ದಾವಣಗೆರೆ: ಜಿಲ್ಲೆಯ ಮೆಹಬೂಬ್ ನಗರದಲ್ಲಿ ಹಸಿ ಕಸ, ಒಣ ಕಸ ವಿಂಗಡಿಸಿ ಕೊಡುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ವಿಂಗಡಿಸಿ
ಪೌರ ಕಾರ್ಮಿಕರು ಬೆಳಗ್ಗೆ ಕಸ ಸಂಗ್ರಹಿಸಲು ವಾಹನದೊಂದಿಗೆ ಮೆಹಬೂಬ್ ನಗರಕ್ಕೆ ಹೋಗಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಹಸಿ, ಕಸ ಹಾಗೂ ಒಣ ಕಸವನ್ನು ಜತೆಗೇ ತಂದಿದ್ದಾನೆ. ಇದೇ ವೇಳೆ ಮಹಿಳೆಯೊಬ್ಬರು ಕಸದೊಂದಿಗೆ ಮಗುವಿನ ಡೈಪರ್ ಕೂಡ ತಂದಿದ್ದಾರೆ. ಈ ವೇಳೆ ಪೌರ ಕಾರ್ಮಿಕರು “ಮಗುವಿನ ಡೈಪರ್ ಅನ್ನು ಪ್ರತ್ಯೇಕವಾಗಿ ಕೊಡಿ” ಎಂದು ತಿಳಿಸಿದ್ದಾರೆ.
ಈ ವೇಳೆ ಸ್ಥಳೀಯರು ಹಾಗೂ ಪೌರಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದು, ವಿಕೋಪಕ್ಕೆ ತಿರುಗಿದೆ. ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ಸಿಎಂ ಸಿದ್ದರಾಮಯ್ಯ ಹೆಸರಿನಲ್ಲಿ ನಕಲಿ ವರ್ಗಾವಣೆ ಪತ್ರ: ದೂರು ದಾಖಲು
ಏತನ್ಮಧ್ಯೆ ಹಲ್ಲೆ ಮಾಡಿದ್ದನ್ನು ಖಂಡಿಸಿ ಅಜಾದ್ ನಗರ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿದ ಪೌರ ಕಾರ್ಮಿಕರು ಕಸ ಸಾಗಿಸುವ ಆಟೋಗಳನ್ನು ತಂದು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ.
ಹಲ್ಲೆ ಮಾಡಿದ ಅರೋಪಿಗಳನ್ನು ಬಂಧನ ಮಾಡುವವರೆಗೂ ಸ್ಥಳದಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ನಮ್ಮ ಮೇಲೆ ಪದೇ ಪದೇ ಹಲ್ಲೆಯಾಗುತ್ತಿದೆ. ನಮಗೆ ಭದ್ರತೆ ಇಲ್ಲದಂತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪ್ರಕರಣದ ಗಂಭೀರತೆ ಅರಿತ ಆಜಾದ್ ನಗರ ಠಾಣೆ ಪಿಐ ವಸಂತ್ ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಅಜ್ಜು ಮತ್ತು ನೂರ್ ಎಂದು ಗುರುತಿಸಲಾಗಿದ್ದು, ಇವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ನಡುವೆ ಅಧಿಕಾರಿಗಳು ಕ್ರಮದ ಬಳಿಕ ಪೌರಕಾರ್ಮಿಕರು ಪ್ರತಿಭಟನೆ ಹಿಂತೆಗೆದುಕೊಂಡಿದ್ದಾರೆ.
ಇದನ್ನೂ ನೋಡಿ: ಗುತ್ತಿಗೆ ಜೀವನಕ್ಕೆ ಅಂತ್ಯ ಬೇಕು – ಫೆ 12ಕ್ಕೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಮುಷ್ಕರ | ಎಸ್ ವರಲಕ್ಷ್ಮಿ
