ನೇಮಕಾತಿ ಪ್ರಕಟಣೆ ರದ್ದು-ಅರ್ಹರಿಗೆ ಬಡ್ತಿಗೆ ಆಗ್ರಹಿಸಿ ಅಂಗನವಾಡಿ ನೌಕರರ ಪ್ರತಿಭಟನೆ

ಹಾಸನ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೇಮಕ ಸಂಬಂಧ ಈಗ ಹೊರಡಿಸಿರುವ ಪ್ರಕಟಣೆಯನ್ನು ರದ್ದುಪಡಿಸಿ ಅರ್ಹ ಅಂಗನವಾಡಿ ನೌಕರರಿಗೆ ಹೊಸದಾಗಿ ಬಡ್ತಿ ನೀಡಿ ವರ್ಗಾವಣೆ ನೀಡಬೇಕು ಎಂದು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ಜಿಲ್ಲಾಧ್ಯಕ್ಷ ಧರ್ಮೇಶ್ ಒತ್ತಾಯಿಸಿದರು.

ನಗರದ ಕೆ.ಆರ್.ಪುರಂನಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಎದುರು ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಅಂಗನವಾಡಿ ನೌಕರರ ಪ್ರತಿಭಟನೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣನವರು ನೀವೇ ಮಾಡಿರುವ ತಪ್ಪಿನ ಬಗ್ಗೆ ಬಹಿರಂಗ ಚರ್ಚೆಗೆ ಮತ್ತು ಸಭೆ ನಡೆಸಲು ನೀವೇ ನಿಗದಿ ಮಾಡಿ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸವಾಲು ಹಾಕಿ ಆಗ್ರಹಿಸಿದರು.

ತಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೊಳೆನರಸೀಪುರದ ಸಿಡಿಪಿ ಕಚೇರಿ ಮುಂದೆ ಅಂಗನವಾಡಿ ನೌಕರರು ಪ್ರತಿಭಟನೆ ಮಾಡುತ್ತಿರುವಾಗ ಶಾಸಕ ಹೆಚ್.ಡಿ. ರೇವಣ್ಣನವರು ಸ್ಥಳಕ್ಕೆ ಆಗಮಿಸಿ ಮಹಿಳೆಯರು ಎಂದು ಪರಿಗಣಿಸದೇ ಅವಮಾನ ಮಾಡಿ ಹೋರಾಟಗಾರರನ್ನುಏಕವಚನದಲ್ಲಿ ನಿಂದಿಸಿರುವುದು ಖಂಡನೀಯವಾಗಿದ್ದು, ಕೂಡಲೇ ಬಹಿರಂಗ ಕ್ಷೇಮೆಯಾಚಿಸುವಂತೆ ಪ್ರತಿಭಟನೆ ಮಾಡಲಾಗುತ್ತಿದೆ. ಅಂಗನವಾಡಿ ನೌಕರರಿಗೆ ಸರ್ಕಾರ ಕಳೆದ 6 ತಿಂಗಳಿಂದ ಸರಿಯಾಗಿ ಗೌರವಧನ ನೀಡುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ ಅಂಗನವಾಡಿ ನೌಕರರಿಗೆ ಯಾವುದೇ ಸೌಲಭ್ಯಗಳನ್ನು ಸರ್ಕಾರ ನೀಡಲಿಲ್ಲ. ನಿವೃತ್ತರಾದ ಅಂಗನವಾಡಿ ನೌಕರರಿಗೆ ಸರ್ಕಾರ ಭರವಸೆ ನೀಡಿದಂತೆ ಇದುವರೆಗೂ ಇಡುಗಂಟು ನೀಡಿಲ್ಲ. ಕನಿಷ್ಟ ವೇತನ, ಗ್ರಾಚ್ಯುಟಿ, ನಿವೃತ್ತಿ ವೇತನ, ಭವಿಷ್ಯನಿಧಿ, ವಿಮೆ ಯಾವುದೇ ಸೌಲಭ್ಯಗಳಿಲ್ಲ. ಅರ್ಹ ಹಾಗೂ ಅಗತ್ಯವಿರುವ ಅಂಗನವಾಡಿ ನೌಕರರಿಗೆ ಸೂಕ್ತ ಸಮಯದಲ್ಲಿ ಮುಂಬಡ್ತಿ ಮತ್ತು ವರ್ಗಾವಣೆ ಸಿಗುತ್ತಿಲ್ಲ.

ಸಂವಿಧಾನ ಬದ್ಧವಾಗಿ ಜುಲೈ 13ರಂದು ಪ್ರತಿಭಟನೆ ಮಾಡುತ್ತಿದ್ದಾಗ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅಂಗನವಾಡಿ ಕಾರ್ಯಕರ್ತೆಯರಿಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ. ಕೂಡಲೇ ಕ್ಷಮೆಯಾಚಿಸದಿದ್ದರೇ ಜಿಲ್ಲಾಧ್ಯಂತ ಬಂದ್ ಗೆ ಕರೆ ಕೊಡುವುದಾಗಿ ಎಚ್ಚರಿಸಿದರು. ಅಂಗನವಾಡಿ ಕಾರ್ಯಕರ್ತೆಯರೆಲ್ಲ ಸೇರಿ ಸಿಡಿಪಿಒ ಕಚೇರಿ ಮುಖ್ಯಾಧಿಕಾರಿಗೆ ನೋಟಿಸ್ ಅನ್ನು ನೀಡಿ ಪ್ರತಿಭಟನೆ ಕುಳಿತಿದ್ದಾರೆ. ಈ ನಡುವೆ ಏಕಾಏಕಿ ಆಗಮಿಸಿದ ಹೆಚ್.ಡಿ ರೇವಣ್ಣ ಅವರು ಮಹಿಳೆಯರು ಎಂದು ಸಹ ನೋಡದೆ ಅವಾಚ್ಯ ಪದಗಳಿಂದ ನಿಂಧಿಸಿರುವುದು ಖಂಡನಾರ್ಹವಾಗಿದೆ. ರೇವಣ್ಣ ಅವರು ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು ಪ್ರತಿಭಟನಾಕಾರರು ಅವರ ವಿರುದ್ಧ ಏನು ಹೋರಾಟ ಮಾಡುತ್ತಿರಲಿಲ್ಲ. ಹಲವು ವರ್ಷಗಳಿಂದ ನೌಕರಿ ಕಾಯಂ ಹಾಗೂ ವಿವಿಧ ಬೇಡಿಕೆಗೆ ಈಡೇರಿಕೆ ಆಗ್ರಹಿಸಿ ಕಾರ್ಯಕರ್ತೆಯರು ಹೋರಾಟ ನಡೆಸುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಅಂದು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ರೇವಣ್ಣ ಅವರ ವರ್ತನೆ ಸರಿಯಾದ ಕ್ರಮವಲ್ಲ ಎಂದು ಖಂಡಿಸಿದರು.

ತಮಗೆ ಬೇಕಾದವರಿಗೆ ನೀಡಲು ಪ್ರತಿಭಟನಗಾರರನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಈ ರೀತಿ ನಡೆದುಕೊಳ್ಳಲಾಗಿದೆ ಎಂದು ದೂರಿದರು. ಕೂಡಲೇ ಬಹಿರಂಗವಾಗಿ ಅಂಗನವಾಡಿ ನೌಕರರಿಗೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಎಂ.ಜಿ. ಪೃಥ್ವಿ, ಆರ್.ಪಿ.ಐ, ಸತೀಶ್, ಸೋಮಶೇಖರ್, ಇತರರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *