ಕೋವಿಡ್‌ ಪ್ರಕರಣ ಹೆಚ್ಚಳದ ಕುರಿತು ಗಮನ ವಹಿಸಿ : ಕರ್ನಾಟಕ ಸೇರಿ 6 ರಾಜ್ಯಗಳಿಗೆ ಕೇಂದ್ರದಿಂದ ಪತ್ರ!

ವದೆಹಲಿ: ದೇಶದಾದ್ಯಂತ ದಿನದಿಂದ ಇದಕ್ಕೆ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿದ್ದು, ಅದರಲ್ಲೂ ಆರು ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣ ದಾಖಲಾಗುತ್ತಿರುವ ಹಿನ್ನಲೆ ಇದನ್ನು ಕೂಡಲೇ  ನಿಯಂತ್ರಿಸಬೇಕೆಂದು ಕೇಂದ್ರ ಸರ್ಕಾರವು ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ಪತ್ರ ಬರೆದಿದೆ.

ಒಂದು ವಾರದಲ್ಲಿ 1,200 ಹೊಸ ಪ್ರಕರಣಗಳು ದಾಖಲಾಗಿವೆ ಮುಂಜಾಗ್ರತೆಯಾಗಿ ಅರ್ಹರಿಗೆ ಮೂರನೇ ಡೋಸ್‌ ಲಸಿಕೆ ನೀಡುವುದು, ಹೊಸ ರೂಪಾಂತರ ವೈರಾಣು ಇದೆಯೇ ಎಂಬುದರ ಪತ್ತೆಗೆ ಆದ್ಯತೆ ನೀಡಲು ಸಲಹೆ ನೀಡುವ ಮೂಲಕ, ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್‌ ಅವರು, ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಈಗ ಪತ್ರ ಬರೆದಿದ್ದಾರೆ. ಕೊರೊನಾ ಸೋಂಕು ಹರಡುವುದನ್ನು ತಡೆಯಲು ತಪಾಸಣೆಗೆ ಚುರುಕು ನೀಡಬೇಕು. ಅಲ್ಲದೆ, ಚಿಕಿತ್ಸೆ, ಲಸಿಕೆ ನೀಡುವುದು, ಸೋಂಕು ಹರಡುವಿಕೆ ತಡೆಗೆ ಹೆಚ್ಚಿನ ಗಮನಹರಿಸಬೇಕು ಎಂದೂ ಸಲಹೆ ನೀಡಿದ್ದಾರೆ.

ಕೆಲವು ರಾಜ್ಯಗಳಲ್ಲಿ ಸೋಂಕು ಪ್ರಕರಣಗಳ ಏರುತ್ತಿವೆ. ಸ್ಥಳೀಯ ಮಟ್ಟದಲ್ಲಿ ಸೋಂಕು ಸಾಂಕ್ರಾಮಿಕವಾಗುತ್ತಿರುವ ಸೂಚನೆ ಇದೆ. ಅಪಾಯದ ಸಾಧ್ಯತೆ ಗುರುತಿಸಿ, ತಡೆಯಲು ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದೆ. ಪ್ರಕರಣಗಳ ತಡೆಗೆ ರಾಜ್ಯಗಳು ಕಟ್ಟುನಿಟ್ಟಿನ ನಿಗಾ ವಹಿಸುವುದು ಅವಶ್ಯಕ. ಕೋವಿಡ್ -19 ಸ್ಥಿತಿಯ ಪರಿಣಾಮಕಾರಿ ನಿರ್ವಹಣೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು ಎಂದು ‍ಪತ್ರದಲ್ಲಿ ತಿಳಿಸಲಾಗಿದೆ.

ಕೆಲವು ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳು ಮತ್ತೆ ಏರುಗತಿಯಲ್ಲಿ ಇರುವುದು ಕಳವಳದ ಸಂಗತಿ ಎಂದು ಪತ್ರದಲ್ಲಿ ರಾಜೇಶ್ ಭೂಷಣ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಆರೋಗ್ಯ ಸಂಘಟನೆಯ (ಡಬ್ಲ್ಯೂಎಚ್‌ಒ) ದಕ್ಷಿಣ ಏಷ್ಯಾ ವಲಯದ ವರದಿ ಪ್ರಕಾರ, 13 ಸಾವಿರ ಹೊಸ ಪ್ರಕರಣಗಳು ವರದಿಯಾಗಿದ್ದು, ಕಳೆದ 28 ದಿನಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಏರಿಕೆ ಪ್ರಮಾಣ ಶೇ 14ರಷ್ಟಿದೆ.

6 ರಾಜ್ಯಗಳಲ್ಲಿ ಶೇ 82ರಷ್ಟು ಹೊಸ ಪ್ರಕರಣ : ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ನಾಲ್ಕು ತಿಂಗಳ ಬಳಿಕ ಒಂದೇ ದಿನದಲ್ಲಿ ಸುಮಾರು 1,200 ಕೋವಿಡ್‌ ಪ್ರಕರಣಗಳು ವರದಿ ಆಗಿವೆ. ಇದು ಕಳವಳ ಮೂಡಿಸಿದೆ.

ಮಾರ್ಚ್ 6ಕ್ಕೆ ಅಂತ್ಯಗೊಂಡ ವಾರದಲ್ಲಿ ದೇಶದಲ್ಲಿ 2,081 ಹೊಸ ಪ್ರಕರಣ ದಾಖಲಾಗಿದ್ದವು. ನಂತರದ ಮಾರ್ಚ್‌ 15ಕ್ಕೆ ಅಂತ್ಯಗೊಂಡ ವಾರದಲ್ಲಿ 1,182 ಹೊಸ ಪ್ರಕರಣಗಳು ದಾಖಲಾಗಿದ್ದವು.

ಹೊಸ ಪ್ರಕರಣಗಳ ಪೈಕಿ ಶೇ 82ರಷ್ಟು ಪ್ರಕರಣಗಳು ಈ ಆರು ರಾಜ್ಯಗಳಲ್ಲಿಯೇ ವರದಿಯಾಗಿವೆ. ಹೊಸ ಪ್ರಕರಣಗಳ ದೃಢಪಡುವಿಕೆ ಪ್ರಮಾಣ ಕರ್ನಾಟಕ (ಶೇ 2.77) ಮತ್ತು ಕೇರಳದಲ್ಲಿ (ಶೇ 2.64) ಹೆಚ್ಚಿದ್ದು, ಇದು, ರಾಷ್ಟ್ರೀಯ ಸರಾಸರಿಗಿಂತಲೂ (ಶೇ 0.61) ಹೆಚ್ಚಾಗಿದೆ. ಕರ್ನಾಟಕದಲ್ಲಿ ಮಾರ್ಚ್‌ 6ಕ್ಕೆ ಅಂತ್ಯಗೊಂಡ ವಾರದಲ್ಲಿ 493 ಪ್ರಕರಣಗಳು ದಾಖಲಾಗಿದ್ದರೆ, ನಂತರದ ಒಂದು ವಾರದಲ್ಲಿ ಈ ಸಂಖ್ಯೆ 604ಕ್ಕೆ ಏರಿತ್ತು. ಹೊಸ ಪ್ರಕರಣಗಳು ಸೇರಿ ಸದ್ಯ 4,623 ಸಕ್ರಿಯ ಪ್ರಕರಣಗಳಿವೆ. ಕಳೆದ ವರ್ಷ ನ.14ರಂದು ದೇಶದಲ್ಲಿ 734 ಪ್ರಕರಣಗಳು ದಾಖಲಾಗಿದ್ದವು.

ಕಳೆದ 24 ಗಂಟೆಗಳಲ್ಲಿ 796 ಪ್ರಕರಣ ದಾಖಲು : ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್ ದೃಢಪಟ್ಟ 796 ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 109 ದಿನಗಳ ಬಳಿಕ 5,000 ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯಿಂದ ತಿಳಿದುಬಂದಿದೆ.

ಈವರೆಗಿನ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 4.46 ಕೋಟಿಗೆ (4,46,93,506) ಏರಿದೆ. 24 ಗಂಟೆಗಳಲ್ಲಿ ಐದು ಮಂದಿ ಮೃತಪಟ್ಟಿದ್ದು, ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,30,795ಕ್ಕೆ ಏರಿದೆ.

ಕರ್ನಾಟಕ, ಹಿಮಾಚಲಪ್ರದೇಶ, ಪುದುಚೇರಿ, ಉತ್ತರ ಪ್ರದೇಶ ಮತ್ತು ಕೇರಳದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5,026ರಷ್ಟಾಗಿದ್ದು, ಚೇತರಿಕೆ ದರ ಶೇಕಡ 98.80ರಷ್ಟಿದೆ. ದೇಶದಲ್ಲಿ 220.64 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *