ಜಸ್ಟೀಸ್‌ ದಾಸ್‌ ಸಮಿತಿ ಶೀಘ್ರ ವರದಿ ನೀಡಲಿ – ಒಳ ಮೀಸಲಾತಿ ಹೋರಾಟಗಾರರ ಆಗ್ರಹ

ಬೆಂಗಳೂರು: ಒಳ ಮೀಸಲಾತಿ ಕುರಿತು ಜಸ್ಟೀಸ್‌ ನಾಗಮೋಹನದಾಸ್‌ ಸಮಿತಿಯ ವರದಿ ಶೀಘ್ರವಾಗಿ ನೀಡಬೇಕು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಬಸವರಾಜ್‌ ಕೌತಾಳ್‌ ಹಾಗೂ ವಿನಯ್‌ ಶ್ರೀನಿವಾಸ್‌ ತಿಳಿಸಿದ್ದಾರೆ.

ಸುಮಾರು ನಾಲ್ಕು ದಶಕಗಳ ಒಳಮೀಸಲಾತಿ ಹೋರಾಟವು ಕಳೆದ ಆಗಸ್ಟ್ 1, 2024 ರ ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ಒಂದು ತಾರ್ಕಿಕ ಅಂತ್ಯಕಂಡಿತು. ಒಳಮೀಸಲಾತಿಯ ಪರ ವಿರೋಧದ ಚರ್ಚೆಗಳು ತಕ್ಕಮಟ್ಟಿಗೆ ಶಮನಗೊಂಡು ಒಳಮೀಸಲಾತಿ ಯಾರಿಗೆ ಎಷ್ಟೆಷ್ಟು ಸಿಗಬೇಕೆಂಬ ಚರ್ಚೆಗಳು ಹೆಚ್ಚಾದವು, ಈ ದಿಸೆಯಲ್ಲಿ ತುಸು ತಡವಾದರೂ ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಲು ಜಸ್ಟೀಸ್‌ ನಾಗಮೋಹನ್‌ ದಾಸ್‌ ಸಮಿತಿಯನ್ನು ರಚಿಸಿರುವುದು ಅಭಿನಂದನೀಯ. ಇಷ್ಟು ವರ್ಷಕಾದ ನಮಗೆ ಇನ್ನೆರಡು ತಿಂಗಳು ಕಾಯುವುದು ತ್ರಾಸದಾಯಕವಲ್ಲ. ನಿಜ, ಒಳಮೀಸಲಾತಿ ಜಾರಿಯಾಗುವವರೆಗೆ ಎಲ್ಲಾ ಸರ್ಕಾರಿ ನೇಮಕಾತಿಗಳನ್ನು ತಡೆಹಿಡಿದಿರುವುದು ಸ್ವಾಗತಾರ್ಹವೇ. ಆದರೂ ಹೆಚ್ಚು ಕಾಲ ಹೀಗೆ ನೇಮಕಾತಿ ತಡೆಹಿಡಿಯುವುದರ ಮೂಲಕ ಇತರರಿಗೂ ತೊಂದರೆ ಕೊಡುವುದುಅ ನ್ಯಾಯವಾಗುತ್ತದೆ ಎಂದರು.

ಜೊತೆಗೆ ಅತ್ಯಂತ ತಳ ಸಮುದಾಯದ ಬೇಡಿಕೆಗಳನ್ನು ಸತತವಾಗಿ ಮುಂದೂಡುವುದು ಸಹ ಅನ್ಯಾಯವೇ ಆಗುತ್ತದೆ. ಆದ್ದರಿಂದ ತುರ್ತಾಗಿ ಜಸ್ಟೀಸ್‌ ನಾಗಮೋಹನ್‌ ದಾಸ್‌ ಸಮಿತಿಯು ತನ್ನ ವರದಿಯನ್ನು ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಚೆನ್ನೈ| ಗರ್ಭಿಣಿಗೆ ಲೈಂಗಿಕ ಕಿರುಕುಳ ನೀಡಿ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ತಳ್ಳಿದ ವ್ಯಕ್ತಿ

ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಬೇಡಿಕೆಗಳು ಈ ಕೆಳಗಿನಂತಿವೆ
  1. ಯಾವುದೇ ಕಾರಣಕ್ಕೂ ಯಾವುದೇ ಸಮುದಾಯಕ್ಕೂ ಅನ್ಯಾಯವಾಗದ ಹಾಗೆ ಒಳಮೀಸಲಾತಿ ವರ್ಗೀಕರಣ ಮಾಡಬೇಕು.
  2. ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ ʼಪ್ರಾಯೋಗಿಕದತ್ತಾಂಶʼವನ್ನು ಮಾನದಂಡವನ್ನಾಗಿ ವಿಧಿಸಿರುವುದರಿಂದ ಮುಂದಿನ ಜನಗಣತಿಯವರೆಗೆ ಅವಶ್ಯಕವಿರುವ ಅಂಶಗಳಿಗೆಲ್ಲ ʼಸ್ಯಾಂಪಲ್‌ ಸಮೀಕ್ಷೆʼ ಕೈಗೊಳ್ಳಬೇಕು. ಇದಕ್ಕೆ ರಾಜ್ಯ ಸರ್ಕಾರ ಶೀಘ್ರ ಅನುದಾನ ಬಿಡುಗಡೆ ಮಾಡಬೇಕು.
  3. ಉದ್ಯೋಗಗಳಲ್ಲಿ ಅತಿ ಕಡಿಮೆ ಆಯ್ಕೆ/ಅವಕಾಶಗಳಿದ್ದಾಗ, ಪ. ಜಾತಿಯ ಯಾವ ಗುಂಪಿಗೆ ಮೊದಲ ಆದ್ಯತೆ ನೀಡಬೇಕೆಂಬ ಶ್ರೇಣೀಕರಣವನ್ನು ನಿಗದಿಗೊಳಿಸ ಬೇಕು.
  4. ಬಡ್ತಿ ಮೀಸಲಾತಿಯಲ್ಲಿಯೂ ಒಳಮೀಸಲಾತಿಯನ್ನು ಪರಿಗಣಿಸಬೇಕು.
  5. ರಾಜಕೀಯ ಮತಕ್ಷೇತ್ರ ಮೀಸಲಾತಿಯಲ್ಲಿಯೂ ಒಳಮೀಸಲಾತಿಯನ್ನು ಕಡ್ಡಾಯಗೊಳಿಸಲು ಶಿಫಾರಸು ಮಾಡಬೇಕು.
  6. ಗುತ್ತಿಗೆ ನೌಕರಿಗಳಲ್ಲಿಯೂ ಒಳಮೀಸಲಾತಿ ಪರಿಗಣಿಸಲು ಶಿಫಾರಸು ಮಾಡಬೇಕು.
  7. ಒಳಮೀಸಲಾತಿ ಅನುಷ್ಠಾನದಲ್ಲಿನ ಕುಂದು ಕೊರತೆಗಳು ಹಾಗೂ ಪ್ರಗತಿಯ ಮೇಲ್ವಿಚಾರಣೆ ಮಾಡಲು ರಾಜ್ಯ ಪರಿಶಿಷ್ಟ ಆಯೋಗದಡಿಯಲ್ಲಿ ಒಂದು ಸ್ವತಂತ್ರ ಸಮಿತಿ ರಚಿಸಬೇಕು.
  8. ಇಂದಿರಾ ಸಹಾನಿ ತೀರ್ಪಿನನ್ವಯ ಮೀಸಲಾತಿಗೆ ವಿಧಿಸಿರುವ ಶೇ.50 ಮೀಸಲಾತಿ ಮಿತಿಯನ್ನು ರದ್ದುಪಡಿಸಲು ರಾಜ್ಯ ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಬೇಕು.
  9. ಉದ್ಯೋಗಾಕಾಂಕ್ಷಿಗಳಿಗೆ ಸಮಸ್ಯೆಯಾಗದಂತೆ ನಿಗದಿತ ಗಡುವಿನೊಳಗೆ ಆಯೋಗವು ವರದಿ ನೀಡಬೇಕು.

ಇದನ್ನೂ ನೋಡಿ: ಕೇಂದ್ರ ಬಜೆಟ್‌ 2025 : ಬಡವರಿಗೆ ಏನೂ ಇಲ್ಲ! ಶ್ರೀಮಂತರಿಗಾಗಿ ಮಂಡಿಸಿದ ಬಜೆಟ್‌ Janashakthi Media

Donate Janashakthi Media

Leave a Reply

Your email address will not be published. Required fields are marked *