ನಕಲಿ ವೈದ್ಯನ ಬಂಧನಕ್ಕೆ ಅಡ್ಡಿಯಾದವರ ಮೇಲೆ ಪ್ರಕರಣ ದಾಖಲು: ಎಚ್.ಜೆ.ರಶ್ಮಿ

ಬಳ್ಳಾರಿ: ಸಂಡೂರು ತಾಲೂಕಿನ ಅಂಕಮನಾಳ್ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೇ ವೈದ್ಯ ವೃತ್ತಿ ನಡೆಸುತ್ತಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಸಂಡೂರು ತಹಸೀಲ್ದಾರ್ ಎಚ್.ಜೆ.ರಶ್ಮಿ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ಮಧ್ಯಾಹ್ನ ದಾಳಿ ನಡೆಸಿದೆ. ನಕಲಿ ವೈದ್ಯ ಜಾಫರ್ ವಲಿಯನ್ನು ಬಂಧಿಸಿ ಕರೆದೊಯ್ಯಲು ಯತ್ನಿಸಿದ ಸಂದರ್ಭದಲ್ಲಿ ಅಡ್ಡಿಪಡಿಸಿದ ಗ್ರಾಮದ 23 ಜನರ ಮೇಲೆ ಕೂಡ್ಲಿಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ: ರಾಜ್ಯಕ್ಕೆ ಆಕ್ಸಿಜನ್‌ ಕೊರತೆ ಶೇ.50ಕ್ಕಿಂತ ಹೆಚ್ಚಿದೆ: ಸಿದ್ದರಾಮಯ್ಯ

ನಕಲಿ ವೈದ್ಯ ಜಾಫರ್ ವಲಿ ಅವರು ಮೂಲ ಕರ್ನೂಲ ಜಿಲ್ಲೆಯವರಾಗಿದ್ದು,ಅಂಕನಾಳ ಗ್ರಾಮದಲ್ಲಿ ಸಣ್ಣದಾದ ಕ್ಲಿನಿಕ್ ಇಟ್ಟುಕೊಂಡು ನಿಜವಾದ ವೈದ್ಯನೆಂದು ಜನರನ್ನು ನಂಬಿಸಿ ಚಿಕಿತ್ಸೆ ನೀಡುತ್ತಿದ್ದ. ಈ ಹಿಂದೆಯೂ ಅವನ ಮೇಲೆ ನಕಲಿ ವೈದ್ಯವೃತ್ತಿಯ ಮೇಲೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಕಲಿ ವೈದ್ಯ ಜಾಫರ್ ವಲಿಯನ್ನು ಬಂಧಿಸುವ ಸಂದರ್ಭದಲ್ಲಿ ಅಡ್ಡಿಪಡಿಸುವ ಮೂಲಕ ಅವನನ್ನು ತಪ್ಪಿಸಿಕೊಂಡು ಓಡಿಹೋಗಲು ಗ್ರಾಮದ 23 ಜನರು ಅನುವು ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಉಮೇಶ ಮುರಾರಿಪುರ ನರಸಪ್ಪ, ಹೊನ್ನುರಸ್ವಾಮಿ ಜರ್ಮಲಿ ಪರಸಪ್ಪ, ಮಂಜು ಗೋನಾಳ ಈರಪ್ಪ, ಅಂಜಿನಪ್ಪ ಬಂಡ್ರಿ ಓಬಯ್ಯ, ತಿಪ್ಪೆಸ್ವಾಮಿ,ನೂರ್ ಭಾಷಾಸಾಬ್, ಪರಸಪ್ಪ ನಾಗಪ್ಪ, ಭರಮಪ್ಪ ಜರ್ಮಲಿ ಮಾರೆಪ್ಪ, ಅಂಜಿನಪ್ಪ, ಜಿ.ಗೋವಿಂದಪ್ಪ, ಶಿವಣ್ಣ, ಮಂಜು ಅಗಸರ ದುರಗಪ್ಪ, ರಮೇಶ ಬಂಡ್ರಿ ಕುಮಾರಪ್ಪ, ಕುಮಾರಪ್ಪ ಸಣ್ಣಚನ್ನಪ್ಪ, ಬಂಡ್ರಿ ಮಾರೇಶ, ಸುರೇಶ ಗೋನಾಳ ರಾಜಪ್ಪ, ಬಂಡ್ರಿ ಕೊಟ್ರೇಶ್,ಅರ್ಜುನ ಭರಮಪ್ಪ, ಮಾರೇಶ, ಓಬಮ್ಮ ಮುರಾರಿಪುರ ಮುದ್ದಯ್ಯ,ಪಾಪಮ್ಮ ಬಂಡ್ರಿ ಕುಮಾರಪ್ಪ, ಹನುಮಕ್ಕ ಗೋನಾಳ ಈರಪ್ಪ,ಕುಮಾರಪ್ಪ ಸಣ್ಣ ಚನ್ನಪ್ಪ  ಅವರ ಮೇಲೆ 353,341,143,147,420,269 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಹಸೀಲ್ದಾರ್ ರಶ್ಮಿ ಅವರು ತಿಳಿಸಿದ್ದಾರೆ.

ಇದನ್ನು ಓದಿ: ಕೋವಿಡ್:‌ ರಾಜ್ಯದಲ್ಲಿ ದಾಖಲಾದ 50 ಸಾವಿರ ಹೊಸ ಪ್ರಕರಣಗಳು

ತಹಸೀಲ್ದಾರ್ ರಶ್ಮಿ ಹಾಗೂ ಸಂಡೂರು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಚಂದ್ರಪ್ಪ,ಗ್ರಾಮಲೆಕ್ಕಾಧಿಕಾರಿಗಳಾದ ಸುಬ್ರಮಣ್ಯ ಮಾಳಗಿ, ರಮೇಶ, ವಿ.ಎಚ್.ಅನಂತರಾಜ್ ನೇತೃತ್ವದಲ್ಲಿ ದಾಳಿ ನಡೆಸಿದಾಗ ವೈದ್ಯವೃತ್ತಿ ನಡೆಸಲು ಯಾವುದೇ ಪರವಾನಿಗೆ ಪಡೆದಿರುವುದಿಲ್ಲ ಮತ್ತು ವೈದ್ಯಕೀಯ ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ಪ್ರಮಾಣಪತ್ರಗಳು ಇರಲಿಲ್ಲ.

ಆದರೂ ಮತ್ತೇ ಇದೇ ವೃತ್ತಿ ಮುಂದುವರಿಸಿದ್ದ ಎಂದು ತಿಳಿಸಿರುವ ತಹಸೀಲ್ದಾರ್ ರಶ್ಮಿ ಅವರು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮಗಳ ಕಾಯ್ದೆ ಹಾಗೂ ನಿಯಮ 2007 ಮತ್ತು 2009 ಮತ್ತು ಕಲಂ 143,147,269,341,353,420 ಮತ್ತು 149 ಅನುಸಾರ ಜಾಫರ್ ವಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕ್ಲಿನಿಕ್ ಜಪ್ತಿ ಮಾಡಿಕೊಂಡು 10 ಸಾವಿರ ಮೌಲ್ಯದ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ವರದಿ: ಪಂಪನಗೌಡ.ಬಿ.ಬಳ್ಳಾರಿ

Donate Janashakthi Media

Leave a Reply

Your email address will not be published. Required fields are marked *