ನನಗೆ ದಿಲ್ಲಿಯಿಂದ ಮಾಹಿತಿ ಸಿಕ್ಕಿದೆ; ರಾಜ್ಯದಲ್ಲಿ ಸಿಎಂ ಬದಲಾವಣೆ ಖಚಿತ: ಸಿದ್ದರಾಮಯ್ಯ

  • ಉಪ ಚುನಾವಣೆ ಫಲಿತಾಂಶದ ನಂತರ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ: ಸಿದ್ದರಾಮಯ್ಯ 

ಮೈಸೂರು: ಶೀಘ್ರದಲ್ಲೇ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಐ ಆ್ಯಮ್ ವೆರಿ ಕಾನ್ಫಿಡೆಂಟ್’ ಎಂದರು. ಯಡಿಯೂರಪ್ಪ ಬದಲಾಗುವುದು ಖಚಿತ ಎಂದು ಖಡಕ್ಕಾಗಿ ನುಡಿದ ಸಿದ್ದು, ನನಗೆ ದಿಲ್ಲಿಯಿಂದ ಈ ಬಗ್ಗೆ ಖಚಿತ ಮಾಹಿತಿ ಲಭಿಸಿದೆ ಎಂದರು.

ಕಳೆದ ಕೆಲವು ದಿನಗಳಿಂದ ಸಿಎಂ ಬದಲಾವಣೆ ಮಾಡುವ ಚಿಂತನೆಯಲ್ಲಿ ಬಿಜೆಪಿ ಪಕ್ಷ ಇದೆ. ನಾನು ಈಗಾಗಲೇ ಯಡಿಯೂರಪ್ಪ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದು, ಅದೂ ಒಂದು ಕಾರಣ ಇರಬಹುದು. ಹೀಗಾಗಿ ಉಪ ಚುನಾವಣೆ ಫಲಿತಾಂಶದ ನಂತರ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಉಪಚುನಾವಣೆ ಕುರಿತು ಮಾತನಾಡಿದ ಸಿದ್ದರಾಮಯ್ಯ, ಎರಡೂ ಕ್ಷೇತ್ರಗಳಲ್ಲಿ ಬಹುತೇಕ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ. ಶಿರಾದಲ್ಲಿ ಜಯಚಂದ್ರ ಗೆಲುವು ಸಾಧಿಸಲಿದ್ದು, ಆರ್.ಆರ್ ನಗರದಲ್ಲಿ ಕುಸುಮಾ ಗೆಲ್ಲುವ ಸಾಧ್ಯತೆ ಇದೆ. ಇದು ಕಾಂಗ್ರೆಸ್ ಪರವಾದ ಮತಗಳಾಗಿವೆ ಎಂದರು.

ಶಿರಾದಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಅಪಪ್ರಚಾರ ಆಗಿತ್ತು. ಆರ್.ಆರ್ ನಗರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಗೆದ್ದಿತ್ತು. ಜೊತೆಗೆ ನಾವು ಒಟ್ಟುಗೂಡಿ ಪ್ರಚಾರ ಮಾಡಿದಾಗ ಜನರು ಕಾಂಗ್ರೆಸ್ ಪರ ಒಲವು ತೋರುತ್ತಾರೆ. ಈ ಎಲ್ಲ ಕಾರಣದಿಂದಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *