ಮತದಾರರ ಪಟ್ಟಿಯೊಂದಿಗೆ ಆಧಾರ್ ಸಂಖ್ಯೆ ಜೋಡಣೆ ನಿಯಮ ಜಾರಿ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ಮತದಾರರ ಪಟ್ಟಿಯೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವ ನಿಯಮಗಳನ್ನು ಹೊರಡಿಸಬಹುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ.  ಮತದಾರರು ತಮ್ಮ ಆಧಾರ್ ವಿವರಗಳನ್ನು ಹಂಚಿಕೊಳ್ಳುವುದು ಕಡ್ಡಾಯವಲ್ಲ. ಸ್ವಯಂಪ್ರೇರಿತವಾಗಿರುತ್ತದೆ. ಆದರೆ ಆಧಾರ್ ಲಿಂಕ್ ಮಾಡದವರು “ಸಾಕಷ್ಟು ಕಾರಣಗಳನ್ನು ನೀಡಬೇಕಾಗುತ್ತದೆ” ಎಂದರು.

ಸುಶೀಲ್ ಚಂದ್ರ ಇಂದು ನಿವೃತ್ತಿಯಾಗುತ್ತಿದ್ದು, ತಮ್ಮ ಕಚೇರಿಯಿಂದ ನಿರ್ಗಮಿಸುವ ಮುನ್ನ, ಮತದಾರರು ಮತ್ತು ಚುನಾವಣಾ ಕರ್ತವ್ಯದಲ್ಲಿ ತೊಡಗಿರುವವರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಈ ವರ್ಷದ ಮಾರ್ಚ್‌ನಲ್ಲಿ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ಲಸಿಕೆ ಅಭಿಯಾನ ತೀವ್ರಗೊಳಿಸುವಲ್ಲಿ ಚುನಾವಣಾ ಸಮಿತಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ತಮ್ಮ ಅಧಿಕಾರಾವಧಿಯಲ್ಲಿ ನಡೆದ ಎರಡು ಪ್ರಮುಖ ಚುನಾವಣಾ ಸುಧಾರಣೆಗಳೆಂದರೆ 18 ವರ್ಷ ತುಂಬಿದವರನ್ನು ಮತದಾರರಾಗಿ ನೋಂದಾಯಿಸಲು ಒಂದು ವರ್ಷದಲ್ಲಿ ನಾಲ್ಕು ಬಾರಿ ಅವಕಾಶ ನೀಡುವುದು ಮತ್ತು ಮತದಾರರ ಪಟ್ಟಿಯೊಂದಿಗೆ ಆಧಾರ್ ಲಿಂಕ್ ಮಾಡುವುದು ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸುಶೀಲ್ ಚಂದ್ರ ತಿಳಿಸಿದ್ದಾರೆ.

“ಮೊದಲು, ಪ್ರತಿ ವರ್ಷ ಜನವರಿ 1 ರಂದು ಮಾತ್ರ ನೋಂದಾಯಿಸಿಕೊಳ್ಳಲು ಅವಕಾಶ ಇತ್ತು. ಇದನ್ನು ಬದಲಾಯಿಸುವ ಅಗತ್ಯ ಇತ್ತು ಮತ್ತು ಜನ 18 ವರ್ಷ ತುಂಬಿದ ಕೂಡಲೇ ನೋಂದಾಯಿಸಿಕೊಳ್ಳಬೇಕು ಎಂದು ನಾವು ಸರ್ಕಾರಕ್ಕೆ ಮನವರಿಕೆ ಮಾಡಿದ್ದೇವೆ. ಈಗ ಈ ಸುಧಾರಣೆಯೊಂದಿಗೆ, ನಾಲ್ಕು ದಿನಾಂಕಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಸುಧಾರಣೆಯು ಕಳೆದ 20 ವರ್ಷಗಳಿಂದ ಬಾಕಿ ಉಳಿದಿತ್ತು” ಸುಶೀಲ್ ಚಂದ್ರ ಅವರು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *