ಮುಖ್ಯಮಂತ್ರಿಗಳ ಚೊಚ್ಚಲ ಬಜೆಟ್ ಉಡುಪಿ ಜಿಲ್ಲೆಗೆ ಅನ್ಯಾಯ: ಸಿಪಿಐ(ಎಂ) ಆರೋಪ

ಉಡುಪಿ: ಹಿಂದೊಮ್ಮೆ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಮುಖ್ಯಮಂತ್ರಿ ಬಸವರಾಜ ಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ನಲ್ಲಿ ಜಿಲ್ಲೆಯ ಜನತೆಯನ್ನು ಮರೆತು ಬಿಟ್ಟಿದ್ದಾರೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ತಿಳಿಸಿದೆ.

ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, 2022-23ನೇ ಸಾಲಿನ ಬಜೆಟ್‌ ನಲ್ಲಿಯೂ ಸಹ, ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾದ ಪೂರ್ಣ ಪ್ರಮಾಣದ ಸರಕಾರಿ ಮೆಡಿಕಲ್ ಕಾಲೇಜು ಘೋಷಣೆ ಆಗಿಲ್ಲ. 2,66,000 ಕೋಟಿ ರೂಪಾಯಿ ಬಜೆಟ್ ನಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ 30 ಕೋಟಿ ತೆಗೆದಿರಿಸಿದ್ದರೆ ಅದನ್ನು ಪುನರುಜ್ಜೀವನಗೊಳಿಸಲು ಸಾಧ್ಯವಿತ್ತು. ಅದರ ಪ್ರಸ್ತಾಪವೂ ಇಲ್ಲ. ಯುವಜನರಿಗೆ ಉದ್ಯೋಗ ಒದಗಿಸುವ ಹೊಸ ಉದ್ದಿಮೆ/ಕೈಗಾರಿಕೆಗಳ ಸ್ಥಾಪನೆ ಘೋಷಿಸಿಲ್ಲ. ಬಿಕ್ಕಟ್ಟಿನಲ್ಲಿರುವ ಹಂಚು ಕೈಗಾರಿಕೆಯನ್ನು ರಕ್ಷಿಸಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಎಲ್ಲಾ ಜಿಲ್ಲೆಗಳಲ್ಲಿ ಆಹಾರ ಪಾರ್ಕ್ ನಿರ್ಮಾಣದ ಘೋಷಣೆ ಆಗಿದ್ದರೂ, ಸರಕಾರದ, ಅಂದರೆ ಜನತೆಯ ನೆಲ, ಜಲವನ್ನು ಖಾಸಗಿ ಉದ್ದಿಮೆದಾರರಿಗೆ ಧಾರೆ ಎರೆಯುವ ಹುನ್ನಾರವಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಿಂದ ಇಬ್ಬರು ಮಂತ್ರಿಗಳೂ ಸೇರಿದಂತೆ 6 ಶಾಸಕರನ್ನು ಹೊಂದಿರುವ ಬಿಜೆಪಿ ತನ್ನದೇ ಸರಕಾರದ ಮೇಲೆ ಪ್ರಭಾವ ಬೀರಲು ವಿಫಲವಾಗಿದೆ ಎಂದು ಸಿಪಿಐ(ಎಂ) ಪಕ್ಷವು ಆಪಾದಿಸಿದೆ.

ಒಟ್ಟಾರೆಯಾಗಿ ಉಡುಪಿ ಜಿಲ್ಲೆಯ ಜನತೆಗೆ ನಿರಾಶಾದಾಯಕ ಬಜೆಟ್ ಇದಾಗಿದೆ ಎಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *