ವಯನಾಡ್ ಉಪಚುನಾವಣೆ ಘೋಷಣೆಗೆ ಯಾವುದೇ ಆತುರವಿಲ್ಲ: ಚುನಾವಣಾ ಆಯೋಗ

ವದೆಹಲಿ : ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ ಅವರಿಗೆ ಮಾನನಷ್ಟ ಮೊಕದ್ದಮೆಯಲ್ಲಿ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯವು ಒಂದು ತಿಂಗಳ ಕಾಲಾವಕಾಶ ನೀಡಿರುವ ಹಿನ್ನೆಲೆಯಲ್ಲಿ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸಲು ಯಾವುದೇ ಆತುರವಿಲ್ಲ ಎಂದು ಚುನಾವಣಾ ಆಯೋಗ ಬುಧವಾರ ಹೇಳಿದೆ.

ಫೆಬ್ರುವರಿವರೆಗೆ ತೆರವಾಗಿರುವ ಸ್ಥಾನಗಳ ಆಧಾರದಲ್ಲಿ ಚುನಾವಣಾ ಆಯೋಗ ನಿರ್ಧಾರ ಕೈಗೊಂಡಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ವಯನಾಡ್ ಉಪಚುನಾವಣೆ ಘೋಷಣೆಗೆ ಯಾವುದೇ ಆತುರವಿಲ್ಲ. ವಿಚಾರಣಾ ನ್ಯಾಯಾಲಯದ ಮುಂದಿನ ಆದೇಶದ ವರೆಗೆ ನಾವು ಕಾಯುತ್ತೇವೆ ಎಂದು ತಿಳಿಸಿದ್ದಾರೆ. ಗುಜರಾತ್ ನ್ಯಾಯಾಲಯ 2019ರಲ್ಲಿ ದಾಖಲಾದ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ನೀಡಿ ತೀರ್ಪು ನೀಡಿದೆ. ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತಿನಲ್ಲಿ ಇರಿಸಿ, ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರ ಬೆನ್ನಲ್ಲೇ ಲೋಕಸಭೆ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹಗೊಳಿಸಿ ಲೋಕಸಭಾ ಕಾರ್ಯಾಲಯ ಅಧಿಸೂಚನೆ ಹೊರಡಿಸಿತ್ತು. ಕಾನೂನಿನ ಪ್ರಕಾರ, ಸ್ಥಾನ ತೆರವುಗೊಂಡ ಆರು ತಿಂಗಳೊಳಗೆ ಉಪಚುನಾವಣೆ ನಡೆಯಬೇಕಿದೆ. ಆದರೆ ಹಾಲಿ ಸಂಸದರ ಅವಧಿಯೂ ಒಂದು ವರ್ಷಕ್ಕೂ ಕಡಮೆಯಿದ್ದರೆ ಉಪಚುನಾವಣೆ ನಡೆಸುವಂತಿಲ್ಲ.

ಇದನ್ನೂ ಓದಿ : ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಳಿಸಿ ಅಧಿಸೂಚನೆ

ವಯನಾಡ್ ಸಂಸದರ ಅವಧಿ ಇನ್ನೂ ಒಂದು ವರ್ಷಕ್ಕೂ ಹೆಚ್ಚಿದೆ. ಆದರೆ ನ್ಯಾಯಾಲಯದ ಮುಂದಿನ ಆದೇಶವನ್ನು ಗಮನದಲ್ಲಿಕೊಂಡು ಉಪಚುನಾವಣೆ ಘೋಷಣೆಗೆ ಯಾವುದೇ ಆತುರವಿಲ್ಲ ಎಂದು ರಾಜೀವ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *