ಬಾರ್ ಬೇಡ ಎಂದ ಪ್ರತಿಭಟಿಸಿದ ಮಹಿಳೆಯರ ಮೇಲೆ ಪೊಲೀಸರ ಗೂಂಡಾವರ್ತನೆ

ಕಡೂರು : ನಮ್ಮ ಹಳ್ಳಿಯಲ್ಲಿ ಬಾರ್ ತೆರೆಯುವುದು ಬೇಡ ಎಂದು ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸರು ಗೂಂಡಾವರ್ತನೆ ತೋರಿದ್ದು, ಮೂವರು ಮಹಿಳೆಯರು ಸೇರಿ ಏಳು ಜನರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಬೆಳಂಬೆಳಗ್ಗೆಯೇ ಮಹಿಳೆಯರ ಮನೆ ನುಗ್ಗಿದ ಪೊಲೀಸರು 7 ಜನರನ್ನು ದರದರ ಎಳೆದೊಯ್ದ ಬಂಧಿಸಿದ್ದಾರೆ.

ಬಾಗಿಲು, ಹೆಂಚು ಮುರಿದು ಮನೆಯೊಳಗೆ ನುಗ್ಗಿದ ಪೊಲೀಸರು ಅಪ್ರಾಪ್ತ ಬಾಲಕ, ಮೂವರು ಮಹಿಳೆಯರು ಸೇರಿ 7 ಜನರನ್ನ ಎಳೆದೊಯ್ದಿದ್ದಾರೆ ಎನ್ನಲಾಗಿದೆ. ಇನ್ನು ಈ ಘಟನೆ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ.

ಪೊಲೀಸರು ವಿಚಾರಣೆ ನಡೆಸಬೇಕು ಅನ್ನೋದಾಗಿದ್ರೆ ಬೆಳಗ್ಗೆ ಸೂರ್ಯ ಹುಟ್ಟಿದ ಮೇಲೆ ಬಂದು ವಿಚಾರಣೆ ನಡೆಸಬಹುದಿತ್ತು. ಬೆಳಗಿನ ಜಾವ ಕತ್ತಲೆ ಸಮಯದಲ್ಲಿ ಪೊಲೀಸರು ಬಂದಿದ್ದೇಕೆ. ಮನೆಯ ಬಾಗಿಲನ್ನ ಮುರಿದಿದ್ದೇಕೆ ಎನ್ನುವುದು ಗ್ರಾಮಸ್ಥರ ಆಕ್ರೋಶ. ಅಲ್ಲದೇ, ಗ್ರಾಮದ ಪ್ರತಿಯೊಬ್ಬರು ಕೂಡ ತಮ್ಮ ಊರಿನಲ್ಲಿ ಮದ್ಯದ ಅಂಗಡಿ ಬೇಡ ಎಂದು ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದಾರೆ. ಈ ವಿಚಾರವಾಗಿ ಗ್ರಾಮಸ್ಥರ ಪರ ನಿಲ್ಲಬೇಕಾದ ಕಡೂರು ಪೊಲೀಸರು ಮದ್ಯದ ಅಂಗಡಿ ಮಾಲೀಕರ ಪರವಾಗಿ ನಿಂತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ : ಬಿಕ್ಷುಕನಿಗೆ ಹೊಸ ಬದುಕು ಕೊಟ್ಟ ಇನ್ಸ್‌ಪೆಕ್ಟರ್ ಶಿವಕುಮಾರ್

ಸೋಮವಾರ ಮುಂಜಾನೆ ಪೊಲೀಸರು ಮುಸ್ಲಾಪುರ ಗ್ರಾಮದಲ್ಲಿ ದಾಳಿ ನಡೆಸಿ ಗೂಂಡಾವರ್ತನೆ ತೋರಿರುವ ಘಟನೆಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಡೂರು ಪಿಎಸೈ ರಮ್ಯಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಗ್ರಾಮಸ್ಥರ ವಿರೋಧದ ಮಧ್ಯೆಯೂ ಮದ್ಯದಂಗಡಿ ಹಾಗೂ ಬಾರ್ ತೆರೆಯುತ್ತಿರುವ ಉದ್ದೇಶವೇನು? ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಈಬಾರ್  ಹಿಂದೆ ಇರುವುದರಿಂದ ಪೊಲೀಸ್ ಇಲಾಖೆ ಸೇರಿದಂತೆ ಜಿಲ್ಲಾಡಳಿತ, ಅಬಕಾರಿ ಇಲಾಖೆ ಬಾರ್ ಮಾಲಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ವಿರೋಧಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *