೆಬ್ಬಿಸುವ ಕುತಂತ್ರ ನಡೆಸುವ ಮೂಲಕ ಅನ್ಯಾಯ ಎಸಗುತ್ತಿದ್ದಾರೆ’ ಎಂದು ಆರೋಪಿಸಿದರು.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು ಖಂಡನೀಯ: ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
‘ಸಾಗುವಳಿ ಪ್ರದೇಶದಲ್ಲಿಯೇ ಕಿತ್ತೂರರಾಣಿ ಚನ್ನಮ್ಮ ವಸತಿ ಶಾಲೆ ಕಟ್ಟಡ ಹಾಗೂ ಉಣ್ಣೆ ನಿಗಮದ ನಾರಿ ತಳಿ ಕುರಿ ಸಂವರ್ಧನೆ ಕೇಂದ್ರದ ಕಟ್ಟಡ ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ. ಆದರೆ ದಲಿತರು ಸಾಗುವಳಿ ಮಾಡುತ್ತಿರುವ ಜಮೀನು ಹೊರತುಪಡಿಸಿ ಉಳಿದ ಕಡೆ ಸೂಕ್ತ ಸರ್ಕಾರಿ ಜಮೀನು ಇದ್ದರೂ ಅದನ್ನು ಬಿಟ್ಟು ಮೇಲ್ವರ್ಗದವರ ಮತ್ತು ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ದಲಿತ ಕುಟುಂಬಗಳು ಸಾಗುವಳಿ ಮಾಡುತ್ತಿರುವ ಪ್ರದೇಶದಲ್ಲಿಯೇ ಈ ಕಟ್ಟಡಗಳ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಿರುವುದು ಅನ್ಯಾಯದ ಪರಮಾವಧಿಯಾಗಿದೆ’ ಎಂದರು.
ಹಿಂದೆ ಧರಣಿ ನಡೆಸಿದಾಗ ಮಾತುಕತೆಗೆ ಕರೆದ ಜಿಲ್ಲಾಧಿಕಾರಿಗಳು ನಂತರ ದಲಿತ ಸಮುದಾಯಗಳ ಬೇಡಿಕೆಗೆ ಸ್ಪಂದಿಸದೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ. ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದ ಶಾಸಕ ದೊಡ್ಡನಗೌಡ ಪಾಟೀಲ ಬಡವರ ಪರ ನಿಲ್ಲದೆ ಪ್ರಭಾವಿಗಳ ಮಾತಿಗೆ ಮಣೆಹಾಕುತ್ತಿರುವುದು ಸರಿಯಲ್ಲ. ಕ್ರೀಡಾಂಗಣಕ್ಕೆ ಮೀಸಲಿಟ್ಟಿದ್ದ ಜಮೀನು, ಚನ್ನಮ್ಮ ವಸತಿ ಶಾಲೆ ಹಾಗೂ ಉಣ್ಣೆ ನಿಗಮದ ಕಟ್ಟಡ ನಿರ್ಮಾಣಕ್ಕೆ ನೀಡಿರುವ ಆದೇಶ ಹಿಂಪಡೆಯಬೇಕು ಅಲ್ಲಿಯವರೆಗೂ ಧರಣಿ ಮುಂದುವರೆಸುವುದಾಗಿ ಸ್ಪಷ್ಟಪಡಿಸಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ನೀಲಪ್ಪ ಕಡಿಯವರ, ಹನುಮಂತ ಪೂಜಾರಿ, ಛತ್ರಪ್ಪ ಮೇಗೂರು, ದುರುಗೇಶ ಮಾದರ, ಯಮನೂರಪ್ಪ ಮನ್ನೇರಾಳ, ಗುರುರಾಜ ಪೂಜಾರ, ನಿರುಪಾದೆಪ್ಪ ಮಾದರ, ದುರುಗಪ್ಪ ಟೆಂಗುಟಿ. ಬಸವರಾಜ ಬೇವಿನಗಿಡದ, ಯಮನೂರಪ್ಪ ಮೇಲಿನಮನಿ, ಹವಳವ್ವ, ಯಲ್ಲವ್ವ, ರೇಣವ್ವ, ನಾಗಮ್ಮ, ನಿಂಗಮ್ಮ, ಕನಕವ್ವ ಇತರರು ಇದ್ದರು.
ಇದನ್ನೂ ನೋಡಿ: ಧರ್ಮಸ್ಥಳ ನಿಗೂಢಗಳು |ಭೂ ಮಾಫಿಯಾ ವಿರುದ್ಧ ಹೋರಾಟ ಬಲಗೊಳ್ಳಲಿದೆ Janashakthi Media
