ಮೈಸೂರು| ಕಾರಗೃಹದ ಕೈದಿಗಳು ಹಣ ಕೊಟ್ಟರೆ ಮದ್ಯ, ಮೊಬೈಲ್ ಫೋನ್‌ ಲಭ್ಯ!

ಮೈಸೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವುದು ಬೆಳಕಿಗೆ ಬಂದಿದ್ದೂ, ಇದೀಗ ನಗರದ ಕೇಂದ್ರ ಕಾರಾಗೃಹದಲ್ಲೂ ಇದೇ ರೀತಿಯ ಅಕ್ರಮಗಳು ನಡೆಯುತ್ತಿದೆ ಎಂಬ ವರದಿ ತಿಳಿದು ಬಂದಿದೆ.

ಮೈಸೂರು ಕಾರಗೃಹದಲ್ಲಿ ಕೈದಿಗಳಿಗೆ ಮದ್ಯ, ಮಾಂಸಾಹಾರ, ಸಿಗರೇಟ್, ಬೀಡಿ ಮತ್ತು ಮೊಬೈಲ್ ಫೋನ್‌ ಈವೆಲ್ಲಾ ಹಣ ಕೊಟ್ಟರೆ ಸುಲಭವಾಗಿ ಸಿಗುತ್ತಿರುವುದಾಗಿ ತಿಳಿದುಬಂದಿದೆ.

ನಗರದ ಕೇಂದ್ರ ಕಾರಗೃಹದಲ್ಲಿ ಕೈದಿಗಳಿಗೆ ನೀಡುತ್ತಿರುವ ರಾಜಾತಿಥ್ಯ ವ್ಯವಸ್ಥೆಯಲ್ಲಿ ಕ್ಯಾಂಟೀನ್ ಆಪರೇಟರ್‌ ಗಳು ಮತ್ತು ಕೆಲ ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (KSISF) ಸಿಬ್ಬಂದಿ ಶಾಮೀಲಾಗಿದ್ದಾರೆ. ಈ ಅಕ್ರಮಗಳು ಜೈಲು ಅಧೀಕ್ಷಕರ ಮೂಗಿನ ನೇರಕ್ಕೆ ನಡೆಯುತ್ತಿವೆ.

ಇದನ್ನೂ ಓದಿ: ಕೆಂಪು ಕೋಟೆ ಬಳಿ ಕಾರು ಸ್ಪೋಟ: ಶಂಕಿತ ಚಾಲಕನ ವಿಡಿಯೊ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ

ಈ ಕುರಿತು ಮಾಧ್ಯವೊಂದಕ್ಕೆ ಮಾಹಿತಿ ನೀಡಿರುವ ಜೈಲ್ ವಿಸಿಟಿಂಗ್ ಬೋರ್ಡ್ ಸದಸ್ಯ ಪವನ ಸಿದ್ದರಾಮು ಮಾತನಾಡಿ “ಕಾರಾಗೃಹದ ಒಳಗೆ, ಪ್ರತಿ ವಸ್ತುವಿಗೂ ನಿಗದಿತ ಬೆಲೆ ನಿಗದಿಪಡಿಸಲಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದರೂ, ಇಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಒಂದು ವಸ್ತುವಿನ ಕನಿಷ್ಠ ಬೆಲೆ 150 ರೂ. ಇದೆ. ಇಷ್ಟು ಹಣ ಕೊಟ್ಟು ಖರೀದಿಸುವ ಸಾಮರ್ಥ್ಯ ಇರುವ ಕೈದಿಗಳಿಗಾಗಿ, ಪ್ರತಿ ವಾರ ಮದ್ಯ ಮತ್ತು ಮಾಂಸವನ್ನು ಆರ್ಡರ್ ಮಾಡಲಾಗುತ್ತಿದೆ ಎಂದಿದ್ದಾರೆ.

ಮೋಜಿನ ಸ್ಥಳಾವಾಗುತ್ತಿವೆ ಮನಃಪರಿವರ್ತನೆ ತಾಣ

ಇದರ ಜೊತೆಗೆ ಕಾರಾಗೃಹದಲ್ಲಿ ಕೈದಿಗಳಿಗೆ ಬೇಕಾದ ಸಕಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಮದ್ಯ, ಮಾಂಸಾಹಾರ, ಸಿಗರೇಟ್, ಬೀಡಿ ಮತ್ತು ಮೊಬೈಲ್ ಫೋನ್ ಗಳು ನಿರ್ದಿಷ್ಟ ಬೆಲೆಗೆ ಲಭ್ಯವಾಗುತ್ತಿವೆ. ಇದರಿಂದಾಗಿ, ಕೈದಿಗಳ ಮನಃಪರಿವರ್ತನೆ ಕೇಂದ್ರಗಳಾಗಬೇಕಿದ್ದ ಜೈಲುಗಳು, ಮೋಜು ಮಾಡುವ ಸ್ಥಳಗಳಾಗಿ ಮಾರ್ಪಟ್ಟಿವೆ.

ಇನ್ನು, ಈ ಅಕ್ರಮದಲ್ಲಿ ಜೈಲಿನ ಸಿಬ್ಬಂದಿಗಳೇ ಭಾಗಿಯಾಗಿದ್ದು, ಮೈಸೂರು ಪೊಲೀಸರು ಅನಿರೀಕ್ಷಿತ ದಾಳಿ ನಡೆಸಿದರೂ, ಅಲ್ಲಿ ಯಾವುದೇ ಅಕ್ರಮಗಳು ಪತ್ತೆಯಾಗುತ್ತಿಲ್ಲ ಎಂಬುದು ವಿಪರ್ಯಾಸ. ಸರಿಯಾಗಿ ದಾಳಿ ನಡೆಸಿದರೆ, ಪ್ರತಿ ಬಾರಿಯೂ ನೂರಾರು ಸಿಮ್ ಕಾರ್ಡ್ಗಳು ಮತ್ತು ಮೊಬೈಲ್ ಫೋನ್‌ ಗಳನ್ನು ವಶಪಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ಗುಂಡು,ತುಂಡು & ಮೊಬೈಲ್‌ ವಿಡಿಯೋ ವೈರಲ್

ಇತ್ತಿಚೇಗಷ್ಟೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರರು ಮತ್ತು ಅತ್ಯಾಚಾರಿಗಳು ಮೊಬೈಲ್ ಬಳಸುತ್ತಿರುವ ವಿಡಿಯೋಗಳು ಹಾಗೂ ಗುಂಡು ತುಂಡು ಸೇರಿದಂತೆ ಕಾರಾಗೃಹವನ್ನು ಫುಲ್‌ ಟೈಮ್‌ ರೆಸಾರ್ಟ್‌ ನಂತೆ ಮಾಡಿಕೊಂಡು ಪಾರ್ಟಿ ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೊರಬಂದಿದ್ದವು.

ಈ ಘಟನೆಗಳ ಹಿನ್ನೆಲೆಯಲ್ಲಿ ಸರ್ಕಾರ ಮುಖ್ಯ ಅಧೀಕ್ಷಕ ಸುರೇಶ್ ಅವರನ್ನು ವರ್ಗಾವಣೆ ಮಾಡಿ, ಅಧೀಕ್ಷಕ ಮ್ಯಾಗೇರಿ ಮತ್ತು ಉಪಾಧೀಕ್ಷಕ ಅಶೋಕ್ ಭಜಂತ್ರಿ ಅವರನ್ನು ಅಮಾನತುಗೊಳಿಸಲಾಗಿತ್ತು. ಇನ್ನು, ಈ ಮಧ್ಯೆ ಕೇವಲ ಬೆಂಗಳೂರು ಮಾತ್ರವಲ್ಲ ಮೈಸೂರಿನಲ್ಲೂ ಇದೇ ರೀತಿಯ ರಾಜಾತೀಥ್ಯ ನೀಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ತಲೆ ಎತ್ತುವಂತೆ ಮಾಡಿವೆ.

ಇದನ್ನೂ ನೋಡಿ: ಜ್ಞಾನ ಸಾಹಿತ್ಯಕ್ಕೆ ನಿರಂಜನರ ಕೊಡುಗೆ – ಎಂ.ಜಿ.ಹೆಗಡೆ Janashakthi Media

Donate Janashakthi Media