ಪ್ರಜ್ವಲ್ ರೇವಣ್ಣನೂ ಜೋಕುಮಾರ ಸ್ವಾಮಿಯೂ

– ಡಾ.ಕೆ.ಷರೀಫಾ

ಅತಿಯಾಗಿ ಕಾಮಪೀಡಿತನಾಗಿರುವ ವ್ಯಕ್ತಿಗೆ ನಮ್ಮೂರ ಸಾತಜ್ಜಿ ಹೇಳುತ್ತಿದ್ದಳು “ಎಂಥಾ ಹಲ್ಕಾ ಅದಾನೆವ್ವಾ. ಜೋಕುಮಾರ ಬೆದ್ಯಾಗ ಹುಟ್ಯಾನೇನೋ” ಎನ್ನುತ್ತಿದ್ದಳು. ಈಗ ಅಂತಹ ಜೋಕುಮಾರನಿಗಿಂತಲೂ ಪ್ರಜ್ವಲ ಕಡೆಯಾಗಿದ್ದಾನೆ. ಪ್ರಜ್ವಲನ ಲೈಂಗಿಕ ಬಯಕೆಯ ಬೆಂಕಿಗೆ ಎಷ್ಟೊಂದು ಹೆಣ್ಣುಮಕ್ಕಳ ಬಲಿಯಾಗಿದೆ ಲೆಕ್ಕವಿದೆಯೇ?. ಇದು ಮನುಕುಲವೇ ನಾಚಿ ತಲೆತಗ್ಗಿಸುವಂತಹ ವಿಚಾರ. ಈ ಹಾಸನದ ಮನುಷ್ಯ ಎಂಬ ಪ್ರಾಣಿ 200 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಅವುಗಳ 2900 ಕ್ಕೂ ಹೆಚ್ಚು ವಿಡಿಯೋ ಮಾಡಿ ಇತಿಹಾಸ ಸೃಷ್ಟಿಸಿದ್ದಾನೆ. ಹಾಸನದ ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಪ್ರಕರಣ ದಿನಕ್ಕೊಂದು ಬಣ್ಣ ಬದಲಿಸುತ್ತಿದೆ. ತಂದೆ ಮಗನ ಈ ವಿಕ್ರತ ಲೈಂಗಿಕ ಪ್ರಕರಣದಿಂದ ದೇಶ ವಿದೇಶಗಳಲ್ಲೂ ಸುದ್ದಿಯಾಗಿದೆ. ನಾಡಿನ ನಾಗರೀಕ ಸಮಾಜವೇ ತಲೆ ತಗ್ಗಿಸುವಂತಹ ಕೃತ್ಯ ಇದಾಗಿದೆ. ಬೇರೆ ಬೇರೆ ಕಾರಣಗಳಿಗಾಗಿ ಸಂಸದನ ಬಳಿ ಹೋಗುವ ಜನರನ್ನು ಪ್ರಜ್ವಲ್ ರೇವಣ್ಣ ಹೇಗೆ ಬಳಸಿಕೊಂಡಿದ್ದಾನೆ? ಅವರನ್ನು ನಡೆಸಿಕೊಂಡ ಕ್ರೂರ ನಡೆಯ ಬಗ್ಗೆ, ಮಹಿಳೆಯರ ಘನತೆಯ ಕುರಿತು ಬೇರೆ ಬೇರೆ ರಾಜಕಾರಣಿಗಳು ಅವರವರ ಕ್ಷೇತ್ರದಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದಾರೆ? – ಈ ಹಲವು ಗಂಭೀರ ಪ್ರಶ್ನೆಗಳು ಎದ್ದಿವೆ. 200ಕ್ಕೂ ಹೆಚ್ಚು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಎಸಗಿದ್ದಾನೆ ಎನ್ನಲಾದ ಲೈಂಗಿಕ ದೌರ್ಜನ್ಯದ ಕುರಿತು 22-4-2024 ರಂದೇ ವಿಡಿಯೋಗಳು ವೈರಲ್ ಆಗಿ ಪ್ರಕರಣ ಹೊರ ಬಂದಿದ್ದರೂ ಸಹ 26-4-2024ರವರೆಗೂ ಅವನನ್ನು ಬಂಧಿಸದೇ ವಿಚಾರಿಸದೇ ಇರುವ ಸರ್ಕಾರವಿದೆ. ಮತ್ತೊಂದು ಕಡೆ ಸಂತ್ರಸ್ತರು ದೂರು ನೀಡದಂತೆ ಅವರನ್ನು ಅಪಹರಿಸುವುದು, ಬೆದರಿಸುವುದು ನಡೆಯುತ್ತಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರನ್ನೇ ಮತ್ತೇ ಮತ್ತೇ ಮಾಧ್ಯಮದವರೂ, ಪೆನ್‌ಡ್ರೈವ್‌ಗಳು ಬಲಿ ಮಾಡುತ್ತಿವೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಪ್ರಜ್ವಲ್

ನಮ್ಮ ಇತಿಹಾಸದುದ್ದಕ್ಕೂ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಕೊನೆಯಾಗುವುದು ಯಾವಾಗ? ಮಹಿಳೆಯರನ್ನು ದೇವತೆಯಂತೆ ಪೂಜಿಸುತ್ತೇವೆಂದು ಹೇಳುವ ಸನಾತನಿಗಳು ಆಳುತ್ತಿರುವ, ಮಾತೃ ದೇವೋಭವ ಎನ್ನುವ ನಾಡಿನಲ್ಲಿ ಸರ್ಕಾರದ ಅಂಕಿಅಂಶಗಳ ಪ್ರಕಾರವೇ 2023ರಲ್ಲಿ 4,50,000ಕ್ಕೂ ಹೆಚ್ಚು ಜನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿವೆ. ಉತ್ತರ ಪ್ರದೇಶದ ಯೋಗಿಯ ಬಿಜೆಪಿ ಸರ್ಕಾರ ಇದರಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂಬುದು ಗಮನಿಸಬೇಕಾದ ಸಂಗತಿ. ಯೋಗಿಯ ಕೇವಲ ಒಂದೇ ರಾಜ್ಯದಲ್ಲಿ 65,000ಕ್ಕೂ ಹೆಚ್ಚು ಜನ ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದಾರೆ. ಹಾಸನದ ಪುರುಷಮೃಗ ಸಂಸದನೊಬ್ಬನ ಚಾರಿತ್ರ್ಯದ ಬಗ್ಗೆ ಗುರುತರವಾದ ಅಪಾದನೆಗಳ ಸಾಕ್ಷ್ಯಾಧಾರವಾಗಿ ವಿಡಿಯೋಗಳು ವೈರಲ್ ಆದಾಗ ಅವನನ್ನು ಚುನಾವಣೆಯಿಂದ ಅನರ್ಹಗೊಳಿಸಿ ವಿಚಾರಣೆಗೆ ಒಳಪಡಿಸಬಹುದಾಗಿತ್ತು. ಮಹಿಳೆಯರನ್ನು ಅಶ್ಲೀಲವಾಗಿ ಬಳಸಿ, ವಿಡಿಯೋ ಮಾಡಿ, ಅದನ್ನು ತೋರಿಸಿ ಮಹಿಳೆಯರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ, ವಿಕೃತ ಕಾಮುಕನ ಕೃತ್ಯ ಇಡೀ ಮನುಕುಲದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ದಾಖಲಾಗಿದೆ. ಪ್ರಜ್ವಲ್

