ಸಾಧಿಸಲು ನಿಂತರೆ ಯಾವುದೂ ಅಸಾಧ್ಯವಲ್ಲ; ನಮ್ಮ ನಡುವಿನ ಅಪ್ರತಿಮ ಪ್ರತಿಭೆ ಶುಭಜಿತ್ ಭಟ್ಟಾಚಾರ್ಯ

 ಜ್ಯೋತಿ. ಎಸ್

ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರಯತ್ನಿಸುವುದರಿಂದ ನಷ್ಟವೇನಿದೆ. ಗೆದ್ದರೆ ಸಂತೋಷವಾಗುತ್ತದೆ. ಸೋತರೆ ಅನುಭವ ಸಿಗುತ್ತದೆ ಎಂಬ ಅಬ್ದುಲ್ ಕಲಾಂರ ನುಡಿಮುತ್ತಿನಂತೆ ತನ್ನ ಗುರಿ ಮುಟ್ಟುವವರೆಗೂ ಪ್ರಯತ್ನ ಬಿಡದೆ, ಹಾಗೆ ಪ್ರಯತ್ನ ಪಟ್ಟದ್ದರ ಫಲವಾಗಿ ತನ್ನ ಅಂಗವೈಕಲ್ಯತೆಯನ್ನೇ ಸವಾಲಾಗಿಸಿಕೊಂಡು ಜಗತ್ತಿನ ಮುಂದೆ ಸಾಧಕರಾಗಿ ನಿಂತಿರುವುದು ಪಶ್ಚಿಮ ಬಂಗಾಳದ 32 ವರ್ಷದ ಶುಭಜಿತ್ ಭಟ್ಟಾಚಾರ್ಯ.

ಸಾಧನೆ ಎನ್ನುವುದು ಸೋಮಾರಿಯ ಸ್ವತ್ತಲ್ಲ ಸಾಧಿಸುವವನ ಸ್ವತ್ತು. ಸಾಧಿಸಲು ನಿಂತರೆ ಯಾವುದೂ ಅಸಾಧ್ಯವಲ್ಲ. ಆದರೆ ಏನನ್ನೋ ಸಾಧಿಸುವವರೆಗಿನ ಪಯಣವಿದೆಯಲ್ಲ ಅದೊಂದು ತಪಸ್ಸೇ. ಸಾವಿರ ಅಡೆತಡೆಗಳಲ್ಲೂ ತದೇಕಚಿತ್ತದಿಂದ ನಡೆವ ದೃಢ ಮನಸ್ಸು ಬೇಕು. ಎಲ್ಲ ಇದ್ದೂ ಪೇಲವವಾಗಿ ಸಾಯುವುದಕ್ಕಿಂತ ಕಿಂಚಿತ್ತಾದರೂ ಸಾಧಿಸಿ ಸವೆಯಬೇಕು. ಹೀಗೆ ಸಾಧಿಸಿದವರೇ ಶುಭಜಿತ್ ಭಟ್ಟಾಚಾರ್ಯ.

ಜ್ಯೋತಿ. ಎಸ್, ಪತ್ರಕರ್ತರು

ಮೂಲತಃ ಪಶ್ಚಿಮ ಬಂಗಾಳದವರಾದ ಇವರು ಬೋಲನಾಥ್ ಮತ್ತು ಶಿವಾನಿಯವರ ಮುದ್ದಿನ ಮಗ. ತನ್ನ 12ನೇ ವಯಸ್ಸಿನಲ್ಲಿ ಅಕ್ಕನ ಹೆರಿಗೆ ಸಮಯದಲ್ಲಿ ಅಮ್ಮನೊಂದಿಗೆ ಬೆಂಗಳೂರಿಗೆ ಬಂದರು. ಮಹಡಿ ಹತ್ತಿ ತೆಂಗಿನಕಾಯಿ ಕೀಳುವಾಗ ಆಕಸ್ಮಿಕವಾಗಿ ಇವರಿಗೆ ವಿದ್ಯುತ್ ತಂತಿ ತಾಗಿ ಯಾರೂ ಊಹಿಸದ ಆಘಾತವೊಂದು ಸಂಭವಿಸುತ್ತದೆ. ಆಸ್ಪತ್ರೆಯಲ್ಲಿ ಡಾಕ್ಟರ್ ಕೈ, ಕಿಡ್ನಿ, ಹೃದಯ, ಹೊಟ್ಟೆ, ಎಲ್ಲ ಸ್ಕ್ಯಾನ್ ಮಾಡಿ ಕೈಗೆ ತುಂಬ ಸಮಸ್ಯೆಯಾಗಿದೆ ಎರಡೂ ಕೈ ಕತ್ತರಿಸಬೇಕು ಇಲ್ಲವಾದರೆ ಜೀವಕ್ಕೆ ಅಪಾಯ ಎಂದರು. ಆದರೆ ಒಮ್ಮೆಲೇ ಕತ್ತರಿಸಲಿಲ್ಲ ಸ್ವಲ್ಪ ಸ್ವಲ್ಪ ಕತ್ತರಿಸಿ ಹದಿಮೂರು ಬಾರಿ ಸರ್ಜರಿ ಮಾಡಿದ್ದಾರೆ. ಹತ್ತು ತಿಂಗಳು ಆಸ್ಪತ್ರೆಯಲ್ಲಿದ್ದ ನಂತರ ಆ ವಾತಾವರಣ ಮಾನಸಿಕ ಹಿಂಸೆಯಾಗಬಾರದೆಂದು ಡಾಕ್ಟರ್ ಬೇಗ ಚೇತರಿಸಿ ಕೊಳ್ಳಲು ಮನೆಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಬೇಗ ಚೇತರಿಸಿಕೊಳ್ಳುತ್ತಾರೆ ಎಂಬ ಸಲಹೆಯನ್ನು ಕೊಡುತ್ತಾರೆ. ಇಲ್ಲಿ ಅದೇ ರೂಮ್, ಡಾಕ್ಟರ್, ನರ್ಸ್ ಗಳನ್ನು ನೋಡುತ್ತಾ ಅವರು ಬೇಗ ಗುಣಮುಖರಾಗುವುದಿಲ್ಲ. ಈ ಸಮಯದಲ್ಲಿ ಮಾನಸಿಕ ತಜ್ಞರೊಬ್ಬರು ಶುಭಜಿತರನ್ನು ಸಂದರ್ಶಿಸುತ್ತಾ ‘ನಿಮಗೆ ಎರಡೂ ಕೈಗಳಿಲ್ಲ. ಆತ್ಮಹತ್ಯೆಯಂತಹ ಕೆಟ್ಟ ವಿಚಾರಗಳೇನಾದರೂ ಬರುತ್ತಿವೆಯಾ’ ಎಂದು ಕೇಳಿದರಂತೆ. ಅದಕ್ಕೆ ಶುಭಜಿತ್ ‘ಭೂಮಿಯ ಮೇಲೆ ಎಷ್ಟೋ ಜನರಿಗೆ ಕಣ್ಣುಗಳಿಲ್ಲ, ಅವರಿಗೆ ಗಿಡ ಮರ ನದಿ ಸೂರ್ಯ ಈ ಸುಂದರವಾದ ಪ್ರಕೃತಿಯಲ್ಲಿರುವ ಏನನ್ನೂ ನೋಡೋಕಾಗಲ್ಲ. ನನಗೆ ಕಣ್ಣುಗಳಿವೆ ನಾನು ಅವನ್ನೆಲ್ಲ ನೋಡಬಹುದು ಹಾಗಾಗಿ ದೇವರಿಗೆ ಕೃತಜ್ಞತೆಗಳು’ ಎಂದರಂತೆ. ಅಷ್ಟು ಸಣ್ಣ ವಯಸ್ಸಿನಲ್ಲೇ ಎಂಥ ಉನ್ನತ ತಿಳುವಳಿಕೆ… ಆಗ ಆ ಡಾಕ್ಟರ್ ಶಿವಾನಿಯವರಿಗೆ ಹೇಳಿದರಂತೆ ನಿಮ್ಮ ಮಗನಿಗೆ ಯಾವ ಮಾನಸಿಕ ಸಮಸ್ಯೆಯಿಲ್ಲ ಅವನಿಗೆ ಯಾವ ಮಾನಸಿಕ ತಜ್ಞರ ಅವಶ್ಯಕತೆ ಇಲ್ಲ ಎಂದು. ಅದಲ್ಲದೆ ಆಪರೇಷನ್ ಆದಾಗ ಕೈ ಕತ್ತರಿಸಿದ್ದನ್ನು ಅಮ್ಮನ ಬಳಿ ಹೇಳಬೇಡಿ ಸುಮ್ಮನೆ ಕೈ ಮಡಚಿ ಬ್ಯಾಂಡೇಜ್ ಹಾಕಿದ್ದೇವೆ ಎಂದು ಹೇಳಿ ಅಮ್ಮ ನೊಂದುಕೊಳ್ಳುತ್ತಾರೆ ನನಗೆ ಕೈ ಇಲ್ಲ ಎಂದು ಗೊತ್ತಾದರೆ ನೊಂದುಕೊಳ್ಳುತ್ತಾರೆ ಎಂದಿದ್ದರಂತೆ ಶುಭಜಿತ್.

 

ನಂತರ ಶುಭಜಿತ್’ರ ಜೀವನದಲ್ಲಿ ಸಾಲುಸಾಲು ಕಷ್ಟಗಳೇ ಬಂದವು. ಸೋಲದೆ ಗೆದ್ದ ಸೆಣಸಾಟದ ಹಾದಿಯನ್ನ ಅವರ ಮಾತಿನಲ್ಲೇ ಓದಿಕೊಳ್ಳಿ. ‘ಕೈ ಕಳೆದುಕೊಂಡ ಪ್ರಾರಂಭದಲ್ಲಿ ಕೃತಕ ಕೈ ಜೋಡಣೆ ಮಾಡಿದರೆ ಸರಿಹೋಗಲಿಲ್ಲ. ಆಗ ಅಮ್ಮನೊಂದಿಗೆ ಹುಟ್ಟೂರಾದ ಪಶ್ಚಿಮ ಬಂಗಾಳದ ದಕ್ಷಿಣ ಛಾತ್ರಾಗೆ ಹೋದೆನು. ಅಲ್ಲಿ ಒಂದು ಶಾಲೆಯ ಮುಖ್ಯೋಪಾಧ್ಯಾಯರೊಂದಿಗೆ ಮಾತನಾಡಿ ಶಾಲೆಗೆ ದಾಖಲಾದೆ. ಆದರೆ ಸಂಚಾರ ಮಾಡಿಕೊಂಡು ಶಾಲೆಗೆ ಹೋಗುವುದು ಕಷ್ಟ. ಆದ್ದರಿಂದ ವಾರಕ್ಕೊಂದು ಬಾರಿ ಶಾಲೆಗೆ ಹೋಗುತ್ತಿದ್ದೆ. 7,8,9 ನೇ ತರಗತಿ ಮುಗಿದ ನಂತರ ಹತ್ತನೇ ತರಗತಿಯ ಪರೀಕ್ಷೆಗೆ ಕೂರಲು ಹಾಜರಾತಿ ಕೊರತೆಯಿಂದ ನನಗೆ ಪರೀಕ್ಷಾ ಮಂಡಳಿ ಅನುಮತಿ ಕೊಡುವುದಿಲ್ಲ. ಯಾಕೆಂದರೆ 75% ಹಾಜರಾತಿ ಕಡ್ಡಾಯವೆಂಬ ನಿಯಮವಿದೆ ಹಾಗೂ ಶಾಲೆಯವರು ಬೋರ್ಡಿಗೆ ನನ್ನ ಸಮಸ್ಯೆಯ ಬಗ್ಗೆ ಮುಂಚಿತವಾಗಿ ತಿಳಿಸಿರಲಿಲ್ಲ. ನಿಯಮಗಳಿಗೆ ಮಾನವೀಯತೆ ಇಲ್ಲ ಇನ್ನು ಮುಂದೆ ನಾನು ಓದುವುದಿಲ್ಲ ಎಂದು ಅಮ್ಮನಿಗೆ ಹೇಳಿದೆ. ಇದು ತಿಳಿದು ನನಗೆ ಇತಿಹಾಸ ಪಾಠ ಮಾಡುತ್ತಿದ್ದ ಕಾರ್ತಿಕ್ ಎಂಬ ಗುರುಗಳೊಬ್ಬರು ನನಗೆ ಓಪನ್ ಸ್ಕೂಲ್ ಬಗ್ಗೆ ಹೇಳಿ ರವೀಂದ್ರನಾಥ ಓಪನ್ ಯುನಿವರ್ಸಿಟಿಯ ವಿಳಾಸ ಕೊಟ್ಟರು. ನಾನು ಅಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿಯನ್ನು ಮುಗಿಸಿಕೊಂಡೆ’.

‘ಎರಡೂ ಕೈ ಇಲ್ಲದೆ ದೇಹವನ್ನು ಬ್ಯಾಲೆನ್ಸ್ ಮಾಡುವುದು ಕಷ್ಟವಾಗುತ್ತಿತ್ತು. ದೇಹ ಬ್ಯಾಲೆನ್ಸ್ ಮಾಡಲೆಂದು ಫುಟ್ಬಾಲ್ ಆಡಲು ಹೋದಾಗ ಸ್ನೇಹಿತರು ನಿರಾಕರಿಸಿದರು, ಅವರಲ್ಲಿ ಕೇಳಿಕೊಂಡು ಆಡುವಾಗ ಪ್ರಜ್ಞೆ ತಪ್ಪಿ ಬಿದ್ದೆ. ಆದರೆ ಪುಟ್ಬಾಲ್ ನನ್ನಿಷ್ಟದ ಆಟ. ಕಷ್ಟವಾದರೂ ಆಡಲೇಬೇಕೆಂದು ತೀರ್ಮಾನಿಸಿ ಮನೆಯಲ್ಲೇ ಬಾಲ್ ಹೇಗೆ ಬಂದರೆ ಹೇಗೆ ಪಾಸ್ ಮಾಡಬೇಕು ಎಂಬ ಬಗ್ಗೆ ಯೋಚಿಸಿ ಮರುದಿನ ಮೈದಾನಕ್ಕೆ ಹೋದೆ. ಆದರೆ ಸ್ನೇಹಿತರು ಹಿಂದಿನ ದಿನದ ಘಟನೆ ನೆನಪಾಗಿ ಒಪ್ಪಲಿಲ್ಲ. ನಾನು ತುಂಬ ವಿನಂತಿಸಿಕೊಂಡು ಆಡಲು ಪ್ರಾರಂಭಿಸಿದೆ. ಹಾಗೇ ಸತತವಾಗಿ ಮೂರ್ನಾಲ್ಕು ವರ್ಷ ಆಡಿದ ನಂತರ ದೈಹಿಕ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಯಿತು. ಸಾರ್ವಜನಿಕವಾಗಿ ಓಡಾಡಲು ಧೈರ್ಯಬಂತು. ಆದರೆ ಪ್ರಯಾಣ ಮಾಡಲು ಇನ್ನೊಬ್ಬರ ಮೇಲೆ ಅವಲಂಬಿತಾನಾಗಿದ್ದೆ, ಜೊತೆಗೆ ಯಾರಾದರೂ ಇರಬೇಕಿತ್ತು. ನನ್ನ ಸ್ನೇಹಿತರು ತಮ್ಮ ಸೈಕಲ್ಲಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ಆಗ ನಾನೇಕೆ ನನಗೆ ಹೊಂದುವಂತಹ ಒಂದು ಸೈಕಲ್ಲನ್ನು ತಯಾರು ಮಾಡಬಾರದು ಎನ್ನುವ ಆಲೋಚನೆ ಬಂತು. ಇದಕ್ಕಾಗಿ ಸೈಕಲ್ ಶಾಪ್, ರಿಪೇರಿ ಶಾಪ್ಗಳಲ್ಲಿ ಮಾತಾಡಿದೆ. ನನಗೆ ಕೈ ಇಲ್ಲದ್ದರಿಂದ ನಿಮಗೆ ಕೈ ಇಲ್ಲ ಸುಮ್ಮನೆ ನಿಮ್ಮ ಸಮಯವು ವ್ಯರ್ಥ, ನಮ್ಮ ಸಮಯವೂ ವ್ಯರ್ಥ ಹೋಗಿ ಎಂದರು ತುಂಬ ನಿರಾಸೆಯೇನೋ ಆಯಿತು ಆದರೆ ಇದನ್ನ ಮಾಡಲೇಬೇಕೆಂಬ ಹಠವಿತ್ತು. ಮನೆಯಲ್ಲೇ ಕೂತು ನನ್ನ ಕಲ್ಪನೆಗೆ ಊಹಿಸಿಕೊಂಡು ಹಲವು ರೀತಿಯಲ್ಲಿ ಚಿತ್ರಗಳನ್ನ ಬಿಡಿಸಿ ಪೇಪರ್ ಕಟಿಂಗ್ ಮಾಡಿ ಕೊನೆಗೆ ಒಂದು ನನಗೆ ಸರಿಹೊಂದಬಹುದಾದ ಸೈಕಲ್ ಮಾದರಿಯ ಪೇಪರ್ ಕಟಿಂಗೊಂದನ್ನ ತೆಗೆದುಕೊಂಡು ಸೈಕಲ್ ಶಾಪಿನ ಮಾಲೀಕರ ಬಳಿ ತೆಗೆದುಕೊಂಡು ಹೋಗಿ ನನ್ನ ಯೋಜನೆ ಮತ್ತು ಯೋಚನೆಯನ್ನು ಹೇಳಿದೆ. ಅವರು ಪ್ರಯತ್ನಿಸೋಣ ಬನ್ನಿ ಎಂದಾಗ ನನ್ನ ತಂದೆಯ ಹಳೆಯ ಸೈಕಲ್ಲನ್ನು ತೆಗೆದುಕೊಂಡು ಹೋಗಿ ಹ್ಯಾಂಡಲ್,  ಬ್ರೇಕ್ ಹೇಗಿರಬೇಕೆಂಬ ಬಗ್ಗೆ ಅವರಿಗೆ ಹೇಳಿದೆ. ಅವರು ನಾನು ಹೇಳಿದಂತೆ ಮಾಡಿದರು. ಅಂತೂ ಒಂದು ವಾರದಲ್ಲಿ ಸೈಕಲ್ ತಯಾರಾಯಿತು. 2013ರಿಂದ 2015ರವರೆಗೆ ಆ ಸೈಕಲ್ಲನ್ನು ಯಾರ ಅವಲಂಬನೆಯೂ ಇಲ್ಲದೆ ನಾನು ಕಾಲೇಜಿಗೆ ಹೋಗಿ ಬರಲು ಉಪಯೋಗಿಸಿದೆ. ಆ ಸಮಯದಲ್ಲಿ ಕಾಲೇಜಿನಲ್ಲಿ ಜೂಲಿ ಎಂಬುವರ ಜೊತೆ ಸ್ನೇಹವಾಗಿ ಅದು ಪ್ರೀತಿಯಾಗಿ ಮದುವೆಯಾಯಿತು. ಮದುವೆಯ ನಂತರ ನಾವು ಬೆಂಗಳೂರಿಗೆ ಬರಲು ನಿರ್ಧರಿಸಿದೆವು. ಬೆಂಗಳೂರಿಗೆ ಬಂದು ಕೆಲಸ ಹುಡುಕಲು ಹೋದಲ್ಲೆಲ್ಲ ನನ್ನ ಅಂಗವೈಕಲ್ಯ ನೋಡಿ ಐದರಿಂದ ಏಳುಸಾವಿರದವರೆಗೆ ಸಂಬಳ ಕೊಡುತ್ತೇವೆಂದರು. ಇಷ್ಟು ಸಂಬಳದಲ್ಲಿ ಬೆಂಗಳೂರಿನಲ್ಲಿ ಜೀವನ ನಡೆಸುವುದು ಕಷ್ಟ. ಬಂದು ಹದಿನೈದು ದಿನವಾದರೂ ಕೆಲಸವೂ ಸಿಗಲಿಲ್ಲ ಕೈಯಲ್ಲಿದ್ದ ಹಣವೂ ಖಾಲಿಯಾಯ್ತು. ಮೆಜೆಸ್ಟಿಕ್ ಬಸ್ಟಾಪಿನಲ್ಲಿ ಕೂತು ನಾನು ನನ್ನ ಹೆಂಡತಿ ಇಲ್ಲೇ ಇರುವ ನಿರ್ಧಾರಕ್ಕೆ ಬಂದೆವು. ಊರಿಗೆ ಹೋಗಲು ಬುಕ್ ಮಾಡಿದ್ದ ರಿಟರ್ನ್ಸ್ ಟಿಕೇಟ್ ಕ್ಯಾನ್ಸಲ್ ಮಾಡಿದಾಗ ಅದರ ಸ್ವಲ್ಪ ಹಣ ವಾಪಸ್ ಬಂತು ಮತ್ತು ಅಮ್ಮನ ಕಡೆಯಿಂದ ಹಣ ತರಿಸಿಕೊಂಡು, ಹೆಬ್ಬಾಳದ ಕೆಂಪಾಪುರದಲ್ಲಿ ಒಂದು ಬಾಡಿಗೆ ಮನೆ ಹುಡುಕಿದೆವು. ಅಲ್ಲಿಯವರೆಗೆ ಬಂಗಾಳಿ ಅಸೋಸಿಯೇಷನ್ನಲ್ಲಿ ಇದ್ದೆವು. ಮನೆ ಮಾಲೀಕರ ಕಡೆ ತುಂಬ ವಿನಂತಿಸಿಕೊಂಡು ನಮ್ಮ ಪರಿಸ್ಥಿತಿ ಹೇಳಿಕೊಂಡು ಮೂರು ಸಾವಿರ ಬಾಡಿಗೆ ಮಾತಾಡಿದೆವು. ಅವರು ಹತ್ತು ಸಾವಿರ ಹೇಳಿದ್ದ ಅಡ್ವಾನ್ಸನ್ನ ಎರಡು ಕಂತುಗಳಲ್ಲಿ ತುಂಬಿದೆವು’.

‘ಈ ಸಮಯದಲ್ಲಿ ರಾಮಸ್ವಾಮಿ ಎಂಬುವರ ಪರಿಚಯವಾಗಿ 2015ರಲ್ಲಿ APD(Association for Physically Disabled) ಎಂಬ ಎನ್‌ಜಿಒದಲ್ಲಿ ಕೆಲಸ ಸಿಕ್ಕಿತು. ಪಾರ್ಟೈಮ್ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಪ್ರಾರಂಭಿಸಿದೆ. ನಂತರ ನನ್ನ ಶ್ರೀಮತಿ ಜೂಲಿಯವರಿಗೂ ಹೆಬ್ಬಾಳದ ಆಯುರ್ವೇದ ಕ್ಲಿನಿಕ್ಕಿನಲ್ಲಿ ಅಸಿಸ್ಟೆಂಟ್ ಫಿಸಿಯೋಥೆರಪಿಸ್ಟ್ ಕೆಲಸ ಸಿಕ್ಕಿತು. ನಾನೂ ನನ್ನ ಕೆಲಸದಲ್ಲಿ ಇನ್ನಷ್ಟು ತೊಡಗಿಕೊಂಡು ಪುಲ್ಟೈಮ್ ಕೆಲಸಗಾರನಾದೆ. ನಂತರದ ಮೂರು ವರ್ಷಗಳ ನನ್ನ ಕೆಲಸವನ್ನು ಮೆಚ್ಚಿ 2018ರಲ್ಲಿ ನನಗೆ ಬೆಸ್ಟ್ ಫರ್ಫಾಮೆನ್ಸ್ ಅವಾರ್ಡ್ ಜೊತೆಗೆ ಪ್ರಮೋಷನ್ ಕೂಡಾ ಸಿಕ್ತು. ಆಗ ಪ್ರಯಾಣ ಮಾಡಲು ಮತ್ತೆ ತೊಂದರೆ ಎದುರಾಗುತ್ತದೆ. ಕೆಲಸಕ್ಕೆ ಹೋಗಬೇಕಾದರೆ ಎರಡು ಬಸ್ ಹತ್ತಿ ಇಳಿದು ಹೋಗಬೇಕಿತ್ತು ಹಾಗೇನೇ ಬಸ್ಸುಗಳು ಬಹಳ ರಶ್ ಇರುತ್ತಿದ್ದುದರಿಂದ ಓಡಾಡಲು ಆತಂಕವಾಗುತ್ತಿತ್ತು. ನಾನು ಸೈಕಲ್ ಮಾಡಿಕೊಂಡ ಹಾಗೇನೇ ನನಗೆ ಬೇಕಾದ ರೀತಿಯ ಬೈಕೊಂದನ್ನ ತಯಾರು ಮಾಡುವ ವಿಚಾರ ಆಗ ಬಂದದ್ದೇ ತಡ ತಕ್ಷಣ ಕಾರ್ಯಪ್ರವೃತ್ತನಾದೆ. ಈ ಹಿಂದೆ ಯಾರಾದರೂ ಈ ರೀತಿಯ ಬೈಕನ್ನು ತಯಾರಿಸಿರುವವರು ಇದ್ದಾರೆಯೇ ಎಂದು ತಿಳಿಯುವ ಕುತೂಹಲ ಉಂಟಾಯಿತು. ಅಂಗವೈಕಲ್ಯ ಇರುವವರು ಇರುವ ದ್ವಿಚಕ್ರ ವಾಹನಕ್ಕೆ ಇನ್ನೆರೆಡು ಗಾಲಿಗಳನ್ನು ಸೇರಿಸಿರುವ ಗಾಡಿಗಳನ್ನು ಉಪಯೋಗಿಸುತ್ತಿದ್ದರೇ ವಿನಃ ಎರಡೂ ಕೈಗಳಿಲ್ಲದೆ ಬೈಕ್ ಓಡಿಸುವವರು ಜಗತ್ತಿನಾದ್ಯಂತ ನನಗೆ ಯಾರೂ ಸಿಗಲಿಲ್ಲ. ಈ ರೀತಿಯ ಬೈಕ್ ತಯಾರಿಸುವ ಬಗ್ಗೆ ಒಂದು ದೊಡ್ಡ ಕಂಪನಿಯೊಂದಿಗೆ ಮಾತಾಡಿದೆ, ಏನೂ ಪ್ರಯೋಜನವಾಗಲಿಲ್ಲ. ಬೈಕುಗಳ ಗ್ಯಾರೇಜ್ ಹಾಗೂ ಬೈಕುಗಳನ್ನು ಮಾರ್ಪಾಡು(modify) ಮಾಡುವ ಸ್ಥಳೀಯರಲ್ಲಿ ವಿಚಾರಿಸಿದಾಗ ನಿಮಗೆ ಕೈಗಳೇ ಇಲ್ಲ ನೀವು ಬೈಕ್ ಹೇಗೆ ಓಡಿಸ್ತೀರಿ… ಇದೆಲ್ಲ ಆಗೋದಲ್ಲ ಎಂದರು. ಕೆಲವರು ನೀನು ಸೈಕಲ್ ತಯಾರಿಸುವಾಗ ನಿನ್ನ ಟೈಮ್ ಚೆನಾಗಿತ್ತು ಈಗ ಇದೆಲ್ಲ ನಿನ್ನಿಂದಾಗುವ ಕೆಲಸವಲ್ಲ ವ್ಯರ್ಥ ಪ್ರಯತ್ನ ಮಾಡಬೇಡ ಸುಮ್ಮನೆ.. ಇರೋ ಕೆಲಸ ಮಾಡ್ಕೊಂಡಿರು ಎಂದು ಕೆಲಸಕ್ಕೆಬಾರದ ಬುದ್ಧಿಮಾತುಗಳನ್ನು ಹೇಳಿದರು. ಮಾತಾಡಿದವರಿಗೆಲ್ಲ ಕೆಲಸದಿಂದಲೇ ಉತ್ತರಿಸಬೇಕೆಂದು ಪಣತೊಟ್ಟೆ. ಒಂದು ಮೊಫೇಡ್ ಗಾಡಿಯನ್ನು ಖರೀದಿ ಮಾಡಿ ಅದನ್ನು ಒಬ್ಬ ಹುಡುಗನ ಜೊತೆ ನನಗೆ ಬೇಕಾದಂತೆ ಮಾರ್ಪಡಿಸಲು ಶುರು ಮಾಡಿದೆ. ಆದರೆ ಇದು ಅಷ್ಟು ಸುಲಭವಾದ್ದಾಗಿರಲಿಲ್ಲ. ಅಕ್ಸಿಲಿರೇಟರ್, ಬ್ರೇಕ್, ಹೆಡ್ಲೈಟ್ ಇಂಡಿಕೇಟರ್ ಬಟನ್ನುಗಳು ಕಾಲಿನಲ್ಲಿ ಬರುವಂತೆ ಹಾಕಬೇಕಿತ್ತು. ಹ್ಯಾಂಡಲ್ ವಿನ್ಯಾಸ ಕೂಡ ಬದಲಾಯಿಸಬೇಕಿತ್ತು. ಜೊತೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ನನ್ನ ಕೆಲಸ ಮುಗಿಸಿಕೊಂಡು ಬಂದ ನಂತರ ಬೈಕಿನ ಕೆಲಸ ಮಾಡಬೇಕಿತ್ತು. ನನಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳಬೇಕಿತ್ತು. ತುಂಬಾ ಆಲೋಚಿಸಿ ಕಲ್ಪಸಿಕೊಂಡು ಹಲವಾರು ವಿನ್ಯಾಸಗಳನ್ನು ಬರೆದು, ಚಿತ್ರ ಬಿಡಿಸಿ, ಪೇಪರ್ ಕಟಿಂಗ್ ಮಾಡಿ ಒಂದೊಂದು ಸಣ್ಣ ಕೆಲಸವನ್ನೂ ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕಿತ್ತು, ಏಕೆಂದರೆ ಏನಾದರೂ ತೊಂದರೆ ಆದರೆ ನನಗೆ ಪದೇಪದೇ ಹಣಹಾಕುವ ಸಾಮರ್ಥ್ಯವಿರಲಿಲ್ಲ. ಹೀಗೆ ಒಂದು ತಿಂಗಳು ಇದಕ್ಕಾಗಿ ಸಮಯ ಕೊಟ್ಟ ನಂತರ ನನ್ನ ಆಲೋಚನೆಗಳು ನನ್ನಿಷ್ಟದ ಸ್ಕೂಟರಿನ ಪ್ರತಿರೂಪವಾಗಿ ಮೈದಳೆದಿತ್ತು. ಆ ಕ್ಷಣ ನನ್ನ ಖುಷಿಗೆ ಪಾರವೇ ಇರಲಿಲ್ಲ. ಒಂದು ವಾರ ಮುಖ್ಯರಸ್ತೆಗೆ ಬರದೇ ಮನೆಯ ಹತ್ತಿರ ಅಭ್ಯಾಸ ಮಾಡಿದೆ. ನಂತರ ಮೊದಲ ಬಾರಿಗೆ ಹೆಬ್ಬಾಳದಿಂದ ಲಿಂಗರಾಜಪುರಕ್ಕೆ ಹದಿನಾರು ಕಿಲೋಮೀಟರ್ ಹೋಗಿಬಂದೆ. ಹಾಗೆ ಸ್ಕೂಟರ್ ಓಡಿಸುವುದು ಅಭ್ಯಾಸವಾಯ್ತು. ಮೂರು ವರ್ಷಗಳಲ್ಲಿ ಸುಮಾರು ಮೂವತ್ತು ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿದ್ದೇನೆ’ ಎಂದು ಅಪರೂಪದ ಬೈಕಿನ ವಿನ್ಯಾಸದ ಹಾದಿಯನ್ನು ಹೇಳಿದರು.

‘ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಒಮ್ಮೆ ಆರ್‌ಟಿಓ ಆಫೀಸಿಗೆ ಹೋಗಿದ್ದೆ. ಅವರು ನನಗೆ ಕೈಯಿಲ್ಲವೆಂದು ಲೈಸೆನ್ಸ್ ಕೊಡಲು ನಿರಾಕರಿಸಿದರು. ನಾನು ಗಾಡಿ ಓಡಿಸುವುದನ್ನು ಮೊದಲು ನೋಡಿ ನಾನು ಸರಿಯಾಗಿ ಓಡಿಸದಿದ್ದರೆ ಲೈಸೆನ್ಸ್ ಕೊಡಬೇಡಿ ಎಂದೆ. ನಂತರ ಅವರ ಆಫೀಸಿಗೆ ಗಾಡಿ ಒಯ್ದು ಓಡಿಸಿ ತೋರಿಸಿದೆ. ಅವರು ಸರಿಯಾಗಿ ಸ್ಪಂದಿಸಲಿಲ್ಲ. ನನಗೆ ತಾಯಿ, ತಂದೆ ಹೆಂಡತಿ ಇದ್ದಾರೆ ಇಡೀ ಕುಟುಂಬದ ಜವಾಬ್ದಾರಿ ನನ್ನ ಮೇಲಿದೆ ದಯವಿಟ್ಟು ಲೈಸೆನ್ಸ್ ಮಾಡಿಕೊಡಿ ಎಂದು ಎಷ್ಟು ಕೇಳಿಕೊಂಡರೂ ನಾಲ್ಕುವರೆ ವರ್ಷದಿಂದ ಅವರ ಆಫೀಸಿಗೆ ಎಷ್ಟು ಬಾರಿ ಎಡತಾಕಿದರೂ ಲೈಸೆನ್ಸ್ ಕೊಟ್ಟಿಲ್ಲ’ ಎಂದರು. ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆಯು ಇಂತವರಿಗೆ ಲೈಸೆನ್ಸ್ ಕೊಡಲು ಬೇಕಾದ ನಿಯಮಗಳನ್ನು ತರಬೇಕು ಅಥವಾ ಇರುವ ನಿಯಮಗಳಿಗೆ ಅಗತ್ಯ ತಿದ್ದುಪಡಿ ತರಬೇಕು.

2020ರಲ್ಲಿ ಶುಭಜಿತ್ ಹೆಸರಿನಲ್ಲಿ “TWO WHEELER RIDER WITHOUT TWO HANDS” ಎಂಬ ದಾಖಲೆ INDIA BOOK OF RECORDನಲ್ಲಿ ದಾಖಲಾಗಿದೆ. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(IGNOU)ದಿಂದ “INNOVATION AWARD” ಬಂದಿದೆ. ಲಾಕ್ ಡೌನ್ ಸಮಯದಲ್ಲಿ ತಮ್ಮ ಉಳಿತಾಯದ ಹಣದಲ್ಲಿ ಅಗತ್ಯವಿರುವವರಿಗೆ ದಿನಸಿ, ಹಾಲು, ಔಷಧಿ ಕೊಡುತ್ತಿದ್ದರು. ಇದನ್ನು ತಿಳಿದ ಅವರ ಸ್ನೇಹಿತರು ಈ ಕಾಯಕಕ್ಕೆ ಸಹಾಯ ಮಾಡಿದರು. ಸ್ನೇಹಿತರ ನೆರವಿನಿಂದ ಸುಮಾರು ಒಂದು ಸಾವಿರ ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ. ಈ ಸೇವೆಗಾಗಿ ಶುಭಜಿತ್ ಅವರಿಗೆ 2021ರಲ್ಲಿ “ಕರೋನ ವಾರಿಯರ್” ಮತ್ತು “ಹೆಮ್ಮೆಯ ಭಾರತೀಯ” ಎಂಬ ಪುರಸ್ಕಾರಗಳು ಬಂದಿವೆ. ಈಗ BSW ಮುಗಿಸಿ MSW ಮಾಡುತ್ತಿರುವ ಇವರು ಈಗ ಬಾಣಸವಾಡಿಯಲ್ಲಿರುವ ಅಕ್ಷತಾ ಫೌಂಡೇಶನ್ನಿನಲ್ಲಿ ಪ್ರೋಗ್ರಾಂ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಆಟಿಸಂ(ಮೆದುಳಿಗೆ ಸಂಬಂಧಿಸಿದ ಕಾಯಿಲೆ) ಮಕ್ಕಳೊಂದಿಗೆ ಇಷ್ಟಪಟ್ಟು ಖುಷಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಶುಭಚಿತ್ ಅವರ ತಾಯಿ ತಂದೆಗೆ ತಮ್ಮ ಮಗನಿಗೆ ಕೈಗಳಿಲ್ಲ ಎಂಬ ಕೊರಗಿರಲಿಲ್ಲ, ಅವನು ಏನಾದರೂ ವಿಶಿಷ್ಟವಾಗಿ ಸಾಧಿಸುತ್ತಾನೆ ಎನ್ನುವ ಅಪಾರ ನಂಬಿಕೆಯಿತ್ತು. ಅದಕ್ಕೆ ತಕ್ಕಂತೆ ಅವರೂ ವಿಶಿಷ್ಟವಾದ ಕೆಲಸಗಳನ್ನು ಮಾಡಿಕೊಂಡು‍ ಉಳಿದವರಿಗೆ ದೊಡ್ಡ ಮಾದರಿಯಾಗಿದ್ದಾರೆ, ಆಗಾಗ ಶಾಲಾ ಕಾಲೇಜುಗಳಿಗೆ ಪ್ರೇರಣಾದಾಯಕ ಭಾಷಣಕಾರರಾಗಿ ಸಂಪನ್ಮೂಲ ವ್ಯಕ್ತಿಯಾಗಿ ಹೋಗಿ ವಿದ್ಯಾರ್ಥಿಗಳೊಂದಿಗೆ ‍ಸಂವಹನ ನಡೆಸಿ ಕೌಶಲಭರಿತ ಸ್ಫೂರ್ತಿ ತುಂಬುತ್ತಾರೆ. ಸದಾ ಹೊಸತನಕ್ಕೆ ತುಡಿಯುವ, ಸಂಶೋಧನಾತ್ಮಕ ವಿಚಾರಗಳಲ್ಲಿ ತೊಡಗುವ, ಧನಾತ್ಮಕ ಮನೋಭಾವ ಹೊಂದಿರುವ ಇವರು ದೆಹಲಿಯಿಂದ ಲಡಾಖ್’ವರೆಗೆ ಸ್ಕೂಟರಿನಲ್ಲಿ ಪ್ರಯಾಣ ಮಾಡುವ ಆಸೆ ಹೊಂದಿದ್ದಾರೆ. ವೃದ್ಧರು, ಅನಾಥ ಮಕ್ಕಳು, ಸಂತ್ರಸ್ತ ಹೆಣ್ಣುಮಕ್ಕಳಿಗಾಗಿ ಒಂದು ಆಶ್ರಮ ಕಟ್ಟಿಸಿ ಸಮಾಜ ಸೇವೆ ಮಾಡಬೇಕೆಂಬ ಕನಸು ಹೊತ್ತಿದ್ದಾರೆ. ಸಣ್ಣ ವಯಸ್ಸಿನಿಂದಲೂ ಉನ್ನತ ಧೈಯಗಳನ್ನು ಇಟ್ಟುಕೊಂಡಿರುವ ಶುಭಜಿತ್’ರ ಜೀವನ ಪ್ರೀತಿಗೆ ಹ್ಯಾಟ್ಸ್ ಆಫ್.

Donate Janashakthi Media

Leave a Reply

Your email address will not be published. Required fields are marked *