ಪದವಿ ಶಿಕ್ಷಣಕ್ಕೂ ಪ್ರವೇಶಾತಿ ಪರೀಕ್ಷೆ-ಯುಜಿಸಿ ಅಧ್ಯಕ್ಷರ ಸೂಚನೆಗೆ ಎಸ್‌ಎಫ್‌ಐ ವಿರೋಧ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ಹಂತದ ಬಿ.ಎ, ಬಿ.ಕಾಂ ಬಿ.ಎಸ್ಸಿ ಹಾಗೂ ಇತರೆ ಶೈಕ್ಷಣಿಕ ತರಗತಿಗಳಿಗೆ ದಾಖಲಾತಿಗೊಳ್ಳುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಅರ್ಹತೆ ಪರೀಕ್ಷೆ ಮಾದರಿಯಲ್ಲಿ ಪ್ರವೇಶಾತಿ ಪರೀಕ್ಷೆ ನಡೆಸಬೇಕೆಂದು ಯುಜಿಸಿ ಅಧ್ಯಕ್ಷರ ಅಪಾಯಕಾರಿ ಹೇಳಿಕೆಯು ವಿದ್ಯಾರ್ಥಿ ವಿರೋಧಿ ಹೇಳಿಕೆ ಎಂದು ಎಸ್‌ಎಫ್‌ಐ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ಇಲ್ಲಿವರೆಗೂ ಕೇವಲ ಪಿಯುಸಿ ಅಂಕಗಳ ಆಧಾರದ ಮೇಲೆ ಪದವಿ ತರಗತಿಗಳಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಬಿಎ, ಬಿಕಾಂ, ಬಿಎಸ್ಸಿ ಪದವಿ ತರಗತಿಗಳಿಗೆ ಪ್ರವೇಶಾತಿ ಪರೀಕ್ಷೆ ನಿಗದಿಪಡಿಸುವ ಕ್ರಮ ಸರಿಯಲ್ಲಿ ಮತ್ತು ಯುಜಿಸಿ ಅಧ್ಯಕ್ಷರ ಸೂಚನೆಯನ್ನು ರಾಜ್ಯ ಸರ್ಕಾರ ಸರ್ಕಾರ ಕೈಬಿಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆಯ ರಾಜ್ಯ ಅಧ್ಯಕ್ಷ ಅಮರೇಶ ಕಡಗದ ಆಗ್ರಹಿಸಿದ್ದಾರೆ.

ಯುಜಿಸಿ ಅಧ್ಯಕ್ಷರ ಹೇಳಿಕೆಯನ್ನು ಖಂಡಿಸಿ ಏ.08ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿರುವ ಅಮರೇಶ ಕಡಗದ ತಿಳಿಸಿದ್ದಾರೆ.

ರಾಜ್ಯದಲ್ಲಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ ಕೇವಲ ಶೇಕಡ 20ರಷ್ಟು ಮಾತ್ರ ಇದೆ. ಇತ್ತೀಚಿನ ದಿನಗಳಲ್ಲಿ ಬಡವರು, ದಲಿತರು, ಹಿಂದುಳಿದ ವರ್ಗದ ಸಮುದಾಯಕ್ಕೆ ಸೇರಿದ ಕೆಲವೇ ಕೆಲವು ವಿದ್ಯಾರ್ಥಿ-ವಿದ್ಯಾರ್ಥಿನೀಯರು ಮಾತ್ರ ಉನ್ನತ ಶಿಕ್ಷಣಕ್ಕೆ ಬರುತ್ತಿದ್ದಾರೆ. ಇನ್ನು ಕೆಲವು ಜನ ಮಾತ್ರ ಪಿಎಚ್ ಡಿ ಮಾಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಸರ್ಕಾರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಕಲಿಯಲು ಆದ್ಯತೆ ಕೊಡಬೇಕಾಗಿತ್ತು. ಆದರೆ, ಯುಜಿಸಿ ರಾಜ್ಯದ ಬಡವರ, ದಲಿತರ, ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ನಿರಾಕರಣೆ ಮಾಡುವ ಹುನ್ನಾರ ಮಾಡುತ್ತಿರುವುದನ್ನು ಎಸ್ಎಫ್ಐ ಸಂಘಟನೆ ತೀವ್ರವಾಗಿ ಖಂಡಿಸಿದೆ.

ಯುಜಿಸಿ ಅಧ್ಯಕ್ಷರ ಸೂಚನೆಗಳನ್ನು ಅನುಷ್ಠಾನಗೊಳಿಸಬಾರದು ಮತ್ತು ಈಗಿರುವ ಯಥಾಸ್ಥಿತಿಯಾಗಿ ಈಗಿರುವ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾಲಯದ ಉಪಕುಲಪತಿಗಳು ಮತ್ತು ಕುಲಸಚಿವರಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಸಂಘಟನೆ ಮನವಿ ಮಾಡಿದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯೊಂದಿಗೆ ಜಾರಿಗೊಳ್ಳುತ್ತಿರುವ ಹೊಸ ಹೊಸ ಶೈಕ್ಷಣಿಕ ಪ್ರಕ್ರಿಯೆಗಳು ಶಿಕ್ಷಣವನ್ನು ಇನ್ನಷ್ಟು ವ್ಯಾಪಾರೀಕರಣ ಮಾಡುವ ಹುನ್ನಾರವಾಗಿದೆ. ಅದರೊಂದಿಗೆ, ಖಾಸಗಿ ಕಾಲೇಜುಗಳ ಟ್ಯೂಷನ್ ಲಾಬಿ ಹೆಚ್ಚು ಮಾಡುವ ಮೂಲಕ ಬಡ, ಮಧ್ಯಮ ವರ್ಗ, ತಳ ಸಮುದಾಯಗಳ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿಸುವ ಕೆಲಸ ಇದಾಗಿದೆ ಎಂದು ಎಸ್ಎಫ್ಐ ಸಂಘಟನೆ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *