ಬೆಂಗಳೂರು: ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ನಿತ್ಯ ಸರಾಸರಿ 16ರಂತೆ 1,888 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, 2,143 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಒಂದೂ ಪ್ರಕರಣದಲ್ಲೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಎಂಬ ಆಘಾತಕಾರಿ ವರದಿ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ನೂತನ ಸರ್ಕಾರ ಬಂದಾಗಿನಿಂದ 2025ರ ಜುಲೈ ಅಂತ್ಯದವರೆಗೆ ರಾಜ್ಯದಲ್ಲಿ 549 ಪ್ರಕರಣಗಳಲ್ಲಿ 407 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 2024ರಲ್ಲಿ 739 ಪ್ರಕರಣಗಳಿಂದ 969 ಹಾಗೂ 2023ರಲ್ಲಿ 600 ಪ್ರಕರಣಗಳಿಂದ 767 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಒಟ್ಟು ದಾಖಲಾಗಿರುವ 1,888 ಪ್ರಕರಣಗಳಲ್ಲಿ 2,143 ಪ್ರಕರಣಗಳು ವಿಚಾರಣೆ ಹಂತದಲ್ಲಿದೆ. 83 ಪ್ರಕರಣಗಳು ಖುಲಾಸೆಗೊಂಡಿದ್ದು, ಒಂದೂ ಪ್ರಕರಣದಲ್ಲೂ ಶಿಕ್ಷೆಯಾಗಿಲ್ಲ ಎಂದು ಗೃಹ ಇಲಾಖೆ ನೀಡಿದ ವರದಿಯಿಂದ ಬಹಿರಂಗವಾಗಿದೆ.
ಇದನ್ನೂ ಓದಿ: ಮಗಳನ್ನು ಕೊಲೆ ಮಾಡಿ, ಆತ್ಮಹತ್ಯೆ ಎಂದು ಕಥೆ ಕಟ್ಟಿದ ತಂದೆ
ರಾಜ್ಯದಲ್ಲಿ ಪ್ರತಿದಿನ ಸರಾಸರಿ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ವರ್ಷ 2 ಪ್ರಕರಣಗಳಿಗೆ ಸೀಮಿತವಾಗಿತ್ತು. ಲೈಂಗಿಕ ಕಿರುಕುಳ ಹಾಗೂ ಗಂಡನಿಂದ ಕಿರುಕುಳ ಪ್ರಕರಣ ಸಂಖ್ಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ಎರಡೂವರೆ ವರ್ಷಗಳಲ್ಲಿ 16,273 ಪ್ರಕರಣಗಳಿಂದ 19,312 ಆರೋಪಿಗಳನ್ನು ಬಂಧಿಸಲಾಗಿದೆ. ದಿನಕ್ಕೆ ಸರಾಸರಿ 16 ಮಂದಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವಾಗುತ್ತಿದೆ. ಈ ಪೈಕಿ 189 ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಪೊಲೀಸರು ಸಶಕ್ತರಾಗಿದ್ದಾರೆ.
ಪತಿಯಿಂದ ಪತ್ನಿಗೆ ಕಿರುಕುಳ ಪ್ರಕರಣಗಳು ಎರಡೂವರೆ ವರ್ಷಗಳಲ್ಲಿ 7,516 ಕೇಸ್ಗಳು ದಾಖಲಾಗಿದ್ದು, 7,930 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರತಿನಿತ್ಯ 8 ಕೇಸ್ಗಳು ಗಂಡನಿಂದ ಕಿರುಕಳ ಪ್ರಕರಣಗಳು ವರದಿಯಾಗುತ್ತಿವೆ. ಒಟ್ಟು ಪ್ರಕರಣಗಳಲ್ಲಿ 16 ಮಂದಿ ಅಪರಾಧಿಗಳಿಗೆ ಮಾತ್ರ ಶಿಕ್ಷೆಯಾಗಿದೆ. ಇನ್ನುಳಿದ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಚಯಸ್ಥರಿಂದಲೇ ಅತ್ಯಾಚಾರ: ದಾಖಲಾಗುವ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತೆಗೆ ಸಂಬಂಧಿಗಳು ಹಾಗೂ ಪರಿಚಯಸ್ಥರಾಗಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಒಟ್ಟಿಗೆ ಸುತ್ತಾಡುವ ಯುವ ಜೋಡಿಗಳು ದೈಹಿಕ ಸಂಪರ್ಕದ ಬಳಿಕ ವಿವಾಹವಾಗದೆ. ನುಣುಚಿಕೊಳ್ಳುವ ಪ್ರಹಸನಗಳು ಹೆಚ್ಚಾಗುತ್ತಿವೆ. ಬಳಿಕ ಠಾಣೆಗೆ ಹೋಗಿ ಸಂತ್ರಸ್ತೆಯು ಪ್ರಿಯಕರನ ವಿರುದ್ಧ ಅತ್ಯಾಚಾರ ಮಾಡಿರುವುದಾಗಿ ದೂರು ನೀಡುವುದು ಸಾಮಾನ್ಯವಾಗಿದೆ.
ಸಿನಿಮಾ ಹಾಗೂ ಸಾಮಾಜಿಕ ಜಾಲತಾಣಗಳಿಂದ ಪ್ರೇರೆಪಿತಗೊಂಡು ಆನ್ಲೈನ್ ಮೂಲಕ ಸಂಪರ್ಕ ಸಾಧಿಸಿ, ಆರಂಭವಾಗುವ ಸ್ನೇಹ ಕ್ರಮೇಣ ಆತ್ಮೀಯತೆಗೆ ತಿರುಗಿ ಬೇಜವಾಬ್ದಾರಿ ಕೃತ್ಯಗಳಲ್ಲಿ ಯುವ ಸಮುದಾಯ ಭಾಗಿಯಾಗುತ್ತಿರುವುದು ನೋವಿನ ವಿಚಾರವಾಗಿದೆ. ವಿವಿಧ ಕಾರಣಗಳಿಗಾಗಿ ದೂರವಾಗಿ, ತನಗೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಸಂತ್ರಸ್ತೆ ದೂರು ನೀಡುತ್ತಾರೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಯುವತಿ ಖಾಸಗಿ ವಿಡಿಯೋ ಹರಿಬಿಡುವುದಾಗಿ ಬೆದರಿಸಿ, ಹಣ ವಸೂಲಿ ಮಾಡುವ ಆರೋಪಿಗಳ ಸಂಖ್ಯೆ ಕೂಡ ಕಡಿಮೆಯಾಗಿಲ್ಲ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ಇದನ್ನೂ ನೋಡಿ: ದೌರ್ಜನ್ಯ ಪ್ರಕರಣ : ನ್ಯಾಯಕ್ಕಾಗಿ ಹೊರಟ ಧರ್ಮಸ್ಥಳ, ವಿಜಪುರದ ಮಣ್ಣುJanashakthi Media
