ನಿತೀಶ್ ಕುಮಾರ್ ರವರ ಅನುಚಿತ ವರ್ತನೆ-ಕ್ಷಮೆಯಾಚಿಸಲು ಜನವಾದಿ ಮಹಿಳಾ ಸಂಘಟನೆ ಆಗ್ರಹ

ಬೆಂಗಳೂರು: ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ನೀಡುವಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ ರವರು, ಮುಸ್ಲಿಂ ಮಹಿಳೆಯ ಹಿಜಾಬ್ ಅನ್ನು ಎಳೆದು ಅವಮಾನಿಸಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಬಲವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷೆ ಚಂದ್ರಕುಮಾರಿ ಹಾಗೂ ಪ್ರಧಾನ ಕಾರ್ಯದರ್ಶಿ ದೇವಿ ಜಂಟಿ ಹೇಳಿಕೆ ನೀಡಿದ್ದಾರೆ. ಅನುಚಿತ

ರಾಜ್ಯದ ಅತ್ಯುನ್ನತ ಹುದ್ದೆಯನ್ನು ಹೊಂದಿರುವ ವ್ಯಕ್ತಿ, ಅಸಭ್ಯ ರೀತಿಯಲ್ಲಿ ವರ್ತಿಸುವುದು ಗಂಭೀರ ಸ್ವರೂಪದ ಪ್ರಮಾದವಾಗಿದೆ. ಈ ಅವಮಾನಕರ ಮತ್ತು ನಾಚಿಕೆಗೇಡಿನ ಕೃತ್ಯಕ್ಕಾಗಿ ನಿತೀಶ್ ಕುಮಾರ್ ರವರು ತಕ್ಷಣ ಕ್ಷಮೆಯಾಚಿಸಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸುತ್ತದೆ ಎಂದರು.

ಹಿಜಾಬ್ ಕೇವಲ ಬಟ್ಟೆಯ ತುಂಡು ಅಲ್ಲ; ಇದು ನಂಬಿಕೆ, ಗುರುತಿನ ಅಭಿವ್ಯಕ್ತಿ ಮತ್ತು ವೈಯಕ್ತಿಕ ಆಯ್ಕೆಯಾಗಿದೆ. ಮಹಿಳೆ ಏನು ಧರಿಸಬೇಕೆಂದು ನಿರ್ಧರಿಸುವ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡಲು ರಾಜ್ಯ ಸರ್ಕಾರ ಮಾಡುವ ಯಾವುದೇ ಪ್ರಯತ್ನವು ಭಾರತೀಯ ಸಂವಿಧಾನದ 14, 19, 21 ಮತ್ತು 25 ನೇ ವಿಧಿಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು | ಪೌರಕಾರ್ಮಿಕರ ಸುರಕ್ಷತೆಗೆ ಹೆಚ್ಚು ಗಮನಹರಿಸಿ – ಆಯುಕ್ತ ಡಾ. ರಾಜೇಂದ್ರ ಕೆ.ವಿ

ಮುಖ್ಯಮಂತ್ರಿಯ ಈ ನೀಚ ಕೃತ್ಯವು ಸಾಂವಿಧಾನಿಕ ಮೌಲ್ಯಗಳು, ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಮಹಿಳೆಯರ ಸ್ವಾಯತ್ತತೆಯ ಮೂಲತತ್ವಗಳಿಗೆ ಸಂಪೂರ್ಣ ವಿರುದ್ದವಾಗಿದೆ.

ತಮ್ಮ ಉಡುಪನ್ನು ನಿರ್ಧರಿಸುವ, ಮಹಿಳೆಯರ ಹಕ್ಕು ,ಅವರ ಘನತೆ, ಸ್ವಾಯತ್ತತೆ ಮತ್ತು ಸಮಾನತೆಯಲ್ಲಿ ಅಂತರ್ಗತವಾಗಿರುವಂತಹದ್ದು ಎಂದು ಜನವಾದಿ ಮಹಿಳಾ ಸಂಘಟನೆ ದೃಢವಾಗಿ ಪ್ರತಿಪಾದಿಸುತ್ತದೆ ಎಂದರು ಹೇಳಿದರು.

ಮಹಿಳೆಯರ ಉಡುಪುಗಳನ್ನು, ವಿಶೇಷವಾಗಿ ಮುಸ್ಲಿಂ ಮಹಿಳೆಯರ ಉಡುಪುಗಳನ್ನು ನಿಯಂತ್ರಿಸಲು ಅಥವಾ ನಿಗಾ ವಹಿಸಲು ರಾಜ್ಯ ಸರ್ಕಾರ ಮಾಡುವ ಯಾವುದೇ ಪ್ರಯತ್ನವು ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಸಂವಿಧಾನಾತ್ಮಕ ಖಾತರಿಗಳ ಉಲ್ಲಂಘನೆಯಾಗಿದೆ.

ಇಂತಹ ಅವಮಾನಕರ ನಡವಳಿಕೆಯು , ಸಾಮಾಜಿಕ ಮತ್ತು ಆರ್ಥಿಕ ವಾಗಿ ದುರ್ಬಲವಾಗಿರುವ ವಿಶೇಷವಾಗಿ ಮುಸ್ಲಿಂ ಮಹಿಳೆಯರನ್ನು ಅತೀವವಾಗಿ ಘಾಸಿಗೊಳಿಸುತ್ತದೆ ಎಂದರು.

ಒಂದು ಕಾಲದಲ್ಲಿ ಸಾಮಾಜಿಕ ನ್ಯಾಯ ಮತ್ತು ಧರ್ನಿರಪೇಕ್ಷತೆ ಯನ್ನು ಬೆಂಬಲಿಸುವುದಾಗಿ ಹೇಳಿಕೊಂಡಿದ್ದ ನಿತೇಶ್ ಕುಮಾರ್ ರವರು ಈಗ ಬಹುಸಂಖ್ಯಾತವಾದ ಮತ್ತು ಹೊರಗಿಡುವ ಕಾರ್ಯಸೂಚಿಗಳಿಗೆ ಅನುಗುಣವಾದ ನೀತಿಗಳನ್ನು ಅನುಕರಿಸುತ್ತಿರುವುದು ತೀವ್ರ ದುರದೃಷ್ಟಕರ. ಶಿಸ್ತು, ಏಕರೂಪತೆ ಅಥವಾ ಆಡಳಿತದ ನೆಪದಲ್ಲಿ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಳ್ಳುವುದು ಸಾಂಸ್ಥಿಕ ತಾರತಮ್ಯವಲ್ಲದೆ ಬೇರೇನೂ ಅಲ್ಲ. ಈ ಹಿನ್ನೆಲೆಯಲ್ಲಿ ಬಿಹಾರ ಸಂಪುಟ ಸಚಿವ ಸಂಜಯ್ ನಿಶಾದ್ ಮತ್ತು ಬಿಜೆಪಿ ನಾಯಕರು ನೀಡಿದ ಹೇಳಿಕೆಗಳು ಕೂಡ ಅತ್ಯಂತ ಆಕ್ಷೇಪಾರ್ಹ ಹಾಗೂ ಅಸಹ್ಯಕರವಾಗಿವೆ ಎಂದರು.

ಈ ಅನುಚಿತ ವರ್ತನೆ ಮೂಲಕ ನಿತೇಶ್ ಕುಮಾರ್ ಅವರು ತಮ್ಮ ಕೋಮುವಾದಿ ಮತ್ತು ಪಿತೃಪ್ರಧಾನ ಮುಖವನ್ನು ಪ್ರತಿಗಾಮಿ ಆರ್‌ಎಸ್‌ಎಸ್ ಮನುವಾದಿ ಆಳ್ವಿಕೆಯೊಂದಿಗೆ ಹೊಂದಿಸಿಕೊಳ್ಳುತ್ತಿರುವುದನ್ನು ಬಹಿರಂಗಪಡಿಸಿದ್ದಾರೆ.

ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಸ್ಪಷ್ಟ ಮತ್ತು ನಿಸ್ಸಂದಿಗ್ಧವಾದ ಸ್ಪಷ್ಟೀಕರಣವನ್ನು ಬಿಹಾರ ಸರ್ಕಾರವು ತಕ್ಷಣವೇ ಹೊರಡಿಸಬೇಕೆಂದು ಮತ್ತು ಯಾವುದೇ ಮಹಿಳೆ ಅಥವಾ ಹುಡುಗಿ ತನ್ನ ಉಡುಪಿನ ಆಧಾರದ ಮೇಲೆ ಶಿಕ್ಷಣ ಅಥವಾ ಸಾರ್ವಜನಿಕ ಸೇವೆಗಳನ್ನು ನಿರಾಕರಿಸದಂತೆ ನೋಡಿಕೊಳ್ಳಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸುತ್ತದೆ ಎಂದು ಹೇಳಿದರು.

ಈ ಅನುಚಿತ ವರ್ತನೆಯ ಬಲಿಪಶು ಆಗಿರುವ ಡಾ. ನುಸ್ರತ್ ಪರ್ವೀನ್ ರವರಿಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಬೆಂಬಲ ವ್ಯಕ್ತಪಡಿಸುತ್ತದೆ ಮತ್ತು ಬಿಹಾರ ಮುಖ್ಯಮಂತ್ರಿಯ ಸಂವಿಧಾನಬಾಹಿರ ವರ್ತನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಸಂಘಟನೆಗಳು, ಪ್ರಜಾಪ್ರಭುತ್ವ ಶಕ್ತಿಗಳು ಮತ್ತು ನಾಗರಿಕ ಸಮಾಜವು ಒಗ್ಗಟ್ಟಿನಿಂದ ಒತ್ತಾಯಿಸಬೇಕೆಂದು ಕರೆ ನೀಡುತ್ತದೆ ಎಂದು ತಿಳಿಸಿದರು.

ಇದನ್ನೂ ನೋಡಿ: ಧರ್ಮಸ್ಥಳ, ಮರಘಾ ಪ್ರಕರಣ | ಮಹಿಳೆಯರ ವಿರುದ್ಧ ಷಡ್ಯಂತ್ರಗಳು…! ಅಲ್ಲಿ ಇಲ್ಲಿ ಎಲ್ಲೆಲ್ಲೂ Janashakthi Media

Donate Janashakthi Media

Leave a Reply

Your email address will not be published. Required fields are marked *