ದೇಶದ ಪ್ರಧಾನಿಯಾಗಿ ಸಭ್ಯ ಸಜ್ಜನ ಎಂದು ಹೆಸರು ಮಾಡಿದ ಪ್ರಧಾನಿ ದೇವೇಗೌಡರ ಮೊಮ್ಮಗನ ಕಾಮಪುರಾಣ ಪ್ರಹಸನಗಳನ್ನು ಕೇಳಿ ನೊಂದುಕೊಂಡಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಸಂತ್ರಸ್ತೆಯರು ಭಯ ಆತಂಕ, ಅವಮಾನಗಳಿಗೆ ನೊಂದುಕೊಂಡು ಹಲವರು ಆತ್ಮಹತ್ಯೆಗೆ ಪ್ರಯತ್ನಿಸಿರುವುದೂ ವರದಿಯಾಗಿದೆ. ಈ ಶತಮಾನದ ಅತ್ಯಂತ ಘೋರ ಪ್ರಕರಣ ಇದಾಗಿದೆ. ಆತನ ಕುಟುಂಬಕ್ಕಿರುವ ರಾಜಕೀಯ ಅಧಿಕಾರದ ಬಲದಿಂದ ಪ್ರಜ್ವಲನ ಪ್ರತಾಪಕ್ಕೆ ಕಡಿವಾಣವಿಲ್ಲದಂತಾಗಿದೆ. ಪಾಳೆಯಗಾರಿ ಊಳಿಗಮಾನ್ಯ ವ್ಯವಸ್ಥೆಯ ಕುಟುಂಬದಲ್ಲಿ, ಪ್ರಧಾನಿ, ಸಚಿವರು, ರಾಜ್ಯಸಭೆ, ಲೋಕಸಭೆ, ವಿಧಾನ ಸಭೆ, ವಿಧಾನ ಪರಿಷತ್ತಿನ ಸದಸ್ಯರು ಮತ್ತು ಮುಖ್ಯ ಮಂತ್ರಿಗಳಂತಹ ಪ್ರಧಾನ ರಾಜಕೀಯ ಹುದ್ದೆಗಳನ್ನು ಹೊಂದಿರುವ ಕುಟುಂಬದಲ್ಲಿ ಮಹಿಳಾ ವಿರೋಧಿ ಪಾಳೆಯಗಾರಿ ಪಟ್ಟುಗಳು ಹೇಗೆ ಪಸರಿಸುತ್ತವೆ ಎಂಬುದಕ್ಕೆ ಪ್ರಜ್ವಲನೇ ಜ್ವಲಂತ ಉದಾಹರಣೆಯಾಗಿದ್ದಾನೆ. ಈ ಮೂಲಕ ಮಹಿಳೆಯರ ಪಾಲಿಗೆ ಗಂಡಾಳಿಕೆಯ ಗಂಡಾಂತರ ಹೇಗೆಲ್ಲ ಎದುರಾಗುತ್ತದೆ? ಎಂತಹ ಸಂಕಷ್ಟಗಳಿಗೆ ಸಿಲುಕಿಸುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ. ತಮ್ಮ ದ್ವೇಷ ಸಾಧನೆಗೆ ದೇವರಾಜೇಗೌಡನಂತವರು ಈ ಪ್ರಕರಣವನ್ನು ಬಳಸಿಕೊಂಡರೆ, ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹಂಚಿಕೊಂಡು ವಿಕೃತಿ ಮೆರೆದರು, ಪೆನಡ್ರೈವ್ ಗಳನ್ನು ಜಿಲ್ಲೆಯಾದ್ಯಂತ ಹಂಚಿ ರಾಜಕೀಯಕ್ಕೆ ಬಳಸಿಕೊಂಡವರು ರಾಜಕಾರಣಿಗಳು. ವಾರಗಟ್ಟಲೇ ಈ ಪ್ರಕರಣಕ್ಕೆ ಪ್ರಚಾರ ಕೊಟ್ಟವರು ಪತ್ರಿಕೆ ಮತ್ತು ಟಿ.ವಿ. ಮಾಧ್ಯಮದವರು. ಗಂಡಾಳಿಕೆಯ ಅಹಂಕಾರದಡಿ ನಲುಗಿದವರು ಮಾತ್ರ ಹೆಣ್ಣು ಮಕ್ಕಳು.

ಇದನ್ನು ಓದಿ : ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಮೇ 30 ರಂದು ಬೃಹತ್ ಪ್ರತಿಭಟನೆ

ರಾಜಕೀಯ ಪಕ್ಷಗಳು ಮತ್ತು ನಾಯಕರುಗಳು ತಮ್ಮ ಹಿತಾಸಕ್ತಿಗೆ ತಕ್ಕಂತೆ ಹೆಣ್ಣುಮಕ್ಕಳ ಈ ಪ್ರಕರಣ ಗಳನ್ನು ರಾಜಕೀಯ ಚುನಾವಣೆಯ ಲಾಭಕ್ಕಾಗಿ ಬಳಸುತ್ತಿರುವ ಸಂಗತಿಯು ತಲ್ಲಣಗೊಳಿಸಿದೆ. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ, ಕೊಲೆ ಪ್ರಕರಣಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ. ದೇಶದಲ್ಲಿ ಇಂತಹ ರಾಜಕಾರಣದಿಂದಾಗಿಯೇ ನಿಜವಾದ ಅಪರಾಧಿಗಳು ನುಸುಳಿ ಹೋಗಲು ದಾರಿಯಾಗುತ್ತಿದೆ. ಅಪರಾಧಿಗಳ ಗುರುತರವಾದ ಅಪರಾಧಗಳನ್ನು ಗೌಣಗೊಳಿಸುತ್ತಿವೆ. ಬೇರೆ ಬೇರೆ ಕಡೆಗಳಲ್ಲಿ ರಾಜಕಾರಣಿಗಳಿಂದ ನಡೆಯುತ್ತಿರುವ ಕ್ರೂರ ಲೈಂಗಿಕ ಹಗರಣಗಳಿಂದ ಮಹಿಳಾ ಲೋಕ ತಲ್ಲಣಗೊಂಡಿದೆ. ಲಿಂಗಸೂಕ್ಷ್ಮವಿಲ್ಲದ ಜನಪ್ರತಿನಿಧಿಗಳು, ರಾಜಕಾರಣಿಗಳು, ಮಾಧ್ಯಮದವರೂ ಆರೋಪ ಪ್ರತ್ಯಾರೋಪ ಮಾಡುವುದರಲ್ಲಿಯೇ ತೊಡಗಿದ್ದಾರೆ. ಅವರಿಂದ ಸಂತ್ರಸ್ತರ ಗೌರವ ಕಾಪಾಡುವುದರ ಬದಲು ಅವರ ಘನತೆಯನ್ನು ಬೀದಿಪಾಲು ಮಾಡುತ್ತಿರುವುದು ಯೋಚಿಸಬೇಕಾದ ಸಂಗತಿಯಾಗಿದೆ. ಸರ್ಕಾರದ, ಮಾಧ್ಯಮದವರ ಇಂತಹ ನಡೆಗಳು ಮಹಿಳೆಯರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ಅವರ ಗೌರವಕ್ಕೆ ಧಕ್ಕೆ ತರುವುದು ಮಾತ್ರವಲ್ಲ ಅವರನ್ನು ಮಾನಸಿಕವಾಗಿ ಹಿಂಸಿಸುತ್ತಿವೆ. ರಾಜಕೀಯದ ಇಂತಹ ನಡೆಗಳು ಸಮಾಜದ ಆರೋಗ್ಯವನ್ನು ಹಾಳು ಮಾಡುತ್ತವೆ. ಸಂತ್ರಸ್ತೆಯರು ತಮ್ಮ ಗಂಡ, ಮಕ್ಕಳು, ಬಂಧುಗಳ ಮುಂದೆ ಬರುವುದಕ್ಕೂ ಯಾತನೆ ಪಡುವಂತಾಗಿದೆ. ಈ ನೋವು ಸಹಿಸಲಾರದೆ ಅನೇಕ ಕುಟುಂಬಗಳು ಈಗಾಗಲೇ ಊರು ತೊರೆದಿವೆ. ಊರಲ್ಲಿರುವ ಹಲವರನ್ನು ರಾಜಕಾರಣಿಯ ತಂದೆಯೇ ಅಪಹರಿಸಿದ್ದಾನೆಂದು ಹೇಳಲಾಗುತ್ತಿದೆ.

ಇನ್ನೊಂದು ಕಡೆ ಅಪರಾಧಿಗಳ ಪರವಾಗಿರುವವರನ್ನು ಮತ್ತು ಕೋರ್ಟು ಜೀವಾವಧಿ ಶಿಕ್ಷೆ ನೀಡಿದ್ದರೂ, ಬಿಲ್ಕಿಸ್ ಬಾನು ಅವರ ಬಲಾತ್ಕಾರದ ಅಪರಾಧಿಗಳು ಸ್ವಾತಂತ್ರ ದಿನಾಚರಣೆಯಂದು ಸಚ್ಚಾರಿತ್ರ್ಯದ ಆಧಾರದಲ್ಲಿ ಜೈಲಿನಿಂದ ಬಿಡುಗಡೆಯಾಗಿ ಬಂದಾಗ ಹೂಹಾರ ಹಾಕಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಪ್ರಜ್ವಲ್ ರೇವಣ್ಣನ ತಂದೆ ಹೆಚ್.ಡಿ ರೇವಣ್ಣ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿ ಬಂದ ತಕ್ಷಣ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ ಘಟನೆಯನ್ನು ಹೇಗೆ ನೋಡುವುದು? ಸಂತ್ರಸ್ತೆಯರು ನಿರ್ಭೀತಿಯಿಂದ ಬಂದು ತಮ್ಮ ದೂರು ದಾಖಲಿಸುವಂತಹ ವಾತಾವರಣ ಸೃಷ್ಟಿಸಬೇಕಾಗಿದೆ. ‘ಹೆದರಬೇಡಿ ಭಗಿನಿಯರೇ ನಿಮ್ಮ ಸಹಾಯಕ್ಕೆ ನಾವಿದ್ದೇವೆ. ನಿಮ್ಮನ್ನು ಅವಹೇಳನ, ಅಪಪ್ರಚಾರ, ಅವಮಾನ ಮಾಡುವವರನ್ನು ನಾವು ಕಠಿಣವಾಗಿ ಶಿಕ್ಷಿಸುತ್ತೇವೆ.’ ಎಂದು ಆಳುವ ಸರ್ಕಾರಗಳು ಭರವಸೆ ಮೂಡಿಸಬೇಕಾಗಿದೆ. ಪ್ರಕರಣವನ್ನು ಎಸ್.ಐ.ಟಿ ತನಿಖೆ ನಡೆಸುತ್ತಿರುವುದರಿಂದ ಹಗರಣದ ಬಗ್ಗೆ ರಾಜಕಾರಣಿಗಳು ಕೆಸರೆರೆಚಾಟದಲ್ಲಿ ತೊಡಗಿರುವುದನ್ನು ನಿಯಂತ್ರಿಸಬೇಕಾಗುತ್ತದೆ.

ಇದು ಕೇವಲ ಪ್ರಜ್ವಲ್ ರೇವಣ್ಣ ಒಬ್ಬನ ಕೃತ್ಯವಲ್ಲ. ಬದಲಾಗಿ ಅವನ ಜೊತೆಗೆ ಶಾಮೀಲಾಗಿರುವ ಅವನ ಸ್ನೇಹಿತರನ್ನು ಬಂಧಿಸಬೇಕು. ವಿದೇಶಕ್ಕೆ ಹಾರಿ ಹೋಗದಂತೆ ತಡೆಯದಿರುವ ಕೇಂದ್ರ ಸರ್ಕಾರದ ನಡೆಯನ್ನೂ ಪ್ರಶ್ನಿಸಬೇಕಾಗುತ್ತದೆ. ಮಹಿಳೆಯರ ಬಗ್ಗೆ ನಮ್ಮ ಪ್ರಧಾನಿಗೆ ಎಂತಹ ಗೌರವವಿದೆ ಎಂದು ಈಗಾಗಲೇ ನಾವು ಮಣಿಪುರ ಮತ್ತು ಮಹಿಳಾ ಕುಸ್ತಿಪಟುಗಳ ಘಟನೆಗಳಲ್ಲಿ ಕಂಡಿದ್ದೇವೆ. ರಾಜ್ಯ ಸರ್ಕಾರ ಸೌಜನ್ಯ ಪ್ರಕರಣದಲ್ಲಿ ನಡೆದುಕೊಂಡ ಬಗ್ಗೆ ನಮಗೆ ಗೊತ್ತಿದೆ. ನೇಹಾಳ ಕೊಲೆ ಪ್ರಕರಣವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೋಮುವಾದೀ ಪಕ್ಷ ಹೇಗೆ ಬಳಸಿಕೊಂಡಿತು ಎಂಬುದನ್ನೂ ನಾವು ನೋಡಿದ್ದೇವೆ. ತಂದೆ ಮಕ್ಕಳ ಈ ಕಾಮಪುರಾಣವನ್ನು ಮುಚ್ಚಿ ಹಾಕುತ್ತಾರೋ, ಇಲ್ಲ ನಿಜವಾದ ಅಪರಾಧಿಗಳನ್ನು ಹಿಡಿಯುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ. ತಂದೆಯನ್ನು ಬೇಲ್ ಮೇಲೆ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಸರ್ಕಾರಗಳು ಪಿತೃಪ್ರಧಾನ, ಊಳಿಗಮಾನ್ಯ ವ್ಯವಸ್ಥೆಯನ್ನು ಉಳಿಸಿ, ಹೆಣ್ಣುಮಕ್ಕಳನ್ನು ಮತ್ತೇ ಹಿಂದಕ್ಕೆ ತಳ್ಳುವಂತಹ ಕೆಲಸಗಳನ್ನು ಮಹಿಳೆಯರು ಕಟುವಾಗಿ ವಿರೋಧಿಸಬೇಕಾಗಿದೆ.

ಇದನ್ನು ನೋಡಿ : ಪ್ರಜ್ವಲ್ ಲೈಂಗಿಕ ಹತ್ಯಾಕಾಂಡ : ವಿಶೇಷ ನ್ಯಾಯಾಲಯ ಸ್ಥಾಪನೆ ಅಗತ್ಯ – ಹೈಕೋರ್ಟ್ ವಕೀಲ Janashakthi Media

Donate Janashakthi Media

Leave a Reply

Your email address will not be published. Required fields are marked *