ಬೆಂಗಳೂರು : ಧರ್ಮಸ್ಥಳದ ಸುತ್ತಮುತ್ತಲಿನ ಅಮಾನುಷ ಘಟನೆಗಳ ಕುರಿತು ಎಸ್.ಐ.ಟಿ. ತನಿಖೆ ನಡೆಸುತ್ತಿರುವಾಗಲೇ ರಾಜ್ಯ ಸಚಿವ ಸಂಪುಟದ ಸದಸ್ಯರ ಮತ್ತು ವಿರೋಧ ಪಕ್ಷದ ಸದಸ್ಯರ ಕಾನೂನು ವಿರೋಧಿ ಹೇಳಿಕೆಗಳಿಗೆ ಜಾಗೃತ ನಾಗರಿಕರು ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದೆ.
ಹಿರಿಯ ಸಾಹಿತಿಗಳಾದ ಪ್ರೊ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ,ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಬಂಜಗೆರೆ ಜಯಪ್ರಕಾಶ್, ಡಾ.ಮೀನಾಕ್ಷಿ ಬಾಳಿ, ವಿಮಲಾ.ಕೆ.ಎಸ್, ಬಿ.ಶ್ರೀಪಾದ ಭಟ್, ಡಾ.ವಸುಂಧರಾ ಭೂಪತಿ, ಡಾ.ಎನ್ ಗಾಯತ್ರಿ, ನೀಲಾ.ಕೆ, ಜಾಣಗೆರೆ ವೆಂಕಟರಾಮಯ್ಯ, ರುದ್ರಪ್ಪ ಹುನಗವಾಡಿ, ಇಂದಿರಾ ಕೃಷ್ಣಪ್ಪ,ಮಾವಳ್ಳಿ ಶಂಕರ್,ಜಂಟಿ ಹೇಳಿಕೆ ನೀಡಿದ್ದು, ಧರ್ಮಸ್ಥಳದ ಸುತ್ತಮುತ್ತ ಕಳೆದ ನಾಲ್ಕು ದಶಕಗಳಿಂದ ದೌರ್ಜನ್ಯ ಅತ್ಯಾಚಾರ ಕೊಲೆ ಭೂ ಕಬಳಿಕೆ ಪ್ರಕರಣಗಳು ಆಗಾಗ ಮುನ್ನೆಲೆಗೆ ಬರುತ್ತಲೇ ಇವೆ.ಶಾಲಾ ಕಾಲೇಜುಗಳಿಗೆ ಹೋದ ವಿದ್ಯಾರ್ಥಿನಿಯರು ನಾಪತ್ತೆಯಾಗಿ ನಂತರ ಶವವಾಗಿ ಸಿಕ್ಕ ಪದ್ಮಲತಾ,ಅತ್ಯಾಚಾರ ನಡೆದ ಕುರುಹುಗಳನ್ನೂ ಮೈಮೇಲೆ ಹೊತ್ತು ಸಿಕ್ಕ ಸೌಜನ್ಯಳ ಶವಗಳು, ಆನೆ ಮಾವುತ ನಾರಾಯಣ, ತಂಗಿ ಯಮುನಾ ಶಿಕ್ಷಕಿ ವೇದವಲ್ಲಿ ಮುಂತಾಗಿ ಬಹು ಚರ್ಚಿತ ಪ್ರಕರಣಗಳು ನಮಗೆ ಕರುಳಿರಿಯುವ ಸಂಕಟಗಳಾಗಿ ಕಾಡುತ್ತಿವೆ ಎಂದಿದ್ದಾರೆ.
ಅಪಾರ ಭಕ್ತರನ್ನು ಹೊಂದಿರುವ, ಸತ್ಯಕ್ಷೇತ್ರವೆಂದೆ ಕರೆಸಿಕೊಳ್ಳುವ ಧರ್ಮಸ್ಥಳದ ಆಸುಪಾಸಿನಲ್ಲಿ ನಡೆದ ಘಟನೆಗಳಿಗೆ ಪೂರ್ವೇತಿಹಾಸಗಳಿವೆ ಎಂಬುದೂ ಇನ್ನೂ ಕಳವಳಕಾರಿ ಸಂಗತಿಗಳಾಗಿವೆ. ಸೌಜನ್ಯ ಪ್ರಕರಣದ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆಗಳು ನಡೆದು ಅದನ್ನು 2013 ರಲ್ಲಿ ಸಿ.ಬಿ.ಐ.ತನಿಖೆಗೆ ಒಪ್ಪಿಸಿ ಪ್ರಕರಣದ ಪ್ರಾಥಮಿಕ ತನಿಖಾಧಿಕಾರಿಗಳು ಎಸಗಿದ ದೋಷಗಳನ್ನು ಬೊಟ್ಟು ಮಾಡಿ ತೋರಿಸಿ ಅವರ ಮೇಲೆ ಕ್ರಮ ಕೈಗೊಳ್ಳಲು ಆದೇಶಿಸಿ ಸಿ.ಬಿ.ಐ. ನ್ಯಾಯಾಲಯದಿಂದ ತೀರ್ಪು ಬಂದಿದೆ.
ಇದನ್ನೂ ಓದಿ : ಪ್ರೀತಿಯ ಕಾಳನು ಬಿತ್ತಲು ಜಾಗ ಕೊಡಿ
ಅದೇ ವೇಳೆಗೆ ನಿರಪರಾಧಿಯಾಗಿದ್ದ ಸಂತೋಷ್ ರಾವ್ ರವರ ಮೇಲೆ ಆರೋಪ ಸಾಬೀತುಪಡಿಸುವ ಯಾವ ಸಾಕ್ಷಿಗಳೂ ಇಲ್ಲವೆಂದು ಹೇಳಿ ಅನಾವಶ್ಯಕವಾಗಿ ಆತನನ್ನು ಜೈಲಿನಲ್ಲಿರಿಸಿದ್ದಕ್ಕೆ ಪರಿಹಾರ ನೀಡಲು ಕೂಡ ಆದೇಶಿಸಿದೆ. ಈಗ ಸಾಕ್ಷಿ ಫಿರ್ಯಾದುದಾರರೊಬ್ಬರು ಮುಂದೆ ಬಂದು ತಾನು ಧರ್ಮಸ್ಥಳ ದಲ್ಲಿ ಸ್ವಚ್ಚತಾ ಕಾರ್ಮಿಕನಾಗಿ ಕೆಲಸ ಮಾಡುವಾಗ ಹಲವಾರು ಹೆಣಗಳನ್ನು ಹೂತಿದ್ದೇನೆಂದು ನ್ಯಾಯಾಧೀಶರ ಸಮ್ಮುಖದಲ್ಲಿ ಮಾಡಿದ ಹೇಳಿಕೆಯ ನಂತರ ವಿಶೇಷ ತನಿಖಾ ದಳವೊಂದನ್ನು ಸರ್ಕಾರ ರಚಿಸಿ ತನಿಖೆ ನಡೆಯುತ್ತಿದೆ. ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದ್ದಾರೆ.
ಸತ್ಯವನ್ನು ಬಯಲಿಗೆಳೆದು ಅಪರಾಧ ಎಸಗಿದವರು ಯಾರೇ ಇದ್ದರೂ ನೆಲದ ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗಬೇಕೆಂದು ಬಯಸುತ್ತೇವೆ. ಈ ಮಧ್ಯೆ ವಿಧಾನಸಭಾ ಅಧಿವೇಶನದಲ್ಲಿ ಉಪ ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು ಆಡಿದ ಮಾತುಗಳು ನಮಗೆ ಆಘಾತವುಂಟುಮಾಡಿವೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಿಗಳ ಹೇಳಿಕೆಗಳೂ ಕೂಡಾ ಎಸ್.ಐ.ಟಿ. ಅಧಿಕಾರಿಗಳ ಧೃತಿಗೆಡಿಸುವಂತೆ ಇದೆ. ನ್ಯಾಯಯುತವಾಗಿ ಸತ್ಯ ಹೊರಬರಲೆಂದು ಕಾಯುತ್ತಿರುವ ಸಂತ್ರಸ್ಥರ ಕುಟುಂಬಗಳಿಗೆ ಭಯ ಹಾಗೂ ನಿರಾಸೆ ಹುಟ್ಟಿಸುವಂತೆ ಈ ಮಾತುಗಳಿವೆ.
ಇನ್ನು ವಿರೋಧ ಪಕ್ಷವಾದ ಬಿ.ಜೆ.ಪಿ.ಯ ಶಾಸಕರುಗಳು ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡು ಜನರನ್ನು ಅನಗತ್ಯವಾಗಿ ಭಾವನಾತ್ಮಕವಾಗಿ ಪ್ರಚೋದಿಸುತ್ತಿದ್ದಾರೆ.
ಹತ್ಯೆ ಕೊಲೆ ಅತ್ಯಾಚಾರಗಳಂತಹ ಹೇಯ ಕೃತ್ಯ ಎಸಗಿದವರನ್ನು ಪತ್ತೆ ಮಾಡಲು ತಮ್ಮದೇ ಸರ್ಕಾರವಿದ್ದಾಗ ಪ್ರಯತ್ನವೇ ಮಾಡದವರು ಈಗಲೂ ಅದಕ್ಕೆ ಅಡ್ಡಿ ಪಡಿಸುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ.
ವ್ಯಕ್ತಿಗಳು ಎಸಗಿದ ತಪ್ಪುಗಳ ಕುರಿತು ಮಾತನಾಡಿದರೆ ಅದನ್ನು ದುರುದ್ದೇಶಪೂರ್ವಕವಾಗಿ ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರವೆಂದು ಬಿಂಬಿಸುತ್ತಿದ್ದಾರೆ. ಅಪಾರ ಸಂಖ್ಯೆಯ ಭಕ್ತರ ನಂಬಿಕೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಂಚು ಇದಾಗಿದೆ. ಇದು ಅಕ್ಷಮ್ಯ ಅಪರಾಧವಾಗಿದೆ. ನಾವ್ಯಾರೂ ಧರ್ಮಸ್ಥಳ ಕ್ಷೇತ್ರದ ಕುರಿತು ಮಾತನಾಡುತ್ತಿಲ್ಲ. ಅಲ್ಲಿ ನಡೆದ ದುರ್ಘಟನೆಗಳಿಗೆ ಕಾರಣರಾದವರು ಯಾರೆಂಬ ಸತ್ಯವನ್ನು ಬಯಲಿಗೆಳೆಯಿರಿ ಎಂಬುದು ನಮ್ಮೆಲ್ಲರ ಆಗ್ರಹ ಎಂದು ತಿಳಿಸಿದ್ದಾರೆ.
ತಪ್ಪು ಮಾಡಿದವರು ಯಾರೆಂದು ಬಯಲಾಗುವುದನ್ನು ತಡೆಯಲೆಂಬಂತೆ ಮತ್ತು ತಪ್ಪಿತಸ್ಥರನ್ನು ರಕ್ಷಿಸಲು ಟೊಂಕ ಕಟ್ಟಿ ನಿಂತಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಆದ್ದರಿಂದ ನ್ಯಾಯ ಮತ್ತು ಸತ್ಯದ ಪರವಾಗಿ ನಿಂತು ಕುಟುಂಬದ ಎಳೆ ಬಾಲೆಯರ ಮೇಲೆ ನಡೆದ ಅತ್ಯಾಚಾರ, ಕೊಲೆಗಳಿಗೆ ನ್ಯಾಯ ಕೊಡಿರೆಂದು ಕೇಳುತ್ತಿರುವ ಹೆತ್ತ ತಾಯಂದಿರಿಗೆ ಕನಿಷ್ಟ ಸಾಂತ್ವನದ ಹೆಜ್ಜೆಗಳಾಗಿ ಎಸ್.ಐ.ಟಿ. ತನಿಖೆಯನ್ನು ನಾವು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳು ತಮ್ಮ ಸಂಪುಟದ ಸದಸ್ಯರಿಗೆ ಕಾನೂನುಬಾಹಿರವಾಗಿ ಹೇಳಿಕೆ ನೀಡಿ ಎಸ್.ಐ.ಟಿ. ಯನ್ನು ಗೊಂದಲಕ್ಕೆ ದೂಡದಂತೆ ತಾಕೀತು ಮಾಡಬೇಕು ಎಂದು ಜಾಗೃತ ನಾಗರಿಕರು ಕರ್ನಾಟಕ ಆಗ್ರಹಿಸಿದೆ.
ಇದನ್ನು ನೋಡಿ : ಧರ್ಮಸ್ಥಳ ಕೊಲೆ ಪ್ರಕರಣ : ಕಾಂಗ್ರೆಸ್, ಬಿಜೆಪಿಯ ನಾಯಕರುಗಳೆ.. ನಿಮಗೆ ಮನುಷ್ಯತ್ವ ಇಲ್ಲವೆ? Janashakthi Media
