ಪದವಿ ಶಿಕ್ಷಣದಲ್ಲಿ ಅನುಷ್ಠಾನಗೊಳಿಸುವ ಹೊಸ ನೀತಿ ಕೈಬಿಡಲು ವಿದ್ಯಾರ್ಥಿಗಳು ಪ್ರತಿಭಟನೆ

ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರವು ಕೇಂದ್ರದ ಎನ್‌ಇಪಿ-2020 ಅನುಷ್ಠಾನದ ಭಾಗವಾಗಿ ಪದವಿ ಶಿಕ್ಷಣವನ್ನು ಮೂರು ವರ್ಷದಿಂದ ನಾಲ್ಕು ವರ್ಷಕ್ಕೆ ಏರಿಸುತ್ತಿರುವುದನ್ನು ಹಾಗೂ ಭಾಷಾ ನೀತಿಯಲ್ಲಿ ಮಾತೃಭಾಷೆಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸುತ್ತಿರುವುದನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳು ಇಂದು ರಾಜ್ಯದಲ್ಲಿ ಪ್ರತಿಭಟನಾ ಧರಣಿಯನ್ನು ನಡೆಸಿದರು.

ಎಸ್‌ಎಫ್‌ಐ, ಎಐಎಸ್‌ಎಫ್‌, ಎಐಡಿಎಸ್‌ಓ, ಎಐಎಸ್‌ಎ, ಕೆವಿಎಸ್‌, ಸಂಘಟನೆಯ ವಿದ್ಯಾರ್ಥಿಗಳು ಸರಕಾರಿ ಕಛೇರಿಗಳ ಮುಂಭಾಗ ಪ್ರತಿಭಟನೆಯನ್ನು ನಡೆಸಿ ಅಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ.

ಇದನ್ನು ಓದಿ: ರಾಜ್ಯದಲ್ಲಿ 14 ಲಕ್ಷ ಮಕ್ಕಳ ಬಳಿ ಮೊಬೈಲ್‌ ಸೌಲಭ್ಯವಿಲ್ಲ- ಶೇಕಡಾ 40ರಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ

ಮೂರು ವರ್ಷದ ಪದವಿ ಶಿಕ್ಷಣವನ್ನು ನಾಲ್ಕು ವರ್ಷಕ್ಕೆ ಏರಿಕೆ ಮಾಡಬೇಕೆಂಬ ಹೊಸ ಶಿಕ್ಷಣ ನೀತಿ(ಎನ್ಇಪಿ2020)ಯ ಪ್ರಸ್ತಾಪವನ್ನು ರಾಜ್ಯ ಸರಕಾರ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲು ಹೊರಟಿದೆ. ಅಲ್ಲದೆ ಅದಕ್ಕಾಗಿ ಸಮಿತಿಯೊಂದನ್ನು ರಚಿಸಿ ಕೇವಲ ಹತ್ತು ದಿನದಲ್ಲಿಯೇ ವರದಿ ನೀಡಲೂ ಕೇಳಿತ್ತು! ಮಾತೃ ಭಾಷಾ ಕಲಿಕೆಯನ್ನೂ ಒಂದು ವರ್ಷಕ್ಕೆ ಸೀಮಿತಿಗೊಳಿಸುವ ಪ್ರಯತ್ನವೂ ನಡೆಯುತ್ತಿದೆ. ಇದೆಲ್ಲವನ್ನೂ ರಾಜ್ಯ ಸರ್ಕಾರ ದೇಶದಲ್ಲಿ ನಾವೇ ಮೊದಲು ಜಾರಿ ಮಾಡುತ್ತೇವೆ ಎಂದು ಆತುರದಲ್ಲಿ ಹೊರಟಿರುವುದು ವಿದ್ಯಾರ್ಥಿಗಳಿ ಮಾರಕವಾಗಲಿದೆ ಎಂದು ಸಂಘಟನೆಯು ಆರೋಪಿಸಿದೆ.

ಮೂರು ವರ್ಷಗಳಲ್ಲೆ ಪದವಿ ವ್ಯಾಸಂಗ ಮುಗಿಸಿ ನಿರುದ್ಯೋಗ ಸೈನ್ಯ ಸೇರುವವರನ್ನು ಕನಿಷ್ಠ ಒಂದು ವರ್ಷ ನಿಯಂತ್ರಿಸುವ ದುಷ್ಟ ಯೋಚನೆ ಇದಾಗಿದೆ. ವಿದ್ಯಾರ್ಥಿ ಹಾಗೂ ಆತನ ಪೋಷಕರು ಮತ್ತೊಂದು ವರ್ಷದ ವ್ಯಾಸಂಗಕ್ಕೆ ದುಬಾರಿ ಶುಲ್ಕ ಮತ್ತಿತರೇ ವೆಚ್ಚ ಭರಿಸುವ ಹೊರೆಯನ್ನು ಹೇರುವ ಮತ್ತು ಆ ಮೂಲಕ ಖಾಸಗೀ ಶಿಕ್ಷಣ ಸಂಸ್ಥೆಗಳ ಲೂಟಿಗೆ ದಾರಿ ಮಾಡಿಕೊಡುವ ಸ್ಪಷ್ಟ ನಿದರ್ಶನ ಇದಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಆದ್ದರಿಂದ ಪದವಿ ಶಿಕ್ಷಣವನ್ನು ನಾಲ್ಕು ವರ್ಷಗಳಿಗೆ ವಿಸ್ತರಿಸಿರುವುದನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಎಡ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ರಾಜ್ಯ ಸರಕಾರವನ್ನು ಒತ್ತಾಯಪಡಿಸಿದೆ.

ಇದನ್ನು ಓದಿ: ನಾಲ್ಕು ವರ್ಷಗಳ ಪದವಿ ಶಿಕ್ಷಣ: ಬೆಂಕಿಯಿಂದ ಬಾಣಲೆಗೆ

ಇದರೊಂದಿಗೆ ಈ ಜಾಲ್ತಿಯಲ್ಲಿರುವ ಮೂರು ವರ್ಷಗಳ ಪದವಿ ವ್ಯಾಸಂಗದ ಸಂದರ್ಭದಲ್ಲಿದ್ದ ನಾಲ್ಕು ಸೆಮಿಸ್ಟರ್‌ಗಳ ಕನ್ನಡ ಭಾಷಾ ವ್ಯಾಸಂಗವನ್ನು ಎರಡು ಸೆಮಿಸ್ಟರ್‌ಗಳಿಗೆ ಮೊಟಕುಗೊಳಿಸಲಾಗಿದೆ. ರಾಜ್ಯ ಸರಕಾರದ ಈ ನಾಡದ್ರೋಹಿ ಕ್ರಮಗಳು ವಿದ್ಯಾರ್ಥಿ ಹಾಗೂ ಕನ್ನಡ ವಿರೋಧಿ ಮತ್ತು ರಾಜ್ಯದ ಅಭಿವೃದ್ದಿ ವಿರೋಧಿ ಕ್ರಮಗಳಾಗಿವೆ. ತಕ್ಷಣವೇ ಈ ಎರಡು ಜನ ವಿರೋಧಿ ಶಿಕ್ಷಣ ಕ್ರಮಗಳನ್ನು ವಾಪಾಸು ಪಡೆಯುವಂತೆ ಎಡ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದ ಮೂಲಕ ಹಮ್ಮಿಕೊಂಡಿದ್ದ ಪ್ರತಿಭಟನೆಯ ಮೂಲಕ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ದಶಕಗಳಿಂದ ಉಚಿತ ಮತ್ತು ಗುಣಮಟ್ಟದ ಸಮಾನ ಶಿಕ್ಷಣದ ಜಾರಿಗಾಗಿ ಸುದೀರ್ಘವಾಗಿ ಹೋರಾಟ ನಡೆಯುತ್ತಲೇ ಬಂದಿವೆ. ಬೆಳೆಯುವ ಕುಡಿಗಳಲ್ಲಿ ಅಸಮಾನತೆಯನ್ನು ಬಿತ್ತುವ ಶಿಕ್ಷಣ ವ್ಯವಸ್ಥೆಯ ಬದಲಾಗಿ ಸಮಾನತೆ ಮತ್ತು ಸೌಹಾರ್ದತೆಯ ಸಮಾಜ ನಿರ್ಮಾಣಕ್ಕಾಗಿ ಸಮಾನ ಶಿಕ್ಷಣದ ಕೂಗು ಇದ್ದರೂ ಇದರ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಇನ್ನು ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ಜಿಡಿಪಿಯ ಶೇ.6% ಮತ್ತು ರಾಜ್ಯ ಬಜೆಟ್ ನ ಶೇ.30% ಹಣವನ್ನು ಮೀಸಲಿಡಬೇಕು ಎಂದು ಶಿಕ್ಷಣ ಆಯೋಗಗಳು, ಶಿಕ್ಷಣ ತಜ್ಞರು ಶಿಫಾರಸು ಮಾಡುತ್ತಿದ್ದಾರೆ, ಎನ್ಇಪಿ-2020 ಕೂಡ ಇದೇ ಹೇಳುತ್ತಿದೆ. ಇವುಗಳಿಗಾಗಿ ಯಾವುದೇ ಸರಕಾರಗಳಾಗಲಿ, ಸಚಿವರಾಗಲಿ ತುರ್ತು ಸಮಿತಿಗಳು ರಚಿಸಿ ವರದಿ ಕೇಳಲಿಲ್ಲ, ಅನುಷ್ಠಾನಕ್ಕೆ ಉತ್ಸುಕುರಾಗುತ್ತಿಲ್ಲ ಎನ್ನುವುದು ಆಶ್ಚರ್ಯವಾಗಿದೆ! ಆದರೆ ಈ ಕೋವಿಡ್ ಸಂದರ್ಭದಲ್ಲಿ ಗಡಿಬಿಡಿಯಲ್ಲಿ ಸರಕಾರವು ಆತುರದ ನಿರ್ಧಾರಗಳನ್ನು ತೆಗೆದುಕೊಂಡು  ಸಮಿತಿಗಳನ್ನು ರಚಿಸಿರುವುದು ಅಪ್ರಜಾತಾಂತ್ರಿಕ ನಡೆಯಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ದೊಡ್ಡ ಆಘಾತವನ್ನು ಉಂಟಾಗಿದೆ ಎಂದು ಸಂಘಟನೆಯು ಆರೋಪ ಮಾಡಿದೆ.

ಮನವಿ ಮೂಲಕ ಕೆಲವು ಪ್ರಮುಖ ಹಕ್ಕೊತ್ತಾಯಗಳನ್ನು ವಿದ್ಯಾರ್ಥಿ ಸಂಘಟನೆಗಳು ಮಂಡಿಸಿವೆ:

  1. ಎನ್ ಇ ಪಿ-2020 ಅನ್ನು ಸಂಸತ್ತಿನಲ್ಲೂ ಹಾಗೂ ರಾಜ್ಯದ ವಿಧಾನಸಭೆಯಲ್ಲಿ ಚರ್ಚಿಸಲಿಲ್ಲ. ಶಿಕ್ಷಣವು ಶೆಡ್ಯೂಲ್-7ರ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ ಹೀಗಾಗಿ ಶಿಕ್ಷಣ ನೀತಿ ಕುರಿತಂತೆ ರಾಜ್ಯಗಳಿಗೆ ಸಮಾನ ಹಕ್ಕುಗುಳು ಇವೆ. ಆದರೆ ಈ ವಿಷಯದಲ್ಲಿ ರಾಜ್ಯಗಳನ್ನು ಕಡೆಗಣಿಸಿ ಏಕ ಪಕ್ಷೀಯವಾಗಿ ದೇಶದ ಮೇಲೆ ಎನ್ಇಪಿ-2020 ಹೇರಲು ಹೊರಟಿದೆ. ಈ ಕಾರಣಕ್ಕಾಗಿ ರಾಜ್ಯ ವಿಧಾನ ಮಂಡಲದಲ್ಲಿ ಈ ಬಗ್ಗೆ ಸಮಗ್ರ ಚರ್ಚೆ ಆಗಬೇಕು.
  2. ಮಾತೃಭಾಷಾ ಕನ್ನಡ ಕಲಿಕೆ ಎಲ್ಲಾ ಹಂತದಲ್ಲಿಯೂ ಇರಬೇಕು ಮತ್ತು ಮಾತೃಭಾಷೆಯಲ್ಲಿ ವ್ಯಾಸಂಗ ಮಾಡಿದವರಿಗೆ ಆದ್ಯತೆಯ ಮೇಲೆ ಶಿಷ್ಯ ವೇತನ ಮತ್ತು ಉದ್ಯೋಗವಕಾಶಗಳನ್ನು ಸೃಷ್ಟಿ ಮಾಡುವ ನಿಟ್ಟಿನಲ್ಲಿ ನೀತಿಗಳು ರೂಪಿಸಬೇಕು.
  3. ರಾಜ್ಯದ ಶಿಕ್ಷಣ ಹಕ್ಕುದಾರರೊಂದಿಗೆ (ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು) ಎನ್ ಇ ಪಿ-2020ರ ಕುರಿತಂತೆ ಸಮಗ್ರವಾಗಿ ಚರ್ಚಿಸಬೇಕು.
  4. ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳಿಗೆ ಶೇಕಡಾ 30% ಕಲಿಕೆ ಆಗಿಲ್ಲವೆಂದು ಸರಕಾರವೇ ತಿಳಿಸುತ್ತಿದೆ. ಕೊರೊನಾ ಸಾಂಕ್ರಮಿಕ ಚಾಲ್ತಿಯಲ್ಲಿರುವ ಈ ಸಂದರ್ಭದಲ್ಲಿ ಇಂತಹ ಮುಖ್ಯ ನಿರ್ಧಾರಗಳನ್ನು ಏಕ ಪಕ್ಷೀಯವಾಗಿ ತೆಗೆದುಕೊಳ್ಳುತ್ತಿರುವುದು ಉನ್ನತ ಶಿಕ್ಷಣಕ್ಕೆ ಮಾರಕವಾಗಿದೆ.
  5. ಸಮಿತಿಯೊಂದಿಗೆ ನಡೆಯುವ ಚರ್ಚೆ ಮತ್ತು ವರದಿಗಳು ಪಾರದರ್ಶಕವಾಗಿರಿಸಬೇಕು, ಅವುಗಳು ಎಲ್ಲರಿಗೂ ತಲುಪುವಂತೆ ಕಾಲಕಾಲಕ್ಕೆ ಪ್ರಕಟಿಸಬೇಕು.
  6. ಈ ಎಲ್ಲಾ ವಿಷಯಗಳು ಬಗೆಹರೆಯವವರೆಗೂ ರಾಜ್ಯದಲ್ಲಿ ಎನ್ ಇ ಪಿ-2020 ಅನ್ನು ಜಾರಿ ಮಾಡಬಾರದು,

ಈ ಮೇಲಿನ ಪ್ರಮುಖ ಅಂಶಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರಕಾರಿ ಕಛೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘಟನೆಯು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *