ಪರಿತಾಪದ ಸೋಗು

ನಾ ದಿವಾಕರ

ಕ್ಷಮಿಸಿ ಮಕ್ಕಳೇ
ನಿಮ್ಮ ತಲೆಯ ಮೇಲಿನ ಹೊದಿಕೆ
ಮೊಗದ ಮೇಲಿನ ಮುಸುಕು
ನಮ್ಮೊಳಗಿನ ಹೊಲಸನ್ನು ಹೀಗೆ
ಎಳೆದುಹಾಕಲಿದೆಯೆಂದು
ಊಹಿಸಿಯೂ ಇರಲಿಲ್ಲ ;

ಪಾಪ ನೀವು ವಿದ್ಯೆಗೆ ಕೈ ಚಾಚಿದಿರಿ
ನಾವು ಗೇಟು ಮುಚ್ಚಿಬಿಟ್ಟೆವು,, ಆ
ರಂಗುರಂಗಿನ ಮುಸುಕಿನೊಳಗಿನ
ಮುಗ್ಧ ಜೀವ ಕಾಣಲೇ ಇಲ್ಲ…
ಹೇಗೆ ಕಂಡೀತು ಕಂದಮ್ಮಗಳಿರಾ
ನಮ್ಮ ಕಣ್ ಪಾಪೆಗಳು ಭ್ರಷ್ಟವಾಗಿವೆ
ನಿನ್ನೆ ಮೊನ್ನೆ ಒಡಲ ಮಕ್ಕಳಂತಿದ್ದಿರಿ
ಇಂದೇಕೋ ಅನ್ಯಗ್ರಹ ವಾಸಿಗಳಂತೆ
ಕಾಣುತ್ತಿರುವಿರಿ , ನಮ್ಮವರಲ್ಲದಂತೆ !!!

ಪಾಪ ನಿಮ್ಮದೇನು ತಪ್ಪು ಮಕ್ಕಳಿರಾ
ನಮ್ಮ ದೃಷ್ಟಿಮಾಲಿನ್ಯ
ಧರ್ಮಗ್ರಸ್ತರಾಗಿಬಿಟ್ಟಿದ್ದೇವೆ
ನೋಡಿ… ತೊಟ್ಟಿಕ್ಕುತಿರುವ ನಿಮ್ಮ
ಕಂಬನಿಯಲಿ ತೊಯ್ದ ಕೆಮ್ಮಣ್ಣು
ಕೆಕ್ಕರಿಸುತಿದೆ…. ಮಣ್ಣು ನಿಮ್ಮ ಕಾಲಡಿ
ಧೂಳು ನಮ್ಮ ಕಣ್ಣಲಿ
ವಿದ್ಯಾವಾಹಕರೆಂದು ಭಾವಿಸಿದ್ದೀರಾ ?
ಅಲ್ಲ ಮಕ್ಕಳೇ ನಾವು
ದ್ವೇಷವಾಹಿನಿಗಳಾಗಿಬಿಟ್ಟಿದ್ದೇವೆ
ಜ್ಞಾನಭಂಡಾರಗಳೆಲ್ಲಾ ಮಾಲಿನ್ಯ
ಕೂಪಗಳಾಗಿಬಿಟ್ಟಿವೆ ;

ನಾವು ಮುಚ್ಚಿರುವುದು ಲೋಹದ
ಗೇಟುಗಳನ್ನಲ್ಲ ಮಕ್ಕಳೇ
ನಿಮ್ಮ ಭವಿಷ್ಯದ ಹಾದಿಗಳನ್ನು…..
ಪ್ರಜ್ಞೆ ಸತ್ತವರು ನಾವು
ಬುದ್ಧಿಮಾಲಿನ್ಯದ ಸರಕುಗಳು
ಕೊಂಚ ದೃಷ್ಟಿ ಹಾಯಿಸಿನೋಡಿ
ಸೂತ್ರಧಾರರು ಕಾಣಬಹುದು
ನರಸತ್ತ ಆಜ್ಞಾಪಾಲಕರು ನಾವು
ಎಲ್ಲವನ್ನೂ ಕಳೆದುಕೊಂಡು
ರಸ್ತೆಯಲಿ ಬೆತ್ತಲಾಗಿಬಿಟ್ಟಿದ್ದೇವೆ
ಅಕ್ಷರಶಃ ಎಲ್ಲವನ್ನೂ……
ಕಡೆಗೆ‌ ಮಾನವೀಯತೆಯನ್ನೂ…. !!!!

Donate Janashakthi Media

Leave a Reply

Your email address will not be published. Required fields are marked *