ಹುನಗುಂದ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲ್ಲೂಕಿನ ಹಿರೇಬಾದವಾಡಗಿ ಗ್ರಾಮ ಪಂಚಾಯಿತಿ ಎದುರುಗಡೆ ಗ್ರಾಮೀಣ ಕಾರ್ಮಿಕರ ಸಂಘಟನೆ (ಗ್ರಾಕೂಸ್) ಸದಸ್ಯರು ಅಕ್ಟೋಬರ್ 27ರಂದು ಪ್ರತಿಭಟನೆ ನಡೆಸಿದರು. ಪ್ರಾಮಾಣಿಕ
ನೇತೃತ್ವ ವಹಿಸಿಕೊಂಡಿದ್ದ ಗ್ರಾಕೂಸ್ ಮುಖಂಡರಾದ ಮಹಾದೇವಿ ಹಡಪದ ಮಾತನಾಡಿ, “ಕೆಲಸ ಮಾಡದ ಕಾರ್ಮಿಕರಿಗೆ ಹಣ ಪಾವತಿಸಿದ್ದಾರೆ. ಆದರೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ಕಾರ್ಮಿಕರಿಗೆ ಹಣ ಪಾವತಿಸಿಲ್ಲ. ಕೆಲಸ ಕೊಟ್ಟು ನಾಲ್ಕು ತಿಂಗಳು ಕಳೆದರೂ ಕೆಲ ಕಾರ್ಮಿಕರಿಗೆ ಹಣ ಪಾವತಿಸಿಲ್ಲ. ಹೀಗಾದರೆ ನಾವು ಬದುಕು ಸಾಗಿಸುವುದಾದರೂ ಹೇಗೆ” ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
‘ಕೆಲವು ಸದಸ್ಯರ ಅಕೌಂಟ್ಗೆ ಹಣ ಪಾವತಿಸದೆ ತಿರಸ್ಕರಿಸಿದ್ದಾರೆ. ಅಂಗವಿಕಲರ ಜಾಬ್ ಕಾರ್ಡ್ ಸಹ ಮಾಡಿಕೊಟ್ಟಿಲ್ಲ. ಸಮಸ್ಯೆಗಳ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ತಾಂತ್ರಿಕ ನೆಪ ಹೇಳಿ ದಿನ ಮುಂದೂಡುತ್ತಿದ್ದಾರೆ. ಸಮಸ್ಯೆಗಳನ್ನು ಸರಿಪಡಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚನ್ನರಾಯಪಟ್ಟಣ | ಕಾಲುವೆ ಕೊನೆಯ ಭಾಗದವರೆಗೂ ನೀರು ಹರಿಸಿ’: ಚನ್ನರಾಯಪಟ್ಟಣದಲ್ಲಿ ರೈತರ ಪ್ರತಿಭಟನೆ
‘ಪಿಡಿಒ, ಎಂಜಿನಿಯರ್, ಡಿಎಫ್ಟಿ, ಕಾಯಕ ಮಿತ್ರ, ಕೃಷಿ ಇಲಾಖೆ, ನರೇಗಾ ಅಧಿಕಾರಿ ಸೇರಿದಂತೆ ವಿವಿಧ ಹಂತದಲ್ಲಿನ ಅಧಿಕಾರಿಗಳು ಕಾರ್ಮಿಕರ ಬಗ್ಗೆ ನಿರ್ಲಕ್ಷ ತೋರಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ದು ನಂಜಯ್ಯನಮಠ ಕಾರ್ಮಿಕರ ಮುಖಂಡರೊಂದಿಗೆ ಮಾತನಾಡಿ, ‘ನಿಮ್ಮ ಬೇಡಿಕೆಗಳನ್ನು ಒಂದು ವಾರಾದೊಳಗೆ ಹಂತ ಹಂತವಾಗಿ ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು.
ಅಧಿಕಾರಿಗಳಾದ ಶಿವರಾಜ ಹಾವಲ್ದಾರ, ಶ್ರೀಶೈಲ ಪೂಜಾರಿ, ಕಾರ್ಮಿಕರಾದ ಸಂಗನಬಸಮ್ಮ ಪಾಟೀಲ, ಸುನಂದ ಹಳ್ಳೂರ, ಸೈನಜಾ ಪಿಂಜಾರ, ಮಂಜುಳಾ ಕಮತಗಿ, ಶಿವಪ್ಪ ಕುಂಬಾರ, ನೀಲಮ್ಮ ವಡಗೇರಿ, ಗೀತಾ ರಾಮವಾಡಗಿ, ಮಹಾಂತೇಶ ವಾಲಿಕಾರ ಇದ್ದರು.
ಹಿರೇಬಾದವಾಡಗಿ, ಚಿಕ್ಕಬಾದಡವಾಗಿ, ವೀರಾಪೂರ, ಬನ್ನಿಹಟ್ಟಿ ಗ್ರಾಮಗಳ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ದ್ವೇಷ ಭಾಷಣ | ನಿಯಂತ್ರಣಕ್ಕೆ ಮೂಗುದಾರವಿದ್ದರೂ ಕಲ್ಲಡ್ಕ ಪ್ರಭಾಕರ್ ಭಟ್ ವಿಷ ಕಾರುತ್ತಿರುವುದು ಯಾಕೆ?
