ಬೆಂಗಳೂರು: ನೂತನ ಬ್ಲಾಕ್ ನಿರ್ಮಾಣಕ್ಕೆ ಹಾಲಿ ಕಟ್ಟಡಗಳ ಸ್ಥಿರತೆ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದೆ. ಕ್ಯಾನ್ಸರ್ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲಾಗುತ್ತಿದ್ದು.
ಇದನ್ನೂ ಓದಿ : ನಕಲಿ ವೈದ್ಯ ನೇಮಿಸಿಕೊಳ್ಳುವ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ: ರಾಜ್ಯ ಸರ್ಕಾರ
ದಾಖಲಾತಿ ಹಾಗೂ ಚಿಕಿತ್ಸೆ ವಿಳಂಬವಾದಲ್ಲಿ ರೋಗ ಉಲ್ಬಣಗೊಳ್ಳುವ ಕಾರಣ, ಸಂಸ್ಥೆಗೆ ಭೇಟಿ ನೀಡುವ ಕ್ಯಾನ್ಸರ್ ಪೀಡಿತರನ್ನು ಕೂಡಲೇ ದಾಖಲಿಸಿಕೊಂಡು ಚಿಕಿತ್ಸೆ ಒದಗಿಸಲು ಹೊಸದಾಗಿ 450 ಹಾಸಿಗೆ ಸೇರ್ಪಡೆ ಮಾಡಲಾಗುತ್ತಿದೆ. ಇದರಿಂದಾಗಿ ಒಟ್ಟು ಹಾಸಿಗೆಗಳ ಸಂಖ್ಯೆ ಸಾವಿರದ ಗಡಿ ದಾಟಲಿದೆ. ಸಂಸ್ಥೆಯು ಕ್ಯಾನ್ಸರ್ ಚಿಕಿತ್ಸೆಯ ಜತೆಗೆ ಶಿಕ್ಷಣ, ಸಂಶೋಧನೆ ಹಾಗೂ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ತೊಡಗಿಕೊಂಡಿದೆ. ಇಲ್ಲಿನ ಹೊಂಬೇಗೌಡ ನಗರದಲ್ಲಿರುವ ಸಂಸ್ಥೆಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ರಾಜ್ಯದ ವಿವಿಧ ಭಾಗಗಳ ಜತೆಗೆ ಹೊರ ರಾಜ್ಯಗಳಿಂದಲೂ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿ ಆಗಿರುವ ಕಾರಣ, ಸಂಸ್ಥೆಯಲ್ಲಿ ಹಾಸಿಗೆಗೆ ಬೇಡಿಕೆ ಹೆಚ್ಚುತ್ತಿದೆ. ಇನ್ನೊಂದೆಡೆ ತಡವಾಗಿ ರೋಗ ಪತ್ತೆಯಿಂದ ಚಿಕಿತ್ಸೆ ಅವಧಿಯೂ ಹೆಚ್ಚುತ್ತಿದೆ. ಆದ್ದರಿಂದ ವೈದ್ಯಕೀಯ ಶಿಕ್ಷಣ ಇಲಾಖೆಯು ಸಂಸ್ಥೆಯಲ್ಲಿ ಹೊಸ ಬ್ಲಾಕ್ ನಿರ್ಮಾಣಕ್ಕೆ ಕ್ರಮ ಕೈಗೊಂಡಿದೆ. ಸಂಸ್ಥೆಯ ದಾಖಲಾತಿ ಪ್ರಕಾರ, ಶೇಕಡ 50ರಷ್ಟು ರೋಗಿಗಳು ಕ್ಯಾನ್ಸರ್ ಚಿಕಿತ್ಸೆಗೆ ಮೂರು ಹಾಗೂ ನಾಲ್ಕನೇ ಹಂತದಲ್ಲಿ ಬರುತ್ತಿದ್ದಾರೆ. ಶೇ 14.3ರಷ್ಟು ಮಂದಿಗೆ ಮಾತ್ರ ಮೊದಲ ಹಾಗೂ ಎರಡನೇ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ.
ಹೆಚ್ಚುವರಿ ಹಾಸಿಗೆಗಳ ಸೇರ್ಪಡೆಗೆ ನಾಲ್ಕು ಮಹಡಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಸಂಸ್ಥೆಯ ಹಾಲಿ ಕಟ್ಟಡಗಳ ಸ್ಥಿರತೆ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದೆ. ಸಂಸ್ಥೆಯ ಆವರಣದಲ್ಲಿರುವ ಸಿಫಾನಿ ಮತ್ತು ಧನರಾಜ್ ಡಾಗಾ ಬ್ಲಾಕ್ ಎರಡು ಮಹಡಿಗಳನ್ನು ಹೊಂದಿವೆ. ಅದೇ ರೀತಿ, ಅನಿಕೇತನ ಬ್ಲಾಕ್ ಮೂರು ಮಹಡಿಗಳನ್ನು ಒಳಗೊಂಡಿದೆ. ಈ ಎರಡೂ ಕಟ್ಟಡಗಳ ಸ್ಥಿರತೆ ಬಗ್ಗೆ ಅಧ್ಯಯನ ನಡೆಸಲಾಗುತ್ತಿದ್ದು, ವರದಿ ಆಧರಿಸಿ ಯಾವುದಾದರೂ ಒಂದು ಕಟ್ಟಡದ ಮೇಲೆ ನಾಲ್ಕು ಮಹಡಿಯ ಕಟ್ಟಡವನ್ನು ನಿರ್ಮಿಸಲಾಗುತ್ತದೆ. ಇದಕ್ಕೆ ತಗಲುವ ವೆಚ್ಚವನ್ನು ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್ಆರ್) ಭರಿಸಲು ನಿರ್ಧರಿಸಲಾಗಿದೆ.
‘ತಪಾಸಣೆ ಹಾಗೂ ರೋಗದ ಬಗ್ಗೆ ಹೆಚ್ಚಿದ ಅರಿವಿನಿಂದಾಗಿಯೂ ಕ್ಯಾನ್ಸರ್ ಹೊಸ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ. ಆದ್ದರಿಂದ ಹಾಸಿಗೆಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ. ರೋಗ ನಿರ್ಣಯಕ್ಕಾಗಿ ಬರುವವರನ್ನು ಅಂತಿಮ ವರದಿಗಳು ದೊರೆಯುವವರೆಗೆ ಆಸ್ಪತ್ರೆಯ ವಾರ್ಡ್ಗಳಲ್ಲಿ ಒಳರೋಗಿಗಳಾಗಿ ದಾಖಲಿಸಿಕೊಂಡು, ಚಿಕಿತ್ಸೆ ಒದಗಿಸಲು ಹೆಚ್ಚುವರಿ ಹಾಸಿಗೆಗಳು ಸಹಕಾರಿಯಾಗಲಿವೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಟಿ. ನವೀನ್ ತಿಳಿಸಿದರು.
ಬದಲಾದ ಜೀವನಶೈಲಿ ಹಾಗೂ ಪಾಶ್ಚಾತ್ಯ ಆಹಾರ ಪದ್ಧತಿ ಜತೆಗೆ ಧೂಮಪಾನದಂತಹ ವ್ಯಸನ ತಂಬಾಕು ಉತ್ಪನ್ನ ಸೇವನೆ ಒತ್ತಡದ ಜೀವನ ಕಲುಷಿತ ವಾತಾವರಣ ಸೇರಿ ವಿವಿಧ ಕಾರಣಗಳಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಕಿದ್ವಾಯಿ ಸಂಸ್ಥೆಯ ನೋಂದಣಿ ಪ್ರಕಾರ 2024ರಲ್ಲಿ ಕ್ಯಾನ್ಸರ್ ಪರೀಕ್ಷೆ ಹಾಗೂ ಚಿಕಿತ್ಸೆ ಸಂಬಂಧ ಹೊರರೋಗಿ ವಿಭಾಗಕ್ಕೆ (ಒಪಿಡಿ) 4.07 ಲಕ್ಷ ಮಂದಿ ಭೇಟಿ ನೀಡಿದ್ದರು.
22,063 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದರೆ ಸಂಸ್ಥೆ ನಡೆಸಿದ ತಪಾಸಣೆಯಿಂದ 21,881 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಸಂಸ್ಥೆಗೆ ಪ್ರತಿ ತಿಂಗಳು ಸರಾಸರಿ 33946 ಮಂದಿ ಹೊರ ರೋಗಿಗಳಾಗಿ ಭೇಟಿ ನೀಡುತ್ತಿದ್ದಾರೆ.
ಇದನ್ನೂ ನೋಡಿ : ಕಡಲೆಕಾಯಿ ಪರಿಷೆಗೆ ಶೃಂಗಾರಗೊಳ್ಳುತ್ತಿದೆ ಬಸವನಗುಡಿ |17 ರಿಂದ 21 | Janashakthi Media| #kadalekaiparishe
