ಪ್ರಧಾನಿ ಮೋದಿ ಒಬಿಸಿ ಸಮುದಾಯದವರಲ್ಲ; ಸಾಮಾನ್ಯ ವರ್ಗಕ್ಕೆ ಸೇರಿದವರು – ರಾಹುಲ್ ಗಾಂಧಿ

ಜಾರ್ಸುಗುಡ: ಪ್ರಧಾನಿ ನರೇಂದ್ರ ಮೋದಿ ಅವರು ಹುಟ್ಟಿನಿಂದ ಇತರ ಹಿಂದುಳಿದ ವರ್ಗ ( ಒಬಿಸಿ) ಗಳ ಸಮುದಾಯದ ವ್ಯಕ್ತಿಯಲ್ಲ ಎಂದು ಕಾಂಗ್ರೆಸ್ ಸಂಸದ ಮತ್ತು ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಟೀಕೆ ಮಾಡಿದ್ದಾರೆ. ಒಡಿಶಾದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಭಾಗವಾಗಿ ಜಿಲ್ಲೆಗೆ ಭೇಟಿ ನೀಡಿದ ಅವರು, ಮೋದಿ ಸಾಮಾನ್ಯ ಜಾತಿಯಲ್ಲಿ ಜನಿಸಿದ್ದರು, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅವರ ಸಮುದಾಯಕ್ಕೆ ಒಬಿಸಿ ಸ್ಥಾನಮಾನವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಬೆಲ್ಪಹಾರ್‌ನ ಮಹಿಮಾ ಚೌಕ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಪ್ರಧಾನಿ ಮೋದಿ ಅವರು ಒಬಿಸಿಗೆ ಮೀಸಲಾತಿಯ ಅಗತ್ಯವನ್ನು ಆಗಾಗ್ಗೆ ಪ್ರಶ್ನಿಸುತ್ತಾರೆ ಮತ್ತು ತಾವು ಒ.ಬಿ.ಸಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ನಾನು ನಿಮಗೆ ಹೇಳುತ್ತೇನೆ, ಮೋದಿ ಎಂದಿಗೂ OBC ವರ್ಗದಲ್ಲಿ ಹುಟ್ಟಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಿಎಂ ಸೊರೆನ್ ಮತ್ತು ಆದಿವಾಸಿ ಜನಾಂಗದ ವಿರುದ್ಧ ಕೀಳು ಮಟ್ಟದ ಹೇಳಿಕೆ | ನಿರೂಪಕ ಸುಧೀರ್ ಚೌಧರಿ ಭಾಷಣ ಕೈಬಿಟ್ಟ ಐಐಟಿ ಬಾಂಬೆ

“ಅವರು ನಿಮ್ಮೆಲ್ಲರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಮೋದಿ ಹುಟ್ಟಿದ್ದು ಗುಜರಾತಿನ ತೇಲಿ ಸಮುದಾಯಕ್ಕೆ. ಆದರೆ ಅವರ ಈ ಸಮುದಾಯವನ್ನು 2000 ರಲ್ಲಿ ಬಿಜೆಪಿ ಸರ್ಕಾರ OBC ಎಂದು ವರ್ಗೀಕರಿಸಿತು. ನಿಮ್ಮ ಪ್ರಧಾನಿ ಸಾಮಾನ್ಯ ಜಾತಿಯಲ್ಲಿ ಜನಿಸಿದ್ದಾರೆ. ಅವರು ಒಬಿಸಿ ಆಗಿರಲಿಲ್ಲ. ಅವರು OBC ಸಮುದಾಯದವರು ಎಂದು ಎಲ್ಲೆಡೆ ಸುಳ್ಳು ಹೇಳುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

“ಇದನ್ನು ನನಗೆ ಸಾಬೀತುಪಡಿಸಲು ಯಾವುದೇ ಜನ್ಮ ಪ್ರಮಾಣಪತ್ರದ ಅಗತ್ಯವಿಲ್ಲ. ಅವರು OBC ವ್ಯಕ್ತಿಯನ್ನು ತಬ್ಬಿಕೊಳ್ಳುವುದಿಲ್ಲ ಎಂಬುದನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ಅವರು ಯಾವತ್ತೂ ರೈತನ ಅಥವಾ ಕೂಲಿಕಾರನ ಕೈ ಹಿಡಿಯುವುದಿಲ್ಲ. ಜಾತಿ ಆಧಾರಿತ ಜನಗಣತಿ ನಡೆಯಲು ಅವರು ಎಂದಿಗೂ ಬಿಡುವುದಿಲ್ಲ. ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಮಾತ್ರ ಜಾತಿ ಆಧಾರಿತ ಜನಗಣತಿಯನ್ನು ಸಾಧ್ಯವಾಗಿಸುತ್ತದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿದೆ: ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಕೇರಳ ಸಿಎಂ

ಮೋದಿಯವರು ಮೋದ-ಘಾಂಚಿ ಜಾತಿಗೆ ಸೇರಿದವರು ಎಂದು ರಾಹುಲ್ ಗಾಂಧಿ ಹೇಳಿದ್ದು, ಅವರ ಸಮುದಾಯಕ್ಕೆ 2000 ರಲ್ಲಿ ಗುಜರಾತ್ ಸರ್ಕಾರವು OBC ಸ್ಥಾನಮಾನ ನೀಡಿತು ಎಂದು ಅವರು ಹೇಳಿದ್ದಾರೆ. ಭಾರತದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ 8% ಆದಿವಾಸಿಗಳು, 15% ದಲಿತರು ಮತ್ತು ಸುಮಾರು 50% OBC ಗಳು ಇದ್ದಾರೆ ಎಂದು ರಾಹುಲ್ ಮಾಹಿತಿ ನೀಡಿದ್ದಾರೆ.

“ಭಾರತದ ಜನಸಂಖ್ಯೆಯ 73% ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರಾಗಿದ್ದರೂ, ಈ ಜನರಿಗೆ ಎಂದಿಗೂ ಮುಖ್ಯವಾಹಿನಿಯಲ್ಲಿ ಸ್ಥಾನ ನೀಡಲಾಗಿಲ್ಲ. ಅದಾಗ್ಯೂ, ನಾವು ದೇಶವನ್ನು ಒಗ್ಗೂಡಿಸುವ ಬಗ್ಗೆ ಮಾತನಾಡುತ್ತೇವೆ. ಬಹುಪಾಲು ಜನಸಂಖ್ಯೆಗೆ ಏನನ್ನೂ ನೀಡದಿದ್ದರೆ, ಅವರ ಹಕ್ಕುಗಳನ್ನು ಕಸಿದುಕೊಂಡದರೆ, ಅವರನ್ನು ಹಸಿವಿನಿಂದ ಸಾಯಲು ಬಿಟ್ಟರೆ, ಭಾರತವನ್ನು ಒಗ್ಗೂಡಿಸುವುದು ಹೇಗೆ? ದೇಶಾದ್ಯಂತ ಭೀಕರ ಸಾಮಾಜಿಕ ಅನ್ಯಾಯವಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ವಿಡಿಯೊ ನೋಡಿ: ಎಚ್ಚರ ಮತ್ತು ವಿವೇಕದ ಕಣ್ಣುಗಳನ್ನು ತೆರೆಯಿಸುವ ಹೊಣೆ ಪತ್ರಕರ್ತರದ್ದು – ಟಿ. ಗುರುರಾಜ Janashakthi Media

Donate Janashakthi Media

Leave a Reply

Your email address will not be published. Required fields are marked *